12 ವರ್ಷಗಳ ಹಿಂದೆ ವಿಜಯಪುರ ಜೈಲಿನಿಂದ ಪರಾರಿಯಾಗಿದ್ದ ಜೀವಾವಧಿ ಶಿಕ್ಷೆಗೊಳಗಾಗಿದ್ದ ಕೊಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಗ್ರಾಮವೊಂದರಲ್ಲಿ ಗುರುತು ಬದಲಿಸಿಕೊಂಡು ವಾಸಿಸುತ್ತಿದ್ದ ಆರೋಪಿ ಬಸವರಾಜ್ ಪಾಟೀಲ್ನನ್ನು ಫಿಂಗರ್ಪ್ರಿಂಟ್ ಸಹಾಯದಿಂದ ಪತ್ತೆಹಚ್ಚಿ, ಸಿನಿಮೀಯ ರೀತಿಯಲ್ಲಿ ಸೆರೆಹಿಡಿಯಲಾಗಿದೆ.
ವಿಜಯಪುರ: ಬರೋಬ್ಬರಿ 12 ವರ್ಷಗಳ ಹಿಂದೆ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಕೊಲೆ ಆರೋಪಿಯನ್ನು ಬಂಧಿಸಲು ವಿಜಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಸವರಾಜ್ ಪಾಟೀಲ್ ಬಂಧಿತ ಜೀವವಾಧಿ ಕೈದಿಯಾಗಿದ್ದು, ಸಿನಿಮಾ ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಅಪರಾಧಿಯನ್ನು ಬಂಧಿಸಿದ್ದಾರೆ.
ಏನಿದು ಪ್ರಕರಣ?
ಬಾಗಲಕೋಟೆ ಜಿಲ್ಲೆಯ ಮುಧೋಳ ನಿವಾಸಿಯಾಗಿದ್ದ ಬಸವರಾಜ್ ಪಾಟೀಲ್ 2009ರಲ್ಲಿ ಬಾಗಲಕೋಟೆ ಕೃಷಿ ಅಧಿಕಾರಿ ಹನಿಟ್ರಾಪ್ ಮತ್ತು ಕೊಲೆ ಕೇಸಿನಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಜೈಲು ಸೇರಿದ್ದ. 2014ರಲ್ಲಿ ವಿಜಯಪುರ ಕೇಂದ್ರ ಕಾರಾಗೃಹದಿಂದ ಆಸ್ಪತ್ರೆಗೆ ಎಂದು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ. ಈ ಸಂದರ್ಭದಲ್ಲಿ ಜೈಲು ಸಿಬ್ಬಂದಿ ಕಣ್ಣು ತಪ್ಪಿಸಿ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದ.
12 ವರ್ಷ ತಲೆಮರೆಸಿಕೊಂಡಿದ್ದ ಹಂತಕ: ರೋಚಕ ಬೇಟೆಯ ಕಥೆ
ಬಳಿಕ 12 ವರ್ಷ ಎಲ್ಲಿ ಹೋದ? ಏನು ಮಾಡುತ್ತಿದ್ದ? ಎನ್ನುವ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ಜೈಲಿಂದ ಪಾರಾರಿಯಾದ ಬಳಿಕ ಕುಟುಂಬದವರ ಸಂಪರ್ಕಕ್ಕೂ ಬಾರದೆ ಜೀವನ ಮಾಡುತ್ತಿದ್ದನಂತೆ. ಈ ಕುರಿತು ಖಚಿತ ಮಾಹಿತಿ ಮೇರೆಗೆ ವಿಜಯಪುರ ಪೊಲೀಸರಿಗೆ ಸಿಕ್ಕಿತ್ತು. ಕ್ರೈಂ ಥ್ರಿಲ್ಲರ್ ಮೂವಿ ರೀತಿಯಲ್ಲಿ ಜೈಲಿಂದ ಓಡಿ ಹೋದ ಹಂತಕನ ಬೆನ್ನಟ್ಟಿದ ಗಾಂಧಿ ಚೌಕ ಪೊಲೀಸರು ಕೊನೆಗೂ ಆತನನ್ನು ಬಂಧಿಸಿ ಕರೆತಂದಿದ್ದಾರೆ.
