'ಇಂಡಿಯಾ ಟುಡೇ-ಸಿವೋಟರ್' ನಡೆಸಿದ 'ಮೂಡ್ ಆಫ್ ದಿ ನೇಷನ್' ಸಮೀಕ್ಷೆಯಲ್ಲಿ, 2029ರ ಪ್ರಧಾನಿ ಹುದ್ದೆಗೆ ನಟ ಸಿ.ಜೋಸೆಫ್ ವಿಜಯ್ ಮೂರನೇ ಜನಪ್ರಿಯ ಆಯ್ಕೆಯಾಗಿ ಹೊರಹೊಮ್ಮಿದ್ದಾರೆ. ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ನಂತರದ ಸ್ಥಾನದಲ್ಲಿರುವ ವಿಜಯ್, ಶೇ. 9.2ರಷ್ಟು ಜನರ ಬೆಂಬಲ ಗಳಿಸಿದ್ದಾರೆ.
2029ರ ಲೋಕಸಭಾ ಚುನಾವಣೆ(2029 Lok sabha election)ಯಲ್ಲಿ ಭಾರತದ ಮುಂದಿನ ಪ್ರಧಾನಿ ಯಾರಾಗಬೇಕು? ಈ ಪ್ರಶ್ನೆಗೆ 'ಇಂಡಿಯಾ ಟುಡೇ-ಸಿವೋಟರ್' ನಡೆಸಿದ 'ಮೂಡ್ ಆಫ್ ದಿ ನೇಷನ್' ಸಮೀಕ್ಷೆಯಲ್ಲಿ ಅಚ್ಚರಿಯ ಫಲಿತಾಂಶವೊಂದು ಹೊರಬಿದ್ದಿದೆ. ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೂರೇ ತಿಂಗಳಲ್ಲಿ, 'ತಮಿಳಗ ವೆಟ್ರಿ ಕಳಗಂ' (ಟಿವಿಕೆ) ಮುಖ್ಯಸ್ಥ ಸಿ.ಜೋಸೆಫ್ ವಿಜಯ್, ಪ್ರಧಾನಿ ಹುದ್ದೆಗೆ ಮೂರನೇ ಜನಪ್ರಿಯ ಆಯ್ಕೆಯಾಗಿ ಹೊರಹೊಮ್ಮಿದ್ದಾರೆ. ಈ ರಾಷ್ಟ್ರವ್ಯಾಪಿ ಸಮೀಕ್ಷೆಯಲ್ಲಿ ವಿಜಯ್ಗೆ ಶೇ. 9.2ರಷ್ಟು ಮಂದಿ ಬೆಂಬಲ ಸೂಚಿಸಿದ್ದಾರೆ.
ನಟನೆಯಿಂದ ರಾಜಕೀಯಕ್ಕೆ ಬಂದ ವಿಜಯ್, 2024ರಲ್ಲಿ ಚುನಾವಣಾ ರಾಜಕೀಯಕ್ಕೆ ಕಾಲಿಟ್ಟರು. ಆದರೆ, ಅತಿ ಕಡಿಮೆ ಸಮಯದಲ್ಲಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಇತ್ತೀಚಿನ ವಾರಗಳಲ್ಲಿ, ಟಿವಿಕೆ ನಾಯಕರು ವಿಜಯ್ ಅವರನ್ನು ರಾಷ್ಟ್ರೀಯ ನಾಯಕರಾಗಿ ನೋಡಬೇಕು ಎಂದು ಬಹಿರಂಗವಾಗಿಯೇ ಹೇಳುತ್ತಿದ್ದಾರೆ.
ಇಂಡಿಯಾ ಟುಡೇ ಸಮೀಕ್ಷೆ ಏನು ಹೇಳುತ್ತೆ?
'ಇಂಡಿಯಾ ಟುಡೇ-ಸಿವೋಟರ್' ಸಮೀಕ್ಷೆಯ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರು ಶೇ. 48.7ರಷ್ಟು ಮತಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶೇ. 27.1ರಷ್ಟು ಮತಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಇವರಿಬ್ಬರ ನಂತರ, ಶೇ. 9.2ರಷ್ಟು ಮತ ಪಡೆದ ವಿಜಯ್, ಹಲವು ಹಿರಿಯ ನಾಯಕರನ್ನು ಹಿಂದಿಕ್ಕಿ ಮೂರನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಮೋದಿ, ರಾಹುಲ್ ನಂತರದ ಸ್ಥಾನದಲ್ಲಿ ವಿಜಯ್
ಪಟ್ಟಿಯಲ್ಲಿ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ (ಶೇ. 2), ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (ಶೇ. 1.7) ನಂತರದ ಸ್ಥಾನಗಳಲ್ಲಿದ್ದಾರೆ. ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿರುವ 'ಕಾಕ್ರೋಚ್ ಜನತಾ ಪಾರ್ಟಿ' ಚಳವಳಿಯ ಅಭಿಜಿತ್ ದೀಪ್ಕೆ ಅವರಿಗೆ ಶೇ. 1.3ರಷ್ಟು ಬೆಂಬಲ ಸಿಕ್ಕಿದೆ. ಆದರೆ, ತಾನು ರಾಜಕೀಯಕ್ಕೆ ಬರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ದೆಹಲಿಯ ಮಾಜಿ ಮುಖ್ಯಮಂತ್ರಿ ಹಾಗೂ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಶೇ. 1.2ರಷ್ಟು ಮತ ಪಡೆದಿದ್ದಾರೆ.
