ಮಧ್ಯಪ್ರದೇಶದ ಪವಿತ್ರ ನಗರಿ ಉಜ್ಜಯಿನಿಯಲ್ಲಿ ಅಚ್ಚರಿ ಘಟನೆ ಬೆಳಕಿಗೆ ಬಂದಿದೆ. ಛತ್ರಿ ಚೌಕ್ ರಸ್ತೆ ಅಗಲೀಕರಣ ಕಾಮಗಾರಿಗಾಗಿ ಸ್ಥಳಾಂತರಿಸಲು ಮುಂದಾಗಿದ್ದ 150 ವರ್ಷಗಳ ಇತಿಹಾಸವಿರುವ ಖಡೆ ಹನುಮಾನ್ (ನಿಂತಿರುವ ಆಂಜನೇಯ) ವಿಗ್ರಹವು ಇಂಚೂ ಕದಲದೆ ಇದ್ದ ಜಾಗದಲ್ಲೇ ಗಟ್ಟಿಯಾಗಿ ನಿಂತಿದೆ. ಈ ಕುರಿತ ಒಂದು ರಿಪೋರ್ಟ್ ಇಲ್ಲಿದೆ.
ಉಜ್ಜಯಿನಿ: ಮಧ್ಯಪ್ರದೇಶದ ಪವಿತ್ರ ನಗರಿ ಉಜ್ಜಯಿನಿಯಲ್ಲಿ ಅಚ್ಚರಿ ಘಟನೆ ಬೆಳಕಿಗೆ ಬಂದಿದೆ. ಛತ್ರಿ ಚೌಕ್ ರಸ್ತೆ ಅಗಲೀಕರಣ ಕಾಮಗಾರಿಗಾಗಿ ಸ್ಥಳಾಂತರಿಸಲು ಮುಂದಾಗಿದ್ದ 150 ವರ್ಷಗಳ ಇತಿಹಾಸವಿರುವ ಖಡೆ ಹನುಮಾನ್ (ನಿಂತಿರುವ ಆಂಜನೇಯ) ವಿಗ್ರಹವು ಇಂಚೂ ಕದಲದೆ ಇದ್ದ ಜಾಗದಲ್ಲೇ ಗಟ್ಟಿಯಾಗಿ ನಿಂತಿದೆ. ಮುನ್ಸಿಪಲ್ ಕಾರ್ಪೊರೇಷನ್ ಸಿಬ್ಬಂದಿ ರಾತ್ರಿಯಿಡೀ ಹರಸಾಹಸ ಪಟ್ಟರೂ ವಿಗ್ರಹ ಅಲುಗಾಡಿಸಲು ಸಾಧ್ಯವಾಗಿಲ್ಲ.
ರಾತ್ರಿಯಿಡೀ ನಡೆಯಿತು ಕಾರ್ಯಾಚರಣೆ
ಉಜ್ಜಯಿನಿಯ ಕಂಠಾಲ್ ಚೌರಾಹಾ (Kanthal Chauraha) ಬಳಿ ಇರುವ ಪುರಾತನ ಖಡೆ ಹನುಮಾನ್ ದೇವಾಲಯವನ್ನು ರಸ್ತೆ ಅಗಲೀಕರಣಕ್ಕಾಗಿ ತೆರವುಗೊಳಿಸಲು ನಿರ್ಧರಿಸಲಾಗಿತ್ತು. ಗುರುವಾರ ರಾತ್ರಿ ಸುಮಾರು 11 ಗಂಟೆಗೆ ಪಾಲಿಕೆ ಸಿಬ್ಬಂದಿ ವಿಗ್ರಹ ಸ್ಥಳಾಂತರ ಕಾರ್ಯಾಚರಣೆ ಆರಂಭಿಸಿದರು. ವಿಗ್ರಹಕ್ಕೆ ಯಾವುದೇ ಹಾನಿಯಾಗದಂತೆ ಪಾಲಿಥಿನ್ ಕವರ್ನಿಂದ ಸುತ್ತಿ ಭದ್ರಪಡಿಸಲಾಗಿತ್ತು. ಆದರೆ ಎಷ್ಟೇ ಪ್ರಯತ್ನಿಸಿದರೂ ವಿಗ್ರಹ ಅಲುಗಾಡಲೇ ಇಲ್ಲ. ಪುರಾತತ್ವ ಇಲಾಖೆಯ (Archaeology Department) ತಜ್ಞರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ಸುತ್ತಲಾಗಿದ್ದ ಪ್ಯಾಕಿಂಗ್ ತೆರವುಗೊಳಿಸಿ, ಮೇಲೊಂದು ಚಾವಣಿ ಹಾಕಿ ವಿಗ್ರಹವನ್ನು ಇದ್ದ ಜಾಗದಲ್ಲೇ ಉಳಿಸಲಾಗಿದೆ.
