ಸಿಎಂ ಜೊಸೆಫ್ ವಿಜಯ್ ಹಲವು ಸವಾಲು ಎದುರಿಸಿ ತಮಿಳಿನಾಡಿನಲ್ಲಿ ಆಡಳಿತ ನಡೆಸುತ್ತಿದ್ದಾರೆ. ಇದೀಗ ಮೈತ್ರಿ ಪಕ್ಷ ಕಾಂಗ್ರೆಸ್ ಮೊದಲ ಶಾಕ್ ಕೊಟ್ಟಿದೆ. ವಿಜಯ್ ಸರ್ಕಾರದ ಕಾಂಗ್ರೆಸ್ ಸಚಿವರು ರಾಜೀನಾಮೆ ಎಚ್ಚರಿಕೆ ನೀಡಿದ್ದಾರೆ.

ಚೆನ್ನೈ (ಆ.31) ತಮಿಳುನಾಡು ಸಿಎಂ ಜೊಸೆಫ್ ವಿಜಯ್‌ಗೆ ಇದೀಗ ಸರ್ಕಾರ ಮುನ್ನಡೆಸುವ ಸಂಕಷ್ಟಗಳು ಹೆಚ್ಚಾಗುತ್ತಿದೆ. ಕಾಂಗೆಸ್ ಬೆಂಬಲದೊಂದಿಗೆ ಸರ್ಕಾರ ರಚಿಸಿರುವ ಟಿವಿಕೆಗೆ ಇದೀಗ ಕಸಿವಿಸಿ ಶುರುವಾಗಿದೆ. ಸಿಎಂ ವಿಜಯ್‌ಗೆ ನೇರ ಎಚ್ಚರಿಕೆ ನೀಡಲಾಗಿದೆ. ತಮಿಳುನಾಡು ಟಿವಿಕೆ ಸರ್ಕಾರದಲ್ಲಿರುವ ಕಾಂಗ್ರೆಸ್‌ನ ಎಲ್ಲಾ ಮಂತ್ರಿಗಳು ರಾಜೀನಾಮೆ ನೀಡುವ ಎಚ್ಚರಿಕೆಯನ್ನು ನೀಡಲಾಗಿದೆ. ಸಿಎಂ ಜೊಸೆಫ್ ವಿಜಯ್ ಹಾಗೂ ಟಿವಿಕೆ ಸರ್ಕಾರ ಇಕ್ಕಟ್ಟಿನಲ್ಲಿ ಸಿಲುಕಿದೆ. ಇದರ ಬೆನ್ನಲ್ಲೇ ಮೈತ್ರಿ ಪಕ್ಷಗಳ ನಡುವಿನ ಒಡಕು ಸರ್ಕಾರ ಪತನಕ್ಕೆ ಕಾರಣಾಗುತ್ತಾ ಅನ್ನೋ ಚರ್ಚೆಗಳು ಶುರುವಾಗಿದೆ.

ಪ್ರವಾಸೋದ್ಯಮ ಸಚಿವ ರಾಜೇಶ್ ಕುಮಾರ್ ವಾರ್ನಿಂಗ್

ತಮಿಳುನಾಡು ಟಿವಿಕೆ ಸರ್ಕಾರದಲ್ಲಿ ಪ್ರವಾಸೋದ್ಯಮ ಸಚಿವರಾಗಿರುವ ಕಾಂಗ್ರೆಸ್ ನಾಯಕ ಎಸ್ ರಾಜೇಶ್ ಕುಮಾರ್ ನೇರವಾಗಿ ಸಿಎಂ ವಿಜಯ್‌ಗೆ ವಾರ್ನಿಂಗ್ ನೀಡಿದ್ದಾರೆ. 2029ರ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಮೈತ್ರಿ ಪಕ್ಷಗಳು ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲು ಆಸಕ್ತಿ ತೋರಿದೆ. ಆದರೆ ಟಿವಿಕೆ ಹಿಂದೇಟು ಹಾಕುತ್ತಿದೆ. ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಒಪ್ಪಿಕೊಳ್ಳದಿದ್ದರೆ, ಟಿವಿಕೆ ಸರ್ಕಾರದಲ್ಲಿರುವ ಎಲ್ಲಾ ಕಾಂಗ್ರೆಸ್ ಸಚಿವರು ರಾಜೀನಾಮೆ ನೀಡುವುದಾಗಿ ಎಚ್ಚರಿಸಿದ್ದಾರೆ.

