ಕೇವಲ ಐದಾರು ಪ್ಯಾನ್‌ ಇಂಡಿಯಾ ಚಿತ್ರಗಳಿಂದಲೇ ಕನ್ನಡ ಚಿತ್ರರಂಗವೊಂದೇ ರೂ. 350 ರಿಂದ 400 ಕೋಟಿ ಕಳೆದುಕೊಂಡಿದೆ. ಹೀಗೆ ಕಳೆದುಕೊಂಡ ಸಿನಿಮಾಗಳಲ್ಲಿ ನನ್ನದೂ ಇದೆ ಎಂದರು ನಿರ್ಮಾಪಕ ಉದಯ್ ಕೆ. ಮೆಹ್ತಾ.

1. ಚಿತ್ರರಂಗ ಉಳಿಯಬೇಕಾದರೆ ಹಳೆಯ ವ್ಯವಸ್ಥೆ ಮರಳಿ ಬರಬೇಕು. ಸಿನಿಮಾ ಬಿಡುಗಡೆಯಾದ ಎರಡು ದಿನಕ್ಕೆ ಮಾಧ್ಯಮಗಳಲ್ಲಿ ರಿವ್ಯೂ ಬರಬೇಕು, ಪರಸ್ಪರ ಹೀರೋಗಳ ಫ್ಯಾನ್ಸ್‌ ದ್ವೇಷಿಸಿಕೊಳ್ಳದೆ ಸಿನಿಮಾ ನೋಡಬೇಕು, ರೇಟಿಂಗ್‌ ಮಾಫಿಯಾ ನಿಲ್ಲಬೇಕು.

2. ಸಿನಿಮಾ ಬಿಡುಗಡೆಯಾದರೆ ಸಾಕು ಅವುಗಳನ್ನು ಸಾಯಿಸಲೆಂದೇ ಕೆಲವರು ಇದ್ದಾರೆ. ನಮ್ಮ ಸಿನಿಮಾಗಳ ಬಗ್ಗೆ ನಮ್ಮವರೇ ನೆಗೆಟಿವ್‌ ಮಾಡಿಸುವುದು, ಸಿನಿಮಾ ಬಿಡುಗಡೆಯ ದಿನವೇ ಐದಾರು ಸಾವಿರ ಖರ್ಚು ಮಾಡಿ ಹತ್ತಾರು ಕೋಟಿ ರುಪಾಯಿ ಚಿತ್ರದ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಸೋಲಿಸುವ ಸಂಚುಕೋರರು ಇಲ್ಲಿದ್ದಾರೆ. ಹೀಗಾಗಿ ಒಂದು ಮಟ್ಟಿಗೆ ಚೆನ್ನಾಗಿರುವ ಸಿನಿಮಾಗಳು ಕೂಡ ನಿಲ್ಲುತ್ತಿಲ್ಲ.

3. ಚಿತ್ರರಂಗದ ಇವತ್ತಿನ ಸ್ಥಿತಿಗೆ ಮತ್ತೊಂದು ದೊಡ್ಡ ಕಾರಣ ಪ್ಯಾನ್‌ ಸಿನಿಮಾಗಳ ಭ್ರಮೆ. ಪ್ಯಾನ್‌ ಇಂಡಿಯಾ ಸಿನಿಮಾಗಳ ಹಿಂದೆ ಹೋಗಿ ನನ್ನನ್ನೂ ಸೇರಿದಂತೆ ಎಲ್ಲರೂ ಗಾನ್‌ ಇಂಡಿಯಾ ಆಗಿದ್ದೇವೆ. ಪ್ಯಾನ್‌ ಇಂಡಿಯಾ ಎನ್ನುವ ಕಾನ್ಸೆಪ್ಟ್‌ ಕನ್ನಡ ಚಿತ್ರರಂಗಕ್ಕೆ ಬಹು ಬಹುದೊಡ್ಡ ಮಾರಕ.

4. ಕೇವಲ ಐದಾರು ಪ್ಯಾನ್‌ ಇಂಡಿಯಾ ಚಿತ್ರಗಳಿಂದಲೇ ಕನ್ನಡ ಚಿತ್ರರಂಗವೊಂದೇ ರೂ. 350 ರಿಂದ 400 ಕೋಟಿ ಕಳೆದುಕೊಂಡಿದೆ. ಹೀಗೆ ಕಳೆದುಕೊಂಡ ಸಿನಿಮಾಗಳಲ್ಲಿ ನನ್ನದೂ ಇದೆ. ನಾನೇನು ಪ್ಯಾನ್‌ ಇಂಡಿಯಾ ಸಿನಿಮಾ ಮಾಡಿ ಗೆದ್ದಿಲ್ಲ.