ಗುಡಿ ತೆರವುಗೊಂಡರೂ ಕದಲದ ಆಂಜನೇಯ
ಹಿಂದೂ ಸಂಘಟನೆಗಳು ಹಾಗೂ ಅರ್ಚಕರ ಸಮ್ಮತಿಯೊಂದಿಗೆ ಈಗಾಗಲೇ ದೇವಾಲಯದ ಗೋಡೆ, ಗುಮ್ಮಟ ಹಾಗೂ ಶಿಖರವನ್ನು ಕೆಡವಿ ರಸ್ತೆಗಾಗಿ ಜಾಗವನ್ನು ತೆರವುಗೊಳಿಸಲಾಗಿದೆ. ಮೈದಾನದಂತಾಗಿರುವ ಜಾಗದಲ್ಲಿ ಹನುಮಂತನ ವಿಗ್ರಹ ಮಾತ್ರ ಗಂಭೀರವಾಗಿ ನಿಂತಿದೆ. ಎಂದಿನಂತೆ ಭಕ್ತರು ಗುರುವಾರ ಸಂಜೆ ಭಜನೆ, ಮಂಗಳಾರತಿ ನೆರವೇರಿಸಿದರು. ನೂರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ಅಧಿಕಾರಿಗಳ ಎಷ್ಟೇ ಪ್ರಯತ್ನಕ್ಕೂ ವಿಗ್ರಹ ಕದಲದಿರುವುದನ್ನು ಕಂಡು ಹನುಮಂತನ ವಿಗ್ರಹವನ್ನು ಸ್ಥಳಾಂತರಿಸದೆ ಇಲ್ಲೇ ಬಿಟ್ಟುಬಿಡಿ ಎಂದು ಸ್ಥಳೀಯ ಭಕ್ತರು ಆಗ್ರಹಿಸುತ್ತಿದ್ದಾರೆ.
ಈ ಖಡೆ ಹನುಮಾನ್ ವಿಗ್ರಹವು ಸುಮಾರು 8 ಅಡಿ ಎತ್ತರವಿದೆ. ಯಾವುದೇ ಬಾಹ್ಯ ಆಸರೆಯಿಲ್ಲದೆ ವಿಗ್ರಹ ನಿಲ್ಲುವಂತೆ ಮಾಡಲು ಅದರ ಕೆಳಭಾಗದ ಕಲ್ಲು ನೆಲದೊಳಗೆ ಸುಮಾರು 4 ರಿಂದ 5 ಅಡಿಗಳಷ್ಟು ಆಳಕ್ಕೆ ಇಳಿದಿದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ವಿಗ್ರಹವನ್ನು ಹೊರತೆಗೆಯಬೇಕಾದರೆ ಅದರ ಸುತ್ತಲೂ ಮತ್ತಷ್ಟು ಆಳವಾಗಿ ಭೂಮಿ ಅಗೆಯಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಂಧಿಯಾ ರಾಜಮನೆತನದ ಕಾಲದಿಂದಲೂ ಈ ದೇವಸ್ಥಾನಕ್ಕೆ ಉಜ್ಜಯಿನಿ ನಗರದೊಂದಿಗೆ ಅವಿನಾಭಾವ ನಂಟು ಇದೆ. ಇಲ್ಲಿಗೆ ಬಂದು 'ಝಾಡಾ' (Jhaada) ಹಾಕಿಸಿಕೊಂಡರೆ ರೋಗ-ರುಜಿನಗಳು ವಾಸಿಯಾಗುತ್ತವೆ ಎಂಬ ಬಲವಾದ ನಂಬಿಕೆ ಜನರಲ್ಲಿದೆ. ಈ ಹಿಂದೆ ಮಹಾಕಾಲ್ ಸವಾರಿ (ಮೆರವಣಿಗೆ) ಕಾರಣಕ್ಕೆ ಜನರ ಭಾವನೆಗಳಿಗೆ ಧಕ್ಕೆಯಾಗಬಾರದು ಎಂದು ವಿಗ್ರಹ ಸ್ಥಳಾಂತರವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಮೆರವಣಿಗೆ ಮುಗಿದ ನಂತರ ಈಗ ತೆರವಿಗೆ ಮುಂದಾಗಿದ್ದರೂ ಮಾರುತಿಯ ವಿಗ್ರಹ ಜಗ್ಗದೇ ನಿಂತಿರುವುದು ಭಕ್ತರಲ್ಲಿ ಅಚ್ಚರಿ ಹಾಗೂ ಭಕ್ತಿಯ ಅಲೆಯನ್ನು ಎಬ್ಬಿಸಿದೆ. ಸದ್ಯಕ್ಕೆ ಎಂದಿನಂತೆ ಪೂಜಾ ಕೈಂಕರ್ಯಗಳು ಮುಂದುವರಿದಿವೆ.


