ಟೀಮ್‌ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ, ತಮ್ಮ ಬಾಲ್ಯದಲ್ಲಿ ಪ್ರತಿದಿನ ಶಾಲೆಗೆ ಹೋಗುವ ಮುನ್ನ ತಂದೆ ಪ್ರೀತಿಯಿಂದ ಕೈತುತ್ತು ನೀಡುತ್ತಿದ್ದ ಸುಂದರ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.

ಇಂದಿನ ಅತ್ಯಾಧುನಿಕ ಹಾಗೂ ವೇಗದ ಜೀವನಶೈಲಿಯಲ್ಲಿ ಪೋಷಕರಿಗೆ ಮುಂಜಾನೆಯ ಸಮಯವೆಂದರೆ ಅದೊಂದು ದೊಡ್ಡ ಸವಾಲು. ಮಕ್ಕಳನ್ನು ಬೇಗನೆ ಎಬ್ಬಿಸಿ, ಶಾಲಾ ಸಮವಸ್ತ್ರ ಧರಿಸಿ, ಟಿಫಿನ್ ಬಾಕ್ಸ್ ಪ್ಯಾಕ್ ಮಾಡಿ ಸಮಯಕ್ಕೆ ಸರಿಯಾಗಿ ಶಾಲೆಗೆ ಕಳುಹಿಸುವುದರಲ್ಲೇ ಪೋಷಕರ ಅರ್ಧ ಶಕ್ತಿ ಹೋಗಿರುತ್ತದೆ. ಆದರೆ, ಟೀಮ್‌ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಶಾಲಾ ದಿನಗಳ ಬೆಳಗಿನ ವಾತಾವರಣವೇ ಸಂಪೂರ್ಣ ಭಿನ್ನವಾಗಿತ್ತು. ಗಂಗೂಲಿಗೆ ಮುಂಜಾನೆಯ ಉಪಹಾರವೆಂದರೆ ಕೇವಲ ಒಂಟಿಯಾಗಿ ತಿನ್ನುವ ಆಹಾರವಾಗಿರಲಿಲ್ಲ; ಬದಲಿಗೆ ಪ್ರತಿದಿನ ಶಾಲೆಗೆ ಹೋಗುವ ಮುನ್ನ ಅವರ ತಂದೆ ಸ್ವತಃ ತಮ್ಮ ಕೈಯಾರೇ ಅನ್ನ ಕಲಸಿ ಬಾಯಿಗೆ ತುತ್ತು ನೀಡುತ್ತಿದ್ದ ಅತ್ಯಂತ ಪ್ರೀತಿಯ ಕ್ಷಣವಾಗಿತ್ತು!

'ಓಹ್! ಕಲ್ಕತ್ತಾ' (Oh! Calcutta) ಪಾಡ್‌ಕಾಸ್ಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕ್ರಿಕೆಟ್ ದಿಗ್ಗಜ ಸೌರವ್ ಗಂಗೂಲಿ, ತಮ್ಮ ಬಾಲ್ಯದ ಶಾಲಾ ದಿನಗಳಲ್ಲಿ ತಂದೆಯೊಂದಿಗೆ ಕಳೆಯುತ್ತಿದ್ದ ಸುಂದರ ನೆನಪುಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಪ್ರತಿದಿನ ಬೆಳಿಗ್ಗೆ ತಂದೆಯೇ ಸ್ವತಃ ಊಟ ಉಣಿಸುತ್ತಿದ್ದರು

ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸಿದ ದಾದಾ, "ನಾನು ಪ್ರತಿದಿನ ಬೆಳಿಗ್ಗೆ ಎಂಟು ಗಂಟೆಗೆ ಶಾಲೆಗೆ ಹೋಗಬೇಕಿತ್ತು. ಆ ಸಮಯದಲ್ಲಿ ತಂದೆ ನನ್ನ ಪಕ್ಕದಲ್ಲೇ ಕುಳಿತು, ಅನ್ನಕ್ಕೆ ಮಾಂಸ (ಮೀಟ್) ಹಾಗೂ ಲಿಂಬೆ ರಸವನ್ನು ಸೇರಿಸಿ, ಚೆನ್ನಾಗಿ ಕಿವುಚಿ ತಮ್ಮ ಸ್ವಂತ ಕೈಯಾರೇ ನನಗೆ ಉಣಿಸುತ್ತಿದ್ದರು. ಕೇವಲ ತಟ್ಟೆಗೆ ಬಡಿಸಿ ತಿನ್ನಲು ಹೇಳುತ್ತಿರಲಿಲ್ಲ, ಬದಲಾಗಿ ಪ್ರತಿಯೊಂದು ತುತ್ತನ್ನೂ ಅವರೇ ಎತ್ತಿ ನನ್ನ ಬಾಯಿಗೆ ಇಡುತ್ತಿದ್ದರು. ನನ್ನ ಇಡೀ ಶಾಲಾ ಜೀವನದ ಪ್ರತಿದಿನವೂ ಇದು ನಡೆಯುತ್ತಿತ್ತು" ಎಂದು ಭಾವುಕರಾಗಿ ಹೇಳಿದ್ದಾರೆ.

