ಕಲಬುರಗಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪ್ರತಿಮೆ ತೆರವುಗೊಳಿಸಿದ್ದನ್ನು ಖಂಡಿಸಿ ವಿಜಯಪುರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಮೆಯನ್ನು ಮರುಸ್ಥಾಪಿಸದಿದ್ದರೆ ಕಲಬುರಗಿಗೆ ಪಾದಯಾತ್ರೆ ನಡೆಸುವುದಾಗಿ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ವಿಜಯಪುರ: ಕಲಬುರಗಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಪ್ರತಿಮೆ ತೆರವು ಖಂಡಿಸಿ, ಸಿದ್ದರಾಮಯ್ಯನವರ ಹೆಸರಿನಲ್ಲಿಯೇ ಇರುವ ಅದೇ ವೃತ್ತದಲ್ಲಿ ಪ್ರತಿಮೆ ಸ್ಥಾಪಿಸಬೇಕೆಂದು ಒತ್ತಾಯಿಸಿ ನಗರದಲ್ಲಿ ಬೃಹತ್ ಪಾದಯಾತ್ರೆ ಮತ್ತು ಪ್ರತಿಭಟನೆ ನಡೆಸಲಾಯಿತು.
ಕಾಂಗ್ರೆಸ್ ಮುಖಂಡ ಹಮೀದ್ ಮುಶ್ರೀಫ್ ಮಾತನಾಡಿ, ಅಲ್ಲಿಯ ಪಾಲಿಕೆಯ ಅಧಿಕಾರಿಗಳು ಪ್ರತಿಮೆ ತೆರವುಗೊಳಿಸಿರಬಹುದು. ಆದರೆ ಬಡವರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದ ಸಿದ್ದರಾಮಯ್ಯನವರ ಹೆಸರು ತೆಗೆಯಲು ಸಾಧ್ಯವಿಲ್ಲ. ಅಚಾತುರ್ಯ ನಡೆಸಿದ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ವಿಜಯಪುರದಿಂದ ಕಲಬುರಗಿಗೆ ಪಾದಯಾತ್ರೆ
ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಮಾತನಾಡಿ, ಸಿದ್ದರಾಮಯ್ಯರ ಪ್ರತಿಮೆ ಕೇವಲ ಒಂದು ಕಲಾಕೃತಿಯಲ್ಲ, ಬದಲಾಗಿ ಅದರ ಹಿಂದೆ ಸಾಮಾಜಿಕ ಸಂದೇಶದ ಉದ್ದೇಶಗಳಿವೆ. ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿದ ಸಿದ್ದರಾಮಯ್ಯನವರಿಗೆ ಜನರು ಸಲ್ಲಿಸುವ ಕೃತಜ್ಞತೆಯ ಸಂಕೇತವಾಗಿದೆ. ಪ್ರತಿಮೆಯನ್ನು ಅಲ್ಲಿಯೇ ಮರು ಸ್ಥಾಪಿಸದಿದ್ದರೆ ಅಸಂಖ್ಯಾತ ಬೆಂಬಲಿಗರೊಂದಿಗೆ ವಿಜಯಪುರದಿಂದ ಕಲಬುರಗಿಗೆ ಪಾದಯಾತ್ರೆ ನಡೆಸಲಾಗುವುದೆಂದು ಎಚ್ಚರಿಸಿದರು.
ಸಭೆಯಲ್ಲಿ ಮುಖಂಡರಾದ ಭಾರತಿ ಹೊಸಮನಿ, ಷಹಜಾನ್ ದುಂಡಸಿ, ಮಲ್ಲು ಬಿದರಿ, ಅಶ್ಪಾಕ್ ಮನಗೂಳಿ, ವಸಂತ ಹೊನಮೋಡೆ, ಚಂದಸಾಬ್ ಗಡಗಲಾವ, ಫಯಾಜ್ ಕಲಾದಗಿ, ಮನು ಭಾವಿಕಟ್ಟಿ, ಸಂತೋಷ ಬಾಲ್ಗಾವಿ, ದೇವಕಾಂತ ಬಿಜ್ಜರಗಿ ಸೇರಿ ಅನೇಕರು ಉಪಸ್ಥಿತರಿದ್ದರು.


