ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿ ಸಚಿವ ಬಿ. ನಾಗೇಂದ್ರ ರಾಜೀನಾಮೆ ನೀಡಿದ ಬೆನ್ನಲ್ಲೇ, ಸಿ.ಟಿ. ರವಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ನಿಗಮದ ಹಣವು 'ಕಟ್ಟಿಕೊಂಡವರ' ಮತ್ತು 'ಇಟ್ಕೊಂಡವರ' ಇಬ್ಬರ ಖಾತೆಗೂ ಹೋಗಿದೆ ಎಂದು ಆರೋಪಿಸಿರುವ ಅವರು, ಎಸ್‌ಐಟಿ ತನಿಖೆ ಕೇವಲ ತಿಪ್ಪೆ ಸಾರಿಸುವ ಕೆಲಸ ಮಾಡಿದೆ ಎಂದರು.

ಚಿಕ್ಕಮಗಳೂರು (ಆ.28): ವಾಲ್ಮೀಕಿ ನಿಗಮ ಹಗರಣ ಪ್ರಕರಣದಲ್ಲಿ ಕೊನೆಗೂ ಬಿ ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ವಿಧಾನಪರಿಷತ್ ಸದಸ್ಯ ಸಿಟಿ ಪ್ರತಿಕ್ರಿಯಿಸಿದ್ದು, ಇಡಿ ತನಿಖೆಯಲ್ಲಿ ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ, ವಾಲ್ಮೀಕಿ ನಿಗಮದ ಕೋಟಿ ಕೋಟಿ ಹಣ ಕಟ್ಟಿಕೊಂಡವರ ಖಾತೆಗೂ ಹೋಗಿದೆ, ಇಟ್ಕೊಂಡವರ ಖಾತೆಗೂ ಹೋಗಿದೆ. ಆದರೆ ಯಾರು ಯಾರನ್ನ ಇಟ್ಕೊಂಡಿದ್ದಾರೆಂದು ನನ್ನ ಬಳಿ ಮಾತ್ರ ಕೇಳ್ಬೇಡಿ ಎಂದರು. ಸಿಟಿ ರವಿ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಎಸ್‌ಐಟಿ ತಿಪ್ಪೆ ಸಾರಿಸುವ ಕೆಲಸ ಮಾಡಿದೆ

ಇಂದು ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕ ಹಗರಣದಲ್ಲಿ 187 ಕೋಟಿ ಹಣ ಕಟ್ಕೊಂಡೋರು-ಇಟ್ಕೋಂಡೋರು ಇಬ್ಬರ ಖಾತೆಗೂ ಹೋಗಿದೆ. ಭ್ರಷ್ಟಾಚಾರ ನಡೆದಿದೆ. ಆದರೆ ಎಸ್‌ಐಟಿಯವರು ತನಿಖೆ ನೆಪದಲ್ಲಿ ತಿಪ್ಪೆ ಸಾರಿಸುವ ಕೆಲಸ ಮಾಡಿರಬಹುದು. ಸಿಐಡಿ ರೀತಿ ಸಿಬಿಐ, ಇಡಿ(ED) ತಿಪ್ಪೆ ಸಾರಿಸುವ ಕೆಲಸ ಮಾಡಲ್ಲ, ಕಡೇವರೆಗೆ ತನಿಖೆ ನಡೆಸಿಯೇ ನಡೆಸುತ್ತಾರೆ. ಇಲ್ಲವಾದರೆ ಈ ರೀತಿ ಲೂಟಿ ಹೊಡೆಯುವವರಿಗೆ ಲೈಸೆನ್ಸ್ ಕೊಟ್ಟಂತಾಗುತ್ತದೆ ಎಂದರು.

ಭ್ರಷ್ಟರ ಪರ ಕಾಂಗ್ರೆಸ್ ನಾಯಕರ ಸಮರ್ಥನೆ

ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ನಡೆದಿರೋದು ಡೆತ್ ನೋಟ್, ಹಲವು ಖಾತೆಗಳಿಗೆ ಹಣ ಹೋಗಿರುವುದು ಎಲ್ಲವೂ ಕಣ್ಣಿಗೆ ರಾಚುವಂತೆ ನಡೆದಿದ್ದರೂ ಈ ಕಾಂಗ್ರೆಸ್ ಸರ್ಕಾರ ಭ್ರಷ್ಟರನ್ನೇ ಮಂತ್ರಿ ಮಾಡಿ, ಅಪರಾಧ ಪ್ರೂವ್ ಆಗಿಲ್ಲ, ಆರೋಪಿ ಅಷ್ಟೇ ಅಪರಾಧಿ ಅಲ್ಲ ಅಂತಾ ಸಮರ್ಥನೆ ಮಾಡಿಕೊಳ್ಳುತ್ತಾರೆಂದರೆ. ಇದು ಸರ್ಕಾರದ ಭ್ರಷ್ಟಚಾರದ ಪರ ನಿಲುವು ತೋರಿಸುತ್ತದೆ ಎಂದು ಕಿಡಿಕಾರಿದರು.

