ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪ ಬಳಿ ಹಾಲಿನ ಟ್ಯಾಂಕರ್ ಸ್ಕೂಟರ್ಗೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ. ಗಣಪತಿ ಹಬ್ಬಕ್ಕಾಗಿ ಬೆಂಗಳೂರಿನಿಂದ ಬಂದಿದ್ದ ಒಂದೇ ಕುಟುಂಬದ ಮಗು ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮಂಡ್ಯ (ಸೆ.15): ಬೆಳ್ಳಂಬೆಳಗ್ಗೆಯೇ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪ ಬಳಿ ಸ್ಕೂಟರ್ಗೆ ಹಾಲಿನ ಟ್ಯಾಂಕರ್ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದ್ದು, ಈ ದುರಂತದಲ್ಲಿ ಮಗು ಸೇರಿ ಒಂದೇ ಕುಟುಂಬದ ಮೂವರು ದುರ್ಮರಣಕ್ಕೀಡಾದ ಘಟನೆ ನಡೆದಿದೆ.
ಕೊಪ್ಪ ನಿವಾಸಿಗಳಾದ ಕಾವ್ಯ, ಮುತ್ತುರಾಜ್, ಕೀರ್ತನಾ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟ ದುರ್ದೈವಿಗಳು.
ಹಬ್ಬಕ್ಕೆ ಬಂದವರು ಮಸಣಕ್ಕೆ
ನಿನ್ನೆ ಗಣಪತಿ ಹಬ್ಬ ಹಿನ್ನೆಲೆ ಹಬ್ಬ ಆಚರಿಸಲು ಬೆಂಗಳೂರಿನಿಂದ ಕೊಪ್ಪಕ್ಕೆ ಬಂದಿದ್ದ ಕುಟುಂಬ. ನಿನ್ನೆ ಸಂಭ್ರಮದಿಂದ ಹಬ್ಬ ಆಚರಿಸಿದ್ದಾರೆ. ಮುಂಜಾನೆ ಬೇಗ ಬಿಟ್ಟರೆ ಇಂದೇ ಕೆಲಸಕ್ಕೆ ಹೋಗುವ ಅವಸರವಿತ್ತೋ ಏನೋ ಬೆಳಗಿನ ಜಾವವೇ ಸ್ಕೂಟರ್ನಲ್ಲಿ ಬೆಂಗಳೂರಿನತ್ತ ವಾಪಸ್ ಆಗುತ್ತಿದ್ದ ಕುಟುಂಬ. ಆದರೆ ವಿಧಿ ಅಟ್ಟಹಾಸ ಮೆರೆದಿದೆ. ಊರು ದಾಟುವ ಮುಂಚೆಯೇ ಯಮರಾಜನಂತೆ ವೇಗವಾಗಿ ಬಂದ ಹಾಲಿನ ಟ್ಯಾಂಕರ್ ಸ್ಕೂಟರ್ಗೆ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಮೂವರ ಪ್ರಾಣಪಕ್ಷಿ ಸ್ಥಳದಲ್ಲೇ ಹಾರಿಹೋಗಿದೆ. ರಸ್ತೆಯಲ್ಲಿ ರಕ್ತಸಿಕ್ತ ಬಿದ್ದ ಮೂವರ ಮೃತದೇಹಗಳೇ ಅಪಘಾತದ ತೀವ್ರತೆ ತೋರಿಸಿದೆ.
ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ
ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೊಪ್ಪ ಪೊಲೀಸು ಭೇಟಿ ನೀಡಿದ್ದು, ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


