ಚಾಮರಾಜನಗರದ ಶಿವನ ಸಮುದ್ರದ ಬಳಿ ಕಾವೇರಿ ನದಿಯಲ್ಲಿ ಅಪಾಯಕಾರಿ ತೆಪ್ಪ ವಿಹಾರ ನಡೆಯುತ್ತಿದೆ. ಪ್ರವಾಸಿಗರನ್ನು ಲೈಫ್ ಜಾಕೆಟ್ ಇಲ್ಲದೆ ರಭಸವಾಗಿ ಹರಿಯುವ ನದಿಯಲ್ಲಿ ಕರೆದೊಯ್ಯಲಾಗುತ್ತಿದ್ದು, ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಇದರಿಂದಾಗಿ ಪ್ರವಾಸಿಗರ ಪ್ರಾಣಕ್ಕೆ ಸಂಚಕಾರ ಬರುವ ಸಾಧ್ಯತೆ ಇದೆ.
ಚಾಮರಾಜನಗರ: ಅದು ಕಾವೇರಿ ನದಿ, ನೀರಿನ ಹರಿವಿನ ಪ್ರಮಾಣ ಕೂಡ ಹೆಚ್ಚಿದೆ. ಈ ಹರಿಯುವ ಕಾವೇರಿ ನದಿಯಲ್ಲಿ ಅಪಾಯಕಾರಿ ತೆಪ್ಪ ವಿಹಾರ ನಡೆಸಲಾಗ್ತಿದೆ. ಲೈಪ್ ಜಾಕೆಟ್ ಇಲ್ಲದೇ ದೋಣಿಯಲ್ಲಿ ಪ್ರವಾಸಿಗರನ್ನು ಕರೆದೊಯ್ಯಲಾಗ್ತಿದೆ. ಇನ್ನೂ ಕೆಲ ಪ್ರವಾಸಿಗರು ಲೈಫ್ ಜಾಕೆಟ್ ಇದ್ದರೂ ಕೂಡ ಬಳಸುವ ಮನಸ್ಸು ಮಾಡ್ತಿಲ್ಲ. ಒಂದು ವೇಳೆ ನೀರಿನಲ್ಲಿ ಮುಳುಗಿ ಹೋದ್ರೆ ಏನ್ ಗತಿ ಅಂತಿದ್ದಾರೆ.
ಸ್ವಲ್ಪ ಯಾಮಾರಿದರು ಪ್ರವಾಸಿಗರ ಪ್ರಾಣಕ್ಕೆ ಕುತ್ತು
ಹೌದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಶಿವನ ಸಮುದ್ರದ ಬಳಿ ಹರಿಯುವ ಕಾವೇರಿ ನದಿಯಲ್ಲಿ ಅಪಾಯಕಾರಿ ತೆಪ್ಪ ವಿಹಾರ ನಡೆಯುತ್ತಿದೆ. ಸ್ವಲ್ಪ ಯಾಮಾರಿದರು ತೆಪ್ಪ ಮುಳುಗಿ ಪ್ರವಾಸಿಗರು ನದಿ ನೀರಿನಲ್ಲಿ ಮುಳುಗಿ ಹೋಗುವ ಸಾಧ್ಯತೆಗಳಿವೆ. ಶಿವನ ಸಮುದ್ರದ ಮಧ್ಯರಂಗ ದೇವಾಲಯ ಹಾಗು ವೆಸ್ಲಿ ಸೇತುವೆ ಬಳಿ ಹರಿಯುವ ಕಾವೇರಿಯ ನದಿ ಹಾಗು ಭರಚುಕ್ಕಿ ಜಲಪಾತದ ಬಳಿ ಈಜಲು ತೆರಳಿದವರು ಹಾಗು ಸ್ನಾನಕ್ಕೆಂದು ನದಿಗೆ ಇಳಿದವರು ನೀರಿನ ಸುಳಿಯಲ್ಲಿ ಸಿಲುಕಿ ಸಾವನ್ನಪ್ಪುತ್ತಿದ್ದರಿಂದ ಈ ಎಲ್ಲಾ ಪ್ರದೇಶಗಳಲ್ಲಿ ಬಹಳ ಹಿಂದೆಯೇ ಬೋಟಿಂಗ್ ಹಾಗು ಈಜಾಡುವುದನ್ನು ನಿಷೇಧಿಸಲಾಗಿತ್ತು. ಆದರೆ, ಈಗ ಪ್ರವಾಸೋದ್ಯಮ ಇಲಾಖೆಯಿಂದ ಒಂದಷ್ಟು ಮಂದಿಗೆ ಮುನ್ನೆಚ್ಚರಿಕೆ ಕ್ರಮ ವಹಿಸಿ ತೆಪ್ಪ ನಡೆಸಲು ಅನುಮತಿ ಮಾಡಿಕೊಡಲಾಗಿದೆ. ಈ ಹಿನ್ನಲೆ ಭರಚುಕ್ಕಿಗೆ ಬರುವ ಪ್ರವಾಸಿಗರು ಅದಕ್ಕು ಮೊದಲು ಶಿವನ ಸಮುದ್ರದ ಬಳಿ ಹರಿಯುವ ಕಾವೇರಿ ನದಿಯಲ್ಲಿ ಮನರಂಜನೆಗಾಗಿ ತೆಪ್ಪ ವಿಹಾರ ಹೋಗುವುದು ಸಾಮಾನ್ಯವಾಗಿದೆ.
