ಕರ್ನಾಟಕದಲ್ಲಿ ಮೂವರು ಡಿಸಿಎಂ ಮಾಡಿರುವುದೇ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರ ಬೆನ್ನಲ್ಲೇ ಹೊಸ ಮುಖ್ಯಮಂತ್ರಿ ಕೂಗು ಕೂಡ ಕೇಳಿ ಬರುತ್ತಿದೆ. ಕೇಂದ್ರದಲ್ಲಿ ಮೋದಿ ಸರ್ಕಾರದ ಆರ್ಥಿಕ ಹಿನ್ನಡೆಯನ್ನು ತಮ್ಮದೇ ಪಕ್ಷದ ಸುಬ್ರಮಣಿಯನ್ ಸ್ವಾಮಿ ಕಾಲೆಳೆದಿದ್ದಾರೆ. ರಾಜಕೀಯ ಬದಗಿಟ್ಟರೆ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ತೆರೆಗೆ ಅಪ್ಪಳಿಸೋ ಮೊದಲೇ ಭಾರಿ ಸದ್ದು ಮಾಡುತ್ತಿದೆ. ಆಗಸ್ಟ್ 31 ರಂದು ಸಂಚಲನ ಮೂಡಿಸಿದ ಟಾಪ್ 10 ಸುದ್ದಿಗಳು ಇಲ್ಲಿವೆ.
1 ಲಕ್ಷ್ಮಣ ಸವದಿ ಮುಂದಿನ ಸಿಎಂ: ಭವಿಷ್ಯ ನುಡಿದ ಸ್ವಾಮೀಜಿ!
ಕಳೆದ ಚುನಾವಣೆಯಲ್ಲಿ ಸೋಲು ಅನುಭವಿಸಿದ ಲಕ್ಷ್ಮಣ ಸವದಿಗೆ ಸಚಿವ ಸ್ಥಾನವಲ್ಲದೇ, ಉಪ ಮುಖ್ಯಮಂತ್ರಿ ಹುದ್ದೆ ನೀಡಿದ್ದ ವಿಚಾರ ಬಿಜೆಪಿಯಷ್ಟೇ ಅಲ್ಲದೇ ಇತರ ಪಕ್ಷ ಹಾಗೂ ಜನರಿಗೆ ಅಚ್ಚರಿ ನೀಡಿತ್ತು. ಈ ಶಾಕ್ ಅರಗಿಸಿಕೊಳ್ಳೋ ಮೊದಲೇ ಸ್ವಾಮೀಜಿಯೊಬ್ಬರು, ಸವದಿ ಮುಂದಿನ ಸಿಎಂ ಎಂದು ಭವಿಷ್ಯ ನುಡಿದಿದ್ದಾರೆ.
2 ನಮ್ಮ ಜಾಗ ರಾಮ ಮಂದಿರಕ್ಕೆ ಹಸ್ತಾಂತರ: ಶಿಯಾ ಮಂಡಳಿ
ಮಹತ್ವದ ಬೆಳವಣಿಗೆಯೊಂದರಲ್ಲಿ, ಅಯೋಧ್ಯೆಯಲ್ಲಿನ ವಿವಾದಿತ ಬಾಬ್ರಿ ಮಸೀದಿ- ರಾಮಮಂದಿರ ಜಾಗದಲ್ಲಿ ತಮ್ಮ ಪಾಲಿಗೆ ಬಂದಿರುವ ಜಾಗವನ್ನು ಹಿಂದೂ ಸಂಘಟನೆಗಳಿಗೆ ಬಿಟ್ಟುಕೊಡಲು ಸಿದ್ಧ ಎಂದು ಉತ್ತರಪ್ರದೇಶದ ಶಿಯಾ ವಕ್ಫ್ ಮಂಡಳಿಯ ಘೋಷಿಸಿದೆ.
