ಬೆಂಗಳೂರಿನಲ್ಲಿ ಸಾರ್ವಜನಿಕ ಶೌಚಾಲಯ ಸಮರ್ಪಕ ನಿರ್ವಹಣೆ, ನೈರ್ಮಲ್ಯ ಕಾಯ್ದುಕೊಳ್ಳದ ಮತ್ತು ಅವುಗಳಿಗೆ ಮೂಲ ಸೌಕರ್ಯ ಕಲ್ಪಿಸದ ಬಿಬಿಎಂಪಿ ನಡೆಗೆ ಹಾಗೂ ಅರ್ಜಿ ದಾಖಲಾಗಿ ಹಲವು ವರ್ಷ ಕಳೆದರೂ ಈವರೆಗೂ ಯಾವುದೇ ಉತ್ತರ ಸಲ್ಲಿಸದ ರಾಜ್ಯ ಸರ್ಕಾರದ ಧೋರಣೆಯನ್ನು ಹೈಕೋರ್ಟ್‌ ಇದೇ ವೇಳೆ ತೀವ್ರ ತರಾಟೆಗೆ ತೆಗೆದುಕೊಂಡಿತು

ಬೆಂಗಳೂರು(ಆ.09): ನಗರದಲ್ಲಿ ಸಮುದಾಯ ಹಾಗೂ ಸಾರ್ವಜನಿಕ ಶೌಚಾಲಯವನ್ನು ಸಮರ್ಪಕ ಹಾಗೂ ಸ್ವಚ್ಛವಾಗಿ ನಿರ್ವಹಣೆ ಮಾಡುವುದಕ್ಕೆ ಅನುಸರಿಸಬೇಕಾದ ಕ್ರಮಗಳ ಕುರಿತಂತೆ ಹೊಸದಾಗಿ ಮೂರು ವಾರದಲ್ಲಿ ವರದಿ ಸಲ್ಲಿಸಬೇಕು ಎಂದು ಹೈಕೋರ್ಟ್‌ ಬಿಬಿಎಂಪಿಗೆ ಮಂಗಳವಾರ ನಿರ್ದೇಶಿಸಿದೆ.

ನಗರದಲ್ಲಿ ಸಾರ್ವಜನಿಕ ಶೌಚಾಲಯ ಅಸಮರ್ಪಕ ನಿರ್ವಹಣೆ ಕುರಿತಂತೆ ಲೆಟ್ಜ್‌ಕಿಟ್‌ ಫೌಂಡೇಷನ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.

ಸಮೀಕ್ಷೆಯಿಂದ ಅಂಗವಿಕರನ್ನು ಕೈಬಿಟ್ಟ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್‌

ನಗರದಲ್ಲಿ ಸಾರ್ವಜನಿಕ ಶೌಚಾಲಯ ಸಮರ್ಪಕ ನಿರ್ವಹಣೆ, ನೈರ್ಮಲ್ಯ ಕಾಯ್ದುಕೊಳ್ಳದ ಮತ್ತು ಅವುಗಳಿಗೆ ಮೂಲ ಸೌಕರ್ಯ ಕಲ್ಪಿಸದ ಬಿಬಿಎಂಪಿ ನಡೆಗೆ ಹಾಗೂ ಅರ್ಜಿ ದಾಖಲಾಗಿ ಹಲವು ವರ್ಷ ಕಳೆದರೂ ಈವರೆಗೂ ಯಾವುದೇ ಉತ್ತರ ಸಲ್ಲಿಸದ ರಾಜ್ಯ ಸರ್ಕಾರದ ಧೋರಣೆಯನ್ನು ಹೈಕೋರ್ಟ್‌ ಇದೇ ವೇಳೆ ತೀವ್ರ ತರಾಟೆಗೆ ತೆಗೆದುಕೊಂಡಿತು.

ಪ್ರಕರಣದಲ್ಲಿ ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕ ಹಿತಾಸಕ್ತಿಯಿದೆ. ಬೆಂಗಳೂರು ನಿವಾಸಿಗಳಿಗೆ ಸಂಬಂಧಿಸಿದ ಸಾರ್ವಜನಿಕ ಮಹತ್ವವನ್ನು ಪ್ರಕರಣ ಹೊಂದಿದ್ದು, 2018ರಿಂದ ನ್ಯಾಯಾಲಯ ವಿಚಾರಣೆ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ಈ ವಿಚಾರವಾಗಿ ಒಂದೇ ಒಂದು ಪ್ರಮಾಣಪತ್ರ ಸಲ್ಲಿಸಿ ತನ್ನ ಪ್ರತಿಕ್ರಿಯೆ ನೀಡಿಲ್ಲ. ರಾಜ್ಯ ಸರ್ಕಾರ ಕಣ್ಣು ಮತ್ತು ಬಾಯಿ ಮುಚ್ಚಿ ಕುಳಿತುಕೊಳ್ಳಬಾರದು. ಸರ್ಕಾರ ಮೌನ ವಹಿಸುವುದು ನ್ಯಾಯಾಲಯಕ್ಕೆ ಅಚ್ಚರಿಯಾಗಿದೆ. ಜನರಿಗೆ ನೈರ್ಮಲ್ಯದ ಶೌಚಾಲಯ ಒದಗಿಸುವುದು ಸರ್ಕಾರದ ಕರ್ತವ್ಯ. ಹಾಗಾಗಿ, ಅರ್ಜಿ ಸಂಬಂಧ ರಾಜ್ಯ ಸರ್ಕಾರ ಮೂರು ವಾರಗಳಲ್ಲಿ ತನ್ನ ಉತ್ತರವನ್ನು ಒಳಗೊಂಡ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.

