ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ಯುವ ಕಾಂಗ್ರೆಸ್ 'ವಿಶ್ವ ನಿರುದ್ಯೋಗ ದಿನ'ವನ್ನಾಗಿ ಆಚರಿಸಿ ಪ್ರತಿಭಟನೆ ನಡೆಸಿದೆ. ದೇಶದಲ್ಲಿ ಶೇ.72ರಷ್ಟು ಯುವಕರು ನಿರುದ್ಯೋಗದಿಂದ ಬಳಲುತ್ತಿದ್ದು, ಉದ್ಯೋಗ ಸೃಷ್ಟಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಬಿ.ಕೆ. ಹರಿಪ್ರಸಾದ್ ಆರೋಪಿಸಿದರು.
ಬೆಂಗಳೂರು(ಸೆ.18): ‘ದೇಶದಲ್ಲಿ ಶೇ.72 ರಷ್ಟು ಯುವಕರನ್ನು ನಿರುದ್ಯೋಗ ಕಾಡುತ್ತಿದೆ. ನಿರುದ್ಯೋಗ, ವಿದ್ಯಾರ್ಥಿಗಳು, ಬಡವರು ಹಾಗೂ ರೈತರ ಸಮಸ್ಯೆ ಬಗೆಹರಿಸುವ ಬದಲು ಬಿಜೆಪಿಯವರು ಮೋದಿ ಹೆಸರಿನಲ್ಲಿ ದೀಪ ಹಚ್ಚುತ್ತಿದ್ದಾರೆ. ನಮ್ಮ ದೇಶದಲ್ಲಿ ಬದುಕಿರುವವರಿಗೆ ಯಾರೂ ದೀಪ ಹಚ್ಚುವುದಿಲ್ಲ. ಯಾಕೆ ದೀಪ ಹಚ್ಚುತ್ತಿದ್ದಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಕಿಡಿ ಕಾರಿದ್ದಾರೆ.
ರಾಜ್ಯ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್.ಮಂಜುನಾಥಗೌಡ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿ ಎದುರು ಮೋದಿ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ವಿನೂತನ ಪ್ರತಿಭಟನೆಯಲ್ಲಿ ‘ವಿಶ್ವ ನಿರುದ್ಯೋಗ ದಿನ’ಹಾಗೂ ವಿಡಂಬನಾತ್ಮಕ ಶುಭಾಶಯಗಳ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು.
ಸುಳ್ಳಿನ ಸರದಾರ ಪ್ರಧಾನಿ ಮೋದಿ
ದೇಶ ಹಾಗೂ ರಾಜ್ಯದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ರಾಷ್ಟ್ರದ ಸುಳ್ಳಿನ ಸರದಾರ ನರೇಂದ್ರ ಮೋದಿ ಅವರ ಹುಟ್ಟುಹಬ್ಬವನ್ನು ನಿರುದ್ಯೋಗ ಪಿತಾಮಹ ಹಾಗೂ ವಿಶ್ವ ನಿರುದ್ಯೋಗ ದಿನ ಎಂದು ಆಚರಣೆ ಮಾಡುತ್ತಿದ್ದಾರೆ. ದೇಶದಲ್ಲಿ 72% ಯುವಕರನ್ನು ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ವಿದ್ಯಾರ್ಥಿಗಳ ಸಮಸ್ಯೆ, ಉದ್ಯೋಗದ ಸಮಸ್ಯೆ ಪರಿಹಾರ ಮಾಡುವ ಬದಲು ಮೋದಿ ಜನ್ಮ ದಿನವನ್ನು ದೀಪ ಹಚ್ಚಿ ಆಚರಣೆ ಮಾಡುತ್ತಿದ್ದಾರೆ. ನಮ್ಮ ದೇಶದಲ್ಲಿ ಬದುಕಿರೋರಿಗೆ ಯಾರು ದೀಪ ಹಚ್ಚುವುದಿಲ್ಲ. ಇವರು ಯಾಕೆ ಹಚ್ಚುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದರು.