ಕನ್ಯಾಕುಮಾರಿ ಕಾಂಗ್ರೆಸ್ ಸಮಿತಿ ಭಾಷಣದಲ್ಲಿ ಎಚ್ಚರಿಕೆ

ಕನ್ಯಾಕುಮಾರಿಯಲ್ಲಿ ನಡೆದ ಕಾಂಗ್ರೆಸ್ ಸಮಿತಿಯಲ್ಲಿ ಪಾಲ್ಗೊಂಡು ಪ್ರವಾಸೋದ್ಯಮ ಸಚಿವ ಎಸ್ ರಾಜೇಶ್ ಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. 2029ರ ಲೋಕಸಭಾ ಚುನಾವಣೆಗೆ ಟಿವಿಕೆ ಕಾರ್ಯಕರ್ತರು, ನಾಯಕರು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಟಿವಿಕೆ ನಾಯಕರು ಹಾಗೂ ಕಾರ್ಯಕರ್ತರು 2029ರ ಚುನಾವಣೆಗೆ ಜೊಸೆಫ್ ವಿಜಯ್ ಪ್ರಧಾನಿ ಅಭ್ಯರ್ಥಿ ಎಂದು ಹೇಳಿಕೆ ನೀಡುತ್ತಿದ್ದಾರೆ. ಆದರೆ ಇಂಡಿಯಾ ಒಕ್ಕೂಟದ ಬಹುತೇಕ ಪಕ್ಷಗಳು ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಒಪ್ಪಿಕೊಂಡಿದೆ. ಟಿವಿಕೆ ಒಪ್ಪಿಕೊಳ್ಳದಿದ್ದರೆ ರಾಜೀನಾಮೆ ನೀಡಿ ಸರ್ಕಾರದಿಂದ ಹೊರಬರುತ್ತೇವೆ ಎಂದಿದ್ದಾರೆ. ಈ ಮೂಲಕ ಪರೋಕ್ಷವಾಗಿ ಸರ್ಕಾರವನ್ನೇ ಉರುಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಟಿವಿಕೆ ನಾಯಕರು ಪದೇ ಪದೇ ಕೆಲ ಸರ್ವೆಗಳನ್ನು ಮುಂದಿಟ್ಟುಕೊಂಡು ಪ್ರಧಾನಿ ಅಭ್ಯರ್ಥಿ ಕುರಿತು ಗೊಂದಲ ಹೇಳಿಕೆ ನೀಡುತ್ತಿದ್ದಾರೆ. ಆದರೆ ರಾಹುಲ್ ಗಾಂಧಿ ಮುಂದಿನ ಪ್ರಧಾನಿ ಅಭ್ಯರ್ಥಿ, ಇದರಲ್ಲಿ ಅನುಮಾನ ಗೊಂದಲಗಳಿಲ್ಲ. ಟಿವಿಕೆ ಅಂಗೀಕರಿಸಬೇಕು. ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡಲು ಕೆಲಸ ಮಾಡಬೇಕು ಎಂದು ಸೂಚಿಸಿದ್ದಾರೆ.

ತಮಿಳುನಾಡಿನಲ್ಲಿ 108 ಸ್ಥಾನ ಗೆದ್ದು ಸರ್ಕಾರ ರಚಿಸಿರುವ ವಿಜಯ್ ಜೊಸೆಫ್ ಇದೀಗ ಮೈತ್ರಿ ಪಕ್ಷ ಅದರಲ್ಲೂ ಕಾಂಗ್ರೆಸ್‌ನಿಂದ ಮುಜುಗುರ ಸೃಷ್ಟಿಯಾಗುತ್ತಿದೆ. ಬಹಿರಂಗ ಹೇಳಿಕೆಗಳಿಂದ ಟಿವಿಕೆ ಸರ್ಕಾರಕ್ಕೂ ಹಿನ್ನಡೆಯಾಗುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.