ನೋಯ್ಡಾದಲ್ಲಿ ತಾವು ಮಾಡಿಸಿದ್ದ ಪೂಜೆಯಿಂದ ಇಷ್ಟಾರ್ಥ ಈಡೇರಲಿಲ್ಲ ಎಂದು ಇಬ್ಬರು ವ್ಯಕ್ತಿಗಳು ಪೂಜಾರಿಯೊಬ್ಬರನ್ನು ಅಪಹರಿಸಿದ್ದಾರೆ. ಪೂಜೆಯ ನೆಪದಲ್ಲಿ ಜೌನ್‌ಪುರಕ್ಕೆ ಕರೆಸಿಕೊಂಡು 1 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟು ಪ್ರಾಣ ಬೆದರಿಕೆ ಹಾಕಿದ್ದರು. ಬಳಿಕ ಪೊಲೀಸರು ಕಾರ್ಯಾಚರಣೆ ನಡೆಸಿ ಅರ್ಚಕರನ್ನು ರಕ್ಷಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ನೋಯ್ಡಾ: ತಾವು ಮಾಡಿಸಿದ್ದ ಪೂಜೆಯಿಂದ ಇಷ್ಟಾರ್ಥ ಈಡೇರಲಿಲ್ಲ ಎಂದು ಇಬ್ಬರು ವ್ಯಕ್ತಿಗಳು ಪೂಜಾರಿಯೊಬ್ಬರನ್ನೇ ಕಿಡ್ನಾಪ್‌ ಮಾಡಿ ಅವರ ಕುಟುಂಬ ಸದಸ್ಯರಿಂದ 1 ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ಘಟನೆ ನೋಯ್ಧಾದಲ್ಲಿ ನಡೆದಿದೆ. ಪೊಲೀಸರ ಪ್ರಕಾರ, ಇಬ್ಬರು ವ್ಯಕ್ತಿಗಳು ಪೂಜಾರಿಯೊಬ್ಬರನ್ನು ಪೂಜೆಯ ನೆಪದಲ್ಲಿ ಜೌನ್‌ಪುರಕ್ಕೆ ಕರೆಸಿಕೊಂಡಿದ್ದರು. ಆದರೆ ಅವರ ಉದ್ದೇಶ ಪೂಜೆ ಮಾಡಿಸುವುದಾಗಿರಲಿಲ್ಲ. ಬದಲಾಗಿ ಈ ಹಿಂದೆ ಅದೇ ವ್ಯಕ್ತಿಯಿಂದ ಮಾಡಿಸಿದ್ದ ಪೂಜೆಯಿಂದ ಫಲ ಸಿಕ್ಕಿಲ್ಲ ಎಂದು ಅವನಿಂದ ಹಣ ವಸೂಲಿ ಮಾಡುವುದಾಗಿತ್ತು. ಹೀಗಾಗಿ ಪೂಜಾರಿ ಜೌನ್‌ಪುರಕ್ಕೆ ಆಗಮಿಸುತ್ತಲೇ ಅವನನ್ನು ಕೂಡಿ ಹಾಕಿ ಈ ಹಿಂದೆ ಪೂಜೆಗೆ ನೀಡಿದ್ದ 1 ಲಕ್ಷ ವಾಪಸ್‌ ನೀಡಬೇಕು. ಇಲ್ಲವೇ ಹ*ತ್ಯೆ ಮಾಡುವುದಾಗಿ ಬೆದರಿಕೆ ಹಾಕಿ ಹಿಂಸೆ ನೀಡಿದ್ದರು. ಬಳಿಕ ಕುಟುಂಬ ಸದಸ್ಯರು ನೀಡಿದ ದೂರನ್ನು ಆಧರಿಸಿ ಪೊಲೀಸರು ಪೂಜಾರಿ ಕಿಡ್ನಾಪ್‌ ಮಾಡಿದ್ದ ಆಶಿಶ್‌ ಮತ್ತು ಪ್ರವೇಶ್‌ ಎಂಬಿಬ್ಬರನ್ನು ಬಂಧಿಸಿದ್ದಾರೆ.

