1984ರಲ್ಲಿ ನಡೆದ ಸಿಖ್ ವಿರೋಧಿ ಗಲಭೆ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಕೋರ್ಟ್‌ನಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕಾಂಗ್ರೆಸ್ ಮಾಜಿ ಸಂಸದ, ಪ್ರಮುಖ ನಾಯಕ ಸಜ್ಜನ್ ಕುಮಾರ್ ನಿಧನರಾಗಿದ್ದಾರೆ. ಏನಿದು ಸಿಖ್ ಗಲಭೆ?

ನವದೆಹಲಿ (ಆ.20) ಭಾರತದಲ್ಲಿ ನಡೆದ ಸಿಖ್ ವಿರೋಧಿ ಗಲಭೆ ಅತೀ ದೊಡ್ಡ ಪ್ರಕರಣವಾಗಿದೆ. 1984ರಲ್ಲಿ ನಡೆದ ಸಿಖ್‌ರ ಮೇಲಿನ ದೌರ್ಜನ್ಯ, ಮಾರಣಹೋಮ ಅಚಾನಕ್ಕಾಗಿ ನಡೆದ ಗಲಭೆಯಲ್ಲ. ಇದು ಅತೀ ದೊಡ್ಡ ಷಡ್ಯಂತ್ರವಾಗಿತ್ತು ಅನ್ನೋದು ಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿದೆ. ಈ ಸಿಖ್ ವಿರೋಧಿ ಗಲೆಯಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕಾಂಗ್ರೆಸ್ ಸಂಸದ, ಪ್ರಮುಖ ನಾಯಕ ಸಜ್ಜನ್ ಕುಮಾರ್ ನಿಧನರಾಗಿದ್ದಾರೆ. ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 80 ವರ್ಷದ ಸಜ್ಜನ್ ಕುಮಾರ್ ಅನಾರೋಗ್ಯದ ಹಿನ್ನಲೆಯಲ್ಲಿ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಹಲವು ಪ್ರಕರಣದಲ್ಲಿ ಸಜ್ಜನ್ ಕುಮಾರ್‌ಗೆ ಜೀವಾವಧಿ

1984ರ ಸಿಖ್ ವಿರೋಧಿ ದಂಗೆಯ ಎರಡು ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ. ಇನ್ನು 2018ರ ದೆಹಲಿಯ ರಾಜ್ ನಗರದಲ್ಲಿ ಒಂದೇ ಕುಟುಂಬದ ಐವರು ಸಿಖ್ ಹತ್ಯೆ ಪ್ರಕರಣದಲ್ಲಿ ಸಜ್ಜನ್ ಕುಮಾರ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಇನ್ನು ದೆಹಲಿಯ ಜಸ್ವಂತ್ ಸಿಂಗ್, ಪುತ್ರ ತರುಣ್‌ದೀಪ್ ಸಿಂಗ್ ಅವರನ್ನು ಜೀವಂತವಾಗಿ ಸುಟ್ಟ ಪ್ರಕರಣದಲ್ಲೂ ಸಜ್ಜನ್ ಕುಮಾರ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಸಜ್ಜನ್ ಕುಮಾರ್ ವಯಸ್ಸು ಹಾಗೂ ಆರೋಗ್ಯದ ಕಾರಣ ಮುಂದಿಟ್ಟು ಸುಪ್ರೀಂ ಕೋರ್ಟ್‌ನಲ್ಲಿ ಹಲವು ಬಾರಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಗಂಭೀರ ಅಪರಾಧ ಕಾರಣ ಸಜ್ಜನ್ ಕುಮಾರ್‌ಗೆ ಜಾಮೀನು ಸಿಗಲಿಲ್ಲ. ಇಷ್ಟೇ ಅಲ್ಲ ಜೈಲಿನಲ್ಲೇ ಚಿಕಿತ್ಸೆ ನೀಡುವಂತೆ ಸೂಚಿಸಿತ್ತು.

ಕಾಂಗ್ರೆಸ್ ಪ್ರಭಾವಿ ನಾಯಕರಾಗಿದ್ದ ಸಜ್ಜನ್ ಕುಮಾರ್ ಸಿಖ್ ವಿರೋಧಿ ದಂಗೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ರು. ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ಬಳಿಕ ದೆಹಲಿಯಲ್ಲಿ ಸಿಖ್ ವಿರೋಧಿ ದಂಗೆ ಎದ್ದಿತ್ತು. ಇಂದಿರಾ ಗಾಂಧಿ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಸಿಖ್ ಸಮುದಾಯವನ್ನೇ ಗುರಿಯಾಗಿಸಲಾಗಿತ್ತು ಅನ್ನೋದು ಇತಿಹಾಸ. ಸಿಖ್ ವಿರೋಧಿ ಗಲಭೆಯಲ್ಲಿ ಹಲವರ ಪ್ರಚೋದಿಸಿ ದಾಳಿ ಮಾಡಿಸಿದ ಆರೋಪ ಸಜ್ಜನ್ ಕುಮಾರ್ ಮೇಲಿತ್ತು. ಈ ಪ್ರಕರಣದಲ್ಲಿ ನ್ಯಾಯಾಲಯ ಸಜ್ಜನ್ ಕುಮಾರ್ ದೋಷಿ ಎಂದು ತೀರ್ಪು ನೀಡಿತ್ತು.