ಸಚಿವ ಶಿವರಾಜ ತಂಗಡಗಿ ಹಾಗೂ ಶಾಸಕ ಜನಾರ್ಧನರೆಡ್ಡಿ ನಡುವಿನ ಟ್ವೀಟ್ ಸಮರ ತಾರಕಕ್ಕೇರಿದೆ. ಜನಾರ್ಧನರೆಡ್ಡಿ ತಮಗೆ ಸಹಾಯ ಮಾಡಿದ್ದರ ಬಗ್ಗೆ ಈ ಹಿಂದೆ ತಂಗಡಗಿಯವರೇ ಮಾತನಾಡಿದ್ದ ಹಳೆಯ ವಿಡಿಯೋವನ್ನು ರೆಡ್ಡಿ ಹಂಚಿಕೊಂಡಿದ್ದು, ರಾಜೀನಾಮೆ ನೀಡಿ ಚುನಾವಣೆಗೆ ಬರುವಂತೆ ನೇರ ಸವಾಲು ಹಾಕಿದ್ದಾರೆ.
ಸಚಿವ ಶಿವರಾಜ ತಂಗಡಗಿ ಹಾಗೂ ಶಾಸಕ ಜನಾರ್ಧನರೆಡ್ಡಿ ನಡುವಿನ ಟ್ವೀಟ್ ಸಮರ ಸದ್ಯ ಮತ್ತೊಂದು ಹಂತಕ್ಕೆ ತಲುಪಿದೆ. ತಂಗಡಗಿ ನೀಡಿದ್ದ ಹೇಳಿಕೆಯ ವಿಡಿಯೋವನ್ನೇ ಜನಾರ್ಧನರೆಡ್ಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಚಿವ ತಂಗಡಗಿಗೆ ಕೊಟ್ಟಿದ್ದಾರೆ.
ತಂಗಡಗಿ ವಿಡಿಯೋ ಪೋಸ್ಟ್ ಮಾಡಿದ ರೆಡ್ಡಿ!
ಇತ್ತೀಚೆಗೆ ನಡೆದ ಖಾಸಗಿ ಕಾಲೇಜೊಂದರ ಕಾರ್ಯಕ್ರಮದಲ್ಲಿ ಸಚಿವ ಶಿವರಾಜ ತಂಗಡಗಿ ಅವರು ಜನಾರ್ಧನರೆಡ್ಡಿಯನ್ನು ಹೊಗಳಿದ್ದರು ಎನ್ನಲಾದ ವಿಡಿಯೋ ಇದೀಗ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಇದೇ ವಿಡಿಯೋವನ್ನು ಜನಾರ್ಧನರೆಡ್ಡಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು, 'ನಿಮ್ಮ ಸ್ವಂತ ಬಾಯಿಯಿಂದಲೇ ಹೇಳಿದ್ದ ವಿಡಿಯೋ ಇನ್ನಮೊಮ್ಮೆ ಕೇಳು..' ಎಂದು ತಿರುಗೇಟು ನೀಡಿದ್ದಾರೆ.
ಈ ಹಿಂದೆ ಮಾತನಾಡಿದ್ದ ಸಚಿವ ಶಿವರಾಜ ತಂಗಡಗಿ, ಜನಾರ್ಧನರೆಡ್ಡಿ ನನಗೆ ಸಹಾಯ ಮಾಡಿದ್ದಾರೆ. ಸಹಾಯ ಮಾಡಿದ ಯಾರನ್ನೂ ನಾನು ಮರೆಯುವುದಿಲ್ಲ ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದರು. ಇದೀಗ ಆ ಹೇಳಿಕೆ ವಿಡಿಯೋ ಮುಂದಿಟ್ಟು ತಂಗಡಿಗೆಗೆ ತಿರುಗೇಟು ನೀಡಿದ್ದಾರೆ. ಈ ವಿಡಿಯೋದಿಂದಾಗಿ ಕೊಪ್ಪಳ ರಾಜಕಾರಣದಲ್ಲಿ ಇಬ್ಬರು ನಾಯಕರ ನಡುವಿನ ವಾಕ್ಸಮರ ಮತ್ತೊಂದು ಹಂತಕ್ಕೆ ತಲುಪಿದೆ.