ನದಿಯ ಒಳಗಡೆ ಪ್ರವೇಶಿಸುವ ತೆಪ್ಪಗಳು!
ಇನ್ನೂ ಪ್ರವಾಸಿಗರಿಂದ ಶುಲ್ಕ ಪಡೆದು ತೆಪ್ಪಗಳಲ್ಲಿ ಕಾವೇರಿ ನದಿಯ ಮಧ್ಯಭಾಗಕ್ಕೆ ಕರೆದೊಯ್ದು ಸುತ್ತಾಡಿಸುತ್ತಾರೆ. ಆದರೆ, ಹೀಗೆ ತೆಪ್ಪ ವಿಹಾರ ನಡೆಸುವ ವೇಳೆ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿಲ್ಲ. ಲೈಫ್ ಜಾಕೆಟ್ ಇಲ್ಲದೆ ಪ್ರವಾಸಿಗರನ್ನು ಕರೆದೊಯ್ದು ಹರಿಯುವ ನದಿಯಲ್ಲಿ ತೆಪ್ಪಗಳಲ್ಲಿ ಸುತ್ತಾಡಿಸುತ್ತಾರೆ. ಹೀಗೆ ಸುತ್ತಾಡಿಸುವಾಗ ನದಿಯ ಸುಳಿಯಲ್ಲಿ ಸಿಲುಕಿ ತೆಪ್ಪ ಮಗುಚಿ ಬೀಳುವ ಅಪಾಯವೂ ಇದೆ. ಆದರೆ, ಇದ್ಯಾವುದನ್ನು ಲೆಕ್ಕಿಸದೆ ಇಲ್ಲಿ ತೆಪ್ಪ ವಿಹಾರ ಮಾಡಲಾಗುತ್ತಿದ್ದು ಪ್ರವಾಸಿಗರ ಪ್ರಾಣದೊಂದಿಗೆ ಚೆಲ್ಲಾಟವಾಡಲಾಗುತ್ತಿದೆ.
ಲೈಫ್ ಜಾಕೆಟ್ ಇದ್ರೂ ಬಳಸದ ಪ್ರವಾಸಿಗರು
ಒಟ್ನಲ್ಲಿ ತುರ್ತು ಸಂದರ್ಭದಲ್ಲಿ ತೆಪ್ಪ ನಡೆಸುವವರು ಹಾಗೂ ನುರಿತ ಈಜುಗಾರರನ್ನು ಬಳಸಿಕೊಳ್ಳುವ ಉದ್ದೇಶದಿಂದ ತೆಪ್ಪ ನಡೆಸುವವರಿಗೆ ಪ್ರವಾಸೋದ್ಯಮ ಇಲಾಖೆಯನ್ನು ಅನುಮತಿಸಿದೆ. ಅದು ಕೂಡ ಸುರಕ್ಷತಾ ಕ್ರಮ ಅನುಸರಿಸಿ ಮಾಡಬೇಕಿದೆ. ತೆಪ್ಪ ವಿಹಾರಕ್ಕೆ ಬರುವ ಒಂದಷ್ಟು ಮಂದಿ ಮಾತ್ರ ಲೈಫ್ ಜಾಕೆಟ್ ತೊಟ್ರೆ ಉಳಿದವರು ಹಾಕಿಕೊಳ್ತಿಲ್ಲ. ಈ ಬಗ್ಗೆ ತೆಪ್ಪ ನಡೆಸುವವರು ಕೂಡ ಜಾಗೃತಿ ಮೂಡಿಸ್ತಿಲ್ಲ. ಅಪಾಯ ಸಂಭವಿಸುವ ಮುನ್ನವೇ ಎಚ್ಚೆತ್ತುಕೊಳ್ಳಬೇಕಿದೆ. (ವರದಿ: ಪುಟ್ಟರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ)