ಮಹಿಳಾ ಶೌಚಾಲಯಗಳಲ್ಲಿ ಕಿಟಕಿಯೇ ಕಿತ್ತು ಹೋಗಿದೆ!

ನಗರದಲ್ಲಿನ ಶೌಚಾಲಯಗಳ ನಿರ್ವಹಣೆಗೆ ಸಂಬಂಧಿಸಿದಂತೆ ಬಿಬಿಎಂಪಿ ವಸ್ತುಸ್ಥಿತಿ ವರದಿ ಮತ್ತು ಕ್ರಿಯಾ ವರದಿ ಸಲ್ಲಿಸಿತು. ವರದಿಯಲ್ಲಿ ಅನೇಕ ನ್ಯೂನತೆಗಳನ್ನು ಅರ್ಜಿದಾರರ ಪರ ವಕೀಲ ಪುತ್ತಿಗೆ ರಮೇಶ್‌ ಅವರು ನ್ಯಾಯಾಲಯದ ಗಮನಕ್ಕೆ ತಂದರು. ಖುದ್ದು ನ್ಯಾಯಪೀಠ ಸಹ ವರದಿಯಲ್ಲಿನ ಲೋಪಗಳನ್ನು ಪತ್ತೆ ಹಚ್ಚಿ ಬಿಬಿಎಂಪಿಗೆ ತರಾಟೆಗೆ ತೆಗೆದುಕೊಂಡಿತು.

ಕಪ್ಪು ಎಂದು ಪತಿಯನ್ನು ನಿಂದಿಸುವುದು ಕ್ರೌರ್ಯ: ಹೈಕೋರ್ಟ್‌

ಸಾರ್ವಜನಿಕ ಶೌಚಾಲಯದ ಸಮರ್ಪಕ ನಿರ್ವಹಣೆಯಲ್ಲಿ ಆಗಿರುವ ಕೆಲಸಗಳಿಗಿಂತ ಆಗಬೇಕಾಗಿರುವ ಕೆಲಸಗಳ ಬಗ್ಗೆ ವರದಿ ತಿಳಿಸುತ್ತದೆ. ಈ ವಿಚಾರವನ್ನು ಬಿಬಿಎಂಪಿ ಒಪ್ಪಿಕೊಂಡಿದೆ. ಶೌಚಾಲಯಗಳ ನಿರ್ವಹಣೆ ಅಸಮರ್ಪಕವಾಗಿದೆ. ಅಲ್ಲಿ ನೈರ್ಮಲ್ಯ ಕಾಯ್ದುಕೊಂಡಿಲ್ಲ. ನಗರದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಶೌಚಾಲಯಗಳಿಲ್ಲ. ಅಂಗವಿಕಲರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಿಲ್ಲ. ಕೆಲ ಮಹಿಳಾ ಶೌಚಾಲಯಗಳಲ್ಲಿ ಕಿಟಕಿಯೇ ಕಿತ್ತುಹೋಗಿದೆ ಎಂದು ಚಾಟಿ ಬೀಸಿದ ನ್ಯಾಯಪೀಠ, ಬಿಬಿಎಂಪಿಯ ವರದಿಗಳನ್ನು ತಿರಸ್ಕರಿಸಿತು.

ವರದಿಗೆ 3 ವಾರ ಗುಡುವು

ಶೌಚಾಲಯ ನಿರ್ವಹಣೆಗೆ ಕೈಗೊಳ್ಳಬೇಕಾಗಿರುವ ಕ್ರಮಗಳೇನು? ಒಂದೊಮ್ಮೆ ಕ್ರಮಗಳು ರೂಪಿಸಿದ್ದರೆ ಅದನ್ನು ಜಾರಿಗೊಳಿಸಲು ನಿಗದಿಪಡಿಸಿರುವ ಕಾಲಮಿತಿ ಏನು? ನಗರದಲ್ಲಿನ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಗೆ ಬಿಬಿಎಂಪಿ ಬಳಿಯಿರುವ ಸಲಹೆಗಳೇನು ಎಂಬ ಬಗ್ಗೆ ಮೂರು ವಾರಗಳಲ್ಲಿ ಹೊಸದಾಗಿ ವಿವರವಾದ ವರದಿ ಸಲ್ಲಿಸಬೇಕು ಎಂದು ಬಿಬಿಎಂಪಿಗೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.