‘ಲೇ ಅನ್ನೋಕೆ ನನಗೂ ಬರುತ್ತೆ...’
ಇದಕ್ಕೂ ಮುನ್ನ ಜನಾರ್ಧನರೆಡ್ಡಿ ಅವರ ಟೀಕೆಗೆ ಪ್ರತಿಕ್ರಿಯಿಸಿದ್ದ ಸಚಿವ ತಂಗಡಗಿ, ಫೇಸ್ಬುಕ್ನಲ್ಲಿ ಸುದೀರ್ಘವಾಗಿ ಪೋಸ್ಟ್ ಮಾಡಿದ್ದರು, 'ಲೇ ಅನ್ನೋಕೆ ನನಗೂ ಬರುತ್ತೆ. ಆದರೆ ನಾನು ಅನ್ನಲ್ಲ..' ಎಂಬರ್ಥದಲ್ಲಿ ತಂಗಡಗಿ ಬರೆದಿದ್ದ ಪೋಸ್ಟ್ ಕೂಡ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ತಂಗಡಗಿಯ ಪೋಸ್ಟ್ಗೆ ಪ್ರತಿಯಾಗಿ ಜನಾರ್ಧನರೆಡ್ಡಿ ಹಳೆಯ ವಿಡಿಯೋ ಬಿಡುಗಡೆ ಮಾಡಿ ತಿರುಗೇಟು ನೀಡಿರುವುದು ಇಬ್ಬರ ನಡುವಿನ ಟ್ವಿಟ್ ವಾರ್ ಕುತೂಹಲ ಮೂಡಿಸಿದೆ.
ಹಳೆಯ ಹೊಗಳಿಕೆಯೇ ಈಗ ರೆಡ್ಡಿ ಅಸ್ತ್ರ!
ತಂಗಡಗಿ ಒಮ್ಮೆ ನಾನು ಯಾರಿಂದಲೂ ಹಣ ಪಡೆದಿಲ್ಲ, ಸ್ವಂತ ಬಲದ ಮೇಲೆ ಗೆದ್ದಿದ್ದೇನೆ ಹೇಳಿದರೆ, ಇನ್ನೊಂದು ರೆಡ್ಡಿ ಹಂಚಿಕೊಂಡಿರುವ ವಿಡಿಯೋದಲ್ಲಿ ತಂಗಡಗಿ ತಮ್ಮ ಹಿಂದಿನ ಹೇಳಿಕೆಯಲ್ಲಿ ಜನಾರ್ಧನರೆಡ್ಡಿ ಮಾಡಿದ ಸಹಾಯವನ್ನು ನೆನಪಿಸಿಕೊಂಡು ಇಕ್ಕಟ್ಟಿಗೆ ಸಿಲುಕಿದಂತಾಗಿದೆ. ಇದೀಗ ಅದೇ ವಿಡಿಯೋ ಮುಂದಿಟ್ಟುಕೊಂಡು ರೆಡ್ಡಿ ಸವಾಲು ಹಾಕಿದ್ದಾರೆ.
ಲೇ ತಮ್ಮ ನಿನ್ನದೇ ವಿಡಿಯೋ ನೋಡು..!
ನನ್ ಯಾರಿಗೂ ತಲೆಬಾಗಿಲ್ಲ, ಯಾರತ್ರನು ಗಣಿ ಹಣ ಪಡೆದಿಲ್ಲ ಅಂದೆ ಅಲ್ವಾ? ಕಳೆದ ಜುಲೈನಲ್ಲಿ ಖಾಸಗಿ ಕಾಲೇಜಿನ ಸಮಾರಂಭದಲ್ಲಿ ಸ್ವತಃ ನಿನ್ನ ಬಾಯಿಂದಲೇ ಯಾರ ಆಶೀರ್ವಾದದಿಂದ, ಯಾರ ಹಣದಿಂದ ನೀನು ಮೊದಲ ಸಲ ಶಾಸಕನಾದೆ, ಮಂತ್ರಿಯಾದೆ ಅಂತ ಒಪ್ಕೊಂಡಿರೋ ವಿಡಿಯೋ ನೋಡು. ನೀನು ಗಣಿ ದುಡ್ಡಲ್ಲೇ ಶಾಸಕನಾಗಿದ್ದು ಹಾಗೂ ಮಂತ್ರಿಯಾಗಿದ್ದು ಅಂತ ನಾನು ಸಾರ್ವಜನಿಕ ಸಭೆಯಲ್ಲಿ ಹೇಳಿದ್ದು ಅದರಲ್ಲೇನಿದೆ? ನೀನೇ ಸ್ವತಃ ಒಪ್ಪಿಕೊಂಡಿರುವೆಲ್ಲ? ಎಂದು ಪ್ರಶ್ನಿಸಿದ್ದಾರೆ.