ಪಾಡ್‌ಕಾಸ್ಟ್ ನಿರೂಪಕರು ಅಚ್ಚರಿಯಿಂದ 'ಬೆಳಿಗ್ಗೆ 8 ಗಂಟೆಗೇ ಮಾಂಸದ ಅಡುಗೆ ತಿನ್ನುತ್ತಿದ್ದಿರಾ?' ಎಂದು ಪ್ರಶ್ನಿಸಿದಾಗ, "ಹೌದು, ಬೆಳಿಗ್ಗೆ 8 ಗಂಟೆಗೆ ಈ ರೀತಿ ಪೌಷ್ಟಿಕ ಆಹಾರ ತಿಂದರೆ ಇಡೀ ದಿನ ಹಸಿವಿನ ಚಿಂತೆ ಇರುತ್ತಿರಲಿಲ್ಲ" ಎಂದು ನಗುತ್ತಾ ಉತ್ತರಿಸಿದ್ದಾರೆ. ಆದರೆ, ಗಂಗೂಲಿ ಅವರಿಗೆ ತಟ್ಟೆಯಲ್ಲಿದ್ದ ಆಹಾರಕ್ಕಿಂತ ಹೆಚ್ಚಾಗಿ, ತಮ್ಮ ತಂದೆ ತಮಗಾಗಿ ನೀಡುತ್ತಿದ್ದ ಆ ಬೆಲೆಕಟ್ಟಲಾಗದ ಸಮಯವೇ ಇಂದಿಗೂ ಅಮೂಲ್ಯವಾಗಿ ಉಳಿದಿದೆ.

ಕುಟುಂಬದ ದೈನಂದಿನ ದಿನಚರಿ ಹಾಗೂ ತಂದೆಯ ಪ್ರೀತಿ

ಕುಟುಂಬದ ವಾತಾವರಣದ ಬಗ್ಗೆ ಮಾತನಾಡಿದ ಅವರು, 'ಬೆಳಿಗ್ಗೆ ಎದ್ದ ತಕ್ಷಣ ನಾನು ಶಾಲೆಗೆ ಹೊರಡುತ್ತಿದ್ದೆ, ಸಂಜೆ 5 ಗಂಟೆಗೆ ಮನೆಗೆ ಮರಳುತ್ತಿದ್ದೆ. ಹೀಗಾಗಿ ಬೆಳಗಿನ ಆ ಸಮಯವೇ ನಮ್ಮ ತಂದೆಗೆ ನನ್ನೊಂದಿಗೆ ಕಳೆಯಲು ಸಿಗುತ್ತಿದ್ದ ಏಕೈಕ ಸಮಯವಾಗಿತ್ತು. ಬೆಳಿಗ್ಗೆ ನನ್ನ ತಾಯಿ ಮತ್ತು ಐದು ಜನ ಚಿಕ್ಕಮ್ಮಂದಿರು ದೇವರ ಪೂಜಾ ಕೋಣೆಯಲ್ಲಿ ಪ್ರಾರ್ಥನೆಯಲ್ಲಿ ನಿರತರಾಗಿರುತ್ತಿದ್ದರು. ಆದರೆ ನನ್ನ ತಂದೆ ಮಾತ್ರ ನನಗೆ ಊಟ ಮಾಡಿಸಿ ಶಾಲೆಗೆ ಕಳುಹಿಸುವ ಜವಾಬ್ದಾರಿ ವಹಿಸಿಕೊಂಡಿದ್ದರು. ಅದೊಂದು ಬೇರೆಯದೇ ಪ್ರಪಂಚವಾಗಿತ್ತು, ಅತ್ಯದ್ಭುತ ನೆನಪುಗಳು" ಎಂದು ಮೆಲುಕು ಹಾಕಿದ್ದಾರೆ.

ಇಂದಿನ ಪೋಷಕರಿಗೆ ಗಂಗೂಲಿ ಕಥೆಯಲ್ಲಿರುವ ಅದ್ಭುತ ಪಾಠ

ಸೌರವ್ ಗಂಗೂಲಿ ಅವರ ಈ ನೆನಪು ಕೇವಲ ಬೆಳಗಿನ ಉಪಹಾರಕ್ಕೆ ಮಾಂಸ ತಿನ್ನುವುದರ ಬಗ್ಗೆಯಾಗಲಿ ಅಥವಾ ಮಗುವಿಗೆ ಕೈಯಿಂದ ಊಟ ಮಾಡಿಸುವುದರ ಬಗ್ಗೆಯಾಗಲಿ ಅಲ್ಲ. ಬದಲಿಗೆ, ದಿನದ ಆರಂಭದಲ್ಲಿ ಮಗುವಿನೊಂದಿಗೆ ಪೋಷಕರು ಕಂಡುಕೊಳ್ಳುವ 'ಸಣ್ಣ ಹಾಗೂ ನಿರಂತರ ಭಾವನಾತ್ಮಕ ಬಾಂಧವ್ಯ'ದ ಕುರಿತಾಗಿದೆ.

