ಶ್ರೀಲಂಕಾ ಟೆಸ್ಟ್ ಸರಣಿ ಮುಗಿದ ಬೆನ್ನಲ್ಲೇ ಸ್ಟಾರ್ ಆಟಗಾರರಿಗೆ ಬಿಸಿಸಿಐ ಖಡಕ್ ಸೂಚನೆ ನೀಡಿತ್ತು. ಬೆಂಗಳೂರಿಗೆ ಬರಲು ಸೂಚಿಸಿತ್ತು. ಇದರಂತೆ ಟೀಂ ಇಂಡಿಯಾ ಕೀ ಪ್ಲೇಯರ್ಸ್ ಬೆಂಗಳೂರಿಗೆ ದೌಡಾಯಿಸಿದ್ದಾರೆ.

ಬೆಂಗಳೂರು (ಆ.29) ಶ್ರೀಲಂಕಾ ವಿರುದ್ದದ 2 ಟೆಸ್ಟ್ ಪಂದ್ಯಗಳ ಸರಣಿ ಅಂತ್ಯಗೊಂಡಿದೆ. ಅಂತಿಮ ಪಂದ್ಯದಲ್ಲಿ ಡ್ರಾನಲ್ಲಿ ಅಂತ್ಯಗೊಳ್ಳುವ ಮೂಲಕ ಟೀಂ ಇಂಡಿಯಾ ನಿರಾಸೆ ಅನುಭವಿಸಿತು. ಆದರೆ ಸರಣಿ ಮುಗಿಯುತ್ತಿದ್ದಂತೆ ಟೀಂ ಇಂಡಿಯಾ ಸ್ಟಾರ್ ಆಟಗಾರರಿಗೆ ಬಿಸಿಸಿಐ ಖಡಕ್ ಸೂಚನೆ ನೀಡಿತ್ತು. ಇದರಂತೆ ಸರಣಿ ಮುಗಿದ ಬೆನ್ನಲ್ಲೇ ಪ್ರಮುಖ ಆಟಗಾರರು ಬೆಂಗಳೂರಿಗೆ ಆಗಮಿಸಿದ್ದಾರೆ. ಟೀಂ ಇಂಡಿಯಾ ಸತತ ಟೂರ್ನಿಗ ಸಜ್ಜಾಗುತ್ತಿದೆ. ಬಿಡುವಿಲ್ಲದೆ ಸರಣಿ ಆಡಲಿರುವ ಬಿಸಿಸಿಐ ಸೆಂಟ್ರಲ್ ಕಾಂಟ್ರಾಕ್ಟ್ ಪ್ಲೇಯರ್ಸ್‌ಗೆ ಫಿಟ್ನೆಸ್ ಟೆಸ್ಟ್ ಅಗ್ನಿಪರೀಕ್ಷೆ ಎದುರಾಗಿದೆ. ಇದಕ್ಕಾಗಿ ಆಟಗಾರರು ಬೆಂಗಳೂರಿಗೆ ಆಗಮಿಸಿದ್ದಾರೆ.

ಜಡೇಜಾ, ಪಂತ್ ಸೇರಿ ಹಲವರಿಗೆ ಟೆಸ್ಟ್

ಶ್ರೀಲಂಕಾ ಪ್ರವಾಸ ಮುಗಿಸಿದ ರಿಷಬ್ ಪಂತ್, ರವೀಂದ್ರ ಜಡೇಜಾ, ಯಶಸ್ವಿ ಜೈಸ್ವಾಲ್ ಸೇರಿದಂತೆ ಪ್ರಮುಖ ಕ್ರಿಕೆಟಿಗರು ಬೆಂಗಳೂರಿನಲ್ಲಿ ಬಿಸಿಸಿಐ ಫಿಟ್ನೆಸ್ ಟೆಸ್ಟ್‌ಗೆ ಒಳಗಾಗಿದ್ದಾರೆ. ಲಂಕಾ ಸರಣಿ ಮುಗಿಸಿ ನೇರವಾಗಿ ಬೆಂಗಳೂರಿಗೆ ಬಂದಿಳಿದ ಪ್ರಮುಖ ಕ್ರಿಕೆಟಿಗರು ಫಿಟ್ನೆಸ್ ಟೆಸ್ಟ್‌ಗೆ ಒಳಗಾಗಿದ್ದಾರೆ. ಇತ್ತ ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಟೀಂ ಇಂಡಿಯಾ ಟಿ20 ತಂಡದ ಕ್ರಿಕೆಟಿಗರು ಫಿಟ್ನೆಸ್ ಟೆಸ್ಟ್ ಪ್ರೂವ್ ಮಾಡಿದ್ದಾರೆ.

