ಮಣಿಪುರದ ಕಾಂಗ್ರೆಸ್ ಶಾಸಕ ಹಾಗೂ ಸಿಎಲ್ಪಿ ನಾಯಕ ಕೇಲ್ಶಮ್ ಮೇಘಚಂದ್ರ ಸಿಂಗ್ ಅವರ ನಿವಾಸದ ಬಳಿ ಬಾಂಬ್ ಸ್ಫೋಟ ಸಂಭವಿಸಿದೆ. ಈ ಘಟನೆಯು ಅವರು ವಿಧಾನಸಭೆಯಲ್ಲಿ ಜನಾಂಗೀಯ ಹಿಂಸಾಚಾರದ ಬಗ್ಗೆ ಸರ್ಕಾರವನ್ನು ಟೀಕಿಸಿದ ಒಂದು ದಿನದ ನಂತರ ನಡೆದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಇಂಫಾಲ (ಸೆ.4): ಮಣಿಪುರದ ಕಾಂಗ್ರೆಸ್ ಶಾಸಕ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ನಾಯಕ ಕೇಲ್ಶಮ್ ಮೇಘಚಂದ್ರ ಸಿಂಗ್ (Keisham Meghachandra Singh) ಅವರ ನಿವಾಸದ ಬಳಿ ರಾತ್ರಿ ಸುಮಾರು 8.15 ರ ವೇಳೆಗೆ ಭೀಕರ ಬಾಂಬ್ ಸ್ಫೋಟ ಸಂಭವಿಸಿದ್ದು, ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಮಣಿಪುರದ ತೌಬಲ್ ಜಿಲ್ಲೆಯ ಯೈರಿಪೋಕ್ (Yairipok) ಪ್ರದೇಶದಲ್ಲಿರುವ ಕಾಂಗ್ರೆಸ್ ನಾಯಕ ಮೇಘಚಂದ್ರ ಸಿಂಗ್ ಅವರ ನಿವಾಸವನ್ನು ಗುರಿಯಾಗಿಸಿಕೊಂಡು ಅಜ್ಞಾತ ವ್ಯಕ್ತಿಯೊಬ್ಬ ಸ್ಫೋಟಕವನ್ನು ಎಸೆದು ಪರಾರಿಯಾಗಿದ್ದಾನೆ. ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಇಡೀ ಪ್ರದೇಶವನ್ನು ವಶಕ್ಕೆ ಪಡೆದು ಬೃಹತ್ ಶೋಧ ಕಾರ್ಯವನ್ನು ಆರಂಭಿಸಿದ್ದಾರೆ. ಅದೃಷ್ಟವಶಾತ್ ಈ ಬಾಂಬ್ ದಾಳಿಯಲ್ಲಿ ಯಾವುದೇ ಜೀವಹಾನಿ ಅಥವಾ ಸಾರ್ವಜನಿಕರಿಗೆ ಗಾಯಗಳಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಕೇಲ್ಶಮ್ ಮೇಘಚಂದ್ರ ಸಿಂಗ್ ಅವರು ಈ ಹಿಂದೆ ಮಣಿಪುರ ಪ್ರದೇಶ ಕಾಂಗ್ರೆಸ್ ಸಮಿತಿಯ (PCC) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇತ್ತೀಚೆಗಷ್ಟೇ ಕಾಂಗ್ರೆಸ್ ಹೈಕಮಾಂಡ್ ಅವರ ಸ್ಥಾನಕ್ಕೆ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಓಕ್ರಾಮ್ ಇಬೋಬಿ ಸಿಂಗ್ ಅವರನ್ನು ನೇಮಕ ಮಾಡಿ, ಮೇಘಚಂದ್ರ ಸಿಂಗ್ ಅವರಿಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ನಾಯಕತ್ವದ ಜವಾಬ್ದಾರಿಯನ್ನು ಹಸ್ತಾಂತರಿಸಿತ್ತು.
ಘಟನೆಗೂ ಒಂದು ದಿನ ಮೊದಲಷ್ಟೇ ವಿಧಾನಸಭೆಯಲ್ಲಿ ಸರ್ಕಾರಕ್ಕೆ ಖಡಕ್ ಪ್ರಶ್ನೆ!
