ಶಿರಸಿಯ ಶ್ರೀ ಮಾರಿಕಾಂಬಾ ದೇವಸ್ಥಾನದ ಆಡಳಿತ ಮಂಡಳಿಯು ಕಳೆದ ಐದು ವರ್ಷಗಳಲ್ಲಿ ₹10 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯಗಳನ್ನು ಪೂರ್ಣಗೊಳಿಸಿದೆ. ಈ ಅವಧಿಯಲ್ಲಿ ಭಕ್ತರ ಸೌಕರ್ಯಗಳು ಮತ್ತು ದೇವಾಲಯದ ಅಭಿವೃದ್ಧಿಗಾಗಿ ಗರ್ಭಗುಡಿಯ ಗ್ರಾನೈಟ್ ಅಳವಡಿಕೆ, ವಾಣಿಜ್ಯ ಮಳಿಗೆ, ಶೌಚಾಲಯ ಸೇರಿದಂತೆ ಒಟ್ಟು 28 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಅಧ್ಯಕ್ಷ ಆರ್.ಜಿ. ನಾಯ್ಕ ಮಾಹಿತಿ ನೀಡಿದ್ದಾರೆ.
ಉತ್ತರ ಕನ್ನಡ: ಕಳೆದ 5 ವರ್ಷದಲ್ಲಿ ಶ್ರೀ ಮಾರಿಕಾಂಬಾ ದೇವಸ್ಥಾನದ ಜೀರ್ಣೋದ್ಧಾರಕ್ಕೆ ₹10 ಕೋಟಿ ಖರ್ಚಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಆರ್.ಜಿ. ನಾಯ್ಕ ಹೇಳಿದರು.
ಮಂಗಳವಾರ ಶ್ರೀ ಮಾರಿಕಾಂಬಾ ದೇವಸ್ಥಾನದ ಧರ್ಮದರ್ಶಿಗಳ ಸಮ್ಮುಖದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತ ಮಂಡಳಿ ಅಧಿಕಾರಕ್ಕೆ ಬಂದು ಕಳೆದ ಐದು ವರ್ಷದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಭಕ್ತರ ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ದೇವಸ್ಥಾನಕ್ಕೆ ಸಂಬಂಧಿಸಿದಂತ ಕೆಲವು ಆಸ್ತಿಪಾಸ್ತಿಗಳನ್ನು ನ್ಯಾಯಾಲಯದ ಮೂಲಕ ವಶಪಡಿಸಿಕೊಳ್ಳಲಾಗಿದೆ ಎಂದರು.
ಸಭಾಮಂಟಪದ ಪೈಪ್ಲೈನ್ ಕಾಮಗಾರಿ, ನೀರಿನ ಶೇಖರಣೆಗೆ ಪಂಪ್ ನಿರ್ಮಾಣ, ಎಸ್ಎಸ್ ರೇಲಿಂಗ್ಸ್ ನಿರ್ಮಾಣ, ಬಪ್ಪೆ ಹಾಲ್ ಗೆಸ್ಲಿಂಗ್, ಅನ್ನ ಛತ್ರದ ಹತ್ತಿರ ಗ್ರಾನೈಟ್ ಅಳವಡಿಕೆ ಮತ್ತು ಶೆಡ್ ನಿರ್ಮಾಣ, ಚಂದ್ರ ಶಾಲೆಯ ಚಾವಣಿಗೆ ತಾಮ್ರದ ತಗಡಿನ ಹೊದಿಕೆ, ಗರ್ಭಗುಡಿಯ ನೆಲ ಮತ್ತು ಗೋಡೆಗೆ ಗ್ರಾನೈಟ್ ಅಳವಡಿಕೆ ಮಾಡಲಾಗಿದೆ ಎಂದರು.
ಯಾವೆಲ್ಲಾ ಅಭಿವೃದ್ಧಿ?
ಅಲ್ಲದೆ ದೇವಸ್ಥಾನದ ಕಲ್ಯಾಣ ಮಂಟಪದ ಎದುರಿಗೆ ವಾಣಿಜ್ಯ ಮಳಿಗೆ ನಿರ್ಮಾಣ, ಭಕ್ತಾದಿಗಳಿಗೆ ಸ್ನಾನಗೃಹ, ಶೌಚಾಲಯ, ಅಡುಗೆ ಅಡುಗೆಮನೆ ಕಟ್ಟಡ ನಿರ್ಮಾಣ, ಉಗ್ರಾಣ ಕಟ್ಟಡ, ಬಾವಿ ನಿರ್ಮಾಣ ಪ್ರಸಾದ ತಯಾರಿಕೆಗೆ ಮೇಲ್ಚಾವಣಿ ಕೊಠಡಿ ನಿರ್ಮಾಣ, ಸಭಾ ಮಂಟಪಕ್ಕೆ ಗ್ರಾನೈಟ್ ಅಳವಡಿಕೆ, ದೇವಸ್ಥಾನದ ಪ್ರವೇಶ ದ್ವಾರದಲ್ಲಿ ವಿಶಾಲವಾದ ರಸ್ತೆ ನಿರ್ಮಾಣ, ಸೇರಿ ಅನೇಕ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಒಟ್ಟು 28 ಕಾಮಗಾರಿಗಳನ್ನು ಕೈಗೆತ್ತಿಕೊಂಡು ಅವುಗಳನ್ನು ಸಂಪೂರ್ಣವಾಗಿ ಯಾವುದೇ ಕೆಲಸ ಬಾಕಿ ಇಲ್ಲದೆ ನಮ್ಮ ಆಡಳಿತ ಅವಧಿಯಲ್ಲಿ ಮುಗಿಸಲಾಗಿದೆ. ಅದಕ್ಕೆ ಸುಮಾರು ₹10 ಕೋಟಿ ಖರ್ಚು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ದೇವಸ್ಥಾನದ ಉಪಾಧ್ಯಕ್ಷ ಸುದೇಶ್ ಜೋಗುಳೇಕರ್, ಧರ್ಮದರ್ಶಿಗಳಾದ ವತ್ಸಲಾ ಹೆಗಡೆ, ಶಿವಾನಂದ್ ಶೆಟ್ಟಿ, ಸುಧೀರ್ ಹಂದ್ರಾಳ್ ಇದ್ದರು.


