ಪಂಜಾಬ್ ಚುನಾವಣೆ ಸಮೀಪಿಸುತ್ತಿದ್ದಂತೆ ಆಮ್ ಆದ್ಮಿ ಪಾರ್ಟಿಗೆ ಭಾರಿ ಹಿನ್ನಡೆಯಾಗಿದೆ. ಭಗವಂತ್ ಮಾನ್ ಸಿಖ್ ಪಂತದ ವಿರೋಧಿ, ಗುರು ದ್ರೋಹಿ ಎಂದು ಸಿಖ್ ಶ್ರೇಷ್ಠ ಧಾರ್ಮಿಕ ಪೀಠ ಘೋಷಿಸಿದೆ. ಪಂಜಾಬ್ನಲ್ಲಿ ಅಲ್ಲೋಕಲ್ಲೋಲ ಶುರುವಾಗಿದೆ.
ಪಂಜಾಬ್ (ಜೂ.15) ಪಂಜಾಬ್ ವಿಧಾನಸಭೆ ಚುನಾವಣೆಗೆ ತಯಾರಿಗಳು ನಡೆಯುತ್ತಿದೆ. ಕೆಲ ತಿಂಗಳು ಇರುವಾಗಲೇ ಪಂಜಾಬ್ನಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಗುರು ದ್ರೋಹಿ, ಖಾಲ್ಸಾ ಪಂತದ ವಿರೋಧಿ ಎಂದು ಸಿಖ್ ಸರ್ವಶ್ರೇಷ್ಠ ಧಾರ್ಮಿಕ ಪೀಠ ಅಖಾಲ್ ತಕ್ತ್ ಘೋಷಿಸಿದೆ. ಈ ಘೋಷಣೆ ಹೊರಬೀಳುತ್ತಿದ್ದಂತೆ ಭಗವಂತ್ ಮಾನ್ ವಿರುದ್ದ ಪ್ರತಿಭಟನೆಗಳು, ಹೋರಾಟಗಳು ಆರಂಭಗೊಂಡಿದೆ.
ಭಗವಂತ್ ಮಾನ್ ಜೊತೆ ಯಾವುದೇ ಸಂಬಂಧ ಬೇಡ
ಭಗವಂತ್ ಮಾನ್ ಪಂಜಾಬ್ ಮುಖ್ಯಮಂತ್ರಿಯಾಗಿ ನಡೆದುಕೊಳ್ಳುತ್ತಿರುವ ರೀತಿ ತೀವ್ರ ನೋವುಂಟು ಮಾಡಿದೆ. ಭಗವಂತ್ ಮಾನ್ ಜೊತೆ ಖಾಲ್ಸಾ ಸಮುದಾಯ ಯಾವುದೇ ಸಂಬಂಧ ಇಟ್ಟುಕೊಳ್ಳುವುದು ಬೇಡ. ಪಂಜಾಬ್ ಮುಖ್ಯಮಂತ್ರಿಯಾಗಿರಬಹುದು. ಆದರೆ ಸಮುದಾಯ, ಧರ್ಮ, ಗುರುಗಳಿಗೆ ಗೌರವ ನೀಡಿದವರಿಗೆ ಯಾವುದೇ ಮನ್ನಣೆ, ಗೌರವ ಬೇಡ ಎಂದು ಅಖಾಲ್ ತಕ್ತ್ ಸೂಚನೆ ನೀಡಿದೆ.
ಅಖಾಲ್ ತಕ್ತ್ ಈ ಘೋಷಣೆಗೆ ಕಾರಣವೇನು?
ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ದ ಧಾರ್ಮಿಕ ಪೀಠ ಈ ನಿರ್ಧಾರಕ್ಕೆ ಬರಲು ಮಹತ್ವದ ಕಾರಣವಿದೆ. ಕೆಲ ತಿಂಗಳಲ್ಲಿ ಮಾನ್ ಅವರದ್ದು ಎನ್ನಲಾದ ವಿಡಿಯೋ ಒಂದು ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಭಗವಂತ್ ಮಾನ್ ಸಿಖ್ ಗುರುಗಳ ಫೋಟೋ ಮೇಲೆ, ಪೂಜ್ಯನೀಯ ಸಂತರ ಫೋಟೋ ಮೇಲೆ ಮದ್ಯ ಚಿಮುಕಿಸುವ ದೃಶ್ಯವಿತ್ತು.ಇದು ಕೋಲಾಹಲಕ್ಕೆ ಕಾರಣಾಗಿತ್ತು. ಇದೇ ವಿಡಿಯೋದಲ್ಲಿ ಕೆಲ ಅಕ್ಷೇಪಾರ್ಹ ಪದಗಳನ್ನು ಬಳಸಿದ್ದರು.
ನಾನವನಲ್ಲ ಎಂದು ಹೇಳಿ ಜಾರಿಕೊಂಡಿದ್ದ ಮಾನ್ ಸಿಕ್ಕಿಬಿದ್ದಿದ್ದು ಹೇಗೆ?
ಈ ವಿಡಿಯೋ ವೈರಲ್ ಆಗಿ ಕೋಲಾಹಲ ಸೃಷ್ಟಿಸುತ್ತಿದ್ದಂತೆ ಧಾರ್ಮಿಕ ಪೀಠ ಅಕಾಲ್ ತಕ್ತ್ ಭಗವಂತ್ ಮಾನ್ಗೆ ನೋಟಿಸ್ ನೀಡಿ ವಿವರಣೆ ಕೇಳಿತ್ತು. ಈ ಕುರಿತು ಧಾರ್ಮಿಕ ಪೀಠದ ಗುರುಗಳ ಮುಂದೆ ಹಾಜರಾದ ಭಗವಂತ್ ಮಾನ್, ಇದು ಎಐ ಸೃಷ್ಟಿಸಿದ ವಿಡಿಯೋ, ಇದು ನಾನಲ್ಲ. ಯಾರೂ ಎಐ ಬಳಸಿ ನಕಲಿ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದರು.
ವಿವರಣೆ ಪಡೆದ ಬಳಿಕ ಪಂಜಾಬ್ ಸರ್ಕಾರದಿಂದ ಈ ವಿಡಿಯೋ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಲು ಮನವಿ ಮಾಡಿತ್ತು. ಆದರೆ ಪಂಜಾಬ್ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡದೆ ಈ ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸಿತ್ತು. ಹೀಗಾಗಿ ಧಾರ್ಮಿಕ ಪೀಠ ಕೇಂದ್ರ ಸರ್ಕಾರದ ವಿಧಿವಿಜ್ಞಾನಲಯದ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಇದು ಅಸಲಿ ವಿಡಿಯೋ ಎಂದು ಸಾಬೀತಾಗಿತ್ತು. ವರದಿ ಆಧರಿಸಿ ಮತ್ತೆ ಸಭೆ ಸೇರಿದ ಧಾರ್ಮಿಕ ಪೀಠ ಇದೀಗ ಭಗವಂತ್ ಮಾನ್ ಗುರು ದ್ರೋಹಿ ಹಾಗೂ ಸಿಖ್ ಸಮುದಾಯದ ವಿರೋಧಿ ಎಂದು ಘೋಷಿಸಿದೆ.