ಟಿ20 ನಾಯಕ ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ರಿಂಕು ಸಿಂಗ್, ರುತುರಾಜ್ ಗಾಯಕ್ವಾಡ್ ಸೇರಿ ಹಲವು ಕ್ರಿಕೆಟಿಗರು ಬಿಸಿಸಿಐ ಸೆಂಟರ್ ಆಫ್ ಎಕ್ಸ್‌ಲೆನ್ಸ್ ಕೇಂದ್ರದಲ್ಲಿ ಫಿಟ್ನೆಸ್ ಪರೀಕ್ಷೆಗೆ ಒಳಗಾಗಿದ್ದಾರೆ. ಬಿಸಿಸಿಐ ಕಾಂಟ್ರಾಕ್ಟ್ ಪ್ಲೇಯರ್‌ಗೆ ಫಿಟ್ನೆಸ್ ಪರೀಕ್ಷೆ ನಡೆಸಲಾಗುತ್ತಿದೆ. ಫಿಟ್ನೆಸ್ ವಿಚಾರದಲ್ಲಿ ಬಿಸಿಸಿಐ ರಾಜೀಮಾಡಿಕೊಳ್ಳುತ್ತಿಲ್ಲ. ಫಿಟ್ನೆಸ್ ಕಾರಣದಿಂದ ಹಲವು ಕ್ರಿಕೆಟಿಗರು ಇಂಜುರಿಗೆ ತುತ್ತಾಗಿದ್ದಾರೆ. ಹೀಗಾಗಿ ಸಂಪೂರ್ಣ ಫಿಟ್ನೆಸ್ ಅತ್ಯವಶ್ಯಕ ಎಂದು ಬಿಸಿಸಿಐ ಹೇಳಿದೆ.

ಫಿಟ್ನೆಸ್ ಟೆಸ್ಟ್ ಕುರಿತು ಬಿಸಿಸಿಐ ಅದಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಹಂತ ಹಂತವಾಗಿ ಕ್ರಿಕೆಟಿಗರು ಬೆಂಗಳೂರಿನ ಕೇಂದ್ರದಲ್ಲಿ ಫಿಟ್ನೆಸ್ ಟೆಸ್ಟ್ ನಡೆಸಿದ್ದಾರೆ ಎಂದಿದೆ. ಆಯ್ಕೆ ಪ್ರಕ್ರಿಯೆಗೂ ಫಿಟ್ನೆಸ್ ಪ್ರಮುಖ ಮಾನದಂಡವಾಗಿದೆ. ಮುಂದಿನ ದಿನಗಳಲ್ಲಿ ಟೀಂ ಇಂಡಿಯಾ ಸತತ ಪಂದ್ಯಗಳನ್ನು ಆಡಲಿದೆ. ಹೀಗಾಗಿ ಫಿಟ್ನೆಸ್ ಅನಿವಾರ್ಯ ಎಂದು ಬಿಸಿಸಿಐ ಹೇಳಿದೆ. ಬಿಸಿಸಿಐ ಫಿಟ್ನೆಸ್ ಟೆಸ್ಟ್‌ನಲ್ಲಿ 2 ಕಿಲೋಮೀಟರ್ ಓಟ, ಬ್ರಾಂಕೋ ಟೆಸ್ಟ್, ಯೋಯೋ ಟೆಸ್ಟ್ ಸೇರಿದಂತೆ ಪ್ರಮುಖ ಅಗ್ನಿಪರೀಕ್ಷೆಗಳು ಸೇರಿವೆ. ಕ್ರಿಕೆಟ್ ಡ್ರಿಲ್, ರನ್ನಿಂಗ್ ಬಿಟ್‌ವೀನ್ ವಿಕೆಟ್, ಫೀಲ್ಡಿಂಗ್ ಸೇರಿದಂತೆ ಹಲವು ರೀತಿಯಲ್ಲಿ ಪರೀಕ್ಷೆ ನಡೆಸಲಾಗುತ್ತದೆ.