ದುಲೀಪ್ ಟ್ರೋಫಿ ಫೈನಲ್ನಲ್ಲಿ ಪೂರ್ವ ವಲಯವು ಮೊದಲ ಇನ್ನಿಂಗ್ಸ್ನಲ್ಲಿ 708 ರನ್ ಗಳಿಸಿ, ದಕ್ಷಿಣ ವಲಯವನ್ನು 336 ರನ್ಗಳಿಗೆ ಆಲೌಟ್ ಮಾಡಿತು. ತಿಲಕ್ ವರ್ಮಾ 99 ರನ್ ಗಳಿಸಿ ಶತಕ ವಂಚಿತರಾದರು. ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಪೂರ್ವ ವಲಯವು 584 ರನ್ಗಳ ಬೃಹತ್ ಮುನ್ನಡೆ ಸಾಧಿಸಿ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ.
ಚೆನ್ನೈ: ದುಲೀಪ್ ಟ್ರೋಫಿ ದೇಸಿ ಪ್ರಥಮ ದರ್ಜೆ ಕ್ರಿಕೆಟ್ ಟೂರ್ನಿಯ ಫೈನಲ್ನಲ್ಲಿ ದಕ್ಷಿಣ ವಲಯ ವಿರುದ್ಧ ಪೂರ್ವ ವಲಯ ಬೃಹತ್ ಮುನ್ನಡೆ ಸಾಧಿಸಿದೆ. ಮೊದಲ ಇನ್ನಿಂಗ್ಸ್ನಲ್ಲಿ ಪೂರ್ವದ 708 ರನ್ಗೆ ಉತ್ತರವಾಗಿ, ದಕ್ಷಿಣ ವಲಯ ಬುಧವಾರ 336 ರನ್ಗೆ ಆಲೌಟಾಯಿತು. ಬಳಿಕ 2ನೇ ಇನ್ನಿಂಗ್ಸ್ ಆರಂಭಿಸಿರುವ ಪೂರ್ವ ವಲಯ 4ನೇ ದಿನದಂತ್ಯಕ್ಕೆ 5 ವಿಕೆಟ್ ನಷ್ಟದಲ್ಲಿ 212 ರನ್ ಗಳಿಸಿದ್ದು, ಬರೋಬ್ಬರಿ 584 ರನ್ ಮುನ್ನಡೆ ಪಡೆದಿದೆ.
ಮಂಗಳವಾರ ದಕ್ಷಿಣ ತಂಡ 6 ವಿಕೆಟ್ ನಷ್ಟದಲ್ಲಿ 242 ರನ್ ಗಳಿಸಿತ್ತು. ನಾಯಕ ತಿಲಕ್ 56 ರನ್ ಗಳಿಸಿ ಕ್ರೀಸ್ನಲ್ಲಿದ್ದರು. ಬುಧವಾರ ಅವರಿಗೆ ಜೊತೆಯಾದ ಚಾಮಾ ಮಿಲಿಂದ್(43 ರನ್) ತಂಡಕ್ಕೆ ಆಸರೆಯಾದರು. ಆದರೆ ಇವರ ಆಟ ತಂಡದ ಇನ್ನಿಂಗ್ಸ್ ಹಿನ್ನಡೆ ತಪ್ಪಿಸಲು ನೆರವಾಗಲಿಲ್ಲ. ತಿಲಕ್ 99 ರನ್ ಗಳಿಸಿದ್ದಾಗ ಔಟಾಗುವುದರೊಂದಿಗೆ ತಂಡದ ಇನ್ನಿಂಗ್ಸ್ಗೆ ತೆರೆಬಿತ್ತು.
