ಸಾಮಾನ್ಯವಾಗಿ ಪಾಕಿಸ್ತಾನ ಅಂದ ತಕ್ಷಣ ನಮಗೆ ನೆನಪಾಗೋದು ಅಲ್ಲಿನ ಹಿಂದೂಗಳ ಮೇಲಿನ ದೌರ್ಜನ್ಯ ಅಥವಾ ಮಂದಿರಗಳ ಮೇಲಿನ ದಾಳಿಯ ಸುದ್ದಿಗಳು. ಆದರೆ ಈ ಬಾರಿಯ ಕೃಷ್ಣ ಜನ್ಮಾಷ್ಟಮಿಯಂದು ಪಾಕಿಸ್ತಾನದಿಂದ ಬಂದಿರುವ ವಿಡಿಯೋ ಮತ್ತು ಫೋಟೋಗಳು ಎಲ್ಲರನ್ನೂ ಅಚ್ಚರಿಗೊಳಿಸಿವೆ
ಸಾಮಾನ್ಯವಾಗಿ ಪಾಕಿಸ್ತಾನ ಅಂದ ತಕ್ಷಣ ನಮಗೆ ನೆನಪಾಗೋದು ಅಲ್ಲಿನ ಹಿಂದೂಗಳ ಮೇಲಿನ ದೌರ್ಜನ್ಯ ಅಥವಾ ಮಂದಿರಗಳ ಮೇಲಿನ ದಾಳಿಯ ಸುದ್ದಿಗಳು. ಆದರೆ ಈ ಬಾರಿಯ ಕೃಷ್ಣ ಜನ್ಮಾಷ್ಟಮಿಯಂದು ಪಾಕಿಸ್ತಾನದಿಂದ ಬಂದಿರುವ ವಿಡಿಯೋ ಮತ್ತು ಫೋಟೋಗಳು ಎಲ್ಲರನ್ನೂ ಅಚ್ಚರಿಗೊಳಿಸಿವೆ. ಅಲ್ಲಿ ಭಯದ ಬದಲು ಭಕ್ತಿಯ ಸಂಭ್ರಮ ಮನೆ ಮಾಡಿತ್ತು!
ಕೃಷ್ಣಂ ವಂದೇ ಜಗದ್ಗುರುಂ
ಭಾರತದಂತೆಯೇ ಪಾಕಿಸ್ತಾನದಲ್ಲೂ ಈ ಬಾರಿ ಜನ್ಮಾಷ್ಟಮಿಯನ್ನು ಸಡಗರದಿಂದ ಆಚರಿಸಲಾಯಿತು. ಕರಾಚಿಯ ಐತಿಹಾಸಿಕ ಮಂದಿರಗಳಲ್ಲಿ ಮಧ್ಯರಾತ್ರಿ ಗಂಟೆಗಳು ಮೊಳಗಿದವು, ಭಕ್ತರು ಕೃಷ್ಣನ ಭಜನೆಗೆ ಹೆಜ್ಜೆ ಹಾಕಿದರು. ಈ ಸಂಭ್ರಮ ಎಷ್ಟು ಜೋರಾಗಿತ್ತೆಂದರೆ, ಅಲ್ಲಿನ ಯೂಟ್ಯೂಬರ್ಗಳು ಈ ದೃಶ್ಯಗಳನ್ನು ಕಂಡು ಇದು ಪಾಕಿಸ್ತಾನವೋ ಅಥವಾ ವೃಂದಾವನವೋ? ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಕರಾಚಿಯ ಸ್ವಾಮಿನಾರಾಯಣ ಮಂದಿರದಲ್ಲಿ ದೀಪಾಲಂಕಾರ
ಕರಾಚಿಯ ಎಂ.ಎ.ಜಿನ್ನಾ ರಸ್ತೆಯಲ್ಲಿರುವ ಶ್ರೀ ಸ್ವಾಮಿನಾರಾಯಣ ಮಂದಿರ ಹಬ್ಬದ ಕೇಂದ್ರಬಿಂದುವಾಗಿತ್ತು. ಇಡೀ ಮಂದಿರವನ್ನು ಹೂವು ಮತ್ತು ಬಣ್ಣ ಬಣ್ಣದ ಲೈಟುಗಳಿಂದ ಅಲಂಕರಿಸಲಾಗಿತ್ತು. ರಾತ್ರಿ 12 ಗಂಟೆಗೆ ಸರಿಯಾಗಿ ಕೃಷ್ಣನ ಜನ್ಮೋತ್ಸವ ಆಚರಿಸಿ, ಸಾವಿರಾರು ಜನರಿಗೆ ಭರ್ಜರಿ ಭೋಜನ (ಭಂಡಾರ) ಏರ್ಪಡಿಸಲಾಗಿತ್ತು. ಇದರ ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.
