ಬಾಂಗ್ಲಾದೇಶದ ಜೈಲಿನಲ್ಲಿರುವ ಹಿಂದೂ ಸಂನ್ಯಾಸಿ ಚಿನ್ಮಯ್ ಕೃಷ್ಣ ದಾಸ್ ಅವರಿಗೆ, ತಾಯಿಯ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಕೇವಲ 5 ಗಂಟೆಗಳ ಪರೋಲ್ ನೀಡಲಾಯಿತು. ಜೀವಂತವಾಗಿದ್ದಾಗ ಮಗನನ್ನು ನೋಡಬೇಕೆಂಬ ತಾಯಿಯ ಕೊನೆಯ ಆಸೆ ಈಡೇರಲಿಲ್ಲ.
ಢಾಕಾ (ಸೆ.11): ಸುಮಾರು ಎರಡು ವರ್ಷಗಳಿಂದ ಬಾಂಗ್ಲಾದೇಶದ ಜೈಲಿನಲ್ಲಿ ಬಂಧಿಯಾಗಿರುವ ಪ್ರಮುಖ ಹಿಂದೂ ಸಂನ್ಯಾಸಿ ಚಿನ್ಮಯ್ ಕೃಷ್ಣ ದಾಸ್ (Chinmoy Krishna Das) ಅವರಿಗೆ ತಮ್ಮ ತಾಯಿಯ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಚಟ್ಟೋಗ್ರಾಮ್ ಜಿಲ್ಲಾಡಳಿತವು ಕೇವಲ 5 ಗಂಟೆಗಳ ಕಾಲ ತಾತ್ಕಾಲಿಕ ಪರೋಲ್ (5-hour Parole) ಮಂಜೂರು ಮಾಡಿದೆ. ಅಂತಿಮ ದಿನಗಳಲ್ಲಿ ಜೈಲಿನಲ್ಲಿರುವ ಮಗನನ್ನು ಒಮ್ಮೆ ನೋಡಬೇಕೆಂಬ 71 ವರ್ಷದ ತಾಯಿಯ ಕೊನೆಯ ಆಸೆ ಕೂಡ ಈಡೇರಲೇ ಇಲ್ಲ.
ಬಂಧನದಿಂದ ಕೇವಲ 5 ಗಂಟೆಗಳ ಕಾಲ ಹೊರಬಂದ ಸಂನ್ಯಾಸಿಯ ಭಾವುಕ ಕ್ಷಣಗಳ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಚಿನ್ಮಯ್ ಕೃಷ್ಣ ದಾಸ್ ಅವರು ಚಟ್ಟೋಗ್ರಾಮ್ನ ಪುಂಡರೀಕ್ ಧಾಮ್ (Pundarik Dham) ದೇವಾಲಯದಲ್ಲಿ ರಾಧಾ-ಕೃಷ್ಣನ ವಿಗ್ರಹದ ಪಾದಗಳನ್ನು ಸ್ಪರ್ಶಿಸಿ ಕಣ್ಣೀರಿಡುತ್ತಾ ಪ್ರಾರ್ಥಿಸುತ್ತಿರುವ ದೃಶ್ಯವಿದ್ದು, ಬಳಿಕ ಅವರು ಮತ್ತೆ ಜೈಲಿಗೆ ಮರಳಿದ್ದಾರೆ.