3 ಕಾಂಗ್ರೆಸ್ ಹೈಕಮಾಂಡ್ಗೆ ಸಡ್ಡು ಹೊಡೆದ ಸಿಂಧಿಯಾ!: ಬಿಜೆಪಿಗೆ ಸೇರ್ಪಡೆ ?
ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಕಮಲ್ನಾಥ್ ಜೊತೆ ನೇರಾನೇರಾ ಸಮರಕ್ಕೆ ಇಳಿದಿರುವ ಕಾಂಗ್ರೆಸ್ನ ಯುವಕ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ, ಇದೀಗ ತಮಗೆ ಕಾಂಗ್ರೆಸ್ನ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ನೀಡದೇ ಹೋದಲ್ಲಿ ಬಿಜೆಪಿ ಸೇರೋ ಸೂಚನೆ ನೀಡಿದ್ದಾರೆ.
4 ಹಳೆ ನವರಂಗ್ ಥಿಯೇಟರ್ ವೈಭವ ಇನ್ನು ನೆನಪು ಮಾತ್ರ!
ಬೆಂಗಳೂರಿನ ಐತಿಹಾಸಿಕ ಥಿಯೇಟರ್ ಗಳಲ್ಲಿ ನವರಂಗ್ ಕೂಡಾ ಒಂದು. ಸುಮಾರು 60 ವರ್ಷಗಳ ಇತಿಹಾಸ ಈ ಚಿತ್ರಮಂದಿರಕ್ಕಿದೆ. ರಾಜ್ ಕುಮಾರ್ ಅಷ್ಟೂ ಸಿನಿಮಾಗಳನ್ನು ಪ್ರದರ್ಶಿಸಿದ ಹೆಗ್ಗಳಿಕೆ ಇದರದ್ದು. ಈ ವೈಭವ ಇನ್ನು ನೆನಪು ಮಾತ್ರವಾಗಿ ಉಳಿಯಲಿದೆ.
5 ಸುದೀಪ್ ಪೈಲ್ವಾನ್ಗೆ U/A ಸರ್ಟಿಫಿಕೇಟ್!
ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಪೈಲ್ವಾನ್’ ಕನ್ನಡ ಆವತರಣಿಕೆಯ ಸೆನ್ಸಾರ್ ಪ್ರಕ್ರಿಯೆ ಮುಗಿದಿದೆ. ಚಿತ್ರ ವೀಕ್ಷಿಸಿದ ಸೆನ್ಸಾರ್ ಮಂಡಳಿ ಈ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ. ಕನ್ನಡದ ಜತೆಗೆ ಇದು ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲೂ ತೆರೆಗೆ ಬರುತ್ತಿದೆ. ಅಲ್ಲೂ ಸೆನ್ಸಾರ್ ಪ್ರಕಿಯೆ ಮುಗಿಸಬೇಕಿದೆ
6 'ಗ್ರಹ'ಚಾರ ಸರಿ ಇಲ್ಲ: ರೇವಣ್ಣಗೆ KMF ಡಬಲ್ ಶಾಕ್!
ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರಿಗೆ ಕೆಎಂಎಫ್ ಅಧ್ಯಕ್ಷಗಿರಿ ಸಿಗದಂತೆ ಮಾಡುವಲ್ಲಿ ಬಹುತೇಕ ಯಶಸ್ವಿಯಾಗಿರುವ ರಾಜ್ಯದ ಬಿಜೆಪಿ ಸರ್ಕಾರ ಇದೀಗ ಮತ್ತೊಂದು ಶಾಕ್ ನೀಡಲು ಮುಂದಾಗಿದೆ.