5. ನನ್ನ ಪ್ರಕಾರ ‘ಕೆಜಿಎಫ್‌’ ನಂತರ ಬಂದ ಯಾವ ಪ್ಯಾನ್‌ ಇಂಡಿಯಾ ಚಿತ್ರವೂ ಗೆದ್ದಿಲ್ಲ. ‘ಕಾಂತಾರ’ ಪ್ಯಾನ್‌ ಇಂಡಿಯಾ ಸಿನಿಮಾ ಅಲ್ಲ. ಬಿಡುಗಡೆ ಆದ ಮೇಲೆ ಅದಾಗಿಯೇ ಪ್ಯಾನ್‌ ಇಂಡಿಯಾ ಆಯಿತು. ಆದರೆ, ಪ್ಯಾನ್‌ ಇಂಡಿಯಾ ಸಿನಿಮಾ ಅಂತ ಬಂದ ಯಾವ ಚಿತ್ರದಿಂದಲೂ ನಯಾ ಪೈಸೆ ಬಂದಿಲ್ಲ. ಕನ್ನಡ ಚಿತ್ರರಂಗದಿಂದ ಪ್ಯಾನ್‌ ಕಲ್ಚರ್‌ ಮೊದಲು ತೊಲಗಬೇಕು.

6. ಪ್ಯಾನ್‌ ಇಂಡಿಯಾ ಕಲ್ಚರ್‌ ಬಂದ ಮೇಲೆ ವರ್ಷಕ್ಕೆ ಎರಡು- ಮೂರು ಸಿನಿಮಾ ಮಾಡುತ್ತಿದ್ದ ಹೀರೋಗಳು ಪ್ಯಾನ್ ಇಂಡಿಯಾ ಗುಂಗಿಗೆ ಬಿದ್ದು ವರ್ಷಕ್ಕೊಂದು ಸಿನಿಮಾ ಕೂಡ ಮಾಡುತ್ತಿಲ್ಲ. ಇದರಿಂದ ಥಿಯೇಟರ್‌ಗಳಿಗೆ ಸಿನಿಮಾಗಳು ಇಲ್ಲ. ಸಿನಿಮಾಗಳಿಲ್ಲದೆ ಥಿಯೇಟರ್‌ಗಳು ಮುಚ್ಚುತ್ತಿವೆ. ಪ್ರೇಕ್ಷಕರು ಬೇರೆ ಭಾಷೆಯ ಚಿತ್ರಗಳನ್ನು ನೋಡುತ್ತಿದ್ದಾರೆ.

7. ನಾನೂ ಪ್ಯಾನ್‌ ಇಂಡಿಯಾ ಸಿನಿಮಾ ಮಾಡಿದೆ. ನಂಬಿದೆ. ನಂಬಿಕೆಗೆ ದ್ರೋಹ ಆಯಿತು. ವೈಯಕ್ತಿಕ ಜಗಳ, ದ್ವೇಷಗಳಲ್ಲಿ ಸಿಕ್ಕಿಕೊಂಡೆ. ಸುಳ್ಳು, ಮೋಸಗಳಿಂದ ನನ್ನನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ.

ಮೂರು ಓಕೆ ಆಗಿವೆ

8. ಈ ಸೋಲು ನನ್ನನ್ನು ಚಿತ್ರರಂಗದಿಂದ ದೂರ ಮಾಡಿಲ್ಲ. ನಿರ್ಮಾಣದಿಂದ ದೂರ ಆಗಿದ್ದೇನೆ ಅಷ್ಟೇ. ನಾನು ಕತೆ ಬರೆದಿರುವ ‘ಶ್ರೀರಾಮಚಂದ್ರ’ ಸಿನಿಮಾ ಶೂಟಿಂಗ್‌ ಆಗುತ್ತಿದೆ. ‘ಸು ಫ್ರಮ್ ಸೋ’ ಚಿತ್ರದ ರವಿಯಣ್ಣ ನಟಿಸುತ್ತಿದ್ದಾರೆ. ಮತ್ತೆ ಮೂರು ಚಿತ್ರಗಳಿಗೆ ಕತೆ ಮಾಡಿದ್ದೂ, ಮೂರು ಓಕೆ ಆಗಿವೆ. ಮುಂದಿನ ವರ್ಷ ನನ್ನ ಕಡೆಯಿಂದ ನಾಲ್ಕು ಚಿತ್ರಗಳು ಬರಲಿವೆ.