ಕತಾರ್ನಲ್ಲಿ ಮರಣದಂಡನೆಗೆ ಗುರಿಯಾಗಿದ್ದ 8 ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳ ಪೈಕಿ 7 ಮಂದಿ ಭಾರತಕ್ಕೆ ಮರಳಿದ್ದಾರೆ. ಆದರೆ ಕಮಾಂಡರ್ ಪೂರ್ಣೇಂದು ತಿವಾರಿ ಮಾತ್ರ ಇನ್ನೂ ದೋಹಾದಲ್ಲೇ ಉಳಿದಿದ್ದು, ಅವರ 88 ವರ್ಷದ ತಾಯಿ ಮಗನ ಬರುವಿಕೆಗಾಗಿ ಕಾಯುತ್ತಿದ್ದಾರೆ.
ಕತಾರ್ನಲ್ಲಿ ಇಸ್ರೇಲ್ ಪರ ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಬಂಧಿತರಾಗಿ ಮರಣದಂಡನೆಗೆ ಗುರಿಯಾಗಿದ್ದ ಭಾರತೀಯ ನೌಕಾಪಡೆಯ ಎಲ್ಲಾ 8 ಮಂದಿ ಹಿರಿಯ ಅಧಿಕಾರಿಗಳನ್ನು ಬಿಡುಗಡೆ ಮಾಡಲಾಗಿದೆ. ಸುಮಾರು 18 ತಿಂಗಳ ಕಾಲ ಜೈಲಿನಲ್ಲಿ ಕಳೆದ ಅವರ ಪೈಕಿ ಏಳು ಮಂದಿ ಈಗಾಗಲೇ ಸ್ವದೇಶಕ್ಕೆ ಮರಳಿದ್ದಾರೆ. ಆದರೆ ಪೂರ್ಣೇಂದು ತಿವಾರಿ ಮಾತ್ರ ಕತಾರ್ನಲ್ಲಿ ಉಳಿದಿದ್ದು. ತಮ್ಮ ಮಗನ ಮುಖ ನೋಡಲು 88 ವರ್ಷದ ಪ್ರಮೋದಿನಿ ತಿವಾರಿ ಅವರು ಹಲವು ವರ್ಷಗಳಿಂದ ಕಾಯುತ್ತಲೇ ಇದ್ದಾರೆ.
67 ವರ್ಷದ ಪೂರ್ಣೇಂದು ಹಲವು ವರ್ಷಗಳಿಂದ ದೋಹಾದಲ್ಲೇ ಉಳಿದಿದ್ದಾರೆ. ಕೆಲವು ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಅವರು ಕೂಡ ಭಾರತಕ್ಕೆ ಬರಲಿದ್ದಾರೆ ಎಂದು ಕುಟುಂಬಕ್ಕೆ ಭಾರತ ಸರ್ಕಾರ ಭರವಸೆ ನೀಡುತ್ತಿದ್ದರೂ ಯಾವಾಗ ಬರುವನೆಂಬುದಕ್ಕೆ ಉತ್ತರವಿಲ್ಲ. ಈಗಾಗಲೇ ಪ್ರಮೋದಿನಿ ತಿವಾರಿಗೆ 88 ವಯಸ್ಸಾಗಿ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಹಲವು ವರ್ಷಗಳಿಂದ ಮಗನಿಗಾಗಿ ಕಾಯುತ್ತಿರುವ ಬಗ್ಗೆ 'ಲೈವ್ಮಿಂಟ್’ಗೆ ನೀಡಿದ ಸಂದರ್ಶನದಲ್ಲಿ ದುಃಖಿತರಾಗಿ ಹೇಳಿದ್ದಾರೆ.