ವಿಜಯ್ ರಾಷ್ಟ್ರೀಯ ನಾಯಕ ಎಂದ ಟಿವಿಕೆ ನಾಯಕರು
ಭಾನುವಾರ ತಿರುಪ್ಪೂರ್ನಲ್ಲಿ ನಡೆದ ಟಿವಿಕೆ ಸರ್ಕಾರದ 100 ದಿನಗಳ ಸಾಧನೆ ಕಾರ್ಯಕ್ರಮದಲ್ಲಿ, ಹಿರಿಯ ನಾಯಕ ಕೆ.ಎ. ಸೆಂಗೊಟ್ಟೈಯನ್ ಅವರು ವಿಜಯ್ಗೆ ತಮಿಳುನಾಡು ದಾಟಿಯೂ ಬೆಂಬಲವಿದೆ ಎಂದು ಹೇಳಿದರು. 'ಉತ್ತರ ಭಾರತದ ರಾಜ್ಯಗಳ ಜನರೂ ನಮ್ಮ ನಾಯಕ ವಿಜಯ್ ಕಡೆ ನೋಡುತ್ತಿದ್ದಾರೆ. ಇಡೀ ಭಾರತವನ್ನು ಆಳುವ ಶಕ್ತಿ ಅವರಿಗಿದೆ' ಎಂದು ಅವರು ಹೇಳಿದ್ದಾಗಿ 'ದಿ ಪ್ರಿಂಟ್' ವರದಿ ಮಾಡಿದೆ.
'ನಾನು ಎಂಜಿಆರ್ ಮತ್ತು ಜಯಲಲಿತಾ ಅವರೊಂದಿಗೆ ಓಡಾಡಿದ್ದೇನೆ. ಈ ಇಬ್ಬರು ನಾಯಕರ ನಂತರ, ತಮಿಳುನಾಡನ್ನು ಮಾತ್ರವಲ್ಲ, ಭವಿಷ್ಯದ ಭಾರತವನ್ನೂ ಅವರ ಹಾದಿಯಲ್ಲಿ ಆಳುವ ಶಕ್ತಿ ವಿಜಯ್' ಎಂದು ಅವರು ಸೇರಿಸಿದರು.
ತಮಿಳುನಾಡು ಮಾನವ ಸಂಪನ್ಮೂಲ ಸಚಿವ ಡಿ. ಶರತ್ಕುಮಾರ್, 'ನಮ್ಮ ಹೃದಯದಲ್ಲಿ, ಮನೆಯಲ್ಲಿ ಮತ್ತು ಸೇಂಟ್ ಜಾರ್ಜ್ ಕೋಟೆಯಲ್ಲಿ ಮುಖ್ಯಮಂತ್ರಿಯಾಗಿರುವ ನಮ್ಮ ನಾಯಕನೇ ಮುಂದಿನ ಭಾರತದ ಪ್ರಧಾನಿ. ನೀವೇ ಮುಂದಿನ ಪಿಎಂ. ನೀವು ಎಎಂ-ಪಿಎಂ ನೋಡದೆ ಕೆಲಸ ಮಾಡುತ್ತೀರಿ, ಖಂಡಿತ ನೀವೇ ಮುಂದಿನ ಪಿಎಂ' ಎಂದು ಹೇಳಿದ್ದಾಗಿ 'ದಿ ಪ್ರಿಂಟ್' ವರದಿ ಮಾಡಿದೆ. ಇದೇ ವೇಳೆ, ಟಿವಿಕೆ ಶಾಸಕ ಕಲ್ಲನೈ ಅವರು, ವಿಜಯ್ ನಾಯಕತ್ವದ ಮೇಲೆ ಜನರಿಗೆ ಬಲವಾದ ನಂಬಿಕೆ ಇದೆ. ಅವರು ಒಂದು ದಿನ ದೇಶವನ್ನು ಮುನ್ನಡೆಸುತ್ತಾರೆ ಮತ್ತು ತಮಿಳು ಜನರ ಪ್ರತಿನಿಧಿಯಾಗಿ ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜ ಹಾರಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು ಎಂದು ಪಿಟಿಐ ವರದಿ ಮಾಡಿದೆ.
ಸದ್ಯಕ್ಕೆ, 'ಮೂಡ್ ಆಫ್ ದಿ ನೇಷನ್' ಸಮೀಕ್ಷೆಯು ವಿಜಯ್ ಅವರನ್ನು ರಾಷ್ಟ್ರದ ಹಿರಿಯ ನಾಯಕರ ಸಾಲಿನಲ್ಲಿ ನಿಲ್ಲಿಸಿದೆ. ಇದು ಸಿನಿಮಾ ತಾರೆಯಿಂದ ಮುಖ್ಯಮಂತ್ರಿಯಾಗಿ, ಇದೀಗ ಪ್ರಧಾನಿ ಹುದ್ದೆಯ ಸಂಭಾವ್ಯ ಸ್ಪರ್ಧಿಯಾಗಿ ಅವರ ವೇಗದ ಬೆಳವಣಿಗೆಯನ್ನು ತೋರಿಸುತ್ತದೆ.


