ಬಿಗ್ ಬಾಸ್ ಸೀಸನ್ 11 ರಲ್ಲಿ ತುಕಾಲಿ ಮಾನಸಾ ಅವರನ್ನು ಸ್ಪರ್ಧಿಯಾಗಿ ಸೇರಿಸಿಕೊಂಡಿದ್ದಕ್ಕೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುಕಾಲಿ ಸಂತೋಷ್ ಅವರು ಸೀಸನ್ 10 ರಲ್ಲಿ ಭಾಗವಹಿಸಿದ್ದರಿಂದ ಮತ್ತು ಅವರ ಪತ್ನಿ ಮಾನಸಾ ಅವರಿಗೆ ಈಗ ಅವಕಾಶ ನೀಡಿರುವುದರಿಂದ ಒಂದೇ ಮನೆಯಿಂದ ಇಬ್ಬರಿಗೆ ಅವಕಾಶ ನೀಡಿರುವುದು ಅನ್ಯಾಯ ಎಂದು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಸೆ.30): ಬಿಗ್ ಬಾಸ್ ಸೀಸನ್ 11ಕ್ಕೆ ಹನ್ನೊಂದಲೇ ಸ್ಪರ್ಧಿಯಾಗಿ ಕಾಲಿಟ್ಟಿರುವ ತುಕಾಲಿ ಮಾನಸಾ ಅವರನ್ನು ಸ್ವತಃ ನಿರೂಪಕ ಕಿಚ್ಚ ಸುದೀಪ್ ಅವರೇ ಆದರದಿಂದ ಸ್ವಾಗತಿಸಿದ್ದಾರೆ. ಆದರೆ, ತುಕಾಲಿ ಮಾನಸಾ ಅವರನ್ನು ಬಿಗ್ ಬಾಸ್ ಮನೆಗೆ ಕರೆಸಿಕೊಂಡಿದ್ದಕ್ಕೆ ನೆಟ್ಟಿಗರಿಂದ ಭಾರಿ ವಿರೋಧ ವ್ಯಕ್ತವಾಗಿದೆ.

Add Asianetnews Kannada as a Preferred SourcegooglePreferred

ಬಿಗ್ ಬಾಸ್ ಸೀಸನ್ 10ರಲ್ಲಿ ಫೈನಲಿಸ್ಟ್ ಆಗಿರುವ ತುಕಾಲಿ ಸಂತೋಷ್ ಆಗಿದ್ದಾರೆ. ಆದರೆ, ತುಕಾಲಿ ಸಂತೋಷ್ ಅವರು ಮನೆಯೊಳಗೆ ಪ್ರವೇಶ ಪಡೆಯುವಾಗ, ಬಿಗ್ ಬಾಸ್ ಮನೆಯೊಳಗೆ ಇದ್ದಾಗ ಹಾಗೂ ಬಿಗ್ ಬಾಸ್ ಫೈನಲ್ ವೇದಿಕೆಯಲ್ಲಿ ಅವರ ಪತ್ನಿ ಮಾನಸಾ ಅವರೂ ಕಾಣಿಸಿಕೊಂಡಿದ್ದರು. ಬಿಗ್ ಬಾಸ್ ಸೀಸನ್ 10ರ ಫೈನಲ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರು ತುಕಾಲಿ ಸಂತೋಷ್ ಅವರನ್ನು ಮಾತನಾಡಿಸುವಾಗ ಅವರ ಹೆಂಡತಿಯನ್ನೂ ಮಾತನಾಡಿಸಿದ್ದರು. ಆಗ, ಮಾನಸಾ ತಮ್ಮ ಮುಗ್ದತೆಯಿಂದಲೇ ಸಂಸಾರದ ಗುಟ್ಟುಗಳನ್ನೂ ಮುಚ್ಚಿಟ್ಟುಕೊಳ್ಳದೇ ಎಲ್ಲವನ್ನು ಬಹಿರಂಗ ಮಾಡಿದ್ದರು.

ಬಿಗ್​ಬಾಸ್​ನಲ್ಲಿ ಗೆಲ್ಲಲಿಲ್ಲವೆಂದು ತುಕಾಲಿಗೆ ಈ ಪರಿ ಚಚ್ಚಿ ಹಾಕೋದಾ ಹೆಂಡ್ತಿ? ವಿಡಿಯೋ ನೋಡಿ ಫ್ಯಾನ್ಸ್​ ಸುಸ್ತು!

