RSS: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಚಾರವನ್ನು ಬಿಟ್ಟು, ಕೊಟ್ಟಿರುವ ಗೃಹ ಖಾತೆಯನ್ನು ಸಮರ್ಥವಾಗಿ ನಡೆಸಿದರೆ ರಾಜ್ಯದ ಜನರಿಗೆ ಒಳ್ಳೆಯದಾಗಲಿದೆ ಎಂದು ಚಿಕ್ಕಮಗಳೂರು-ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಚಿಕ್ಕಮಗಳೂರು (ಜೂ.17): ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ವಿಚಾರವನ್ನು ಬಿಟ್ಟು, ಕೊಟ್ಟಿರುವ ಗೃಹ ಖಾತೆಯನ್ನು ಸಮರ್ಥವಾಗಿ ನಡೆಸಿದರೆ ರಾಜ್ಯದ ಜನರಿಗೆ ಒಳ್ಳೆಯದಾಗಲಿದೆ ಎಂದು ಚಿಕ್ಕಮಗಳೂರು-ಉಡುಪಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಐಡಿ, ಸಿಆರ್ಪಿಎಫ್, ಗೃಹ ರಕ್ಷಕ ದಳ, ಸಂಚಾರಿ ಪೊಲೀಸ್, ಸೇರಿದಂತೆ ಸುಮಾರು ಆರೇಳು ವಿಭಾಗ ಹೊಂದಿರುವ ಗೃಹ ಇಲಾಖೆಯ ದೊಡ್ಡ ಜವಾಬ್ದಾರಿಯನ್ನು ಪ್ರಿಯಾಂಕ್ ಖರ್ಗೆ ಹೊಂದಿದ್ದಾರೆ ಎಂದರು.
ಶಾಲಾ-ಕಾಲೇಜುಗಳ ಬಳಿಕ ಅಕ್ರಮವಾಗಿ ಮಾದಕ ವಸ್ತು ಮಾರಾಟ ತಡೆಯುವ ಹಾಗೂ ನಾಡಿನ ಶಾಂತಿ ಸುವ್ಯವಸ್ಥೆ ಕಾಪಾಡುವುದರೊಂದಿಗೆ 6.5 ಕೋಟಿ ಜನರಿಗೆ ಹಿತ ಕಾಯುವ ದೊಡ್ಡ ಜವಾಬ್ದಾರಿ ಹೊಂದಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಅದನೆಲ್ಲಾ ಬಿಟ್ಟು ಪ್ರಿಯಾಂಕ್ ಖರ್ಗೆ ಆರ್ಎಸ್ಎಸ್ ಹಿಂದೆ ಬಿದ್ದಿದ್ದಾರೆ. ಬೇಕಿದ್ದರೆ, ಪ್ರಿಯಾಂಕ್ ಖರ್ಗೆ ಅವರು ಆರ್ಎಸ್ಎಸ್ ಶಾಖೆಗೆ ಆಗಮಿಸಿ ನೋಡಬಹುದು. ಆರ್ಎಸ್ಎಸ್ ದೇಶ ಕಟ್ಟುವ, ರಾಷ್ಟ್ರ ಭಕ್ತಿಯ ವಿಚಾರಗಳನ್ನು ಯುವಕರಿಗೆ ಕೊಡುವ ಕೆಲಸ ಮಾಡುತ್ತಿದೆ. ಆರ್ಎಸ್ಎಸ್ ರಾಷ್ಟ್ರ ಭಕ್ತಿ ಸಂಸ್ಥೆಯಾಗಿದೆ. ಆ ಸಂಸ್ಥೆಯ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುವ ಬದಲು ಕೊಟ್ಟಿರುವ ಖಾತೆಯನ್ನು ಚನ್ನಾಗಿ ನಡೆಸಿದರೆ ಜನರಿಗೆ ನೆಮ್ಮದಿ ಸಿಗಲಿದೆ ಎಂದರು.
ಮಾಜಿ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ, ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮ ಗಾಂಧಿ ಅವರು ಆರ್ಎಸ್ಎಸ್ ಶಾಖೆಗೆ ಭೇಟಿ ನೀಡಿ, ರಾಷ್ಟ್ರ ಕಟ್ಟುವ ಕೆಲಸ ಮಾಡಲಾಗುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅವರಿಗಿಂತ ದೊಡ್ಡವರು ಯಾರೂ ಇಲ್ಲ. ಹೀಗಾಗಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಆರ್ಎಸ್ಎಸ್ ಕುರಿತು ತಮಗೆ ಇರುವ ವೈಯಕ್ತಿಕ ಆತಂಕಗಳಿದ್ದರೆ, ಅದನ್ನು ನಿವಾರಣೆ ಮಾಡಿಕೊಳ್ಳಿ ಎಂದು ಹೇಳಿದ್ದಾರೆ.
ಆರ್ಎಸ್ಎಸ್ ಸಂಸ್ಥೆಗೆ ಈಗಾಗಲೇ ಒಂದು ಶತಮಾನವಾಗಿದೆ. ಈಗ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ನೇರವಾಗಿ ಪತ್ರ ಬರೆದು ಸಂಘದ ನೋಂದಣಿ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆ ಬಗ್ಗೆ ಮೋಹನ್ ಭಾಗವತ್ ಉತ್ತರ ನೀಡಲಿದ್ದಾರೆ ಎಂದರು.
ಪ್ರಧಾನಿ ಮೋದಿಯಿಂದ ಐತಿಹಾಸಿಕ ಮೈಲಿಗಲ್ಲು
ಮಾಜಿ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಅವರು ಚುನಾಯಿತ ಪ್ರಧಾನ ಮಂತ್ರಿಯಾಗಿ 4398 ದಿನಗಳ ಕಾಲ ಆಡಳಿತ ನಡೆಸಿ ದೇಶದ ಅತಿ ಹೆಚ್ಚು ಕಾಲ ಆಡಳಿತ ನಡೆಸಿದ ಪ್ರಧಾನಿ ಎಂಬ ಹಿರಿಮೆಗೆ ಪಾತ್ರರಾಗಿದ್ದರು. ಈಗ ನರೇಂದ್ರ ಮೋದಿಯವರು 4399 ದಿನ ಪೂರೈಸುವ ಮೂಲಕ ನೆಹರೂ ದಾಖಲೆ ಮುರಿದು ಐತಿಹಾಸಿಕ ಮೈಲಿಗಲ್ಲಾಗಿಸಿದ್ದಾರೆ ಎಂದು ಹೇಳಿದರು.


