ಇವತ್ತು ಅಫ್ಘಾನಿಸ್ತಾನದ ವಿರುದ್ಧ ಟೀಂ ಇಂಡಿಯಾ ಮೊದಲ ಟಿ20 ಪಂದ್ಯವನ್ನ ಆಡಲಿದೆ. ತಂಡವನ್ನು ಮುನ್ನಡೆಸುತ್ತಿರುವ ನಾಯಕ ಶ್ರೇಯಸ್ ಅಯ್ಯರ್ಗೆ ದೊಡ್ಡ ಚಾಲೆಂಜ್ ಎದುರಾಗಿದೆ. ಸಂಜು, ಅಭಿಷೇಕ್ ಹಾಗೂ ಸೂರ್ಯವಂಶಿ ಈ ಮೂವರಲ್ಲಿ ಯಾರನ್ನು ಆಡಿಸಬೇಕು ಅನ್ನೋದೇ ದೊಡ್ಡ ತಲೆನೋವು ಅವರಿಗಿದೆ. ಅಯ್ಯರ್ ಅವರೇ ಆಡಿರುವ ಮಾತುಗಳು ಇಲ್ಲಿವೆ.
ಟೀ ಇಂಡಿಯಾ ಮತ್ತು ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟಿ20 ಸರಣಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇವತ್ತು ಸಂಜೆ 7.30ಕ್ಕೆ ಮೊದಲ ಪಂದ್ಯವು ದೆಹಲಿಯ ಅರುಣ್ ಜೆಟ್ಲಿ ಮೈದಾನದಲ್ಲಿ ನಡೆಯಲಿದೆ.
ಸರಣಿ ಆರಂಭಕ್ಕೂ ಮುನ್ನ ಮಾತನ್ನಾಡಿರುವ ನಾಯಕ ಶ್ರೇಯಸ್ ಅಯ್ಯರ್.. ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ಹಾಗೂ ವೈಭವ್ ಸೂರ್ಯವಂಶಿ ಮೂವರಲ್ಲಿ ಯಾರನ್ನು ಪ್ಲೇಯಿಂಗ್-11ನಲ್ಲಿ ಸೇರಿಸಿಕೊಳ್ಳಬೇಕು, ಯಾರನ್ನ ತಂಡದಿಂದ ಕೈಬಿಡಬೇಕು ಅನ್ನೋದೇ ಕಠಿಣ ಸವಾಲಾಗಿದೆ. ಯಾರನ್ನ ಆಡಿಸಬೇಕು? ಯಾರನ್ನು ಆಡಿಸಬಾರದು ಅನ್ನೋದು ಅಂತಿಮ ಕ್ಷಣದಲ್ಲಿ ನಿರ್ಧರಿಸಲಾಗುವುದು. ಅದನ್ನು ಈಗಲೇ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಈ ಮೂವರಲ್ಲಿ ಯಾರನ್ನ ತಂಡಕ್ಕೆ ಆಯ್ಕೆ ಮಾಡಬೇಕು ಅನ್ನೋದು ತಂಡಕ್ಕೆ ಹಾಗೂ ಕೋಚ್ ಗಂಭೀರ್ಗೆ ದೊಡ್ಡ ತಲೆನೋವು ಆಗಿದೆ. ಯಾರು ಆಟದಿಂದ ಹೊರಗುಳಿಯುತ್ತಾರೋ, ಆ ಆಟಗಾರನ ಜೊತೆ ಖುದ್ದು ಮಾತನ್ನಾಡಿ ಆತ್ಮವಿಶ್ವಾಸ ಮೂಡಿಸಲು ಬಯಸುತ್ತೇನೆ ಎಂದು ಕ್ಯಾಪ್ಟನ್ ಅಯ್ಯರ್ ಹೇಳಿದ್ದಾರೆ.
ತಂಡದಲ್ಲಿ ಮೂವರು ಆರಂಭಿಕ ಆಟಗಾರರು ಇರೋದು ನನಗೆ ದೊಡ್ಡ ಆಶೀರ್ವಾದವಾಗಿದೆ. ಆ ಮೂರು ಆಟಗಾರರು ಕೂಡ ತಮ್ಮ ಪಾತ್ರಗಳನ್ನು ಅದ್ಭುತವಾಗಿ ನಿಭಾಯಿಸುತ್ತಾರೆ. ಹೀಗಾಗಿ ಅವರಲ್ಲಿ ಯಾರನ್ನೂ ಕೈಬಿಡೋದು ಸುಲಭವಿಲ್ಲ. ಅದೊಂದು ಕಠಿಣ ನಿರ್ಧಾರವಾಗಲಿದೆ. ಜೊತೆಗೆ ಯಾರಿಗೆ ಅವಕಾಶ ಸಿಗುತ್ತದೆಯೋ ಅದು ತಂಡದ ಒಳಿತಿಗಾಗಿ ಆಯ್ಕೆ ನಡೆಯಲಿದೆ. ಅವಕಾಶ ಸಿಗದ ಆಟಗಾರನ ಜೊತೆ ನಾನು ಮತ್ತು ಕೋಚ್ ವೈಯಕ್ತಿಕವಾಗಿ ಮಾತನ್ನಾಡುತ್ತೇವೆ. ಇಂದು ಸಿಗದಿದ್ದರೂ ನಾಳೆ ಅಥವಾ ಇನ್ನೊಂದು ಅವಕಾಶ ನೀಡುವ ಬಗ್ಗೆ ನಾನು ಮತ್ತು ಕೋಚ್ ಇಬ್ಬರು ವೈಯಕ್ತಿಕವಾಗಿ ಮಾತನ್ನಾಡುತ್ತವೆ. ಅದು ನಮ್ಮಿಬ್ಬರ ಜವಾಬ್ದಾರಿ ಕೂಡ ಆಗಿದೆ ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.
