- Home
- Karnataka Districts
- Bengaluru Urban
- ಬೆಂಗಳೂರಿನಿಂದ 31 ಅಕ್ರಮ ಬಾಂಗ್ಲಾ ಪ್ರಜೆಗಳ ಗಡಿಪಾರು: ಎಸ್ಎಂವಿಟಿ ರೈಲು ಮೂಲಕ ಪ.ಬಂಗಾಳ ಗಡಿಗೆ ಸ್ಥಳಾಂತರ!
ಬೆಂಗಳೂರಿನಿಂದ 31 ಅಕ್ರಮ ಬಾಂಗ್ಲಾ ಪ್ರಜೆಗಳ ಗಡಿಪಾರು: ಎಸ್ಎಂವಿಟಿ ರೈಲು ಮೂಲಕ ಪ.ಬಂಗಾಳ ಗಡಿಗೆ ಸ್ಥಳಾಂತರ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ 31 ಬಾಂಗ್ಲಾದೇಶಿ ಪ್ರಜೆಗಳನ್ನು 'ಆಪರೇಷನ್ ಮುಕ್ತ' ಕಾರ್ಯಾಚರಣೆಯಡಿ ಪೊಲೀಸರು ಗಡಿಪಾರು ಮಾಡಿದ್ದಾರೆ. ಅವರನ್ನು ರೈಲಿನ ಮೂಲಕ ಪಶ್ಚಿಮ ಬಂಗಾಳದ ಬಾಂಗ್ಲಾ ಗಡಿಗೆ ಕಳುಹಿಸಲಾಗಿದೆ.

ಬೆಂಗಳೂರು (ಆ.31): ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ವಿರುದ್ಧ ಪೊಲೀಸ್ ಇಲಾಖೆ ಕಾರ್ಯಾಚರಣೆ ತೀವ್ರಗೊಳಿಸಿದೆ. ಇದರ ಭಾಗವಾಗಿ ಬೆಂಗಳೂರಿನ ವಿವಿಧ 10 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬಂಧಿಸಲ್ಪಟ್ಟಿದ್ದ ಒಟ್ಟು 31 ಅಕ್ರಮ ಬಾಂಗ್ಲಾದೇಶಿ ಪ್ರಜೆಗಳನ್ನು ಇಂದು ಬೆಳಗಿನ ಜಾವ ಕಟ್ಟುನಿಟ್ಟಿನ ಪೊಲೀಸ್ ಭದ್ರತೆಯಲ್ಲಿ ಗಡಿಪಾರು ಮಾಡಲಾಗಿದೆ.
ರೈಲು ಮೂಲಕ ಬಾಂಗ್ಲಾ ಗಡಿಗೆ ಸ್ಥಳಾಂತರ:
ಬೆಂಗಳೂರಿನ ಎಸ್ಎಂವಿಟಿ (SMVT) ರೈಲ್ವೆ ಟರ್ಮಿನಲ್ ಮೂಲಕ ಸುಮಾರು 20ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳ ಬಿಗಿ ಭದ್ರತೆಯಲ್ಲಿ ಈ 31 ಅಕ್ರಮ ವಲಸಿಗರನ್ನು ಕರೆದೊಯ್ಯಲಾಗುತ್ತಿದೆ. ನಾಳೆ ಸಂಜೆ 5 ಗಂಟೆಗೆ ಈ ಪೊಲೀಸರ ತಂಡ ಬಾಂಗ್ಲಾದೇಶದ ಗಡಿಗೆ ಹೊಂದಿಕೊಂಡಿರುವ ಪಶ್ಚಿಮ ಬಂಗಾಳದ ಮಾಲ್ಡಾ ತಲುಪಲಿದೆ.
ಕೇವಲ ರಾಜ್ಯದ ಗಡಿಯಿಂದ ಹೊರಹಾಕಿದರೆ ಇವರು ಪುನಃ ಬೆಂಗಳೂರಿಗೆ ಬಂದು ಸೇರಿಕೊಳ್ಳಬಹುದು ಎಂಬ ಕಾರಣಕ್ಕೆ, ಪೊಲೀಸರು ನೇರವಾಗಿ ಬಾಂಗ್ಲಾದೇಶದ ಗಡಿ ಭಾಗದವರೆಗೆ ಬಿಟ್ಟುಬರಲು ಮುಂದಾಗಿದ್ದಾರೆ. ಕಳೆದ ತಿಂಗಳು 'ಆಪರೇಷನ್ ಮುಕ್ತ' ಕಾರ್ಯಾಚರಣೆ ಆರಂಭಿಸಿದ್ದ ರಾಜ್ಯ ಪೊಲೀಸ್ ಇಲಾಖೆ, 105 ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆ ಹಚ್ಚಿತ್ತು. ಸದ್ಯ ಮೊದಲ ಹಂತದಲ್ಲಿ 31 ಜನರನ್ನು ಗಡಿಪಾರು ಮಾಡಲಾಗುತ್ತಿದೆ.
ವಿಪಕ್ಷ ನಾಯಕ ಆರ್. ಅಶೋಕ್ ಗಂಭೀರ ಆರೋಪ:
ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಹಾವಳಿ ಹೆಚ್ಚುತ್ತಿರುವ ಕುರಿತು ವಿಪಕ್ಷ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಬೆಂಗಳೂರು ನಗರ ಒಂದರಲ್ಲೇ ಸುಮಾರು 2 ಲಕ್ಷಕ್ಕೂ ಅಧಿಕ ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿರುವ ಶಂಕೆ ವ್ಯಕ್ತಪಡಿಸಿದ್ದರು. ಓಲೈಕೆ ರಾಜಕಾರಣಕ್ಕಾಗಿ ರಾಜ್ಯದ ಹಿತವನ್ನು ಬಲಿಕೊಡದೆ, ಅಕ್ರಮ ವಲಸಿಗರ ಪತ್ತೆ ಮತ್ತು ಗಡೀಪಾರಿಗೆ ತಕ್ಷಣವೇ 'ವಿಶೇಷ ಟಾಸ್ಕ್ ಫೋರ್ಸ್' ರಚನೆ ಮಾಡಬೇಕು ಎಂದು ಆರ್. ಅಶೋಕ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದರು.
ಕಳೆದೊಂದು ಕೆಲವು ತಿಂಗಳಿಂದ ಬೆಂಗಳೂರು ಪೊಲೀಸರು ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ನೂರಾರು ಶಂಕಿತ ಬಾಂಗ್ಲಾ ಪ್ರಜೆಗಳನ್ನು ವಶಕ್ಕೆ ಪಡೆಯಲಾಗಿದೆ. ನಕಲಿ ಆಧಾರ್ ಕಾರ್ಡ್, ಪಾಸ್ಪೋರ್ಟ್ ಬಳಸಿಕೊಂಡು ಮಾನವ ಕಳ್ಳಸಾಗಣೆಯಂತಹ ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿರುವ ಇವರು, ಧೈರ್ಯವಾಗಿ ನ್ಯಾಯಾಲಯದಲ್ಲಿ ಜಾಮೀನು ಕೋರುತ್ತಿರುವುದು ಅತ್ಯಂತ ಆಘಾತಕಾರಿ ಬೆಳವಣಿಗೆಯಾಗಿದೆ ಎಂದು ಆಶೋಕ್ ಆತಂಕ ವ್ಯಕ್ತಪಡಿಸಿದ್ದರು.

