Asianet Suvarna News Asianet Suvarna News

ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ಬಗ್ಗೆ ಪ್ರಸ್ತಾಪಿಸಿದ ಪಾಕ್‌ಗೆ ಭಾರತದ ದಿಟ್ಟ ಉತ್ತರ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಾಶ್ಮೀರ ವಿಚಾರ ಪ್ರಸ್ತಾಪಿಸಿದ ಪಾಕಿಸ್ತಾನಕ್ಕೆ ಭಾರತ ತೀಕ್ಷ್ಣವಾಗಿ ತಿರುಗೇಟು ನೀಡಿದೆ. ಭಯೋತ್ಪಾದನೆಗೆ ಬೆಂಬಲ ನೀಡುವ ಮತ್ತು ಅಂತಾರಾಷ್ಟ್ರೀಯ ಅಪರಾಧಗಳಲ್ಲಿ ತೊಡಗಿರುವ ದೇಶವು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವುದು ವಿಪರ್ಯಾಸ ಎಂದು ಭಾರತೀಯ ರಾಜತಾಂತ್ರಿಕ ಅಧಿಕಾರಿ ತಿರುಗೇಟು ನೀಡಿದ್ದಾರೆ.

India Slams Pakistan's Hypocrisy at UNGA Over Kashmir Issue
Author
First Published Sep 28, 2024, 6:36 PM IST | Last Updated Sep 28, 2024, 7:45 PM IST

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಾಶ್ಮೀರ ವಿಚಾರವನ್ನು ಉಲ್ಲೇಖಿಸಿದ ಪಾಕಿಸ್ತಾನದ ಪ್ರಧಾನಿ ಶೆಹ್ಬಾಜ್ ಶರೀಫ್‌ಗೆ ಭಾರತ ದಿಟ್ಟ ಉತ್ತರ ನೀಡಿದೆ. ಪಾಕಿಸ್ತಾನ ತುಂಬಾ ಕೆಟ್ಟ ರೀತಿಯಲ್ಲಿ ಭಂಡತನ ತೋರುತ್ತಿದೆ ಎಂದು ಭಾರತ ಹೇಳಿದೆ. ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ (UNGA)ಯ 79ನೇ ಅಧಿವೇಶನದ ಸಾಮಾನ್ಯ ಚರ್ಚೆಯಲ್ಲಿ  ಪಾಕಿಸ್ತಾನದ ಪ್ರಧಾನಿ ಶೆಹ್ಬಾಜ್ ಶರೀಫ್‌ ಜಮ್ಮು ಕಾಶ್ಮೀರದ ವಿಚಾರವನ್ನು ಪ್ರಸ್ತಾಪ ಮಾಡಿದ್ದರು. ಇದಕ್ಕೆ ಶುಕ್ರವಾರ ನಡೆದ ಸಭೆಯಲ್ಲಿ ಭಾರತ ಪ್ರತಿಕ್ರಿಯೆ ನೀಡಿದೆ. 

ವಿಶ್ವಸಂಸ್ಥೆಯ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ ಮಾತನಾಡಿದ ಭಾರತೀಯ ರಾಜತಾಂತ್ರಿಕ ಅಧಿಕಾರಿ ಭಾವಿಕಾ ಮಂಗಳಾನಂದನ್, ಭಯೋತ್ಪಾದನೆ ಜಾಗತಿಕ ಕುಖ್ಯಾತಿಯನ್ನು ಹೊಂದಿರುವ ಸೇನೆಯನ್ನು ಮುನ್ನಡೆಸುತ್ತಿರುವ, ಮಾದಕ ದ್ರವ್ಯ ಸಾಗಣೆ, ವ್ಯಾಪಾರ ಮತ್ತು ಅಂತಾರಾಷ್ಟ್ರೀಯ ಅಪರಾಧಗಳಿಗೆ ಕುಖ್ಯಾತಿ ಪಡೆದಿರುವ ದೇಶವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡುವ ಉದ್ಧಟತನವನ್ನು ಹೊಂದಿದೆ ಎಂದು ತಿರುಗೇಟು ನೀಡಿದ್ದಾರೆ. 

