‘ಅಮರ್ಥ’ ಸಿನಿಮಾ ವಿಮರ್ಶೆ: ಗುರು ಹೆಗ್ಡೆ ಮತ್ತು ವಿನಯ್ ಪ್ರೀತಮ್ ನಿರ್ದೇಶನದ ‘ಅಮರ್ಥ’ ಶಾಲಾ ದಿನಗಳ ಸ್ನೇಹ, ಪ್ರೀತಿ, ತರ್ಲೆ-ತಾಪತ್ರಯಗಳ ಮೂಲಕ ಆರಂಭವಾಗಿ, ಕಾಲ ಬದಲಾದಂತೆ ಸಂಬಂಧಗಳು ಹೇಗೆ ಬದಲಾಗುತ್ತವೆ ಎಂಬುದನ್ನು ಹೇಳುವ ಸಿನಿಮಾ.

ರಾಜ್

ಈಗ ಇರುವುದು ಮುಂದೆಯೂ ಇರುತ್ತದೆ ಅಂತ ಹೇಳುವುದು ಅಸಾಧ್ಯ, ಸಮಯವೇ ಎಲ್ಲದರ ನಿರ್ಣಾಯಕ ಅನ್ನುವುದನ್ನು ಸೂಚ್ಯವಾಗಿ ತಿಳಿಸುವ ಸಿನಿಮಾ ಇದು. ಶಾಲಾ ದಿನಗಳ ಕತೆಗಳ ಮೂಲಕ ಲವಲವಿಕೆಯಿಂದ ಸಿನಿಮಾ ಶುರುವಾಗುತ್ತದೆ. ಶಾಲಾ ದಿನಗಳ ಸ್ನೇಹ, ಪ್ರೇಮ, ತರ್ಲೆ ತಾಪತ್ರಯಗಳೇ ಮೊದಲಾರ್ಧದ ಜೀವಾಳ.

ಒಟ್ಟಿಗೆ ಕುಳಿತು ಊಟ ಮಾಡುವುದು, ಪ್ರೇಮ ಚಿಗುರುವುದು, ಸ್ನೇಹಿತರ ಜೊತೆ ಹೊಡೆದಾಡುವುದು ಹೀಗೆ ಮೃದು ಮಧುರ ನವಿರು ಭಾವಗಳ ಮೂಲಕ ಸಿನಿಮಾ ಸಾಗುತ್ತದೆ. ಕಾಲ ಹಾಗೇ ಉಳಿಯುವುದಿಲ್ಲವಲ್ಲ. ಬದಲಾದ ಕಾಲಕ್ಕೆ ಅದೇ ಪಾತ್ರಗಳು ಹೇಗೆ ಪ್ರತಿಕ್ರಿಯಿಸುತ್ತವೆ ಅನ್ನುವುದು ಮುಂದಿನ ಹಂತ.

ತುಂಬಾ ಸಾವಧಾನದಿಂದ ಕತೆಯನ್ನು ಹೇಳಲಾಗಿದೆ. ಶಾಲಾ ದಿನಗಳು, ಸ್ನೇಹ- ಪ್ರೇಮದ ಕತೆ ಆದ್ದರಿಂದ ಬಹಳ ಬೇಗ ಕನೆಕ್ಟ್ ಆಗುತ್ತದೆ. ಆದರೆ ಈ ಕಾಲಕ್ಕೆ ವಿರುದ್ಧವಾಗಿ ಬಹಳ ಸಂಯಮದಿಂದ ಕತೆ ಹೇಳಿರುವುದು ಇಲ್ಲಿನ ವೈಶಿಷ್ಟ್ಯ. ಪ್ರೇಮದ ಅಥವಾ ಸ್ನೇಹದ ಕತೆಯಾಗಬಹುದಾಗಿದ್ದ ಸಿನಿಮಾವನ್ನು ಅಂತ್ಯದಲ್ಲಿ ನಿರ್ದೇಶಕರು ಬೇರೆಯದೇ ಅಂತ್ಯ ಕೊಟ್ಟು ಕಾಲನ ಕೈಗೆ ಕೊಟ್ಟು ಬಿಡುತ್ತಾರೆ. ಆ ಮೂಲಕ ಯೋಚನೆಗೆ ಹಚ್ಚುತ್ತಾರೆ.

ಚಿತ್ರ: ಅಮರ್ಥ

ನಿರ್ದೇಶಕ: ಗುರು ಹೆಗ್ಡೆ, ವಿನಯ್ ಪ್ರೀತಮ್

ತಾರಾಗಣ: ಶ್ರೀನಗರ ಕಿಟ್ಟಿ, ಮೇಘನಾ ರಾಜ್, ಕೃತಿ ಶೆಟ್ಟಿ, ಗುರು ಹೆಗ್ಡೆ, ಅರವಿಂದ ಬೋಳಾರ್, ಪುಷ್ಪರಾಜ್ ಬೊಳ್ಳಾರ್

ರೇಟಿಂಗ್: 3

ಶ್ರೀನಗರ ಕಿಟ್ಟಿ, ಮೇಘನಾ ರಾಜ್, ಕೃತಿ ಶೆಟ್ಟಿ ಆಪ್ತವಾಗಿ ನಟಿಸಿದ್ದಾರೆ. ಅದರ ಜೊತೆಗೆ ಅವರ ಶಾಲಾ ದಿನಗಳಲ್ಲಿ ಪಾತ್ರಗಳಲ್ಲಿ ನಟಿಸಿದ್ದ ಯುವ ಕಲಾವಿದರು ಅಮೋಘವಾಗಿ ಅಭಿನಯಿಸಿದ್ದಾರೆ. ಇದೊಂದು ವಿಭಿನ್ನ ಪ್ರಯತ್ನದ ಸಿನಿಮಾ.