ಮಳೆಗಾಲ ಮುಗಿದು ಚಳಿಗಾಲ ಆರಂಭವಾಗುತ್ತಿದ್ದರೂ ಕೊಡಗು ಜಿಲ್ಲೆಯಲ್ಲಿ ನಿತ್ಯ ಆಗಿಂದಾಗ್ಗೆ ಸುರಿಯುತ್ತಿರುವ ಮಳೆ, ಬಿಸಿಲಿನ ಹವಾಮಾನ ವೈಪರೀತ್ಯದಿಂದಾಗಿ ಸಾಂಕ್ರಾಮಿಕ ಜ್ವರದಿಂದ ಜನರು ತತ್ತರಿಸುವಂತೆ ಆಗಿದೆ. 

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊಡಗು (ಅ.28): ಮಳೆಗಾಲ ಮುಗಿದು ಚಳಿಗಾಲ ಆರಂಭವಾಗುತ್ತಿದ್ದರೂ ಕೊಡಗು ಜಿಲ್ಲೆಯಲ್ಲಿ ನಿತ್ಯ ಆಗಿಂದಾಗ್ಗೆ ಸುರಿಯುತ್ತಿರುವ ಮಳೆ, ಬಿಸಿಲಿನ ಹವಾಮಾನ ವೈಪರೀತ್ಯದಿಂದಾಗಿ ಸಾಂಕ್ರಾಮಿಕ ಜ್ವರದಿಂದ ಜನರು ತತ್ತರಿಸುವಂತೆ ಆಗಿದೆ. ಹೌದು ನವೆಂಬರ್ ಅಂತ್ಯದಲ್ಲಿದ್ದರೂ ಕೊಡಗು ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಮಾತ್ರ ತಗ್ಗಿಲ್ಲ. ನಿತ್ಯವೂ ಮಳೆ ಸುರಿದರೆ ಅದಕ್ಕೆ ಎರಡುಪಟ್ಟು ಬಿಸಿಲ ಧಗೆ ಹೊಡೆಯುತ್ತಿದೆ. ಇದು ಜನರನ್ನು ಹೈರಾಣಾಗುವಂತೆ ಮಾಡಿದೆ. ಭಾರೀ ಮಳೆ ಮತ್ತು ಬಿಸಿಲು ಹೊಡೆಯುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಶೀತ, ಜ್ವರ ಮತ್ತು ತಲೆನೋವಿನಿಂದ ಬಳಲುವಂತೆ ಆಗಿದೆ. 

ನಿತ್ಯವೂ ನೂರಿನ್ನೂರು ಜನರು ಆಸ್ಪತ್ರೆಗಳ ಎಡತಾಕುವಂತೆ ಆಗಿದೆ. ಮಳೆಗಾಲದಲ್ಲಿ ಪ್ರಕೃತಿ ವಿಕೋಪದಿಂದ ನಲುಗಿದ ಜನರಿಗೆ ಈಗ ಮಳೆಗಾಲ ಮುಗಿಯುತ್ತಿದ್ದರೂ ಹವಾಮಾನ ವೈಪರೀತ್ಯದಿಂದ ಈ ಬಾರಿ ಮಳೆಯೇ ಹೆಚ್ಚಾಗಿ ಬಿಸಿಲಿನ ಅನುಭವ ಕಡಿಮೆಯಾಗಿದೆ. ಒಮ್ಮೊಮ್ಮೆ ಮಳೆ ಗಾಳಿ ಚಳಿ ಬಿಸಿಲು ಬರುತ್ತಿರುವುದರಿಂದ ಜಿಲ್ಲೆಯ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದಾಗಿ ಜಿಲ್ಲೆಯ ಜನರಿಗೆ ಶೀತ, ಕೆಮ್ಮು, ತಲೆನೋವು ವೈರಲ್ ಫೀವರ್ ಹರಡುತ್ತಿದೆ. ಅಲ್ಲದೇ ನಿರಂತರವಾಗಿ ಗಾಳಿ ಚಳಿ ಹೆಚ್ಚಾಗಿರುವುದರಿಂದ ಆಸ್ತಮಾ ಕಾಯಿಲೆಯಿಂದ ಬಳಲುತ್ತಿರುವ ಜನರಿಗೆ ಉಸಿರಾಟದ ಸಮಸ್ಯೆ ಕಾಡುತ್ತಿದೆ. 