7 ಇಂದಿನಿಂದ ಬೆಂಗಳೂರಲ್ಲಿ ಪ್ರೊ ಕಬಡ್ಡಿ ಹವಾ
ಪ್ರೊ ಕಬಡ್ಡಿ 7ನೇ ಆವೃತ್ತಿಯ ಬೆಂಗಳೂರು ಚರಣ, 2 ವರ್ಷಗಳ ಬಳಿಕ ಮತ್ತೆ ತವರಿಗೆ ವಾಪಸಾಗಿದೆ. ರಾಜ್ಯ ರಾಜಧಾನಿಯ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಕಬಡ್ಡಿ ಆಯೋಜಿಸಲು ರಾಜ್ಯ ಕ್ರೀಡಾ ಇಲಾಖೆ ಅನುಮತಿ ನೀಡಿರುವ ಕಾರಣದಿಂದ ಬೆಂಗಳೂರಲ್ಲಿ ಮತ್ತೆ ಕಬಡ್ಡಿ ಹವಾ ಸೃಷ್ಟಿಯಾಗಿದೆ.
8 ಜಮೈಕಾ ಅಭಿಮಾನಿಗಳಿಗೆ ಕೊಹ್ಲಿ ಭರ್ಜರಿ ಗಿಫ್ಟ್!
ವೆಸ್ಟ್ ಇಂಡೀಸ್ ವಿರುದ್ದದ 2ನೇ ಪಂದ್ಯದ ಮೊದಲ ದಿನ ಭಾರತ ಅಬ್ಬರಿಸಿದೆ. ನಾಯಕ ವಿರಾಟ್ ಕೊಹ್ಲಿ ಹಾಗೂ ಕನ್ನಡಿಗ ಮಯಾಂಕ್ ಅಗರ್ವಾಲ್ ಅರ್ಧಶತಕ ನೆರವಿನಿಂದ ಟೀಂ ಇಂಡಿಯಾ ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 264 ರನ್ ಸಿಡಿಸಿತು. ದಿನದಾಟದ ಬಳಿಕ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿ ನೆರೆದಿದ್ದ ಜಮೈಕಾ ಅಭಿಮಾನಿಗಳಿಗೆ ಸ್ಪೆಷಲ್ ಉಡುಗೊರೆ ನೀಡಿದರು.
9 ಧೈರ್ಯವೂ ಇಲ್ಲ, ಜ್ಞಾನವೂ ಇಲ್ಲ: ಮೋದಿ ಕಾಲೆಳೆದ ಸ್ವಾಮಿ!
ಪ್ರಧಾನಿ ನರೇಂದ್ರ ಮೋದಿ ಅವರ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿಯನ್ನು, ಬಿಜೆಪಿ ಹಿರಿಯ ನಾಯಕ, ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ವ್ಯಂಗ್ಯವಾಡಿದ್ದಾರೆ. 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿ ಸಾಧಿಸಲು ಬೇಕಾದ ಧೈರ್ಯ ಮತ್ತು ಜ್ಞಾನ ಮೋದಿಯಲ್ಲಿಲ್ಲ ಎಂದಿದ್ದಾರೆ.
10 ಏನಾಶ್ಚರ್ಯ...! 8 ಫೋಟೋಗಳಲ್ಲೂ ಸೇಮ್ ಮೋಡ: ಏನಿದರ ಮರ್ಮ?
ಸೋಶಿಯಲ್ ಮೀಡಿಯಾದಲ್ಲಿ ತನ್ನ ಫಾಲೋವರ್ಸ್ ಸಂಖ್ಯೆ ಹೆಚ್ಚಾಗಲು ಜನರು ನಾನಾ ದಾರಿ ಕಂಡುಕೊಳ್ಳುತ್ತಾರೆ. ತಮ್ಮ ಅತ್ಯುತ್ತಮ ಫೋಟೋಗಳನ್ನು ಅಪ್ಲೋಡ್ ಮಾಡಿ ಹಿಂಬಾಲಕರನ್ನು ಸೆಳೆಯುವ ಯತ್ನ ನಡೆಸುತ್ತಾರೆ. ಆದರೀಗ ಅರ್ಜೆಂಟೈನಾದ ಟ್ರಾವೆಲ್ ಬ್ಲಾಗರ್ ಫೋಟೋಶಾಪ್ ಬಳಕೆಯಿಂದ ಮುಜುಗರ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
Read Full Article