ತುಕಾಲಿ ಸಂತು ನನ್ನನ್ನು ಕೋವಿಡ್ ಸಂದರ್ಭದಲ್ಲಿ ಸಿಂಪಲ್ ಆಗಿ ಮದುವೆ ಮಾಡಿಕೊಂಡಿದ್ದಾನೆ. ಆದರೆ, ಫಸ್ಟ್ ನೈಟ್ ದಿನವೇ ಮೊಬೈಲ್ ನೋಡುತ್ತಾ ಕುಳಿತಿದ್ದನು ಎಂದು ಮಾನಸಾ ಹೇಳಿದ್ದರು. ಇದಕ್ಕೆ ಬಿದ್ದು ಬಿದ್ದು ನಗಾಡಿದ್ದ ಕಿಚ್ಚ ಸುದೀಪ್, ಫಸ್ಟ್ ನೈಟ್ ದಿನ ಏನು ಮಾಡಬೇಕು ಎಂದು ನೋಡುತ್ತಿರಬೇಕು ಎಂದು ನಗೆ ಚಟಾಕಿ ಹಾರಿಸಿದ್ದಾರೆ. ಇದರ ಒಳ ಮರ್ಮವನ್ನೂ ಅರಿಯದ ಮಾನಸಾ ಹೌದು ಸಾರ್ ಎಂದು ಹೇಳುವ ಮೂಲಕ ಇಡೀ ವೇದಿಕೆಯ ಜನರನ್ನು ನಗೆ ಕಡಲಲ್ಲಿ ತೇಲುವಂತೆ ಮಾಡಿದ್ದರು. ಅವರ ಮುಗ್ದತೆಯನ್ನು ನೋಡಿದ್ದ ಕಿಚ್ಚ ಸುದೀಪ್ ನಿಮ್ಮಂಥವರು ಬಿಗ್ ಬಾಸ್ ಮನೆಯೊಳಗಿರಬೇಕು ಎಂದು ಹೇಳಿದ್ದರು. 

ಅದರಂತೆಯೇ ಇದೀಗ ಬಿಗ್ ಬಾಸ್ ಸೀಸನ್ 11ಕ್ಕೆ ಕಾಮಿಡಿ ವಿಭಾಗದಲ್ಲಿ ಧನರಾಜ್ ಆಚಾರ್ ಜೊತೆಗೆ ತುಕಾಲಿ ಮಾನಸಾ ಅವರಿಗೂ ಅವಕಾಶ ಮಾಡಿಕೊಟ್ಟಿದ್ದಾರೆ. ಅಂದರೆ ಕಳೆದ ವರ್ಷವಷ್ಟೇ ತುಕಾಲಿ ಸಂತೋಷ್ ಬಿಗ್ ಬಾಸ್ ಸೀಸನ್ 10 ಮುಗಿಸಿಕೊಂಡು ಹೋಗಿದ್ದಾರೆ. ಅದು ಕೂಡ ಫೈನಲಿಸ್ಟ್ ಆಗಿದ್ದರು. ಇದಾದ ನಂತರ ರಾಜರಾಣಿ ರಿಯಾಲಿಟಿ ಶೋ ಮತ್ತು ಗಿಚ್ಚಿ ಗಿಲಿಗಿಲಿ ಸೀಸನ್ 3 ರಿಯಾಲಿಟಿ ಶೋ ಮುಗಿಸಿದ್ದಾರೆ. ಗಿಚ್ಚಿ ಗಿಲಿಗಿಲಿ ಸೀಸನ್-3ರಲ್ಲಿ ತುಕಾಲಿ ಮಾನಸಾ ನಾನ್ ಕಾಮಿಡಿಯನ್ ವಿಭಾಗದಲ್ಲಿ ರನ್ನರ್ ಅಪ್ ಪ್ರಶಸ್ತಿ ಪಡೆದಿದ್ದಾಳೆ. ಈ ಮೂಲಕ 3 ಲಕ್ಷ ರೂ. ನಗದು ಸೇರಿದಂತೆ ಒಂದಷ್ಟು ಬಹುಮಾನ ಮತ್ತು ಖ್ಯಾತಿಯನ್ನೂ ಗಳಿಸಿದ್ದಾರೆ. ಇದೀಗ ಪುನಃ 50 ಲಕ್ಷ ರೂ. ಪ್ರಶಸ್ತಿ ಮೌಲ್ಯವನ್ನು ಹೊಂದಿರುವ ಬಿಗ್ ಬಾಸ್ ರಿಯಾಲಿಟಿ ಶೋಗೆ ಕಾಲಿಟ್ಟಿದ್ದಾರೆ. ಅವರಿಗೆ ಕಲರ್ಸ್ ಕನ್ನಡ ಚಾನೆಲ್ ವತಿಯಿಂದ ಹೆಚ್ಚಿನ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಬಿಗ್ ಬಾಸ್ ಮನೆಗೆ ಅವಕಾಶ ಸಿಗುವುದೇ ಕಷ್ಟ. ಅಂಥದ್ದರಲ್ಲಿ ಒಂದೊಂದು ಮನೆಯಲ್ಲಿ ಇಬ್ಬಿಬ್ಬರಿಗೆ ಚಾನ್ಸ್ ಕೊಟ್ಟಿದ್ದಕ್ಕೆ ನೆಟ್ಟಿಗರು ಕಲರ್ಸ್ ಕನ್ನಡ ಬಿಗ್ ಬಾಸ್ ತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದೇ ಮನೆಯಲ್ಲಿ ಗಂಡ, ಹೆಂಡತಿಗೆ ಸೇರಿ ಇಬ್ಬಿಬ್ಬರಿಗೆ ಬಿಗ್ ಬಾಸ್ ಮನೆಗೆ ಬರಲು ಅವಕಾಶ ನೀಡಿರುವುದು ಸರಿಯಾದ ಕ್ರಮವಲ್ಲ. ಅದೂ ಕೂಡ ಬಿಗ್ ಬಾಸ್ ಸೀಸನ್ 10ಕ್ಕೆ ತುಕಾಲಿ ಸಂತೋಷ್ ಬಂದರೆ ಅವರ ಹೆಂಡತಿ ಮಾನಸಾ ಅವರನ್ನು ಬಿಗ್ ಬಾಸ್ ಸೀಸನ್ 11ಕ್ಕೆ ಕರೆಸಿಕೊಳ್ಳಲಾಗಿದೆ. ಒಂದೆರೆಡು ಸೀಸನ್‌ಗಳನ್ನು ಬಿಟ್ಟು ಆಮೇಲೆ ಕರೆಸಿಕೊಳ್ಳಬೇಕಿತ್ತು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

