ಗಂಡ ಹೆಂಡತಿ ಜಗಳಲ್ಲಿ ಇಬ್ಬರು ಮಕ್ಕಳು ಬಲಿಯಾದ ಘಟನೆ ಯಾದಗಿರಿಯಲ್ಲಿ ನಡೆದಿದೆ. ಪಾಪಿ ಅಪ್ಪನೊಬ್ಬ ತನಿಗಿದ್ದ ಮೂವರು ಮಕ್ಕಳಲ್ಲಿ ಇಬ್ಬರು ಮಕ್ಕಳನ್ನು ಹರಿಯುತ್ತಿರುವ ಕಾಲುವೆಗೆ ಎಸೆದಿದ್ದಾನೆ. ನಂತರ ಸ್ವತಃ ಪೊಲೀಸರಿಗೆ ಮಾಹಿತಿ ನೀಡಿ ಶರಣಾಗಿದ್ದಾನೆ. ಅಷ್ಟಕ್ಕೂ ಆಗಿದ್ದೇನು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.
ಯಾದಗಿರಿ: ಕೌಟುಂಬಿಕ ಕಲಹವೊಂದು ಇಬ್ಬರು ಅಮಾಯಕ ಮಕ್ಕಳ ಬಲಿ ಪಡೆದಿರುವ ಘೋರ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮದಲ್ಲಿ ನಡೆದಿದೆ. ಹೆಂಡತಿಯೊಂದಿಗೆ ಜಗಳವಾಡಿದ ತಂದೆಯೊಬ್ಬ ತನ್ನಿಬ್ಬರು ಮಕ್ಕಳನ್ನು ಕಾಲುವೆಗೆ ಎಸೆದು ಕ್ರೌರ್ಯ ಮೆರೆದಿದ್ದಾನೆ.
ಏನಿದು ಘಟನೆ?
ಗಂಗನಾಳ್ ಗ್ರಾಮದ ನಿವಾಸಿ ಶಾಂತಪ್ಪ ಬಿರಾದಾರ್ ಈ ದುಷ್ಕೃತ್ಯ ಎಸಗಿದ ಪಾಪಿ ತಂದೆ. ಕಳೆದ ಕೆಲವು ಸಮಯದಿಂದ ಶಾಂತಪ್ಪ ಮತ್ತು ಆತನ ಪತ್ನಿಯ ನಡುವೆ ಕೌಟುಂಬಿಕ ಕಲಹ ನಡೆಯುತ್ತಿತ್ತು ಎನ್ನಲಾಗಿದೆ. ಇದರಿಂದ ಮಾನಸಿಕವಾಗಿ ಕುಗ್ಗಿದ್ದ ಶಾಂತಪ್ಪ, ಗುರುವಾರ ತನ್ನ ಮೂವರು ಮಕ್ಕಳನ್ನು ಬೈಕ್ನಲ್ಲಿ ಕೂರಿಸಿಕೊಂಡು ಮನೆಯಿಂದ ಹೊರಬಂದಿದ್ದಾನೆ.
ಮಾರ್ಗಮಧ್ಯೆ ಕಾಲುವೆಯ ಬಳಿ ಬಂದಾಗ, ಸಾನ್ವಿ (9) ಹಾಗೂ ಸೃಜನ್ (2) ಎಂಬ ಇಬ್ಬರು ಮಕ್ಕಳನ್ನು ಕಾಲುವೆಗೆ ಎಸೆದಿದ್ದಾನೆ. ಬಳಿಕ ಉಳಿದ ಓರ್ವ ಹೆಣ್ಣು ಮಗುವನ್ನು ತನ್ನೊಂದಿಗೆ ಯಾದಗಿರಿಗೆ ಕರೆತಂದಿದ್ದಾನೆ. ಮಕ್ಕಳನ್ನು ಕಾಲುವೆಗೆ ಎಸೆದ ಬಳಿಕ ಆರೋಪಿ ಶಾಂತಪ್ಪನೇ ಸ್ವತಃ ಪೊಲೀಸರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ. ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ಧಾವಿಸಿದ ಗೋಗಿ ಪೊಲೀಸರು, ಶಾಂತಪ್ಪನ ಬಳಿಯಿದ್ದ ಮತ್ತೊಂದು ಮಗುವನ್ನು ರಕ್ಷಿಸಿ ತಾಯಿಯ ವಶಕ್ಕೆ ಒಪ್ಪಿಸಿದ್ದಾರೆ.

ಜಿಲ್ಲಾ ಎಸ್ಪಿ ಪೃಥ್ವಿಕ್ ಶಂಕರ್ ಮಾಹಿತಿ
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಆರೋಪಿ ಶಾಂತಪ್ಪ ತನ್ನ ಮೂವರು ಮಕ್ಕಳನ್ನು ಬೈಕ್ನಲ್ಲಿ ಕರೆತಂದು ಇಬ್ಬರನ್ನು ಕಾಲುವೆಗೆ ಎಸೆದಿದ್ದಾನೆ. ತಾನೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದ. ರಾತ್ರಿಯಾಗಿದ್ದರಿಂದ ಮಕ್ಕಳ ಪತ್ತೆಗೆ ತೊಂದರೆಯಾಗಿತ್ತು. ಸದ್ಯ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಕಾಲುವೆಯಲ್ಲಿ ನಿರಂತರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಮಕ್ಕಳ ಮೃತದೇಹಗಳು ಪತ್ತೆಯಾದ ಕೂಡಲೇ ಕೊಲೆ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.
ಕಾಲುವೆಗೆ ಎಸೆದ ಇಬ್ಬರು ಮಕ್ಕಳು ತಾಯಿಯ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದರು ಮತ್ತು ತಾಯಿಯನ್ನು ಹೆಚ್ಚು ಹಚ್ಚಿಕೊಂಡಿದ್ದರು. ಇದೇ ಕಾರಣಕ್ಕೆ ದ್ವೇಷದಿಂದ ಶಾಂತಪ್ಪ ಇವರಿಬ್ಬರನ್ನೇ ಗುರಿಯಾಗಿಸಿ ಕಾಲುವೆಗೆ ಎಸೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಇಡೀ ಗ್ರಾಮದಲ್ಲಿ ಘಟನೆಯಿಂದಾಗಿ ಶೋಕದ ಛಾಯೆ ಆವರಿಸಿದ್ದು ಮಕ್ಕಳನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.