ಅಯ್ಯರ್ ಮುಂದೆ ಬಿಗ್ ಚಾಲೆಂಜ್
ಶ್ರೇಯಸ್ ಅಯ್ಯರ್ ಟೀಂ ಇಂಡಿಯಾದ ನಾಯಕತ್ವ ವಹಿಸಿಕೊಂಡ ಬಳಿಕ ಭಾರತ ತಂಡ ಟಿ-20ಯಲ್ಲಿ ಹೇಳಿಕೊಳ್ಳುವಂಥ ಪ್ರದರ್ಶನವೇನೂ ನೀಡಿಲ್ಲ. ನಾಯಕತ್ವದ ಮೊದಲ ಸರಣಿಯಲ್ಲಿ ಭಾರತವು ಐರ್ಲೆಂಡ್ ವಿರುದ್ಧ ಸೋತಿತು. ಇಂಗ್ಲೆಂಡ್ ವಿರುದ್ಧವೂ ಸೋಲನ್ನು ಕಂಡಿತು.ಜಿಂಬಾಬ್ವೆ ಸರಣಿ ಗೆಲ್ಲುವಲ್ಲಿ ಯಶಸ್ವಿಯಾದರು. ಇದೀಗ ಅವರ ಮುಂದೆ ಅಫ್ಘಾನಿಸ್ತಾನದ ಸರದಿ, ಮತ್ತು ಇದರೊಂದಿಗೆ, ಅಯ್ಯರ್ ಮೊದಲ ಬಾರಿಗೆ ಭಾರತದಲ್ಲಿ ಮಹತ್ವದ ಜವಾಬ್ದಾರಿಯನ್ನು ಹೊತ್ತುಕೊಳ್ಳಲಿದ್ದಾರೆ. ಕ್ಯಾಪ್ಟನ್ ಅಯ್ಯರ್ ಭಾರತದಲ್ಲಿ ತಂಡವನ್ನು ಮುನ್ನಡೆಸುತ್ತಿರುವುದು ಇದೇ ಮೊದಲು. ಭಾರತದ ಟಿ20 ತಂಡದ ನಾಯಕನಾಗಿ ಅಧಿಕಾರ ವಹಿಸಿಕೊಂಡ ನಂತರ, ಅಯ್ಯರ್ ವಿದೇಶದಲ್ಲಿ ಆಡಿದ್ದಾರೆ.
ಭಾರತ ತಂಡ:
ಶ್ರೇಯಸ್ ಅಯ್ಯರ್(ನಾಯಕ), ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಇಶಾನ್ ಕಿಶನ್(ವಿಕೆಟ್ ಕೀಪರ್), ತಿಲಕ್ ವರ್ಮಾ(ಉಪನಾಯಕ), ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯಿ, ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್, ಯಶ್ ಠಾಕೂರ್.
ಟಿ20 ಆಫ್ಘಾನಿಸ್ತಾನ ತಂಡ:
ಇಬ್ರಾಹಿಂ ಜದ್ರಾನ್(ನಾಯಕ), ರೆಹಮನುಲ್ಲಾ ಗುರ್ಬಾಜ್(ವಿಕೆಟ್ ಕೀಪರ್), ನೂರ್ ರೆಹಮಾನ್(ವಿಕೆಟ್ ಕೀಪರ್), ಸೆದಿಕ್ಕುಲ್ಲಾ ಅಟಲ್, ಡೌರಿಶ್ ರಸೋಲಿ, ಅಜ್ಮತುಲ್ಲಾ ಓಮರ್ಝೈ, ಗುಲ್ಬದ್ದೀನ್ ನೈಬ್, ಮೊಹಮ್ಮದ್ ನಬಿ, ರಶೀದ್ ಖಾನ್, ನಂಗ್ಯಾಲ್ ಖರೋಟಿ, ನೂರ್ ಅಹಮ್ಮದ್, ಮುಜೀಬ್ ಉರ್ ರೆಹಮಾನ್, ಫಝಲ್ಹಕ್ ಫಾರೂಕಿ, ಅಬ್ದುಲ್ಲಾ ಅಹಮದ್ಝೈ, ನವೀನ್ ಉಲ್ ಹಕ್