ಜೈಲಿಂದ ಪರಾರಿಯಾಗಿದ್ದ ಕೊಲೆಕೇಸ್ ಆರೋಪಿ ಸಿಕ್ಕಿದ್ದೆ ರೋಚಕ ಎಂದು ಹೇಳಬಹುದು. 12 ವರ್ಷಗಳ ಬಳಿಕ ಖತರ್ನಾಕ್ ಹಂತಕನನ್ನ ಹುಡುಕಿ ಬಂಧಿಸಿ ಗಾಂಧಿಚೌಕ ಇನ್ಸ್ಪೆಕ್ಟರ್ ಪ್ರದೀಪ್ ತಳಕೇರಿ ಕರೆತಂದಿದ್ದಾರೆ. ಪೊಲೀಸರಿಂದ ತಪ್ಪಿಸಿಕೊಂಡು ಎಸ್ಕೇಪ್ ಆಗಿದ್ದ ಆರೋಪ ಬಸವರಾಜ್, ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಿದ್ಧಸಮುದ್ರ ಗ್ರಾಮದಲ್ಲಿ ಸಿಕ್ಕಿ ಬಿದ್ದಿದ್ದಾನೆ. ಪೊಲೀಸರಿಂದ ತಪ್ಪಿಸಿಕೊಂಡ ಬಳಿಕ ದಾಡಿ, ಕೂದಲು ಬಿಟ್ಟುಕೊಂಡು ಗುರುತೆ ಸಿಗದಂತೆ ಜಮೀನಿ ಒಂದನ್ನು ಲೀಜ್ ಹಾಕಿಕೊಂಡು ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದನಂತೆ. ಅಲ್ಲದೇ ಅಲ್ಲಿಯೇ ಮಹಿಳೆಯೊಬ್ಬರ ಜೊತೆ ಸಂಬಂಧನವನ್ನು ಬೆಳೆಸಿದ್ದನಂತೆ.
ಹಳೆ ಪ್ರಕರಣಗಳ ತನಿಖೆ ಸಂದರ್ಭದಲ್ಲಿ ಸಿಪಿಐ ತಳಕೇರಿ ಅವರು, ಅಪರಾಧಿಯ ಮಾಹಿತಿ ಕಲೆ ಹಾಕಲು ಶುರು ಮಾಡಿದ್ದರು. ಈ ವೇಳೆ ಕಾಲ್ ಡಿಟೈಲ್, ಲೋಕೇಶನ್ ಆಧರಿಸಿ ಸಿದ್ದಸಮುದ್ರಕ್ಕೆ ತೆರಳಿ ಅಪರಾಧಿಯನ್ನು ಗಾಂಧಿ ಚೌಕ ಪೊಲೀಸರು ಬಂಧಿಸಿದ್ದರು. ಆದರೆ ಪೊಲೀಸರಿಗೆ ಸಿಕ್ಕ ಬಳಿಕ ಬಸವರಾಜ್, ನಾನು ಅವನಲ್ಲ ಎಂದು ನಾಟಕ ಮಾಡಿದ್ದನಂತೆ. ಇದರೊಂದಿಗೆ ತಂತ್ರಜ್ಞಾನದ ನೆರವು ಪಡೆದುಕೊಂಡಿದ್ದ ಪೊಲೀಸರು, ಫಿಂಗರ್ ಪ್ರಿಂಟ್ ಮಾದರಿ ಬಳಸಿ ಕೊಲೆಗಾರನ ಗುರುತು ಪತ್ತೆ ಮಾಡಿದ್ದರು. ಕೊಲೆ ಮಾಡಿದ್ದ ವೇಳೆ ಪೊಲೀಸರು ಸಂಗ್ರಹಿಸಿಕೊಂಡಿದ್ದ ಕೊಲೆ ಆರೋಪಿಯ ಫಿಂಗರ್ ಜೊತೆಗೆ ಈಗ ಪಡೆದುಕೊಂಡಿದ್ದ ಫಿಂಗರ್ ಪ್ರಿಂಟ್ ಮ್ಯಾಚ್ ಆಗಿತ್ತು. ಇದರೊಂದಿಗೆ ಆತನನ್ನು ಬಂಧಿಸಿ ಕೋರ್ಟ ಎದುರು ಬಸವರಾಜ್ ಪಾಟೀಲ್ನನ್ನ ಹಾಜರು ಪಡೆಸಿದ್ದರು.


