ಉದ್ಯಮಿ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್, ಅಲ್ಯೂಮಿನಿಯಂ ಉತ್ಪಾದನಾ ರಂಗಕ್ಕೆ ಪ್ರವೇಶಿಸಲು ಗಂಭೀರ ಚಿಂತನೆ ನಡೆಸಿದೆ. ತನ್ನ ಕಲ್ಲಿದ್ದಲು ಅನಿಲೀಕರಣ ಯೋಜನೆಯಿಂದ ಉತ್ಪತ್ತಿಯಾಗುವ ಇಂಧನವನ್ನು ಬಳಸಿ ಲೋಹ ಸಂಸ್ಕರಣೆ ಮಾಡುವ ಮೂಲಕ, ಅದಾನಿ ಮತ್ತು ವೇದಾಂತದಂತಹ ದೈತ್ಯ ಕಂಪನಿಗಳಿಗೆ ಪೈಪೋಟಿ ನೀಡಲು ಸಜ್ಜಾಗುತ್ತಿದೆ.

ಮುಂಬೈ: ಉದ್ಯಮಿ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL), ದೇಶದ ಅಲ್ಯೂಮಿನಿಯಂ ಉತ್ಪಾದನಾ ರಂಗಕ್ಕೆ ಕಾಲಿಡಲು ಗಂಭೀರ ಚಿಂತನೆ ನಡೆಸುತ್ತಿದೆ ಎಂದು ಮಾಧ್ಯಮ ವರದಿ ಮಾಡಿವೆ. ತನ್ನ ಯೋಜನೆ ಹಂತದಲ್ಲಿರುವ ಕಲ್ಲಿದ್ದಲು ಅನಿಲೀಕರಣ (Coal Gasification) ಪ್ರಕ್ರಿಯೆಯನ್ನು ಲೋಹಗಳ ಉತ್ಪಾದನೆಯೊಂದಿಗೆ ಸಂಯೋಜಿಸುವ ಕಾರ್ಯಸಾಧ್ಯತೆಯನ್ನು ಕಂಪನಿ ಪರಿಶೀಲಿಸುತ್ತಿದೆ.

ಕಲ್ಲಿದ್ದಲು ಅನಿಲೀಕರಣ ಮತ್ತು ಅಲ್ಯೂಮಿನಿಯಂ ಪ್ರವೇಶ:

ಅಲ್ಯೂಮಿನಿಯಂ ಉತ್ಪಾದನೆ ಹಾಗೂ ಅಲ್ಯೂಮಿನಾ ಸಂಸ್ಕರಣೆಯು ಅಪಾರ ಪ್ರಮಾಣದ ಶಕ್ತಿ/ವಿದ್ಯುತ್ ಬೇಡುವ ಪ್ರಕ್ರಿಯೆಯಾಗಿದೆ. ಆಂಧ್ರಪ್ರದೇಶದ ರೆಚೆರ್ಲಾ ಮತ್ತು ಚಿಂತಲಪುಡಿಯಲ್ಲಿ ರಿಲಯನ್ಸ್ ಈಗಾಗಲೇ ಕಲ್ಲಿದ್ದಲು ಬ್ಲಾಕ್‌ಗಳನ್ನು ಗೆದ್ದುಕೊಂಡಿದ್ದು, ಸಂಶೋಧಿತ ಅನಿಲ (Syngas) ತಯಾರಿಸುವ ಕಲ್ಲಿದ್ದಲು ಅನಿಲೀಕರಣ ಯೋಜನೆಗೆ ಸಿದ್ಧತೆ ನಡೆಸಿದೆ. ಈ ಅನಿಲೀಕರಣದಿಂದ ಉತ್ಪತ್ತಿಯಾಗುವ ಇಂಧನವನ್ನು ಅಲ್ಯೂಮಿನಿಯಂ ಕರಗಿಸುವ ಘಟಕಗಳಿಗೆ ಬಳಸಿ, ಯೋಜನೆಗಳ ವಾಣಿಜ್ಯ ಮೌಲ್ಯವನ್ನು ಹೆಚ್ಚಿಸುವುದು ರಿಲಯನ್ಸ್‌ನ ಮುಖ್ಯ ಉದ್ದೇಶವಾಗಿದೆ.