View post on Instagram

ಇನ್ನು ಕೆಲವರು 'ಕಳೆದ ಬಾರಿ ತುಕಾಲಿ ಅವರು ಬಂದಿದ್ದರು ಅಲ್ವಾ..ಇವ್ರನ್ನ ಯಾಕ್ ಕರೆಸಿದ್ದದೀರಿ..ಬೇರೆ ಅವ್ರಿಗೆ ಅವಕಾಶ ಕೊಡಬಹುದಿತ್ತು' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು 'ಇವರ ಬದಲು ಬೇರೆಯವರಿಗೆ ಅವಕಾಶ ಕೊಡಬೇಕಿತ್ತು. ಒಂದೇ ಮನೇಲಿ ಎರಡೆರಡು ಕೊಡಬಾರದಿತ್ತು' ಎಂದಿದ್ದಾರೆ. ಇನ್ನೊಬ್ಬರು 'ಗಿಚ್ಚಿ ಗಿಲಿಗಿಲಿ ವೇದಿಕೆಯಿಂದ ಹುಲಿ ಕಾರ್ತಿಕ್‌ ಅವರನ್ನು ಕರೆಸಬೇಕಿತ್ತು' ಎಂದಿದ್ದಾರೆ. ಇನ್ನೊಬ್ಬರು 'ಲಾಸ್ಟ್ ಸೀಸನ್ ಅಲ್ಲಿ ಇವರ ಗಂಡ, ಈ ಸೀಸನ್ ನಲ್ಲಿ ಇವರು. ಇದು ತುಂಬಾ ಮೋಸ ಬೇರೆಯವರು ಯಾರು ಇವರ ಕಣ್ಣಿಗೆ ಕಾಣೋದೇ ಇಲ್ಲವೇ'..? ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ನೆಟ್ಟಿಗರು 'ನೆಕ್ಸ್ಟ್ ಸೀಸನ್ ತುಕಾಲಿ ನೆಂಟ್ರು ಇನ್ಯಾರಾದರೂ ಇದ್ದಾರ ಹುಡುಕಿ ಕರೆದುಕೊಂಡು ಬನ್ನಿ' ಎಂದು ಖಾರವಾಗಿಯೇ ಕಾಮೆಂಟ್ ಮಾಡಿದ್ದಾರೆ.