ಫಾಲೋ ಆನ್ ಹೇರದೇ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಪೂರ್ವ ವಲಯ
372 ರನ್ಗಳ ಭರ್ಜರಿ ಮುನ್ನಡೆ ಸಾಧಿಸಿದರೂ ಪೂರ್ವ ವಲಯ ಫಾಲೋ-ಆನ್ ಹೇರದೆ 2ನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿತು. ಮೊದಲ ಇನ್ನಿಂಗ್ಸ್ನಲ್ಲಿ 270 ರನ್ ಗಳಿಸಿದ್ದ ನಾಯಕ ಇಶಾನ್ ಕಿಶನ್ ಈ ಬಾರಿ 80 ರನ್ಗೆ ಔಟಾದರು. ಶಿಖರ್ ಮೋಹನ್ 52, ಕುಮಾರ್ ಕುಶಾಗ್ರ ಔಟಾಗದೆ 34 ರನ್ ಗಳಿಸಿದ್ದಾರೆ.
ಸ್ಕೋರ್: ಪೂರ್ವ ವಲಯ 708/10 ಮತ್ತು 212/5 (ಇಶಾನ್ 80, ಶಿಖರ್ 52, ಸಿರಾಜ್ 1-17, ನಿಧೀಶ್ 1-14), ದಕ್ಷಿಣ ವಲಯ 336/10 (ತಿಲಕ್ 99, ಮಿಲಿಂದ್ 43, ಮುಕೇಶ್ 3-62)
ಬಿಸಿಸಿಐ, ರಾಜ್ಯ ಕ್ರಿಕೆಟ್ ಸಂಸ್ಥೆಗಳನ್ನು ಕ್ರೀಡಾ ನೀತಿ ವ್ಯಾಪ್ತಿಗೇಕೆ ತರಬಾರದು?
ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ರಾಜ್ಯ ಕ್ರಿಕೆಟ್ ಸಂಸ್ಥೆಗಳನ್ನು ರಾಷ್ಟ್ರೀಯ ಕ್ರೀಡಾ ನೀತಿ ವ್ಯಾಪ್ತಿಗೆ ಯಾಕೆ ತರಬಾರದು ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ,
ಬಿಸಿಸಿಐ ವಿಚಾರದಲ್ಲಿ ಕೆಲ ಕ್ರಿಕೆಟ್ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ಸಿಜೆಐ ಸೂರ್ಯಕಾಂತ್ ಅವರ ನೇತೃತ್ವದ ಪೀಠ, ‘ಬಿಸಿಸಿಐ ಮತ್ತು ಕ್ರಿಕೆಟ್ ಸಂಸ್ಥೆಗಳ ಪದಾಧಿಕಾರಿಗಳ ಸೇವಾ ನಿಯಮಗಳನ್ನು ರಾಷ್ಟ್ರೀಯ ಕ್ರೀಡಾ ನೀತಿ-2025ರಿಂದ ಏಕೆ ನಿಯಂತ್ರಿಸಬಾರದು?’ ಎಂದು ಪ್ರಶ್ನಿಸಿದೆ. ಸ್ಪಷ್ಟ ಉತ್ತರ ನೀಡುವಂತೆ ಬಿಸಿಸಿಐ ಮತ್ತು ರಾಜ್ಯ ಸಂಸ್ಥೆಗಳ ಪರ ವಕೀಲರಿಗೆ ಕೋರ್ಟ್ ಸೂಚನೆ ನೀಡಿದೆ.
2014ರಿಂದಲೂ ಬಿಸಿಸಿಐಗೆ ಸಂಬಂಧಿಸಿದ ಈ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿಕೊಂಡು ಬರುತ್ತಿದೆ. ಬಿಸಿಸಿಐಗೆ ಸುಧಾರಣಾ ಕ್ರಮಕ್ಕಾಗಿ ಈ ಹಿಂದೆ ನ್ಯಾಯಮೂರ್ತಿ ಲೋಧಾ ಅವರ ನೇತೃತ್ವದಲ್ಲಿ ಸುಪ್ರೀಂ ಸಮಿತಿಯೊಂದನ್ನು ಕೂಡ ರಚಿಸಿತ್ತು.