ಜನಸಾಗರ ಕಂಡು ವ್ಲಾಗರ್ಗಳೇ ಸುಸ್ತು
ಪಂಜಾಬ್ ಪ್ರಾಂತ್ಯದ ಫೈಸಲಾಬಾದ್ನಲ್ಲಿ ನಡೆದ ಕಾರ್ಯಕ್ರಮವಂತೂ ಮೈನವಿರೇಳಿಸುವಂತಿತ್ತು. ಒಂದು ದೊಡ್ಡ ಮೈದಾನದಲ್ಲಿ ನಡೆದ ಈ ಸಂಭ್ರಮದಲ್ಲಿ ಜನ ಎಷ್ಟು ಕಿಕ್ಕಿರಿದು ಸೇರಿದ್ದರೆಂದರೆ, ವಿಡಿಯೋ ಮಾಡುತ್ತಿದ್ದ ವ್ಲಾಗರ್ಗಳಿಗೆ ಮುಂದೆ ಹೋಗಲು ಜಾಗವೇ ಇರಲಿಲ್ಲವಂತೆ! ಇಡೀ ಪಾಕಿಸ್ತಾನವೇ ಇಲ್ಲಿಗೆ ಹರಿದು ಬಂದಿದೆ ಎಂದು ಅವರು ಅಲ್ಲಿನ ಪರಿಸ್ಥಿತಿಯನ್ನು ಬಣ್ಣಿಸಿದ್ದಾರೆ.
ಸಿಂಧ್ ಪ್ರಾಂತ್ಯದಲ್ಲಿ ಹಬ್ಬದ ಕಳೆ ಜೋರು
ಪಾಕಿಸ್ತಾನದಲ್ಲಿ ಅತಿ ಹೆಚ್ಚು ಹಿಂದೂಗಳು ವಾಸಿಸುವುದು ಸಿಂಧ್ ಪ್ರಾಂತ್ಯದಲ್ಲಿ (ಸುಮಾರು 49 ಲಕ್ಷ). ಹೀಗಾಗಿ ಕರಾಚಿ ಮಾತ್ರವಲ್ಲದೆ ಹೈದರಾಬಾದ್, ಘೋಟ್ಕಿ, ಸಾಂಘರ್ ಮತ್ತು ಥರ್ಪಾರ್ಕರ್ನಂತಹ ಕಡೆಗಳಲ್ಲೂ ಜನ್ಮಾಷ್ಟಮಿಯ ಕಳೆ ಜೋರಾಗಿತ್ತು. ಘೋಟ್ಕಿಯ ಕೃಷ್ಣ ಮಂದಿರದಲ್ಲಿ ಭಕ್ತರು ಭಜನೆ ಮಾಡುತ್ತಾ ಕುಣಿದು ಕುಪ್ಪಳಿಸಿದರು.
ಒಟ್ಟಿನಲ್ಲಿ ಈ ಬಾರಿಯ ಜನ್ಮಾಷ್ಟಮಿ ಪಾಕಿಸ್ತಾನದ ಹಿಂದೂಗಳ ಪಾಲಿಗೆ ಹೊಸ ಭರವಸೆ ಮತ್ತು ಸಂಭ್ರಮವನ್ನು ಹೊತ್ತು ತಂದಿದೆ. ಅಲ್ಲಿನ ಯುವ ಸಮೂಹ ಮತ್ತು ಸೋಶಿಯಲ್ ಮೀಡಿಯಾ ಕ್ರಿಯೇಟರ್ಗಳು ಕೂಡ ಈ ಸಂಭ್ರಮವನ್ನು ಜಗತ್ತಿಗೆ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ.