ಲೆಬನಾನ್ ಇಸ್ರೇಲ್ ಗಡಿಯಲ್ಲಿ 600 ಭಾರತೀಯ ಯೋಧರ ನಿಯೋಜನೆ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯೂ ಒಂದು ವಿಡಂಬನೆಗೆ ಸಾಕ್ಷಿಯಾಯ್ತು. ಪಾಕಿಸ್ತಾನದ ಪ್ರಧಾನಿ ಭಾಷಣದಲ್ಲಿ ಉಲ್ಲೇಖಿಸಿದ ವಿಚಾರದ ಬಗ್ಗೆ ನಾನು ಮಾತನಾಡುತ್ತೇನೆ. ಜಗತ್ತಿಗೆ ತಿಳಿದಿರುವಂತೆ, ಪಾಕಿಸ್ತಾನವು ತನ್ನ ನೆರೆಹೊರೆಯವರ ವಿರುದ್ಧ ಗಡಿಯಾಚೆಗಿನ ಭಯೋತ್ಪಾದನೆಯನ್ನು  ತನ್ನ ಅಸ್ತ್ರವಾಗಿ ಬಳಸಿಕೊಂಡಿದೆ. ಇದು ನಮ್ಮ ಸಂಸತ್ತು, ನಮ್ಮ ಆರ್ಥಿಕ ರಾಜಧಾನಿ ಮುಂಬೈ, ಮಾರುಕಟ್ಟೆ ಸ್ಥಳಗಳು ಮತ್ತು ತೀರ್ಥಯಾತ್ರೆಯ  ಮೇಲೆ ದಾಳಿ ಮಾಡಿದೆ. ಈ ಪಟ್ಟಿ ಇನ್ನೂ ಉದ್ದವಾಗಿದೆ. ಇಂತಹ ಹಿನ್ನೆಲೆ ಹೊಂದಿರುವ ದೇಶ ಹಿಂಸೆಯ ಬಗ್ಗೆ ಎಲ್ಲಿ ಬೇಕಾದರೂ ಮಾತನಾಡುತ್ತಿರುವುದು ವಿಪರ್ಯಾಸವೆನಿಸಿದೆ. ಫಿಕ್ಸ್ ಆಗಿರುವ ಚುನಾವಣೆಯ ಇತಿಹಾಸ ಹೊಂದಿರುವ ದೇಶವೂ, ಪ್ರಜಾಪ್ರಭುತ್ವ ದೇಶವೊಂದರ ರಾಜಕೀಯ ಆಯ್ಕೆಯ ಬಗ್ಗೆ ಮಾತನಾಡುವುದು ವಿಡಂಬನೆಯಾಗಿದೆ ಎಂದು ಭಾರತೀಯ ರಾಜತಾಂತ್ರಿಕ ಅಧಿಕಾರಿ ತಿರುಗೇಟು ನೀಡಿದ್ದಾರೆ.

ಪಾಕ್‌ನಿಂದ ಭಾರತದ ವಿರುದ್ಧ ಗಂಭೀರ ಆರೋಪ; ಇತ್ತ ಅರುಣಾಚಲದ ಪರ್ವತಕ್ಕೆ ಹೆಸರಿಟ್ಟಿದ್ದಕ್ಕೆ ಚೀನಾದಿಂದ ಕ್ಯಾತೆ

