ನೀಟ್‌ ಪರೀಕ್ಷಾ ಸುಧಾರಣೆಗಾಗಿ ರಚಿಸಲಾದ ನಂದನ್‌ ನಿಲೇಕಣಿ ನೇತೃತ್ವದ ಸಮಿತಿಯು ಈ ತಿಂಗಳಾಂತ್ಯಕ್ಕೆ ಸುಪ್ರೀಂ ಕೋರ್ಟ್‌ಗೆ ಮಧ್ಯಂತರ ವರದಿ ಸಲ್ಲಿಸಲಿದೆ. ಪರೀಕ್ಷಾ ವ್ಯವಸ್ಥೆಯಲ್ಲಿ ಶಾಶ್ವತ ಸಿಬ್ಬಂದಿ ನೇಮಕಕ್ಕೆ ಸುಪ್ರೀಂ ಕೋರ್ಟ್ ಸಲಹೆ ನೀಡಿದ್ದು, ಎನ್‌ಟಿಎ ಘಟಕಕ್ಕೆ ಭೇಟಿ ನೀಡುವುದಾಗಿ ತಿಳಿಸಿದೆ.

ನವದೆಹಲಿ: ನೀಟ್‌ ಪರೀಕ್ಷಾ ಪ್ರಕ್ರಿಯೆಯಲ್ಲಿ ಸುಧಾರಣೆ ತರುವ ಉದ್ದೇಶದಿಂದ ಸಲಹೆ ನೀಡಲು ಕನ್ನಡಿಗ ನಂದನ್‌ ನಿಲೇಕಣಿ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ಉನ್ನತ ಮಟ್ಟದ ಸಮಿತಿಯು ಈ ತಿಂಗಳ ಕೊನೆಯಲ್ಲಿ ಮೊದಲ ಮಧ್ಯಂತರ ವರದಿಯನ್ನು ಸಲ್ಲಿಸಲಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ.

ಸಾಲುಸಾಲು ಪರೀಕ್ಷಾ ಅಕ್ರಮಗಳ ಹೊಣೆ ಹೊತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ನೀಡಿದ ಬೆನ್ನಲ್ಲೇ ಜು.26ಕ್ಕೆ ನಿಲೇಕಣಿ ಸಮಿತಿ ರಚಿಸಲಾಗಿತ್ತು. ಈ ಬಗ್ಗೆ ನೀಟ್‌ ಅಕ್ರಮಗಳ ಕುರಿತ ವಿಚಾರಣೆ ವೇಳೆ ಮಾಹಿತಿ ನೀಡಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ‘ನಿಲೇಕಣಿ ಸಮಿತಿಯು ಇಸ್ರೋದ ಮಾಜಿ ಅಧ್ಯಕ್ಷ ಕೆ. ರಾಧಾಕೃಷ್ಣನ್ ನೇತೃತ್ವದ ಹಿಂದಿನ ಸಮಿತಿಯ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದೆ’ ಎಂದು ನ್ಯಾ। ಪಿ.ಎಸ್. ನರಸಿಂಹ ಮತ್ತು ಅಲೋಕ್ ಆರಾಧೆ ಅವರ ಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ವ್ಯವಸ್ಥೆಯಲ್ಲಿ ಶಾಶ್ವತ ಸಿಬ್ಬಂದಿ ಹಾಗೂ ಪ್ರತ್ಯೇಕ ವಿಭಾಗಗಳು ಇರಬೇಕು. ನಿಯೋಜಿತ ಸಿಬ್ಬಂದಿಯ ಬಳಕೆ ಕಡಿಮೆ ಇರಬೇಕು. ಪರೀಕ್ಷೆ ನಡೆಸುವ ಸಂಪೂರ್ಣ ಪ್ರಕ್ರಿಯೆಯನ್ನು ಸಂಸ್ಥೀಕರಣಗೊಳಿಸುವತ್ತ ಗಮನಹರಿಸಬೇಕು’ ಎಂದು ಸರ್ಕಾರಕ್ಕೆ ಸಲಹೆ ನೀಡಿತು. ಜತೆಗೆ, ನೀಟ್‌ ಪರೀಕ್ಷೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (ಎನ್‌ಟಿಎ) ನವೀಕರಿಸಲಾದ ಘಟಕಕ್ಕೆ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸುವುದಾಗಿ ಪೀಠದಲ್ಲಿದ್ದ ನ್ಯಾಯಮೂರ್ತಿಗಳು ಹೇಳಿದರು.

ಯುಜಿಸಿ ನೆಟ್‌ 3 ವಿಷಯಗಳ ಮರು ಪರೀಕ್ಷೆ ಫಲಿತಾಂಶ ಪ್ರಕಟ

ನವದೆಹಲಿ: ಮೂಲ ಪರೀಕ್ಷೆಯಲ್ಲಿ ಸರಣಿ ದೋಷಗಳ ಹಿನ್ನೆಲೆ ಸೆ.9ರಂದು ಮರು ಪರೀಕ್ಷೆ ಎದುರಿಸಿದ್ದ ಯುಜಿಸಿ ನೆಟ್‌ನ ಇಂಗ್ಲೀಷ್‌, ವಾಣಿಜ್ಯ ಮತ್ತು ಸಮಾಜಶಾಸ್ತ್ರ ಪರೀಕ್ಷೆಗಳ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದೆ.

ಯುಜಿಸಿ ನೆಟ್‌ ಜೂನ್‌ನಲ್ಲಿ ನಡೆಸಿದ್ದ ಈ ಮೂರು ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳಲ್ಲಿ ಹಲವಾರು ದೋಷಗಳ ಬಗ್ಗೆ ದೂರು ಬಂದ ಹಿನ್ನೆಲೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಕಳೆದ ತಿಂಗಳು ಮರುಪರೀಕ್ಷೆಯನ್ನ ಘೋಷಿಸಿ ಈ ತಿಂಗಳ 9 ರಂದು ಪರೀಕ್ಷೆ ನಡೆಸಿತ್ತು. ಪರೀಕ್ಷೆ ಬರೆದ ಅಭ್ಯರ್ಥಿಗಳು ತಮ್ಮ ಫಲಿತಾಂಶ, ಅಂಕಪಟ್ಟಿಗಳನ್ನು ಅಧಿಕೃತ ವೆಬ್‌ಸೈಟ್‌ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಬಹುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.