ಅಧಿಕಾರಿ ಸಾಯುವ ಮುನ್ನ ಡೆತ್ ನೋಟ್ ಬರೆದಿರುವುದೇ ನಿಗಮದಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನಲು. ಇದು ಅಂಗೈ ಹುಣ್ಣಿನಷ್ಟೇ ಸ್ಪಷ್ಟವಾಗಿದೆ. ಬಿ ನಾಗೇಂದ್ರ ರಾಜೀನಾಮೆ ಕೊಡುವುದರಲ್ಲಿ ಯಾವ ತ್ಯಾಗ ಇಲ್ಲ. ಭ್ರಷ್ಟಾಚಾರ ಮಾಡಿದವರು ರಾಜೀನಾಮೆ ಕೊಡಬೇಕು, ಶಿಕ್ಷೆ ಆಗಬೇಕು. ಉಪ್ಪು ತಿಂದವರು ನೀರು ಕುಡಿಯಲೇಬೇಕು ಅದು ಪ್ರಕೃತಿ ನಿಯಮ ಎಂದರು.

ನಾವು ಯಾವತ್ತೂ ಬಡ ದಲಿತರ ಪರ

ನಾವು ಯಾವತ್ತೂ ಬಡವರು ದಲಿತರ ಪರವೇ ಹೊರತು ಭ್ರಷ್ಟ ದಲಿತರ ಪರ ಅಲ್ಲ ಎಂದ ಸಿಟಿ ರವಿಯವರು, ಆ ಅಮಾಯಕನ ಸಾವಿಗೆ ಕಾರಣವಾದ ಪಾಪಿಗಳಿಗೆ ಶಿಕ್ಷೆ ಆಗಬಾರದು ಎಂದು ಕಾಂಗ್ರೆಸ್ ಭ್ರಷ್ಟ ದಲಿತನ ಪರ ವಕಲತ್ತು ವಹಿಸುತ್ತಿದೆ. ಬಿಜೆಪಿ ಬಡ ದಲಿತನ ಪರ ವಕಲತ್ತು ವಹಿಸುತ್ತಿದೆ. ನಾವು ಪಾದಯಾತ್ರೆ ಹಮ್ಮಿಕೊಂಡಿರುವುದು ಭ್ರಷ್ಟ ದಲಿತನಿಗೆ ಶಿಕ್ಷೆ ಆಗಬೇಕು, ಬಡ ದಲಿತನಿಗೆ ನ್ಯಾಯ ಸಿಗಬೇಕು ಎಂಬುದು ಆಗಿದೆ. ಭ್ರಷ್ಟಾಚಾರ ಮಾಡಿದ್ದಕ್ಕೆ ಮೊದಲೇ ರಾಜೀನಾಮೆ ಕೊಟ್ಟು, ಜೈಲು ಶಿಕ್ಷೆಯೂ ಅನುಭವಿಸಿ ಷರತ್ತುಬದ್ಧ ಜಾಮೀನಿನ ಮೇಲೆ ಹೊರಬಂದಿರೋ ನಾಗೇಂದ್ರನಿಗೆ ಹೊಸ ಮಂತ್ರಿಮಂಡಲದಲ್ಲಿ ಕರೆದುಕೊಂಡು ಹೋಗಿ ಮಂತ್ರಿ ಮಾಡಿದರು. ಆ ಮೂಲಕ ರಾಜ್ಯದ ಜನರಿಗೆ ಸರ್ಕಾರ ತಪ್ಪು ಸಂದೇಶ ನೀಡಿದರು.

ಆತ್ಮ೧ಹತ್ಯೆ ಮಾಡಿಕೊಂಡ ಚಂದ್ರಶೇಖರ್ 'ಹಣ ಹಂಚಿಕೆ ವ್ಯವಹಾರವೆಲ್ಲ ಸಚಿವರ(ಬಿ ನಾಗೇಂದ್ರ) ಅವರ ಮೌಖಿಕ ಸೂಚನೆ ಮೇರೆಗೆ ಎಂಬುದು ಸ್ಪಷ್ಟವಾಗಿ ದಾಖಲಿಸಿದ್ದಾರೆ. ಇನ್ನೆಂಥ ಸಾಕ್ಷ್ಯ ಬೇಕು? ವಾಲ್ಮೀಕಿ ನಿಗಮದ ಎಲ್ಲಾ ಹಗರಣ ನಡೆದಿರುವುದು ಸಚಿವರ ಮೌಖಿಕ ಸೂಚನೆ ಮೇರೆಗೆ ಎಂಬುದು ಸ್ಪಷ್ಟ. ಇಲ್ಲವಾದರೆ ಎಂ.ಡಿಗೆ ಅಷ್ಟೊಂದು ಧೈರ್ಯ ಎಲ್ಲಿಂದ ಬರುತ್ತಿತ್ತು. ಈ ವಿಚಾರವಾಗಿ ನಾನು ಅಂದೇ ಅಪಾದಿಸಿದ್ದೆ, ನೆಕ್ಕುಂಟೆ ನಾಗರಾಜ್ ಮತ್ತು ಸಚಿವರ ಸಂಬಂಧದ ಬಗ್ಗೆ ಅಂದೇ ಹೇಳಿದ್ದೆ. ಅದೀಗ ಇಡಿ ತನಿಖೆಯಲ್ಲಿ ನಿಜವಾಗಿದೆ ಎಂದರು.