ಕರಾವಳಿಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯು ಕೇವಲ ಬೂಟಾಟಿಕೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಸರ್ಕಾರದಲ್ಲಿ ಹಣವಿಲ್ಲ ಹಾಗೂ ಮಂಗಳೂರು ರೈಲ್ವೆ ವಿಭಾಗದ ವಿಚಾರದಲ್ಲಿ ಕೇರಳಕ್ಕೆ ಹೆದರಿ ಕೇಂದ್ರಕ್ಕೆ ಕೃತಜ್ಞತೆ ಸಲ್ಲಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಮೈಸೂರು (ಸೆ.20): ಕರಾವಳಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ಎಂಬುದು ಕೇವಲ ಬೂಟಾಟಿಕೆ. ಅದು ನಿಷ್ಪ್ರಯೋಜಕ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ವಾಗ್ದಾಳಿ ನಡೆಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ಸಭೆಯಲ್ಲಿ ಮಂಗಳೂರು ರೈಲ್ವೆ ವಿಭಾಗವನ್ನು ನೈಋತ್ಯ ವಲಯಕ್ಕೆ ಸೇರಿಸಿದ್ದಕ್ಕೆ ರಾಜ್ಯ ಸರ್ಕಾರ ಕೃತಜ್ಞತೆ ಸಲ್ಲಿಸಬಹುದಿತ್ತು. ರಾಜ್ಯ ಸರ್ಕಾರ ಸಣ್ಣತನ ಪ್ರದರ್ಶಿಸಿದೆ. ಕೇರಳ ಸರ್ಕಾರಕ್ಕೆ ಹೆದರಿ ಕೇಂದ್ರಕ್ಕೆ ರಾಜ್ಯ ಸರ್ಕಾರ ಅಭಿನಂದನೆ ಸಲ್ಲಿಸಿಲ್ಲ ಎಂದು ಆರೋಪಿಸಿದರು.
ಸಿಎಂ ಸ್ಪೀಡ್ಗೆ ಬಹಳ ಬೇಗ ಬ್ರೇಕ್ ಬೀಳುತ್ತದೆ
ರಾಜ್ಯ ಸರ್ಕಾರದಲ್ಲಿ ಕಾಸಿಲ್ಲ. ಸುಮ್ಮನೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಏನೇನೋ ಹೇಳಿಕೊಂಡು ಓಡಾಡುತ್ತಿದ್ದಾರೆ. ಸಿಎಂ ಸ್ಪೀಡ್ಗೆ ಬಹಳ ಬೇಗ ಬ್ರೇಕ್ ಬೀಳುತ್ತದೆ. ಕಾಂಗ್ರೆಸ್ ಮಾತುಗಳನ್ನು ನಂಬಲು ಕರಾವಳಿ ಜನರೇನು ದಡ್ಡರಾ? ಕರಾವಳಿ ಜನಕ್ಕೆ ದೇಶ ಬೇಕು. ದೇಶ ಉಳಿಸುವವರು ಬೇಕು. ದೇಶ ವಿಭಜನೆ ಮಾಡುವವರು ಅವರಿಗೆ ಬೇಡ. ಕರಾವಳಿ ಜನಕ್ಕೆ ಮೋದಿ ಬೇಕು. ವೋಟ್ ಬ್ಯಾಂಕ್ ರಾಜಕಾರಣ ಮಾಡುವ ಕಾಂಗ್ರೆಸ್ ಬೇಡ ಎಂದು ಅವರು ಹೇಳಿದರು.
ಈ ಸಚಿವ ಸಂಪುಟ ಸಭೆ ಬಂದ ಪುಟ್ಟ, ಹೋದ ಪುಟ್ಟ ಅಷ್ಟೇ. ಸಚಿವ ಬಾಲಕೃಷ್ಣ ಪ್ರಧಾನಿ ಬಗ್ಗೆ ಟೀಕೆ ಮಾಡುತ್ತಾರೆ. ಬಾಲಕೃಷ್ಣನಿಗೆ ಬಾಲ ಒಂದಿಲ್ಲ. ಬಾಲಕೃಷ್ಣ ಒಳ್ಳೆಯ ನಡವಳಿಕೆ, ನೈತಿಕತೆ ಇಟ್ಟುಕೊಂಡು ಮಾತಾಡುವುದನ್ನು ಕಲಿಯಲಿ ಎಂದು ಅವರು ಸಲಹೆ ನೀಡಿದರು.


