ಹುಬ್ಬಳ್ಳಿಯಲ್ಲಿ ನೇಹಾಳನ್ನು ಕೊಲೆಗೈದ ಆರೋಪಿಯನ್ನು ಗಲ್ಲಿಗೇರಿಸಿ ಎಂದು ಸಚಿವ ಎಂ.ಬಿ. ಪಾಟೀಲ್ ಆಗ್ರಹಿಸಿದ್ದಾರೆ. ಆದರೆ, ನಟಿ ರಚಿತಾ ರಾಮ್ ಅವರು ಅವನನ್ನು ಜನರ ಕೈಗೊಪ್ಪಿಸಿ ಅವರೇ ಶಿಕ್ಷೆ ಕೊಡುತ್ತಾರೆ ಎಂದು ಹೇಳಿದ್ದಾರೆ.

ಬೆಂಗಳೂರು (ಏ.20): ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಕೊಲೆ ಕೃತ್ಯವನ್ನು ಅತ್ಯಂತ ಬರ್ಬರ ಘಟನೆ ಎಂದು ಖಂಡಿಸಿರುವ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು, ಈ ದುಷ್ಕೃತ್ಯ ಎಸಗಿದವನನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು. ಆದರೆ, ಮತ್ತೊಂದೆಡೆ ಆತನಿಗೆ ಗಲ್ಲು ಶಿಕ್ಷೆ ನಿಡದಿದ್ದರೆ ಜನರ ಕೈಗೊಪ್ಪಿಸಿ ಅವರೇ ಸೂಕ್ತ ಶಿಕ್ಷೆ ನಿಡುತ್ತಾರೆ ಎಂದು ನಟಿ ರಚಿತಾ ರಾಮ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

Add Asianetnews Kannada as a Preferred SourcegooglePreferred

ಘಟನೆಯ ಬಗ್ಗೆ ತಮ್ಮ ನಿವಾಸದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಎಂ.ಪಿ. ಪಾಟೀಲ್ ಅವರು, 'ಈ ಹ್ಯೇಯ ಪ್ರಕರಣದ ವಿಚಾರಣೆಗೆ ತ್ವರಿತ ನ್ಯಾಯಾಲಯ ಸ್ಥಾಪಿಸಬೇಕು. ಇಂತಹ ದುಷ್ಕೃತ್ಯ ಎಸಗಿದವರಿಗೆ ತಕ್ಷಣವೇ ಕಠಿಣ ಶಿಕ್ಷೆ ಆಗಬೇಕು. ವಿಚಾರಣೆಯಲ್ಲಿ ವಿಳಂಬಕ್ಕೆ ಆಸ್ಪದವಾಗಬಾರದು ಹೀಗಾಗಿ, ತ್ವರಿತ ನ್ಯಾಯಾಲಯ ಸ್ಥಾಪನೆ ಆಗಬೇಕು. ಇಂತಹ ಘೋರ ದುಷ್ಕೃತ್ಯ ಎಸಗಿದವರಿಗೆ ಗಲ್ಲು ಶಿಕ್ಷೆಯಂತಹ ಕಠಿಣಾತಿ ಕಠಿಣ ಶಿಕ್ಷೆಯೇ ಆಗಬೇಕು. ಆಗ ಮಾತ್ರ ಇಂತಹ ಘಟನೆಗಳು ಮರುಕಳಿಸದಂತೆ ತಡೆಗಟ್ಟಲು ಸಾಧ್ಯವಾಗುತ್ತದೆ. ಇಂತಹ ಘಟನೆಯನ್ನು ಯಾರೇ ಮಾಡಿದರೂ ಖಂಡನಾರ್ಹ. ಇದೊಂದು ಬರ್ಬರ ಕೃತ್ಯವಾಗಿದ್ದು ಯಾವ ದೃಷ್ಟಿಯಿಂದಲೂ ಇದನ್ನು ಒಪ್ಪಲು ಸಾಧ್ಯವೇ ಇಲ್ಲ' ಎಂದರು.

ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ್ ಹಂತಕ ಫಯಾಜ್‌ ಮತ್ತೊಂದು ಕರಾಳ ಮುಖ ಅನಾವರಣ

ಈ ಘಟನೆಯ ಆರೋಪಿಗೆ ಕಠಿಣ ಶಿಕ್ಷೆಯಾಗುವಂತೆ ಸರ್ಕಾರ ಗಮನಕೊಡಲಿದೆ ಎಂದ ಸಚಿವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಂತಹ ಘೋರಕೃತ್ಯ ಎಸಗಿದವರನ್ನು ವಿಳಂಬವಿಲ್ಲದೆ ಗಲ್ಲು ಶಿಕ್ಷೆಗೆ ಒಳಪಡಿಸಲು ಸಾಧ್ಯವಾಗುವಂತಹ ಕಾನೂನು ರೂಪಿಸುವ ಬಗ್ಗೆ ಸಮಾಲೋಚನೆ ನಡೆಸಬೇಕು ಎಂದು ಅಭಿಪ್ರಾಯಪಟ್ಟರು. ಚಿಕ್ಕವಯಸ್ಸಿನ ಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಪ್ರಕರಣಗಳಲ್ಲೂ ಅಪರಾಧಿಗಳಿಗೆ ಮರಣದಂಡನೆ ವಿಧಿಸಬೇಕು ಎಂದು ಸಚಿವ ಎಂ.ಪಿ. ಪಾಟೀಲ್ ಹೇಳಿದರು.

ನೇಹಾಳನ್ನು ಕೊಂದನನನ್ನು ಜನರ ಕೈಗೊಪ್ಪಿಸಿ ಅವರೇ ಶಿಕ್ಷೆ ಕೊಡ್ತಾರೆ: 
ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಬರ್ಬರ ಕೊಲೆ ಪ್ರಕರಣದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರ ಹಾಕಿರುವ ಸ್ಯಾಂಡಲ್‌ವುಡ್ ನಟಿ ರಚಿತಾ ರಾಮ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. 'ಜಾತಿ, ಧರ್ಮ ಯಾವುದೇ ಆಗಿರಲಿ ಮೊದಲು ನಾವು ಮಾನವರು. ನಾನು ಈ ಪೋಸ್ಟ್ ಹಾಕಲು ಕಾರಣ ಆಕೆಗೆ ಆಗಿರುವ ಅನ್ಯಾಯ. ತಪ್ಪು ಯಾರೇ ಮಾಡಿದರು ತಪ್ಪೇ ಸರ್ಕಾರಕ್ಕೆ ನನ್ನ ಒಂದು ಮನವಿ. ರಾಜಕೀಯ ಆಯಾಮದಲ್ಲಿ ಈ ವಿಷಯವನ್ನು ತರಬೇಡಿ. ಆಗಿರೋದು ಅನ್ಯಾಯ. ಈಗ ನ್ಯಾಯ ಬೇಕಾಗಿದೆ ಅಷ್ಟೆ. ಈ ರೀತಿಯ ಕೃತ್ಯ ಮಾಡುವವರನ್ನು ಗಲ್ಲಿಗೇರಿಸುವ ಬದಲು ಅವರನ್ನು ಜನಸಮಾನ್ಯರ ಕೈಗೆ ಒಪ್ಪಿಸಿ' ಎಂದು ಬರೆದುಕೊಂಡಿದ್ದಾರೆ.

ಕರ್ನಾಟಕದ ಮಹಿಳೆಯರು ಕಿರುಗತ್ತಿ, ಕಠಾರಿ ಇಟ್ಟುಕೊಂಡು ಓಡಾಡಲು ಪರ್ಮಿಷನ್ ಕೊಡಿ: ವಿಶ್ವ ಹಿಂದೂ ಪರಿಷತ್ ಆಗ್ರಹ

ಘಟನೆಯ ಹಿನ್ನೆಲೆ ಏನು? 
ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ಏ.18ರಂದು ಹುಬ್ಬಳ್ಳಿ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಮಗಳು ನೇಹಾ ಹಿರೇಮಠ ಅವರನ್ನು ಫಯಾಜ್ ಎನ್ನುವ ಯುವಕ ಬರ್ಬರವಾಗಿ ಕೊಲೆ ಮಾಡಿದ್ದನು. ಈ ಘಟನೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ಮುಂದುವರಿದಿವೆ. ಜನರು ಹಾಗೂ ಸಂಘಟನೆಗಳು ಆರೋಪಿಯನ್ನು ಎನ್‌ಕೌಂಟರ್ ಮಾಡಿ ಎಂದು ಆಗ್ರಹಿಸುತ್ತಿದ್ದಾರೆ. ಸ್ವತಃ ಆರೋಪಿ ಫಯಾಜ್ ತಾಯಿ ಮಮ್ತಾಜ್ ಕೂಡ ತನ್ನ ಮಗನಿಗೆ ಶಿಕ್ಷೆ ಆಗಬೇಕೆಂದು ಕಣ್ಣೀರು ಹಾಕಿದ್ದಾರೆ. ಪೊಲೀಸರು ಆರೋಪಿ ಫಯಾಜ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.