ಟೀಮ್ ಇಂಡಿಯಾ ಮಾಜಿ ವೇಗಿ ಜಾವಗಲ್ ಶ್ರೀನಾಥ್ ಬೆಂಗಳೂರಿನ 'ನಮ್ಮ ಮೆಟ್ರೋ'ದಲ್ಲಿ ಸಾಮಾನ್ಯರಂತೆ ಪ್ರಯಾಣಿಸುತ್ತಿರುವ ಫೋಟೋ ವೈರಲ್ ಆಗಿದೆ. ಈ ಹಿಂದೆ ಮೈಸೂರು ರೈಲ್ವೆ ನಿಲ್ದಾಣದಲ್ಲೂ ಇದೇ ರೀತಿ ಸರಳವಾಗಿ ಕಾಣಿಸಿಕೊಂಡಿದ್ದ ಅವರ ನಡೆಗೆ ಅಭಿಮಾನಿಗಳಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಬೆಂಗಳೂರು (ಆ.28): ಟೀಮ್ ಇಂಡಿಯಾ ಮಾಜಿ ವೇಗದ ಬೌಲರ್, ಐಸಿಸಿ ಮ್ಯಾಚ್ ರೆಫರಿ ಹಾಗೂ ಕನ್ನಡಿಗ ಜಾವಗಲ್ ಶ್ರೀನಾಥ್ ಅವರ ಸರಳತೆ ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಕನ್ನಡಿಗರ ಹೃದಯ ಗೆದ್ದಿದೆ. 90ರ ದಶಕದಲ್ಲಿ ತಮ್ಮ ಮಾರಕ ವೇಗದ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟರ್ಗಳಿಗೆ ನಡುಕ ಹುಟ್ಟಿಸುತ್ತಿದ್ದ ಶ್ರೀನಾಥ್, ಮೈದಾನದಿಂದ ಹೊರಗೆ ಅತ್ಯಂತ ಸರಳ ವ್ಯಕ್ತಿತ್ವಕ್ಕೆ ಹೆಸರಾದವರು. ಇತ್ತೀಚೆಗೆ ಬೆಂಗಳೂರಿನ 'ನಮ್ಮ ಮೆಟ್ರೋ'ದಲ್ಲಿ ಸಾಮಾನ್ಯ ಪ್ರಯಾಣಿಕರಂತೆ ಟ್ರ್ಯಾಲಿ ಬ್ಯಾಗ್ ಹಿಡಿದು ನಿಂತುಕೊಂಡು ಪ್ರಯಾಣಿಸುತ್ತಿರುವ ಅವರ ಫೋಟೋವೊಂದು ವೈರಲ್ ಆಗಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಸಿದ್ಧ ವ್ಯಕ್ತಿಯಾಗಿದ್ದರೂ ಯಾವುದೇ ಅಹಂ ಇಲ್ಲದೆ, ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವ ಅವರ ಈ ಸರಳ ಶೈಲಿ ಕನ್ನಡಿಗರ ಹೆಮ್ಮೆಯನ್ನು ಹೆಚ್ಚಿಸಿದೆ.
ಇದೇ ಮಾದರಿಯ ಸರಳತೆಯ ಪ್ರಸಂಗವೊಂದು ಈ ಹಿಂದೆಯೂ ಸುದ್ದಿಯಾಗಿತ್ತು. ಮೈಸೂರು ರೈಲ್ವೆ ಸ್ಟೇಷನ್ನಲ್ಲಿ ಬ್ಯಾಗ್ ಬೆನ್ನಿಗೇರಿಸಿಕೊಂಡು ರೈಲಿಗಾಗಿ ಕಾಯುತ್ತಿದ್ದ ಶ್ರೀನಾಥ್ ಅವರ ಫೋಟೋವನ್ನು ಲಿಂಕ್ಡ್ಇನ್ನಲ್ಲಿ ಅಭಿಮಾನಿಯೊಬ್ಬರು ಹಂಚಿಕೊಂಡಿದ್ದರು. ಯಾವುದೇ ಬಿಲ್ಡಪ್ ಇಲ್ಲದೆ ಒಬ್ಬ ಸಾಮಾನ್ಯ ನಾಗರಿಕನಂತೆ ಜೀವಿಸುವ ಶ್ರೀನಾಥ್ ಅವರ ಈ ನಡವಳಿಕೆಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಬೆಂಗಳೂರು ಮೆಟ್ರೋದಲ್ಲಿ ನೀಲಿ ಜೀನ್ಸ್ ಹಾಗೂ ಆಕಾಶ ಬಣ್ಣದ ಶರ್ಟ್ ಧರಿಸಿದ್ದ ಜಾವಗಲ್ ಶ್ರೀನಾಥ್ ಟ್ರಾಲಿ ಹಿಡಿದು ನಿಂತಿದ್ದರು. ಕಿವಿಗೆ ಇಯರ್ಬಡ್ಸ್ ಹಾಕಿಕೊಂಡು ನಿಂತಿದ್ದರು. ಬೆಂಗಳೂರಿನ ಜಯನಗರದಲ್ಲಿ ವಾಸವಾಗಿರುವ ಸರಳವಾಗಿ ಇರುವುದರಲ್ಲೇ ಖುಷಿ ಕಾಣುತ್ತಾರೆ. ಆದರೆ, ಈ ಫೋಟೋ ಯಾವಾಗ ತೆಗೆದಿದ್ದು ಎನ್ನುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಒಟ್ಟಾರೆ ಇತ್ತೀಚಿನ ದಿನದಲ್ಲಿ ತೆಗೆದಿರುವ ಫೋಟೋ ಎನ್ನುವುದಂತೂ ಜಾವಗಲ್ ಶ್ರೀನಾಥ್ ಅವರನ್ನು ನೋಡಿದರೆ ಗೊತ್ತಾಗುತ್ತದೆ.