ಕತಾರ್ನಲ್ಲಿ ಬಂಧನಕ್ಕೊಳಗಾಗಿದ್ದ ಎಂಟು ಮಂದಿ ಭಾರತೀಯರು
ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾ ಸೌರಬ್ ವಸಿಷ್ಠ್, ಕಮಾಂಡರ್ ಪೂರ್ಣೇಂದು ತಿವಾರಿ, ಕ್ಯಾ ಬೀರೇಂದ್ರ ಕುಮಾರ್ ವರ್ಮಾ, ಕಮಾಂಡರ್ ಸುಗುಣಾಕರ್ ಪಕಾಲ, ಕಮಾಂಡರ್ ಸಂಜೀವ್ ಗುಪ್ತಾ , ಕಮಾಂಡರ್ ಅಮಿತ್ ನಾಗಪಾಲ್ ಮತ್ತು ನಾವಿಕ ರಾಗೇಶ್ ಅವರನ್ನು ಕತಾರ್ನಲ್ಲಿ 2022ರ ಆಗಸ್ಟ್ನಲ್ಲಿ ಬಂಧಿಸಲಾಗಿತ್ತು. ಪೂರ್ಣೇಂದು ಅವರೊಂದಿಗೆ ಬಂಧನಕ್ಕೊಳಗಾಗಿದ್ದ ಭಾರತೀಯ ನೌಕಾಪಡೆಯ ಏಳು ಮಾಜಿ ಸಿಬ್ಬಂದಿ 2024ರ ಫೆಬ್ರವರಿ 12ರಂದು ಭಾರತಕ್ಕೆ ಮರಳಿದರೂ, ಆದರೆ ಪೂರ್ಣೇಂದು ತಿವಾರಿ ಮಾತ್ರ ದೋಹಾದಲ್ಲೇ ಉಳಿದಿದ್ದು ಕುಟುಂಬದ ಆತಂಕವನ್ನು ಮತ್ತಷ್ಟು ಹೆಚ್ಚಿಸಿತು.
ನನ್ನ ಮಾತ್ರ ಅಲ್ಲೇ ಉಳಿದಿದ್ದು ನನಗೆ ಆತಂಕ...
2024ರ ಫೆಬ್ರವರಿ 12ರಂದು ನನ್ನ ಮಗ ಕಮಾಂಡರ್ ಪೂರ್ಣೇಂದು ತಿವಾರಿ ಮಾತ್ರ ದೋಹಾದಲ್ಲೇ ಉಳಿದಿದ್ದಾರೆ. ಅವರೊಂದಿಗೆ ಬಂಧನಕ್ಕೊಳಗಾಗಿದ್ದ ನೌಕಾಪಡೆಯ ಏಳು ಮಾಜಿ ಸಿಬ್ಬಂದಿ ಭಾರತಕ್ಕೆ ಮರಳಿದ್ದಾರೆ ಎಂಬುದನ್ನು ತಿಳಿದಾಗ ನಾನೊಬ್ಬಳು ತಾಯಿಯಾಗಿ ನನ್ನ ಮಗನ ನೆನೆದು ನನ್ನ ಹೃದಯ ಒಡೆದುಹೋಯಿತು' ಎಂದು ಪ್ರಮೋದಿನಿ ತಿವಾರಿ ಗದ್ಗದಿತರಾಗಿ ತಿಳಿಸಿದ್ದಾರೆ.
ಔಪಚಾರಿಕ ಪ್ರಕ್ರಿಯೆಗಳ ಬಗ್ಗೆ ನನಗೆ ಸ್ಪಷ್ಟವಾಗಿ ತಿಳಿಯುತ್ತಿಲ್ಲ
ನನ್ನ ಮಗ ಭಾರತಕ್ಕೆ ಮರಳಲು ಕೆಲವೇ ಕೆಲವು ಔಪಚಾರಿಕ ಪ್ರಕ್ರಿಯೆಗಳು ಬಾಕಿ ಉಳಿದಿವೆ. ಎಲ್ಲ ಪೂರ್ಣಗೊಂಡ ನಂತರ ಭಾರತಕ್ಕೆ ಮರಳಲಿದ್ದಾರೆ ಎಂದು ಭಾರತ ಸರ್ಕಾರ ಹಲವು ಬಾರಿ ಕುಟುಂಕ್ಕ ಭರವಸೆ ನೀಡಲಾಗಿತ್ತು. ಅವರ ವಾಪಸಾತಿಗೆ ಮುನ್ನ ಕೆಲವು ದಾಖಲೆ ಸಂಬಂಧಿತ ಔಪಚಾರಿಕತೆಗಳನ್ನು ಪೂರ್ಣಗೊಳಿಸಬೇಕಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಕೂಡ ಸಾರ್ವಜನಿಕವಾಗಿ ತಿಳಿಸಿತ್ತು. ಆದರೆ ಈ ಪ್ರಕ್ರಿಯೆಗಳು ಮುಗಿಯುವುದು ಯಾವಾಗ? ವಿಳಂಬಕ್ಕೆ ಕಾರಣವೇನು? ಕುಟುಂಬಕ್ಕೆ ಈ ಬಗ್ಗೆ ಸ್ಪಷ್ಟತೆ ಬೇಕಿದೆ ಎಂದು ತಿಳಿಸಿದ್ದಾರೆ.
