ಯಲಚೇನಹಳ್ಳಿಯ ಎಸ್‌ಎನ್‌ಎನ್ ರಾಜ್ ಸೆರೆಸಿಟಿ ಅಪಾರ್ಟ್‌ಮೆಂಟ್‌ನಲ್ಲಿ ನಿಯಮ ಉಲ್ಲಂಘಿಸಿ ನಿರ್ಮಿಸಲಾಗಿದ್ದ ದೇವಾಲಯವನ್ನು ತೆರವುಗೊಳಿಸಲು ಪಾಲಿಕೆ ಆದೇಶಿಸಿದೆ. ರಾತ್ರೋರಾತ್ರಿ ಗಣೇಶ ಮೂರ್ತಿ ಸ್ಥಾಪಿಸಿದ್ದರಿಂದ ನಿವಾಸಿಗಳ ನಡುವೆ ವಿವಾದ ಉಂಟಾಗಿ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಅಧಿಕಾರಿಗಳು ಪರಿಶೀಲನೆ ನಡೆಸಿ ಈ ಅನಧಿಕೃತ ರಚನೆ ತೆರವಿಗೆ ಸೂಚಿಸಿದ್ದಾರೆ.

ಬೆಂಗಳೂರು: ಯಲಚೇನಹಳ್ಳಿ ಅಪಾರ್ಟ್‌ಮೆಂಟ್‌ನಲ್ಲಿ ನಿರ್ಮಿಸಲಾಗಿದ್ದ ದೇವಾಲಯ ರಚನೆಯನ್ನು ತೆರವು ಮಾಡಲು ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆದೇಶಿಸಿದೆ. ಯಲಚೇನಹಳ್ಳಿಯ ಎಸ್‌ಎನ್‌ಎನ್ ರಾಜ್ ಸೆರೆಸಿಟಿ ಅಪಾರ್ಟ್‌ಮೆಂಟ್ನ ಆವರಣದಲ್ಲಿ ನಿರ್ಮಿಸಲಾಗಿದ್ದ ದೇವಾಲಯ ನಿರ್ಮಾಣ, ಈ ಹಿಂದಿನ ಮಾಸ್ಟರ್ ಪ್ಲ್ಯಾನ್ ಮತ್ತು ಕಟ್ಟಡಗಳ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಪಾಲಿಕೆ ಹೇಳಿದೆ.

ರಾತ್ರೋರಾತ್ರಿ ಗಣೇಶ ಮೂರ್ತಿ ಸ್ಥಾಪನೆ

ಮಾರ್ಚ್‌ನಲ್ಲಿ ಅಪಾರ್ಟ್‌ಮೆಂಟ್ ಆವರಣದಲ್ಲಿ ಏಕಾಏಕಿ ದೇವಾಲಯ ರಚನೆ ನಿರ್ಮಾಣ ಮಾಡಿ, ರಾತ್ರೋರಾತ್ರಿ ಗಣೇಶ ಮೂರ್ತಿ ಸ್ಥಾಪಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಆ ಬಳಿಕ ಅಪಾರ್ಟ್‌ಮೆಂಟ್ ನಿವಾಸಿಗಳ ನಡುವೆ ಹಲವು ತಿಂಗಳ ಕಾಲ ವಿವಾದ ನಡೆದಿತ್ತು. ಅಪಾರ್ಟ್‌ಮೆಂಟ್ ಆವರಣದಲ್ಲಿ ನಿರ್ಮಿಸಿದ್ದ ದೇವಾಲಯ ವಿರುದ್ಧ ನಾಲ್ವರು ನಿವಾಸಿಗಳು ಪ್ರಶ್ನಿಸಿ, ಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲದೇ, ಪಾಲಿಕೆಗೂ ದೂರು ದಾಖಲಿಸಲಾಗಿತ್ತು.

ಅಪಾರ್ಟ್‌ಮೆಂಟ್ ಪ್ರದೇಶದ್ವಾರದ ಬಳಿ ವಿಗ್ರಹ ಸ್ಥಾಪನೆ

ಇದರ ಬೆನ್ನಲ್ಲೇ, ಸ್ಥಳ ಪರಿಶೀಲನೆ ನಡೆಸಿ ಅಪಾರ್ಟ್‌ಮೆಂಟ್ ಸಂಕೀರ್ಣದ ಆಕ್ಯುಪೆನ್ಸಿ ಪ್ರಮಾಣ ಪತ್ರ ಮತ್ತು ಮಾಸ್ಟರ್ ಪ್ಲ್ಯಾನ್ ಪರಿಶೀಲನೆಯನ್ನು ಅಧಿಕಾರಿಗಳು ಮಾಡಿದ್ದರು. ಪರಿಶೀಲನೆ ನಡೆಸಿದ ಬಳಿಕ ಅನಧಿಕೃತ ಭಾಗಗಳನ್ನು ತೆರವು ಮಾಡಲು ಮತ್ತು ಯಾವುದೇ ನಿರ್ಮಾಣಗಳನ್ನು ಮಾಡದಂತೆ ತಾತ್ಕಾಲಿಕ ಆದೇಶ ನೀಡಿತ್ತು. ಈ ವಿವಾದ 2024ರಿಂದ ಭಾರೀ ಚರ್ಚೆಗೆ ಕಾರಣವಾಗಿದ್ದು, ಆಗ ಅಪಾರ್ಟ್‌ಮೆಂಟ್ ಪ್ರದೇಶದ್ವಾರದ ಬಳಿ ವಿಗ್ರಹ ಸ್ಥಾಪಿಸಲು ಮುಂದಾಗಿದ್ದರು. ಈ ಬಗ್ಗೆ ಆಕ್ಷೇಪಣೆಗಳು ಕೇಳಿ ಬಂದಿತ್ತು. ಸ್ಥಳಕ್ಕೆ ಪೊಲೀಸರು ಆಗಮಿಸಿದ ಬಳಿಕ ಕಾಮಗಾರಿ ತಡೆಬಿದ್ದಿತ್ತು. ಆ ಬಳಿಕ ವಿಗ್ರಹವನ್ನು ಖಾಸಗಿ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿತ್ತು. ಆದರೆ ಮಾರ್ಚ್‌ನಲ್ಲಿ ಮತ್ತೆ ವಿಗ್ರಹ ಸ್ಥಾಪನೆ ಮಾಡಲಾಗಿತ್ತು. ಆ ವೇಳೆ ಮತ್ತೆ ಪೊಲೀಸರಿಗೆ ದೂರು ನೀಡಲಾಗಿತ್ತು ಎಂದು ದಿ ಹಿಂದೂ ವರದಿಯಲ್ಲಿ ಉಲ್ಲೇಖಿಸಿದೆ.