ಸಾವಿನ ನಂತರಷ್ಟೇ ಸಿಕ್ಕಿತು ಪರೋಲ್
ಚಿನ್ಮಯ್ ಕೃಷ್ಣ ದಾಸ್ ಅವರ ತಾಯಿ ಸಂಧ್ಯಾ ರಾಣಿ ಧಾರ್ (71) ಅವರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಜೀವಂತವಾಗಿದ್ದಾಗ ಮಗನನ್ನು ಭೇಟಿಯಾಗಲು ಕುಟುಂಬಸ್ಥರು ಸಲ್ಲಿಸಿದ್ದ ಪರೋಲ್ ಅರ್ಜಿಯನ್ನು ಬಾಂಗ್ಲಾದೇಶದ ಅಧಿಕಾರಿಗಳು ತಿರಸ್ಕರಿಸಿದ್ದರು. ತಾಯಿ ಮೃತಪಟ್ಟ ನಂತರವಷ್ಟೇ ಚಟ್ಟೋಗ್ರಾಮ್ ಜಿಲ್ಲಾ ಡೆಪ್ಯುಟಿ ಕಮಿಷನರ್ (DC) ಮೊಹಮ್ಮದ್ ಝಾಹಿದುಲ್ ಇಸ್ಲಾಂ ಮಿಯಾ ಅವರು ಅಂತಿಮ ಸಂಸ್ಕಾರಕ್ಕೆ ಹಾಜರಾಗಲು 5 ಗಂಟೆಗಳ ಪರೋಲ್ ನೀಡಿ ಆದೇಶಿಸಿದರು ಎಂದು 'ದಿ ಡೈಲಿ ಸ್ಟಾರ್' ವರದಿ ಮಾಡಿದೆ. ಚಿನ್ಮಯ್ ದಾಸ್ ಅವರ ಸಹೋದರ ರಂಜನ್ ಕುಮಾರ್ ಧಾರ್ ನೀಡಿದ ಮಾಹಿತಿ ಪ್ರಕಾರ, ತಾಯಿ ಸಂಧ್ಯಾ ರಾಣಿ ಅವರ ಅಂತಿಮ ಸಂಸ್ಕಾರವನ್ನು ಪುಂಡರೀಕ್ ಧಾಮ್ನಲ್ಲೇ ನೆರವೇರಿಸಲಾಯಿತು.
ಚಿನ್ಮಯ್ ದಾಸ್ ವಿರುದ್ಧ ಇರುವ ಪ್ರಕರಣಗಳೇನು?
ಬಾಂಗ್ಲಾದೇಶ ಸಮ್ಮಿಲಿತ ಸನಾತನಿ ಜಾಗರಣ ಜೋಟ್ನ (Bangladesh Sammilito Sanatani Jagaran Jot) ವಕ್ತಾರರೂ ಆಗಿರುವ ಚಿನ್ಮಯ್ ಕೃಷ್ಣ ದಾಸ್ ಅವರನ್ನು 2024 ರ ನವೆಂಬರ್ನಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಆರೋಪದ ಮೇಲೆ ದೇಶದ್ರೋಹದ (Sedition) ಕಾಯ್ದೆಯಡಿ ಬಂಧಿಸಲಾಗಿತ್ತು. ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಪತನದ ನಂತರ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಹಾಗೂ ರಕ್ಷಣೆ ಕೋರಿ ಇವರ ನೇತೃತ್ವದ ಸಂಘಟನೆಯು ಬೃಹತ್ ರಾಲಿಗಳನ್ನು ಆಯೋಜಿಸಿತ್ತು.