ಪೂರ್ಣೇಂದು ಈಗ ಹೇಗಿದ್ದಾರೆ. ಅವರ ಆರೋಗ್ಯ ಹೇಗಿದೆ?
ನನ್ನ ಮಗ ಪೋಸ್ಟ್-ಟ್ರಾಮ್ಯಾಟಿಕ್ ಸ್ಟ್ರೆಸ್ ಡಿಸಾರ್ಡರ್ (PTSD) ಸೇರಿದಂತೆ ಹಲವು ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ತಾಯಿ ಹೇಳಿದ್ದಾರೆ. ಹಲವಾರು ವರ್ಷಗಳಿಂದ ಏಕಾಂತ ಬಂಧನದಲ್ಲಿರಿಸಿದ್ದರಿಂದಲೇ ಈ ಸಮಸ್ಯೆಗಳು ಉಂಟಾಗಿವೆ ಎಂದು ಕುಟುಬ ಹೇಳಿದೆ.
ದೀರ್ಘಕಾಲ ಏಕಾಂತ ಬಂಧನದಲ್ಲಿದ್ದ ಪರಿಣಾಮ PTSD ಸೇರಿದಂತೆ ಹಲವು ಗಂಭೀರ ಕಾಯಿಲೆಗಳಿಂದ ಮಗ ಪೂರ್ಣೇಂದು ತಿವಾರಿ ಬಳಲುತ್ತಿದ್ದಾರೆ. ಬಂಧನದಲ್ಲಿ ಕಳೆಯುತ್ತಿರುವ ಪ್ರತಿಯೊಂದು ಹೆಚ್ಚುವರಿ ದಿನವೂ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ' ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮಗನಿಂದ ಇಷ್ಟು ದೀರ್ಘಕಾಲ ದೂರವಿರುವುದರಿಂದ ಉಂಟಾಗಿರುವ ಪರಿಣಾಮದ ಕುರಿತು ಮಾತನಾಡಿದ 88 ವರ್ಷದ ತಾಯಿ, ಪರಿಸ್ಥಿತಿ ದಿನದಿಂದ ದಿನಕ್ಕೆ ತಮಗೆ ಹೆಚ್ಚು ಕಷ್ಟಕರವಾಗುತ್ತಿದೆ ಎಂದು ಹೇಳಿದ್ದಾರೆ.
ಸರ್ಕಾರ, ನೌಕಾಪಡೆಗೆ ಸಹೋದರಿಯ ಮನವಿ
ಪೂರ್ಣೇಂದು ಅವರ ಸಹೋದರಿ ಮೀಟು ಭಾರ್ಗವ್ ಅವರು ಎಕ್ಸ್ನಲ್ಲಿ ಮಾಡಿರುವ ಪೋಸ್ಟ್ನಲ್ಲಿ, ರಾಯಭಾರ ಕಚೇರಿಯ ಅಧಿಕಾರಿಗಳು ಕುಟುಂಬದೊಂದಿಗೆ ಅರ್ಥಪೂರ್ಣ ಸಂಪರ್ಕವನ್ನು ಕಾಯ್ದುಕೊಂಡಿಲ್ಲ ಮತ್ತು ಮಾಹಿತಿಗಾಗಿ ಕುಟುಂಬ ಪದೇಪದೆ ಮಾಡಿರುವ ಮನವಿಗಳಿಗೆ ಸ್ಪಂದಿಸಿಲ್ಲ ಎಂದು ಆರೋಪಿಸಿದ್ದಾರೆ. ಇಷ್ಟು ದೀರ್ಘಕಾಲದ ಸಂಕಷ್ಟದ ನಡುವೆ ಕುಟುಂಬ ಮತ್ತು ಅಧಿಕಾರಿಗಳ ನಡುವಿನ ಸಂವಹನದ ಕೊರತೆಯು ತಮ್ಮ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಕುಟುಂಬ ಹೇಳಿದೆ. ಅಷ್ಟೇ ಅಲ್ಲದೆ ಮಾಜಿ ನೌಕಾಪಡೆ ಅಧಿಕಾರಿಗೆ ಬೆಂಬಲ ನೀಡುವಂತೆ ಭಾರ್ಗವ್ ಭಾರತೀಯ ನೌಕಾಪಡೆ ಮತ್ತು ಇಡೀ ರಕ್ಷಣಾ ಕ್ಷೇತ್ರದ ಸಮುದಾಯಕ್ಕೆ ಈ ಮೂಲಕ ಮನವಿ ಮಾಡಿದ್ದಾರೆ.