'ಲೇ ತಮ್ಮಾ.. ಅನ್ನೋದು ಉತ್ತರ ಕರ್ನಾಟಕದಲ್ಲಿ ಸಾಮಾನ್ಯ
ಲೇ ತಮ್ಮ ಎನ್ನುವುದು ಉತ್ತರ ಕರ್ನಾಟಕ ಭಾಷೆಯಲ್ಲಿ ಸಾಮಾನ್ಯ ಪದವಾಗಿದೆ. ವಯಸ್ಸಿನ ಕಿರಿಯರಿಗೆ ಪ್ರೀತಿಯಿಂದ ಕರೆಯುವ ಮಾತು, ಅದು ಅವಾಚ್ಯವಾಗಲಿ, ಏಕವಚನ ಎಂದಾಗಲಿ ಅಲ್ಲ ಎಂದು ಸ್ಪಷ್ಟನೆ ನೀಡಿದ ರೆಡ್ಡಿ, ನನ್ನಿಂದ ಹಣ ಪಡೆದಿಲ್ಲವಾ? ನೀನು ಹೇಳಿರುವುದು ನೆನಪಿಲ್ಲ ಅಂದ್ರೆ, ಕಿವಿಗೆ ಹೆಡ್ಫೋನ್ ಹಾಕ್ಕೊಂಡು ಇನ್ನೊಂದು ಸಲ ಕ್ಲಿಯರ್ ಆಗಿ ನಿನ್ನದೇ ವಿಡಿಯೋ ಕೇಳಿಸ್ಕೋ!
ತಂಗಡಗಿಗೆ ಜನಾರ್ದನ ರೆಡ್ಡಿ ಸವಾಲ್
ಹೇ ತಂಗಡಗಿ, ವಿಧಾನಸೌಧಕ್ಕೆ ನಿನ್ನ ಕಾರಿನಲ್ಲೇ ಜೊತೆಯಲ್ಲೇ ಬರ್ತೀನಿ! ನೀನು ಮಂತ್ರಿ ಸ್ಥಾನಕ್ಕೆ ಹಾಗೂ ಶಾಸಕ ಸ್ಥಾನಕ್ಕೆ, ಜೊತೆಗೆ ಆ ನಾಗೇಂದ್ರ ಹಾಗೂ ಇಡೀ ಬಳ್ಳಾರಿ ಕಾಂಗ್ರೆಸ್ ಶಾಸಕರನ್ನು ಕರ್ಕೊಂಡು ಬಾ. ನಾನು ನಿನ್ನ ಮುಂದೆನೇ ಇರುತ್ತೇನೆ.ಅವರೆಲ್ಲರ ರಾಜೀನಾಮೆ ಕೊಡಿಸು, ನಿಮ್ಮ ರಾಜೀನಾಮೆಗಳು ಸ್ವೀಕಾರ ಆಗಿದ್ದ ತಕ್ಷಣ ನಾನು ಕೂಡ ರಾಜೀನಾಮೆ ಕೊಡುತ್ತೇನೆ. ಜೊತೆಗೆ ಚುನಾವಣಾ ಅಖಾಡಕ್ಕೆ ಧುಮುಕೋಣ! ಯಾರು ಜನನಾಯಕರು, ಯಾರಿಗೆ ಜನ ಠೇವಣಿ ಕಸಿದು ಮನೆಗೆ ಕಳಿಸ್ತಾರೆ ಅಂತ ನೇರವಾಗಿಯೇ ಗಂಗಾವತಿ ಹಾಗೂ ಕನಕಗಿರಿಯಲ್ಲಿ ತೀರ್ಮಾನ ಆಗಿಹೋಗಲಿ ಎಂದು ರೆಡ್ಡಿ ನೇರ ಸವಾಲ್ ಹಾಕಿದ್ದಾರೆ.