ಕಾಂಗ್ರೆಸ್ ಸರ್ಕಾರ ಕಳ್ಳರ ಸರ್ಕಾರ: ಛಲವಾದಿ ನಾರಾಯಣಸ್ವಾಮಿ

ಬಿಸಿಲಿನ ತಾಪಮಾನವೂ ತೀವ್ರವಾಗಿರುವುದರಿಂದ ಮಕ್ಕಳು ಮಧ್ಯ ವಯಸ್ಕರು. ವೃದ್ಧರು ಹೆಚ್ಚಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ ದಿಢೀರ್ ಮಳೆ, ದಿಢೀರ್ ಬಿಸಿಲು ಬರುತ್ತಿರುವುದರಿಂದ ಜನರ ಆರೋಗ್ಯದಲ್ಲಿ ತೀವ್ರವಾಗಿ ಏರುಪೇರಾಗುತ್ತಿದೆ. ಹೀಗಾಗಿಯೇ ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲ್ಲೂಕು ಸಮುದಾಯ ಆರೋಗ್ಯ ಕೇಂದ್ರ ಹಾಗೂ ಜಿಲ್ಲಾಸ್ಪತ್ರೆಗೆ ಬರುತ್ತಿದ್ದಾರೆ. ಹೀಗೆ ಹವಾಮಾನ ವೈಪರೀತ್ಯದಿಂದ ಒಂದೆಡೆ ಜನರ ಆರೋಗ್ಯದಲ್ಲಿ ಸಮಸ್ಯೆಗಳು ಎದುರಾಗುತ್ತಿದ್ದರೆ, ಮತ್ತೊಂದೆಡೆ ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತೆ ಇಲ್ಲದೆ ಇರುವುದರಿಂದ ಕೊಳಚೆ ನೀರು ನಿಂತು ಮಲೇರಿಯಾ, ಡೆಂಘಿ ಮುಂತಾದ ಮಾರಣಾಂತಿಕ ಕಾಯಿಲಗಳು ಹರಡಲು ಕಾರಣವಾಗುತ್ತಿದೆ ಎನ್ನುವುದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. 

ಜಿಲ್ಲೆಯಲ್ಲಿ ವಾತಾವರಣದಲ್ಲಿ ಏರುಪೇರು ಆಗುತ್ತಲೇ ಇದೆ. ಬೆಳಗ್ಗೆ ಮೋಡ ಕವಿದ ವಾತಾವರಣ ಇದ್ದರೆ 11 ರಿಂದ 12 ಗಂಟೆ ವೇಳೆ ವಿಪರೀತ ಬಿಸಿಲು ಇರುತ್ತದೆ. ಸಂಜೆ ವೇಳೆಗೆ ದಿಢೀರ್ ಮಳೆ ಸುರಿಯುತ್ತಿದೆ. ಈ ರೀತಿಯ ಭಾರಿ ಮಳೆಯ ಜೊತೆಗೆ ನಗರದಲ್ಲಿ ತಾಪಮಾನದ ಕುಸಿತವೂ ಜನರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಉಂಟು ಮಾಡುತ್ತಿದೆ. ನೆಗಡಿಯಿಂದ ಶುರುವಾಗಿ ನಂತರ ಗಂಟಲು ಕೆರತ, ಕೆಮ್ಮು, ಕಫ, ಜ್ವರದಿಂದ ಬಳಲುವ ಜನರು ಆಸ್ಪತ್ರೆ ಹಾಗೂ ಖಾಸಗಿ ಕ್ಲಿನಿಕ್ಗಳ ಮೊರೆ ಹೋಗುತ್ತಿದ್ದಾರೆ. ಕೊಡಗು ಜಿಲ್ಲೆಯ ಐದು ತಾಲೂಕುಗಳಲ್ಲಿ ದಿನವೊಂದಕ್ಕೆ 200 ರಿಂದ 300 ಜನರು ಅಸ್ಪತ್ರೆ ಮೋರೆ ಹೋಗುತ್ತಿದ್ದಾರೆ. 

ವಕ್ಫ್‌ ಆಸ್ತಿ: ರೈತರು ಆತಂಕ ಪಡುವ ಅಗತ್ಯವಿಲ್ಲ: ಸಚಿವ ಎಂ.ಬಿ.ಪಾಟೀಲ್

ಅಲ್ಲದೇ ಅಕ್ಟೋಬರ್ ತಿಂಗಳಲ್ಲೇ ಸುಮಾರು 600 ರಿಂದ 700 ಜನರು ಚಿಕಿತ್ಸೆ ಪಡೆದು ಹೋಗಿದ್ದಾರೆ. ಅಷ್ಟೇ ಅಲ್ಲದೇ ಜನವರಿಯಿಂದ ಇಲ್ಲಿಯವರೆಗೂ 20 ಕ್ಕೂ ಹೆಚ್ಚು ಜನರು ಡೆಂಘ್ಯೂ ಜ್ವರದಿಂದ ಬಳಲಿದ್ದಾರೆ. ಹೀಗಾಗಿ ಜನರು ಮುಖ್ಯವಾಗಿ ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಿ. ಜ್ವರ ಬಂದಲ್ಲಿ ಉದಾಸೀನತೆ ಮಾಡದೆ ಕೂಡಲೇ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳಿ ಎಂದು ಕೊಡಗು ಜಿಲ್ಲಾ ಆರೋಗ್ಯ ಅಧಿಕಾರಿ ಸತೀಶ್ ಕುಮಾರ್ ಹೇಳಿದ್ದಾರೆ. ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಹವಾಮಾನ ವೈಪರೀತ್ಯದಿಂದ ಜನರು ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ.