ಬಿಹಾರದ ಬಕ್ಸಾರ್ ಜಿಲ್ಲೆಯ ಸುನೈನಾ ದೇವಿ ಗಂಗಾ ನದಿಯಲ್ಲಿ ಕೊಚ್ಚಿಹೋಗಿ 15 ದಿನಗಳ ಕಾಲ ನದಿ ನೀರು ಕುಡಿದು ಪ್ರಾಣ ಉಳಿಸಿಕೊಂಡಿದ್ದಾರೆ. ಮುಳುಗಡೆಯಾಗಿದ್ದ ಗುಡಿಸಲನ್ನು ಹಿಡಿದುಕೊಂಡಿದ್ದ ಇವರನ್ನು ಉತ್ತರಪ್ರದೇಶದ ಬಳಿ ಮೀನುಗಾರರು ರಕ್ಷಿಸಿದ್ದಾರೆ.
ನವದೆಹಲಿ: ಗಂಗಾ ನದಿಯಲ್ಲಿ ಕೊಚ್ಚಿಹೋಗಿದ್ದ ಮಹಿಳೆಯೊಬ್ಬರು 15 ದಿನ ಅದೇ ನದಿಯ ನೀರು ಕುಡಿದುಕೊಂಡು, ಮುಳುಗಡೆಯಾಗಿರುವ ಹುಲ್ಲಿನ ಗುಡಿಸಲಿನಲ್ಲಿ ಜೀವ ಉಳಿಸಿಕೊಂಡಿದ್ದ ಅಚ್ಚರಿಯ ಘಟನೆ ನಡೆದಿದೆ.
ಪ್ರವಾಹದ ನದಿ ನೀರು ಕುಡಿದು 15 ಬದುಕಿದ್ದ ಸುನೈನಾ ದೇವಿ!
ಬಿಹಾರದ ಬಕ್ಸಾರ್ ಜಿಲ್ಲೆಯ ಸುನೈನಾ ದೇವಿ (55) ಆ.30ರಂದು ಸ್ನಾನಕ್ಕೆಂದು ಗಂಗೆಯ ತಟಕ್ಕೆ ಹೋಗಿದ್ದಾಗ ಪ್ರವಾಹದಲ್ಲಿ ಕೊಚ್ಚಿಹೋಗಿದ್ದರು. ನಾಪತ್ತೆಯಾಗುತ್ತಿದ್ದಂತೆ ಪುತ್ರ ಆ ಬಗ್ಗೆ ದೂರು ನೀಡಿದ್ದರು. ಆದರೆ ದಿನಗಳುರುಳಿದಂತೆ ಸುನೈನಾರನ್ನು ಮತ್ತೆ ನೋಡುವ ಆಸೆಯನ್ನು ಅವರ ಪರಿವಾರ ಬಿಟ್ಟಿತ್ತು.
ಶಿವಗುರು ಶಿವಗುರು ಎಂದು ಜಪಿಸುತ್ತಿದ್ದಂತೆ ಮೀನುಗಾರರ ಕಾಪಾಡಿದರು
ಇತ್ತ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದ ಸುನೈನಾರನ್ನು ನದಿಯ ಪ್ರವಾಹವು 50 ಕಿ.ಮೀ ದೂರದಲ್ಲಿನ ಉತ್ತರಪ್ರದೇಶದ ಚೈನ್ ಛಪ್ರಾ ಎಂಬಲ್ಲಿಗೆ ಹೊತ್ತುಬಂದಿತ್ತು. ಆಕೆಯ ಅದೃಷ್ಟಕ್ಕೆ ಅಲ್ಲಿ ಗದ್ದೆಯೊಂದರ ನಡುವೆ ನಿರ್ಮಿಸಲಾಗಿದ್ದ, ಆದರೆ ಪ್ರವಾಹದಿಂದಾಗಿ ಮುಳುಗಡೆಯಾಗಿದ್ದ ಹುಲ್ಲಿನ ಗುಡಿಸಲು ಕಾಣುತ್ತಿದ್ದಂತೆ ಅದನ್ನು ಹಿಡಿದುಕೊಂಡು ನದಿಯಿಂದ ಮೇಲೆದ್ದರು. ಸುತ್ತಲೂ ನೀರು ತುಂಬಿದ್ದುದರಿಂದ ಬೇರೆ ದಾರಿ ಕಾಣದೆ ಅದನ್ನೇ ಕುಡಿದುಕೊಂಡು ಇರುತ್ತಿದ್ದರು. ಸೋಮವಾರ ಮತ್ತೊಮ್ಮೆ ಕಾಲುಜಾರಿ ಮತ್ತೆ ನದಿಗೆ ಬಿದ್ದ ಈಕೆ, ಕೊಚ್ಚಿಕೊಂಡು ಹೋಗುತ್ತಿದ್ದಾಗ ‘ಶಿವಗುರು ಶಿವಗುರು’ ಎಂದು ಜಪಿಸುತ್ತಿದ್ದರು. ಅದನ್ನು ಕೇಳಿದ ಕೆಲ ಮೀನುಗಾರರು ಸುನೈನಾರನ್ನು ರಕ್ಷಿಸಿದ್ದಾರೆ.