ಒಡಿಶಾದ ಬಾಕ್ಸೈಟ್ ಬ್ಲಾಕ್ ಹರಾಜು:

ಆರ್‌ಐಎಲ್ ಒಡಿಶಾದ ಕಾರ್ಲಪತ್‌ನಲ್ಲಿರುವ 3,100 ಹೆಕ್ಟೇರ್ ಪ್ರದೇಶದ ಬಾಕ್ಸೈಟ್ ಬ್ಲಾಕ್‌ನ ಹರಾಜು ಟೆಂಡರ್ ದಾಖಲೆಗಳನ್ನು ಖರೀದಿಸಿತ್ತು. ಈ ಬ್ಲಾಕ್‌ನಲ್ಲಿ 200 ಮಿಲಿಯನ್ ಟನ್‌ಗಿಂತಲೂ ಹೆಚ್ಚು ಬಾಕ್ಸೈಟ್ ನಿಕ್ಷೇಪವಿದೆ ಎಂದು ಅಂದಾಜಿಸಲಾಗಿದೆ. ರಿಲಯನ್ಸ್ ಮತ್ತು ಅದಾನಿ ಗ್ರೂಪ್ ಈ ಬ್ಲಾಕ್ ಮೇಲೆ ಆಸಕ್ತಿ ತೋರಿಸಿದ್ದರೂ, ಅಂತಿಮವಾಗಿ ವೇದಾಂತ ಗ್ರೂಪ್‌ನ ಅಂಗಸಂಸ್ಥೆ 'ಬಾಲ್ಕೊ' 175% ಹರಾಜು ಪ್ರೀಮಿಯಂ ನೀಡಿ ಈ ಬ್ಲಾಕ್ ಅನ್ನು ತನ್ನದಾಗಿಸಿಕೊಂಡಿದೆ.

₹2.73 ಲಕ್ಷ ಕೋಟಿ ಬೃಹತ್ ಹೂಡಿಕೆ ಯೋಜನೆ:

ಆಂಧ್ರಪ್ರದೇಶದಲ್ಲಿ ಭಾರತದ ಮೊದಲ ಸಂಯೋಜಿತ ಭೂಗತ ಕಲ್ಲಿದ್ದಲು ಅನಿಲೀಕರಣ ಸಂಕೀರ್ಣ ನಿರ್ಮಿಸಲು ರಿಲಯನ್ಸ್ 30 ವರ್ಷಗಳ ಅವಧಿಯಲ್ಲಿ ₹2.73 ಲಕ್ಷ ಕೋಟಿ ಹೂಡಿಕೆ ಮಾಡಲು ಪ್ರಸ್ತಾವನೆ ಸಲ್ಲಿಸಿದೆ. ಈ ಬೃಹತ್ ಇಂಧನ ಉತ್ಪಾದನೆಯನ್ನು ಲೋಹ ಸಂಸ್ಕರಣೆಗೆ ಬಳಸುವುದು ಕಂಪನಿಯ ತಂತ್ರವಾಗಿದೆ.

ಲೋಹಗಳ ವಲಯದಲ್ಲಿ ಅಂಬಾನಿ-ಅದಾನಿ ಪೈಪೋಟಿ

ಒಂದು ವೇಳೆ ರಿಲಯನ್ಸ್ ಅಲ್ಯೂಮಿನಿಯಂ ರಂಗಕ್ಕೆ ಅಧಿಕೃತವಾಗಿ ಪ್ರವೇಶಿಸಿದರೆ, ಭಾರತೀಯ ಮಾರುಕಟ್ಟೆಯಲ್ಲಿ ಅದಾನಿ ಮತ್ತು ಇತರ ದೈತ್ಯ ಕಂಪನಿಗಳೊಂದಿಗೆ ನೇರ ಪೈಪೋಟಿ ಏರ್ಪಡಲಿದೆ.

ಅದಾನಿ ಯೋಜನೆ: ಅದಾನಿ ಎಂಟರ್‌ಪ್ರೈಸಸ್ ಯುಎಇ ಮೂಲದ ಐಎಚ್‌ಸಿ (IHC) ಸಹಭಾಗಿತ್ವದಲ್ಲಿ ಒಡಿಶಾದಲ್ಲಿ ವಾರ್ಷಿಕ 2 ಮಿಲಿಯನ್ ಟನ್ ಅಲ್ಯೂಮಿನಿಯಂ ಉತ್ಪಾದನಾ ಘಟಕ ಸ್ಥಾಪಿಸಲು 11.5 ಬಿಲಿಯನ್ ಡಾಲರ್ (ಸುಮಾರು ₹95,000 ಕೋಟಿ) ಹೂಡಿಕೆ ಮಾಡುವುದಾಗಿ ಘೋಷಿಸಿದೆ.

ದೈತ್ಯ ಕಂಪೆನಿಗಳು: ಪ್ರಸ್ತುತ ಭಾರತದಲ್ಲಿ ವೇದಾಂತ ಅಲ್ಯೂಮಿನಿಯಂ ವಾರ್ಷಿಕ 2.5 ಮಿಲಿಯನ್ ಟನ್ ಸಾಮರ್ಥ್ಯದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಆದಿತ್ಯ ಬಿರ್ಲಾ ಗ್ರೂಪ್‌ನ ಹಿಂಡಾಲ್ಕೊ ಎರಡನೇ ದೊಡ್ಡ ಉತ್ಪಾದಕ ಸಂಸ್ಥೆಯಾಗಿದೆ.