ಬಾಂಗ್ಲಾದೇಶದಲ್ಲಿ ಬಂಧಿತರಾಗಿರುವ ಹಿಂದೂ ಹಕ್ಕುಗಳ ಹೋರಾಟಗಾರ ಸಂತ ಚಿನ್ಮಯ್ ಕೃಷ್ಣ ದಾಸ್ ಅವರಿಗೆ, ಅನಾರೋಗ್ಯ ಪೀಡಿತ ತಾಯಿ ನೋಡಲು ಪೆರೋಲ್ ನಿರಾಕರಿಸಲಾಯಿತು. ತಾಯಿಯ ಮರಣಾನಂತರ ಅಂತ್ಯಕ್ರಿಯೆಗೆ ಕೇವಲ ಐದು ಗಂಟೆಗಳ ಪೆರೋಲ್ ನೀಡಿದ ಅಮಾನವೀಯ ಘಟನೆ, ತಾರಿಕ್ ರಹಮಾನ್ ಉತ್ತರಿಸಬೇಕಿದೆ. ಅಷ್ಟೇ ಅಲ್ಲ ಅವರ ಮೇಲಿರುವ ಕೇಸ್ ಯಾವವು ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ.
ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರ ಹಾಗೂ ಬಿಎನ್ಪಿ ನಾಯಕ ತಾರಿಕ್ ರಹಮಾನ್ ಆಡಳಿತಾವಧಿಯಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯಗಳು ಮಿತಿಮೀರಿದ್ದು, ಮಾನವೀಯತೆಯೇ ತಲೆ ತಗ್ಗಿಸುವಂತಹ ಕೃತ್ಯಗಳು ನಡೆಯುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ, ಹಿಂದೂ ಹಕ್ಕುಗಳಿಗಾಗಿ ಹೋರಾಡುತ್ತಿರುವ ಪ್ರಮುಖ ಧಾರ್ಮಿಕ ನಾಯಕ, ಸಂತ ಚಿನ್ಮಯ್ ಕೃಷ್ಣ ದಾಸ್ ಅವರ ಜೀವನದಲ್ಲಿ ನಡೆದ ಇತ್ತೀಚಿನ ಹೃದಯವಿದ್ರಾವಕ ಘಟನೆ ಬಾಂಗ್ಲಾದೇಶ ಸರ್ಕಾರದ ಕಪಟ ಮತ್ತು ಕ್ರೂರ ಮುಖವನ್ನು ಜಗತ್ತಿನೆದುರು ಬಿಚ್ಚಿಟ್ಟಿದೆ.
ಸಾಯುವ ಮುನ್ನ ಮಗನನ್ನು ನೋಡಲಾಗದೆ ಕಣ್ಣೀರಿಟ್ಟ ತಾಯಿ!
ಹಿಂದೂ ಸಂತ ಚಿನ್ಮಯ್ ಕೃಷ್ಣ ದಾಸ್ ಅವರು ಜೈಲಿನಲ್ಲಿದ್ದ ಸಮಯದಲ್ಲೇ, ಅವರ ೭೧ ವರ್ಷದ ವೃದ್ಧ ತಾಯಿ ಸಂಧ್ಯಾ ರಾಣಿ ಧಾರ್ ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. "ಸಾಯುವ ಮುನ್ನ ಕೊನೆಯ ಬಾರಿಗೆ ಮಗನ ಮುಖ ನೋಡಬೇಕು" ಎಂಬುದು ಆ ತಾಯಿಯ ಏಕೈಕ ಆಸೆಯಾಗಿತ್ತು. ಈ ಕುರಿತು ಅವರ ಕುಟುಂಬವು ಚಿತ್ತಗಾಂಗ್ ಜಿಲ್ಲಾಡಳಿತಕ್ಕೆ ಷರತ್ತುಬದ್ಧ ಪೆರೋಲ್ ಕೋರಿ ಮನವಿ ಸಲ್ಲಿಸಿತ್ತು. ಆದರೆ, ರಾಜಕೀಯ ಪಿತೂರಿಯ ಭಾಗವಾಗಿ ಆಡಳಿತವು "ಅನಾರೋಗ್ಯ ಪೀಡಿತರನ್ನು ಭೇಟಿಯಾಗಲು ಕಾನೂನಿನಲ್ಲಿ ಪೆರೋಲ್ಗೆ ಅವಕಾಶವಿಲ್ಲ" ಎಂದು ಹೇಳಿ ಆ ತಾಯಿಯ ಕೊನೆಯ ಆಸೆಯನ್ನು ನಿರ್ದಯವಾಗಿ ತಿರಸ್ಕರಿಸಿತು. ಮಗನ ಮೇಲಿನ ಕಿರುಕುಳ ಮತ್ತು ಜೈಲು ವಾಸದ ದುಃಖದಿಂದಲೇ ಆ ವೃದ್ಧ ತಾಯಿ ಕೊನೆಯುಸಿರೆಳೆದರು.
ಐದೇ ಗಂಟೆಯ ಪೆರೋಲ್; ಕಣ್ಣೀರಿಟ್ಟ ಸಂತ!
