ಮಧ್ಯಪ್ರದೇಶದ ಶಿವಪುರಿಯಲ್ಲಿ, ಜಲಪಾತದಲ್ಲಿ ಸ್ನಾನ ಮಾಡಿ ಬಂದ 10 ದಿನಗಳ ಬಳಿಕ ಒಂದೇ ಕುಟುಂಬದ ನಾಲ್ವರು ಬಾಲಕರು ಸಾವನ್ನಪ್ಪಿದ್ದಾರೆ. ತೀವ್ರ ಜ್ವರ, ಹೊಟ್ಟೆ ನೋವು ಮತ್ತು ವಾಂತಿಯಿಂದ ಬಳಲುತ್ತಿದ್ದ ಮಕ್ಕಳ ಸಾವಿಗೆ ಜಲಪಾತದ ನೀರೇ ಕಾರಣವಿರಬಹುದೆಂದು ಶಂಕಿಸಲಾಗಿದ್ದು, ಆರೋಗ್ಯ ಇಲಾಖೆ ತನಿಖೆ ನಡೆಸುತ್ತಿದೆ.
ಒಂದೇ ಕುಟುಂಬದ ನಾಲ್ವರು ಮಕ್ಕಳು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಶಿವಪುರಿಯಲ್ಲಿ ನಡೆದಿದೆ. ಮಕ್ಕಳು ಸಾವನ್ನಪ್ಪುವ 10 ದಿನಗಳ ಹಿಂದಷ್ಟೇ ಜಲಪಾತದಲ್ಲಿ ಸ್ನಾನ ಮಾಡಿ ಬಂದಿದ್ದರು, ಆ ಬಳಿಕ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು ಎಂದು ತಿಳಿದು ಬಂದಿದೆ.
ಜಲಪಾತದ ನೀರು ಕಸಿದುಕೊಂಡಿತೇ ನಾಲ್ಕು ಜೀವ? ನಿಗೂಢ ದುರಂತ
ಮೃತರಲ್ಲಿ ಮೂವರು ಸಹೋದರರ ಮಕ್ಕಳಾಗಿದ್ದು, ನಾಲ್ಕನೇ ಬಾಲಕ ಸಂಬಂಧಿಕರ ಮಗ ಎಂದು ತಿಳಿದು ಬಂದಿದೆ. ಆಗಸ್ಟ್ 16ರಂದು ಕುಟುಂಬದ ಸದಸ್ಯರು ಸ್ನಾನ ಮಾಡಲು ಜಲಪಾತಕ್ಕೆ ಹೋಗಿದ್ದರು. ಅಲ್ಲಿಂದ ಹಿಂತಿರುಗಿದ ಬಳಿಕ ಕುಟುಂಬ ಸದಸ್ಯರು ಅಸ್ವಸ್ಥರಾಗಿದ್ದರು. ಆದರೆ ಮಕ್ಕಳ ಸಾವಿಗೆ ಜಲಪಾತದ ನೀರು ಕಾರಣ ಎಂದು ಆರೋಗ್ಯ ಇಲಾಖೆ ಹೇಳಿಲ್ಲ.
ತನ್ವೀರ್ ಅಹ್ಮದ್ ಅವರ ಕುಟುಂಬದ ಸಂಬಂಧಿಕರು ಜಲಪಾತಕ್ಕೆ ಹೋಗಿದ್ದರು. ಕುಟುಂಬದಿಂದ ಸುಮಾರು 16 ಮಂದಿ ಪಿಕ್ ನಿಕ್ಗಾಗಿ ತೆರಳಿದ್ದರು. ಅವರ ಜಲಪಾತದಲ್ಲಿ ಸ್ನಾನ ಮಾಡಿ ಹಿಂದಿರುಗಿದ ಬಳಿಕ ಕುಟುಂಬಸ್ಥರ ಆರೋಗ್ಯದಲ್ಲಿ ಅನಾರೋಗ್ಯದ ಸಮಸ್ಯೆ ಕಂಡು ಬಂದಿತ್ತು.
ಕುಟುಂಬ ಸದಸ್ಯರು ಹೇಳುವಂತೆ, ಮಕ್ಕಳಿಗೆ ತೀವ್ರ ಜ್ವರ, ಹೊಟ್ಟೆ ನೋವು, ವಾಂತಿ ಮತ್ತು ಅತಿಸಾರ ಕಂಡು ಬಂದಿತ್ತು. ಕೂಡಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದೇವು. ಆದರೆ ನಾಲ್ವರು ಮಕ್ಕಳನ್ನು ಉಳಿಸಿಕೊಳ್ಳಲು ಆಗಲಿಲ್ಲ. 14 ವರ್ಷದ ಬಾಲಕನ ಸ್ಥಿತಿ ಮೊದಲು ಹದಗೆಟ್ಟಿತ್ತು. 19 ವರ್ಷದ ಆಯಾಜ್ ಮತ್ತು ಅವರ ಕುಟುಂಬ ಇತರ ಮಕ್ಕಳು ತೀವ್ರ ಅಸ್ವಸ್ಥರಾಗಿದ್ದರು. ಒಬ್ಬರ ನಂತರ ನಾಲ್ವರು ಮಕ್ಕಳು ಸಾವನ್ನಪ್ಪಿದ್ದು, ಕುಟುಂಬಸ್ಥರಿಗೆ ತೀವ್ರ ಆಘಾತವನ್ನು ಉಂಟು ಮಾಡಿದೆ.
ಒಂದೇ ಕುಟುಂಬ ನಾಲ್ವರು ಸಾವನ್ನಪ್ಪಿದ ಬಳಿಕ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ಸ್ಥಳೀಯರಿಗೆ ಎಚ್ಚರಿಕೆ ನೀಡಿದ್ದು, ಕೆಲವು ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದೆ. ಮೃತ ಮಕ್ಕಳು ಮತ್ತು ಕುಟುಂಬಸ್ಥರ ಅನಾರೋಗ್ಯದ ಹಿಂದಿನ ಕಾರಣಗಳ್ನು ಸಹ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಜಿಲ್ಲಾಧಿಕಾರಿ ದಿನೇಶ್ ಚಂದ್ ಶುಕ್ಲಾ ಮಾತನಾಡಿ, ಜಲಪಾತಕ್ಕೆ ಭೇಟಿ ನೀಡಿದ್ದ 62 ಮಂದಿಯ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಮಕ್ಕಳಿಗೆ ಜ್ವರ ಬಂದ ನಂತರ ಸಾವನ್ನಪ್ಪಿದ್ದು, ಈ ಬಗ್ಗೆ ವೈದ್ಯರ ತಂಡ ಪರಿಶೀಲನೆ ನಡೆಸುತ್ತಿದೆ. ಸಂತ್ರಸ್ತ ಕುಟುಂಬಕ್ಕೆ ಸರ್ಕಾರದಿಂದ ಆರ್ಥಿಕ ನೆರವು ಕೊಡಿಸುವ ಕೆಲಸ ಆಗಲಿದೆ. ಕುಟುಂಬದಲ್ಲಿ ಇನ್ನು ಮೂವರು ಬಾಲಕಿಯರಿಗೆ ಅನಾರೋಗ್ಯ ಇದ್ದು, ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ಕೆಲಸ ಆಗಲಿದೆ ಎಂದು ಹೇಳಿದ್ದಾರೆ.