ಇವರು ಹಿಂದುತ್ವವಾದಿಗಳು ಮತ್ತು ಗೋ ಮೂತ್ರ ಕುಡಿಯೋರು, ಸಗಣಿ ತಿನ್ನುವವರು. ಇವರು ಯಾಕೆ ದೀಪ ಹಚ್ಚುತ್ತಿದ್ದೇವೆ ಎಂಬುದು ಜನ ಸಾಮಾನ್ಯರಿಗೆ ಹೇಳಬೇಕು ಎಂದು ಆಗ್ರಹಿಸಿದರು.
ಮೋದಿ ನಿರುದ್ಯೋಗದ ಪಿತಾಮಹ: ಮಂಜುನಾಥಗೌಡ
ಈ ವೇಳೆ ಮಾತನಾಡಿದ ಮಂಜುನಾಥ್ ಗೌಡ, ‘ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ಮೋದಿ ಭರವಸೆ ಹುಸಿಯಾಗಿದೆ. ಉದ್ಯೋಗಕ್ಕಾಗಿ ವರ್ಷಗಟ್ಟಲೆ ತಯಾರಿ ನಡೆಸುವ ಯುವಕರು ಪರೀಕ್ಷಾ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ನೇಮಕಾತಿ ವಿಳಂಬದಿಂದ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಹೀಗಾಗಿ ನಿರುದ್ಯೋಗದ ಹೆಚ್ಚಳಕ್ಕೆ ಕಾರಣವಾದ ಮೋದಿಯವರನ್ನು ಮುಂದಿನ ಪೀಳಿಗೆ ನಿರುದ್ಯೋಗದ ಪಿತಾಮಹ ಎಂದು ಕರೆಯುವುದು ನಿಶ್ಚಿತ’ ಎಂದು ತಿಳಿಸಿದರು.
ನೀತಿ ಆಯೋಗದ ವರದಿ ಪ್ರಕಾರ 15-29 ವರ್ಷದೊಳಗಿನ ಸುಮಾರು 8.7 ಕೋಟಿ ಯುವಕರು ಶಿಕ್ಷಣ, ಉದ್ಯೋಗ ಅಥವಾ ತರಬೇತಿಯಲ್ಲಿ ತೊಡಗಿಸಿಕೊಂಡಿಲ್ಲ. ಜೊತೆಗೆ ಕೇಂದ್ರ ಸರ್ಕಾರದಲ್ಲಿ 8.23 ಲಕ್ಷಕ್ಕೂ ಹೆಚ್ಚು ಮಂಜೂರಾದ ಹುದ್ದೆಗಳು ಖಾಲಿ ಉಳಿದಿವೆ. ಇದಕ್ಕೆ ನರೇಂದ್ರ ಮೋದಿ ಸರ್ಕಾರವೇ ಹೊಣೆ ಎಂದು ಹೇಳಿದರು.
ಈ ವೇಳೆ ಕಾರ್ಯಕರ್ತರು ಮೆಲೋಡಿ ಚಾಕೊಲೇಟ್ ಹಂಚಿ ಮೋದಿ ಜನ್ಮ ದಿನ ಆಚರಿಸಿದರು. ಅಲ್ಲದೆ ‘ಉದ್ಯೋಗ ಕೇಳಿದ ಯುವಕರಿಗೆ ಪಕೋಡಾ ನೀಡಿದ ಪ್ರಧಾನಿಗೆ ಜನ್ಮದಿನದ ಶುಭಾಶಯಗಳು’, ‘11 ವರ್ಷಗಳ ಮೌನ-ಮೋದಿಗೆ ಶುಭಾಶಯಗಳು, ‘ನಿರುದ್ಯೋಗದ ಪಿತಾಮಹ ನರೇಂದ್ರ ಮೋದಿಗೆ ಜನ್ಮದಿನದ ಶುಭಾಶಯಗಳು’ ಎಂಬಿತ್ಯಾದಿ ಭಿತ್ತಿಪತ್ರ ಪ್ರದರ್ಶಿಸಿ ಪ್ರತಿಭಟಿಸಿದರು.
ಈ ವೇಳೆ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷರಾದ ದಿವ್ಯಾ, ಜಿಲ್ಲಾಧ್ಯಕ್ಷರಾದ ರಂಜಿತ್, ರಾಹುಲ್, ಪ್ರವೀಣ್ ಸೇರಿದಂತೆ ಹಲವರು ಹಾಜರಿದ್ದರು.