ಇಂದಿನ ಪೋಷಕರು ತಮ್ಮ ಮಕ್ಕಳಿಗೆ ಬೆಲೆಬಾಳುವ ಉಡುಗೊರೆಗಳು, ಅದ್ಧೂರಿ ಪ್ರವಾಸಗಳು ಅಥವಾ ಹುಟ್ಟುಹಬ್ಬದ ಆಚರಣೆಗಳ ಮೂಲಕ ಪ್ರೀತಿ ತೋರಿಸಲು ಬಯಸುತ್ತಾರೆ. ಆದರೆ, ಮಕ್ಕಳಿಗೆ ಪ್ರಾಯಶಃ ನೆನಪಿನಲ್ಲಿ ಉಳಿಯುವುದು ಇಂತಹ ದೈನಂದಿನ ಸಣ್ಣಪುಟ್ಟ ಪ್ರೀತಿಯ ಕ್ಷಣಗಳು ಮಾತ್ರ.

ಪೋಷಕರು ಅನುಸರಿಸಬಹುದಾದ 5 ಸರಳ ಸಲಹೆಗಳು

ಉಪಹಾರದ ಸಮಯದ ಮಾತುಕತೆ: ಬೆಳಗಿನ ತಿಂಡಿ ಸಮಯದಲ್ಲಿ ಫೋನ್ ಬದಿಗಿಟ್ಟು ಕನಿಷ್ಠ 10 ನಿಮಿಷ ಮಗುವಿನೊಂದಿಗೆ ಕಳೆಯಿರಿ. 'ಹೌದು' ಅಥವಾ 'ಇಲ್ಲ' ಎಂದು ಮಾತ್ರ ಉತ್ತರಿಸಲಾಗದ ಪ್ರೀತಿಯ ಪ್ರಶ್ನೆಗಳನ್ನು ಕೇಳಿ.

ಶಾಲೆಯ ಗೇಟ್‌ ಬಳಿಯ ಪ್ರೀತಿ: ಮಗು ಶಾಲೆಗೆ ಹೋಗುವ ಮುನ್ನ ಕನಿಷ್ಠ ಎರಡು ನಿಮಿಷ ಪ್ರೀತಿಯಿಂದ ಮಾತುಕತೆ ನಡೆಸಿ.

ಶಾಲೆಯಿಂದ ಬಂದ ನಂತರದ ಸಂವಾದ: ಶಾಲೆಯಿಂದ ಬಂದ ತಕ್ಷಣ ಅಂಕಗಳು ಅಥವಾ ಹೋಂವರ್ಕ್ ಬಗ್ಗೆ ಕೇಳುವ ಬದಲು, "ಇಂದು ನಿನಗೆ ನಗು ತಂದ ಘಟನೆ ಯಾವುದು?" ಎಂದು ವಿಚಾರಿಸಿ.

ರಾತ್ರಿಯ ಪ್ರೀತಿಯ ಕ್ಷಣ (Bedtime Connect): ಮಲಗುವ ಮುನ್ನ 5 ನಿಮಿಷಗಳ ಕಾಲ ಮಗುವಿಗೆ ಯಾವುದೇ ಸಲಹೆ, ತಿದ್ದುಪಡಿ ಅಥವಾ ತೀರ್ಪು ನೀಡದೆ ಅವರು ಹೇಳುವುದನ್ನು ತಾಳ್ಮೆಯಿಂದ ಆಲಿಸಿ.

ವಾರಾಂತ್ಯದ ಸ್ಪೆಷಲ್: ವಾರಾಂತ್ಯದಲ್ಲಿ ಮಗುವಿಗೆ ಇಷ್ಟವಾದ ಬೆಳಗಿನ ಉಪಹಾರವನ್ನು ಅವರ ಜೊತೆಗೂಡಿ ತಯಾರಿಸಿ.

ಮಕ್ಕಳು ದೊಡ್ಡವರಾದಂತೆ ಈ ಅಭ್ಯಾಸಗಳು ಬದಲಾಗಬಹುದು, ಆದರೆ ತಂದೆ-ತಾಯಿಯ ಪ್ರೀತಿ ನೀಡಿದ ಆ ಬೆಚ್ಚಗಿನ ಭಾವನೆ ಮಗುವಿನ ಮನಸ್ಸಿನಲ್ಲಿ ಸದಾ ಜೀವಂತವಾಗಿರುತ್ತದೆ ಎಂಬುದಕ್ಕೆ ಗಂಗೂಲಿಯವರ ಈ ನೆನಪೇ ಜೀವಂತ ಸಾಕ್ಷಿ!