ತಾಯಿಯ ಮರಣದ ನಂತರ, ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಚಿನ್ಮಯ್ ದಾಸ್ ಅವರಿಗೆ ಕೇವಲ ೫ ಗಂಟೆಗಳ ಕಾಲಾವಕಾಶದ ಪೆರೋಲ್ ನೀಡಲಾಯಿತು. ಕಟ್ಟುನಿಟ್ಟಿನ ಪೊಲೀಸ್ ಭದ್ರತೆಯಲ್ಲಿ ಪುಂಡರೀಕ ಧಾಮಕ್ಕೆ ಬಂದ ಚಿನ್ಮಯ್ ದಾಸ್, ಅಲ್ಲಿ ತಾಯಿಯ ಮೃತದೇಹವನ್ನು ಅಪ್ಪಿ ಕಣ್ಣೀರಿಟ್ಟ ದೃಶ್ಯ ಪ್ರತಿಯೊಬ್ಬರ ಕಣ್ಣಲ್ಲೂ ನೀರು ತರಿಸುವಂತಿತ್ತು. ನಂತರ ಅಲ್ಲಿದ್ದ ರಾಧಾ-ಕೃಷ್ಣ ವಿಗ್ರಹದ ಪಾದಗಳ ಮೇಲೆ ತಲೆಯಿಟ್ಟು ಅವರು ಸುರಿಸಿದ ಕಣ್ಣೀರು, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರು ಅನುಭವಿಸುತ್ತಿರುವ ನರಕಯಾತನೆಗೆ ಸಾಕ್ಷಿಯಾಗಿತ್ತು. ಪೂಜೆ ಮುಗಿಯುತ್ತಿದ್ದಂತೆಯೇ ಪೊಲೀಸರು ಅವರನ್ನು ಮತ್ತೆ ಜೈಲಿಗೆ ಎಳೆದೊಯ್ದರು.
ದೇಶದ್ರೋಹದ ಸುಳ್ಳು ಪ್ರಕರಣಗಳು!
ಹಿಂದೂಗಳ ರಕ್ಷಣೆಗೆ ಶಾಂತಿಯುತ ರ್ಯಾಲಿಗಳನ್ನು ನಡೆಸುತ್ತಿದ್ದ ಚಿನ್ಮಯ್ ದಾಸ್ ಅವರನ್ನು ನವೆಂಬರ್ ೨೦೨೪ ರಲ್ಲಿ ಬಂಧಿಸಲಾಯಿತು. ಅವರ ಮೇಲೆ ರಾಷ್ಟ್ರಧ್ವಜಕ್ಕೆ ಅವಮಾನಿಸಿದ ಗಂಭೀರ ದೇಶದ್ರೋಹದ ಆರೋಪ ಹೊರಿಸಲಾಗಿದೆ. ಅವರ ವಿರುದ್ಧ ಒಟ್ಟು ೬ ಕ್ರಿಮಿನಲ್ ಪ್ರಕರಣಗಳಿದ್ದು, ೪ ಪ್ರಕರಣಗಳಲ್ಲಿ ಹೈಕೋರ್ಟ್ ಜಾಮೀನು ನೀಡಿದ್ದರೂ ಸಹ, ಸರ್ಕಾರಿ ವಕೀಲರೊಬ್ಬರ ಕೊಲೆ ಪ್ರಕರಣ ಹಾಗೂ ದೇಶದ್ರೋಹದ ಕೇಸ್ ಅನ್ನು ಮುನ್ನೆಲೆಗೆ ತಂದು ಅವರನ್ನು ಜೈಲಿನಲ್ಲೇ ಬಂಧಿಸಿಡಲಾಗಿದೆ.
ತಾರಿಕ್ ಸರ್ಕಾರದ ವಿರುದ್ಧ ಜಾಗತಿಕ ಆಕ್ರೋಶ!
ಈ ಅಮಾನವೀಯ ಘಟನೆಯು ಬಿಎನ್ಪಿ ನಾಯಕ ತಾರಿಕ್ ರಹಮಾನ್ ಮತ್ತು ಆಡಳಿತಾರೂಢ ಶಕ್ತಿಗಳ ಕಪಟತನವನ್ನು ಬಯಲಿಗೆಳೆದಿದೆ. ಅಲ್ಪಸಂಖ್ಯಾತರ ಧ್ವನಿಯನ್ನು ಹತ್ತಿಕ್ಕಲು ಮೂಲಭೂತವಾದಿಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂಬ ಆರೋಪಗಳು ಬಲವಾಗಿ ಕೇಳಿಬರುತ್ತಿವೆ. ಜೈಲಿನಲ್ಲಿದ್ದ ಸಂತನ ಕಣ್ಣೀರು ಮತ್ತು ಆ ವೃದ್ಧ ತಾಯಿಯ ಈಡೇರದ ಆಸೆಗೆ ತಾರಿಕ್ ರಹಮಾನ್ ಉತ್ತರ ನೀಡಲೇಬೇಕಿದೆ. ಈ 'ಮಹಾಪಾಪ'ದ ವಿರುದ್ಧ ಭಾರತ ಸೇರಿದಂತೆ ವಿಶ್ವದಾದ್ಯಂತ ಮಾನವ ಹಕ್ಕುಗಳ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಚಿನ್ಮಯ್ ದಾಸ್ ಅವರನ್ನು ತಕ್ಷಣವೇ ಬಿಡುಗಡೆ ಮಾಡಲು ಒತ್ತಾಯಿಸುತ್ತಿವೆ.