ಈ ಹಿಂದೆ ಇಸ್ಕಾನ್ (ISKCON) ಜೊತೆ ಗುರುತಿಸಿಕೊಂಡಿದ್ದ ಚಿನ್ಮಯ್ ದಾಸ್ ವಿರುದ್ಧ ಒಟ್ಟು 6 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಹೈಕೋರ್ಟ್ ಈಗಾಗಲೇ 4 ಪ್ರಕರಣಗಳಲ್ಲಿ ಜಾಮೀನು ಮಂಜೂರು ಮಾಡಿದೆ. ಆದರೆ, ಉಳಿದ ಪ್ರಕರಣಗಳಿಂದಾಗಿ ಅವರು ಜೈಲಿನಿಂದ ಹೊರಬರಲು ಸಾಧ್ಯವಾಗಿಲ್ಲ. ದೇಶದ್ರೋಹ ಪ್ರಕರಣದ ಜಾಮೀನಿಗೆ ತಡೆ ನೀಡಲಾಗಿದ್ದು, ಚಟ್ಟೋಗ್ರಾಮ್ ತ್ವರಿತ ವಿಚಾರಣಾ ನ್ಯಾಯಾಧಿಕರಣದಲ್ಲಿ (Chattogram Speedy Trial Tribunal) ಕೊಲೆ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಚಿನ್ಮಯ್ ದಾಸ್ ಬಂಧನವನ್ನು ಪ್ರತಿಭಟಿಸುತ್ತಿದ್ದಾಗ ಸರ್ಕಾರಿ ಅಭಿಯೋಜಕ (Prosecutor) ಸೈಫುಲ್ ಇಸ್ಲಾಂ ಅಲಿಫ್ ಎಂಬುವವರ ಹತ್ಯೆಯಾಗಿತ್ತು, ಆ ಕೊಲೆ ಪ್ರಕರಣದಲ್ಲಿ ಚಿನ್ಮಯ್ ಅವರ ಮೇಲೆಯೂ ಆರೋಪ ಹೊರಿಸಲಾಗಿದೆ.
ತಾಯಿಯ ಕೊನೆಯ ಆಸೆ ಈಡೇರಲೇ ಇಲ್ಲ
ಹಟಾಜಾರಿ (Hathazari) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ತಾಯಿಯ ಅಂತಿಮ ದರ್ಶನ ಮಗನಿಗೆ ಸಿಗದಿರುವುದಕ್ಕೆ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ತಾಯಿ ಹೊರಟುಹೋದರು. ನನ್ನ ಸಹೋದರ ಜೀವಂತವಾಗಿದ್ದಾಗ ತಾಯಿಯನ್ನು ನೋಡಲು ಸಾಧ್ಯವಾಗಲಿಲ್ಲ ಎಂದು ಚಿನ್ಮಯ್ ಅವರ ಇನ್ನೊಬ್ಬ ಸಹೋದರ ಅಂಜನ್ ಕುಮಾರ್ ಧಾರ್ ಬಾಂಗ್ಲಾದೇಶದ 'ಕಲ್ಬೆಲಾ' ಪತ್ರಿಕೆಗೆ ತಿಳಿಸಿದ್ದಾರೆ.
ಮಗನ ದೀರ್ಘಕಾಲದ ಜೈಲುವಾಸ, ಅನಾರೋಗ್ಯದ ವರದಿಗಳು ಹಾಗೂ ಪದೇ ಪದೇ ಜಾಮೀನು ತಿರಸ್ಕೃತಗೊಳ್ಳುತ್ತಿದ್ದದ್ದು ತಾಯಿ ಸಂಧ್ಯಾ ರಾಣಿ ಅವರನ್ನು ಮಾನಸಿಕವಾಗಿ ತೀವ್ರವಾಗಿ ಕುಗ್ಗಿಸಿತ್ತು. ಜೈಲು ನಿರ್ವಹಣಾ ಸಮಿತಿಯ ಅಧ್ಯಕ್ಷರೂ ಆಗಿರುವ ಚಟ್ಟೋಗ್ರಾಮ್ ಡಿಸಿಗೆ ಬುಧವಾರ ಅನಾರೋಗ್ಯಪೀಡಿತ ತಾಯಿಯನ್ನು ನೋಡಲು ಷರತ್ತುಬದ್ಧ ಪರೋಲ್ ಕೋರಲಾಗಿತ್ತು. ಆದರೆ, ಅಸ್ವಸ್ಥ ಬಂಧುಗಳನ್ನು ನೋಡಲು ಕೈದಿಗಳಿಗೆ ಪರೋಲ್ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಆಡಳಿತ ಅರ್ಜಿ ವಜಾಗೊಳಿಸಿತ್ತು ಎಂದು 'ಸಮಕಾಲ' ಪತ್ರಿಕೆ ವರದಿ ಮಾಡಿದೆ.