ಘಟನೆ ಹಿನ್ನೆಲೆ

ನೋಯ್ಡಾ ಮೂಲದ 50 ವರ್ಷದ ಅರ್ಚಕ ಅನಿಲ್ ತಿವಾರಿ ಎಂಬವರನ್ನು ಅಪಹರಿಸಿ ಮೂರು ದಿನಗಳ ಕಾಲ ಬಂಧನದಲ್ಲಿಟ್ಟಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹಿಂದೆ ಮಾಡಿಸಿದ್ದ ಪೂಜೆಯಿಂದ ತಮ್ಮ ಇಷ್ಟಾರ್ಥ ಈಡೇರಲಿಲ್ಲ ಎಂಬ ಕೋಪದಿಂದ ಈ ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ. ನೋಯ್ಡಾದ ಸರ್ಫಾಬಾದ್ ನಿವಾಸಿಯಾಗಿರುವ ಅನಿಲ್ ತಿವಾರಿ ಅವರು ಜೌನ್‌ಪುರದ ಮಸಿದಾ ಗ್ರಾಮದ ಆಶಿಶ್ ಯಾದವ್ ಮತ್ತು ಪ್ರವೇಶ್‌ ಯಾದವ್ ಎಂಬಿಬ್ಬರ ಮನೆಗೆ ತೆರಳಿ ವಿಶೇಷ ಪೂಜೆ-ಪ್ರಾರ್ಥನೆಗಳನ್ನು ನೆರವೇರಿಸಿಕೊಡುತ್ತಿದ್ದರು. ಆರೋಪಿಗಳು ತಮ್ಮ ನಿರ್ದಿಷ್ಟ ಆಸೆಯೊಂದು ಈಡೇರಬೇಕೆಂದು ಅನಿಲ್ ಅವರ ಬಳಿ ಧಾರ್ಮಿಕ ವಿಧಿವಿಧಾನಗಳನ್ನು ಮಾಡಿಸಿದ್ದರು. ಆದರೆ, ಕಾಲಕಳೆದರೂ ತಮ್ಮ ಇಷ್ಟಾರ್ಥ ಈಡೇರದಿದ್ದಾಗ, ಅರ್ಚಕನೇ ತಮಗೆ ವಂಚಿಸಿದ್ದಾನೆಂದು ಭಾವಿಸಿದ ಆರೋಪಿಗಳು ಆಕ್ರೋಶಗೊಂಡಿದ್ದರು.

ಮತ್ತೊಂದು ಪೂಜೆ ನೆರವೇರಿಸಬೇಕೆಂದು ನಂಬಿಸಿ ಸೆಪ್ಟೆಂಬರ್ 5 ರಂದು ಅನಿಲ್ ತಿವಾರಿ ಅವರನ್ನು ಆರೋಪಿಗಳು ಜೌನ್‌ಪುರಕ್ಕೆ ಕರೆಸಿಕೊಂಡಿದ್ದರು. ಅರ್ಚಕರು ಅಲ್ಲಿಗೆ ತಲುಪುತ್ತಿದ್ದಂತೆಯೇ ಅವರನ್ನು ರಹಸ್ಯ ಕೊಠಡಿಯೊಂದರಲ್ಲಿ ಇಟ್ಟು ದೈಹಿಕ ಹಿಂಸೆ ನೀಡಿ, ಈ ಹಿಂದೆ ಪೂಜೆಗೆ ಖರ್ಚು ಮಾಡಿದ್ದ ₹1 ಲಕ್ಷ ಹಣವನ್ನು ವಾಪಸ್ ನೀಡಬೇಕು, ಇಲ್ಲವಾದಲ್ಲಿ ಪ್ರಾಣ ಬೆದರಿಕೆ ಹಾಕಿದ್ದರು.

ತಂದೆ ಮನೆಗೆ ಹಿಂತಿರುಗದಿರುವುದು ಹಾಗೂ ಅಪಹರಣಕಾರರಿಂದ ₹1 ಲಕ್ಷ ಸುಲಿಗೆ ಹಣಕ್ಕೆ ಕರೆ ಬಂದ ಹಿನ್ನೆಲೆಯಲ್ಲಿ, ಅರ್ಚಕರ ಮಗ ರೋಹಿತ್ ತಿವಾರಿ ಅವರು ಸೆಪ್ಟೆಂಬರ್ 9 ರಂದು ನೋಯ್ಡಾದ ಸೆಕ್ಟರ್ 113 ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ದೂರು ಸ್ವೀಕರಿಸಿದ ಪೊಲೀಸರು ಎಲೆಕ್ಟ್ರಾನಿಕ್ ಕಣ್ಗಾವಲು ಹಾಗೂ ತಾಂತ್ರಿಕ ಸಹಾಯದಿಂದ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ನೋಯ್ಡಾಕ್ಕೆ ಬರುವಂತೆ ಪೋಲಿಸರು ಜಾಣತನದಿಂದ ಜಾಲ ಹೆಣೆದರು. ಅದರಂತೆ ಹಣ ಸಂಗ್ರಹಿಸಲು ಬಂದ ಆರೋಪಿಗಳನ್ನು ಸರ್ಫಾಬಾದ್ ಗ್ರಾಮದ ಬಳಿ ಬಂಧಿಸಿ, ಅರ್ಚಕರನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು. ಬಂಧಿತರಿಂದ ದೇಸಿ ಪಿಸ್ತೂಲ್ ಮತ್ತು ಕತ್ತಿಯನ್ನು ವಶಪಡಿಸಿಕೊಳ್ಳಲಾಗಿದೆ.