ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯು ಕೇವಲ ಬೂಟಾಟಿಕೆ ಎಂದು ಸಚಿವ ವಿ. ಸೋಮಣ್ಣ ಟೀಕಿಸಿದ್ದಾರೆ. ಮಂಗಳೂರು ರೈಲ್ವೆ ವಿಭಾಗವನ್ನು ನೈಋತ್ಯ ವಲಯಕ್ಕೆ ಸೇರಿಸಿದ್ದಕ್ಕಾಗಿ ಕೇಂದ್ರಕ್ಕೆ ಕೃತಜ್ಞತೆ ಸಲ್ಲಿಸದ ರಾಜ್ಯ ಸರ್ಕಾರದ ನಡೆಯನ್ನು ಅವರು ಖಂಡಿಸಿದ್ದಾರೆ. ಅಲ್ಲದೆ, ಕಾಂಗ್ರೆಸ್ ಪಕ್ಷವು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮೈಸೂರು: ರಾಜ್ಯದ ಕರಾವಳಿ ಮಹಾನಗರ ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಸಂಪುಟ ಸಭೆಯನ್ನು ನಡೆಸಲಾಗಿದೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಚಿವ ವಿ ಸೋಮಣ್ಣ ಅವರು, ಸಂಪುಟ ಸಭೆಯಲ್ಲಿ ಮಂಗಳೂರು ರೈಲ್ವೆ ವಿಭಾಗವನ್ನು ನೈಋತ್ಯ ವಲಯಕ್ಕೆ ಸೇರಿಸಿದ್ದಕ್ಕೆ ಸರಕಾರ ಕೃತಜ್ಞತೆ ಸಲ್ಲಿಸಬಹುದಿತ್ತು. ಆದರೆ ರಾಜ್ಯ ಸರಕಾರ ಸಣ್ಣತನ ಪ್ರದರ್ಶಿಸಿದೆ. ಕೇರಳ ಸರ್ಕಾರಕ್ಕೆ ಹೆದರಿ ಕೇಂದ್ರಕ್ಕೆ ರಾಜ್ಯ ಸರಕಾರ ಅಭಿನಂದನೆ ಸಲ್ಲಿಸಿಲ್ಲ ಎಂದು ಕಿಡಿಕಾರಿದ್ದಾರೆ.
ಮಂಗಳೂರು ಸಂಪುಟ ಸಭೆ: ಸರ್ಕಾರದ ವಿರುದ್ಧ ಸೋಮಣ್ಣ ಆಕ್ರೋಶವೇಕೆ?
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ಎಂಬುದು ಕೇವಲ ಬೂಟಾಟಿಕೆ ಎಂದಿರುವ ಸೋಮಣ್ಣ ಅವರು, ಅದು ನಿಷ್ಪ್ರಯೋಜಕ. ರಾಜ್ಯ ಸರ್ಕಾರ ಬಳಿ ಕಾಸಿಲ್ಲ. ಸುಮ್ಮನೆ ಸಿಎಂ ಏನೇನೋ ಹೇಳಿ ಕೊಂಡು ಓಡಾಡುತ್ತಿದ್ದಾರೆ. ಸಿಎಂ ಸ್ಪೀಡ್ ಗೆ ಬಹಳ ಬೇಗ ಬ್ರೇಕ್ ಬೀಳುತ್ತದೆ. ಕಾಂಗ್ರೆಸ್ ಮಾತುಗಳನ್ನು ನಂಬಲು ಕರಾವಳಿ ಜನ ದಡ್ಡರಾ? ಕರಾವಳಿ ಜನಕ್ಕೆ ದೇಶ ಬೇಕು. ದೇಶ ಉಳಿಸುವವರು ಬೇಕು. ದೇಶ ವಿಭಜನೆ ಮಾಡುವವರು ಅವರಿಗೆ ಬೇಡ. ಕರಾವಳಿ ಜನಕ್ಕೆ ಮೋದಿ ಬೇಕು. ವೋಟ್ ಬ್ಯಾಂಕ್ ರಾಜಕಾರಣ ಮಾಡುವ ಕಾಂಗ್ರೆಸ್ ಬೇಡ. ಈ ಸಂಪುಟ ಸಭೆ ಬಂದ ಪುಟ್ಟ ಹೋದ ಪುಟ್ಟ ಅಷ್ಟೇ ಎಂದು ವ್ಯಂಗ್ಯವಾಡಿದರು.
ಇದೇ ವೇಳೆ ಸಚಿವ ಬಾಲಕೃಷ್ಣ ಅವರು ಮಾಜಿ ಪ್ರಧಾನಿ ಎಚ್ಡಿಡಿ ಬಗ್ಗೆ ಟೀಕೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೋಮಣ್ಣ ಅವರು, ಬಾಲಕೃಷ್ಣನಿಗೆ ಬಾಲ ಹೊಂದಿಲ್ಲ. ಬಾಲಕೃಷ್ಣ ಒಳ್ಳೆ ನಡವಳಿಕೆ ನೈತಿಕತೆ ಇಟ್ಟು ಕೊಂಡು ಮಾತಾಡುವುದನ್ನು ಕಲಿಯಲಿ, ಅವರಿಗೆ ಅನುಕೂಲ.
ಕಾಂಗ್ರೆಸ್ ಗೊಂದಲದ ಗೂಡಾಗಿದೆ. ವಂದೇ ಮಾತರಂ ಗೀತೆಯೂ ಕಾಂಗ್ರೆಸ್ ಗೆ ಅರ್ಥ ಆಗಿಲ್ಲ. ಅವರಿಗೆ ರಾಷ್ಟ್ರಕ್ಕಿಂತಾ ಯಾರನ್ನೋ ಓಲೈಸಬೇಕು. ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ತಮ್ಮ ಭಾಷೆಯಿಂದಲೇ ತಮ್ಮ ಅಧ್ಯಕ್ಷ ಗಿರಿ ಘನತೆ ಯನ್ನು ಕಡಮೆ ಮಾಡುತ್ತಾರೆ. ಗಣೇಶ ಮೂರ್ತಿ ಉತ್ಸವದಿಂದ ಎಲ್ಲಾ ಲಾಭ ಕಾಂಗ್ರೆಸ್ ಪಡೆದುಕೊಂಡಿತು. ಗಣೇಶ ಮೂರ್ತಿ ಉತ್ಸವ ದೇಶದಲ್ಲಿ ನಡೆಯದಿದ್ದರೆ ಕಾಂಗ್ರೆಸ್ ಈ ದೇಶದಲ್ಲಿ ಇರುತ್ತಿರಲ್ಲ. ಈಗ ಗಣೇಶ ಮೂರ್ತಿ ಉತ್ಸವಕ್ಕೆ ಅಡ್ಡಿ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.