ನಿಜವಾದ ಸತ್ಯ ಎಂದರೆ ಪಾಕಿಸ್ತಾನವೂ ನಮ್ಮ ಜಾಗಕ್ಕೆ ಆಸೆ ಪಡುತ್ತಿದೆ ಹಾಗೂ ನಿರಂತರವಾಗಿ ಭಯೋತ್ಪಾದನೆಯನ್ನು ಬಳಸಿ  ಭಾರತದ ಅವಿಭಾಜ್ಯ ಅಂಗವಾಗಿರುವ ಕಾಶ್ಮೀರದಲ್ಲಿ ಚುನಾವಣೆಗೆ ಅಡ್ಡಿಯುಂಟು ಮಾಡುತ್ತಿದೆ ಎಂದು ಭವಿಕಾ ಮಂಗಳಾನಂದನ್ ಅವರು ಅದೇ ಸಭೆಯಲ್ಲಿ ಪಾಕಿಸ್ತಾನಕ್ಕೆ ತಿರುಗೇಟು ನೀಡಿದ್ದಾರೆ. 1971ರ ಸಮಯದಲ್ಲಿ ನರಹತ್ಯೆ ಮಾಡಿದ ಹಾಗೂ ಈಗ ಅಲ್ಪಸಂಖ್ಯಾತರ ಮೇಲೆ ನಿರಂತರ ದೌರ್ಜನ್ಯ ನಡೆಸುತ್ತಿರುವ ಇತಿಹಾಸ ಹೊಂದಿರುವ ಪಾಕಿಸ್ತಾನ ಅಸಹಿಷ್ಣುತೆಯ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ. ಪಾಕಿಸ್ತಾನ ಏನು ಎಂಬುದು ಇಡೀ ಜಗತ್ತಿಗೆ ಗೊತ್ತು.  ಒಸಾಮಾ ಬಿನ್ ಲಾಡೆನ್‌ಗೆ ದೀರ್ಘಕಾಲದವರೆಗೆ ಆಶ್ರಯ ನೀಡಿದ ದೇಶದ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ವಿಶ್ವದಾದ್ಯಂತ ನಡೆದ ಹಲವು ಭಯೋತ್ಪಾದಕ ಚಟುವಟಿಕೆಗಳಲ್ಲಿ ಈ ದೇಶದ ಬೆರಳಚ್ಚುಗಳಿವೆ ಎಂದು ಭವಿಕಾ ತಿರುಗೇಟು ನೀಡಿದ್ದಾರೆ. ಅಲ್ಲದೇ ಕಾಶ್ಮೀರದ ಬಗ್ಗೆ ಶರೀಫ್ ಮಾತು ಸ್ವೀಕಾರರ್ಹವಲ್ಲ, ಪಾಕಿಸ್ತಾನವೂ ಹಲವು ಸುಳ್ಳುಗಳನ್ನು ಹೇಳಿ ಸತ್ಯವನ್ನು ಮುಚ್ಚಿ ಹಾಕುತ್ತಿದೆ ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನ ಪ್ರಧಾನಿ ಹೇಳಿದ್ದೇನು?
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಪಾಕಿಸ್ತಾನದ ಪ್ರಧಾನಿ, ಭಾರತದ ಜಮ್ಮು ಹಾಗೂ ಕಾಶ್ಮೀರದಲ್ಲಿ ಆರ್ಟಿಕಲ್ 370 ಕಾಯ್ದೆಯನ್ನು ಮರಳಿ ತಂದು ಶಾಂತಿ ನೆಲೆಸುವಂತೆ ಮಾಡಬೇಕು ಎಂದು ಆಗ್ರಹಿಸಿದ್ದಲ್ಲದೇ ಹಿಜ್ಬುಲ್ ಉಗ್ರ ಬುರ್ಹಾನಿ ವಾನಿ ಹತ್ಯೆ ವಿಚಾರವನ್ನು ಪ್ರಸ್ತಾಪ ಮಾಡಿದರು.  ವಿಶ್ವಸಂಸ್ಥೆಯ ಭದ್ರತಾ ನಿರ್ಣಯಗಳು ಮತ್ತು ಕಾಶ್ಮೀರಿ ಜನರ ಇಚ್ಛೆಗೆ ಅನುಸಾರವಾಗಿ ಜಮ್ಮು ಮತ್ತು ಕಾಶ್ಮೀರ ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಲು ಭಾರತವು ಮಾತುಕತೆಗೆ ಪ್ರವೇಶಿಸುವಂತೆ ಅವರು ಹೇಳಿದ್ದರು. 

 

Latest Videos
Follow Us:
Download App:
  • android
  • ios