ವಿಶೇಷವೆಂದರೆ, ಈ ಬಾಂಬ್ ಸ್ಫೋಟ ಸಂಭವಿಸುವುದಕ್ಕೂ ಸರಿಯಾಗಿ ಒಂದು ದಿನದ ಮುಂಚೆ ಶಾಸಕ ಮೇಘಚಂದ್ರ ಸಿಂಗ್ ಅವರು ರಾಜ್ಯದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ಕುರಿತು ವಿಧಾನಸಭೆಯಲ್ಲಿ ರಾಜ್ಯ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದರು.
ಇದಕ್ಕೆ ಉತ್ತರಿಸಿದ್ದ ಮಣಿಪುರ ಗೃಹ ಸಚಿವ ಕೊಂಥೌಜಮ್ ಗೋವಿಂದಸ್ ಸಿಂಗ್ (Konthoujam Govindas Singh), ರಾಜ್ಯದಲ್ಲಿ ಶಾಂತಿ ಮತ್ತು ಸಹಜ ಸ್ಥಿತಿಯನ್ನು ಮರುಸ್ಥಾಪಿಸಲು ಎಲ್ಲರೂ ಒಗ್ಗೂಡಿ ಮುಂದೆ ಬರಬೇಕಿದೆ. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತು ಮಾನವೀಯತೆಯ ಭಾವನೆಯನ್ನು ಎತ್ತಿಹಿಡಿಯಬೇಕು. ಸಮಾಜದ ವಿವಿಧ ಸಮುದಾಯಗಳ ನಡುವೆ ಉಂಟಾಗಿರುವ ಅಪನಂಬಿಕೆಯನ್ನು ಹೋಗಲಾಡಿಸಲು ಧಾರ್ಮಿಕ ಹಾಗೂ ಸಾಮಾಜಿಕ ನಾಯಕರು ಸಕ್ರಿಯ ಪಾತ್ರ ವಹಿಸಬೇಕು ಎಂದು ಮನವಿ ಮಾಡಿದ್ದರು.
ಹಿಂಸಾಚಾರಕ್ಕೆ 60 ಸಾವಿರ ಜನರು ನಿರಾಶ್ರಿತ: ಮಣಿಪುರ ಸರ್ಕಾರದ ವರದಿ
ಇದೇ ವೇಳೆ, ಮಣಿಪುರ ಮುಖ್ಯಮಂತ್ರಿ ಯುವನಮ್ ಖೇಮ್ಚಂದ್ ಸಿಂಗ್ (Yumnam Khemchand Singh) ಅವರು ಗುರುವಾರ ವಿಧಾನಸಭೆಗೆ ಮಾಹಿತಿ ನೀಡುತ್ತಾ, "ಮೇ 3, 2023 ರಂದು ಆರಂಭವಾದ ಭೀಕರ ಜನಾಂಗೀಯ ಹಿಂಸಾಚಾರದ ಪರಿಣಾಮವಾಗಿ ರಾಜ್ಯದಲ್ಲಿ ಸುಮಾರು 60,000 ಜನರು ನಿರಾಶ್ರಿತರಾಗಿದ್ದರು. ಅವರಲ್ಲಿ ಇದುವರೆಗೆ ಸುಮಾರು 36,000 ಜನರನ್ನು ಪುನರ್ವಸತಿಗೊಳಿಸಲಾಗಿದೆ. ಸ್ವಗ್ರಾಮಗಳಿಗೆ ಮರಳಿದ ಜನರು ಕೂಡ ಉದ್ಯೋಗ ಮತ್ತು ಆದಾಯದ ಕೊರತೆಯಿಂದ ಸಂಕಷ್ಟ ಎದುರಿಸುತ್ತಿದ್ದು, ಸರ್ಕಾರದಿಂದ ಅವರಿಗೆ ಪ್ರತಿ ತಿಂಗಳು ಆರ್ಥಿಕ ನೆರವು ನೀಡಲಾಗುತ್ತಿದೆ" ಎಂದು ತಿಳಿಸಿದ್ದಾರೆ.


