ವಿಟಮಿನ್ ಬಿ12 ಕೊರತೆಯು ಆಯಾಸ, ನೆನಪಿನ ಶಕ್ತಿ ನಷ್ಟದಂತಹ ಹಲವು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಮಾತ್ರೆಗಳ ಬದಲು, ಅಡ್ಡಪರಿಣಾಮಗಳಿಲ್ಲದ ಮನೆಮದ್ದನ್ನು ಬಳಸುವುದು ಉತ್ತಮ. ಕಲ್ಲಂಗಡಿ ಬೀಜ, ಜೀರಿಗೆ, ಪುದೀನಾ ಬಳಸಿ ಮಾಡುವ ಪಾನೀಯವು ಈ ಕೊರತೆಯನ್ನು ನೀಗಿಸಲು ಸಹಕಾರಿ.
ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಕೇಳಿಬರ್ತಿರೋದು ವಿಟಮಿನ್ ಬಿ12 ಕೊರತೆ. ಇಷ್ಟು ವರ್ಷ ಇಲ್ಲದ್ದು ದಿಢೀರ್ ಎಂದು ಏಕೆ ಇಷ್ಟೊಂದು ಫೇಮಸ್ ಆಯಿತು ಎಂದರೆ ಅದಕ್ಕೆ ಕಾರಣ ಸೋಷಿಯಲ್ ಮೀಡಿಯಾ. ಬಿ-12 ಸಮಸ್ಯೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿನಿಂದ ಹಿಡಿದು ದೊಡ್ಡವರವರೆಗೂ ಕಾಮನ್ ಆಗಿಬಿಟ್ಟಿದೆ. ಆಯಾಸ, ದೌರ್ಬಲ್ಯ, ಕೈ-ಕಾಲುಗಳಲ್ಲಿ ಮರಗಟ್ಟುವಿಕೆ, ಜುಮ್ಮೆನಿಸುವಿಕೆ, ನಾಲಿಗೆಯ ಮೃದುತ್ವ, ನೆನಪಿನ ಶಕ್ತಿ ನಷ್ಟ, ಖಿನ್ನತೆ ಮತ್ತು ರಕ್ತಹೀನತೆ.. ಹೀಗೆ ಹಲವಾರು ಸಮಸ್ಯೆಗಳಿಗೆ ಬೇರೆ ಬೇರೆ ಕಾರಣ ಇದ್ದರೂ ಮುಖ್ಯವಾಗಿ ಇರುವುದು ಬಿ12 ಸಮಸ್ಯೆ. ಇದು ನರಮಂಡಲದ ಕಾರ್ಯನಿರ್ವಹಣೆ ಮತ್ತು ಕೆಂಪು ರಕ್ತ ಕಣಗಳ ಉತ್ಪಾದನೆಗೆ ಅತ್ಯಗತ್ಯ. 100ರಲ್ಲಿ 80 ಜನಕ್ಕೆ ಇರುತ್ತದೆ.
ಏನೇನು ಸಮಸ್ಯೆ?
ಇದು ಮನಸ್ಸಿನ ಮೇಲೂ ಪರಿಣಾಮ ಬೀರುತ್ತದೆ. ಖಿನ್ನತೆ, ಕಿರಿಕಿರಿ, ನೆನಪಿನ ಶಕ್ತಿ ಕಡಿಮೆ ಮತ್ತು ಬುದ್ಧಿಮಾಂದ್ಯತೆಯೂ ಇದರಿಂದ ಉಂಟಾಗುತ್ತದೆ ಎನ್ನುತ್ತಾರೆ ತಜ್ಞರು. ಮಾತ್ರವಲ್ಲದೇ ಹಸಿವು ಕಡಿಮೆಯಾಗುವುದು, ಮಲಬದ್ಧತೆ, ಗ್ಯಾಸ್ಟ್ರಿಕ್ ಸಮಸ್ಯೆ, ಅತಿಸಾರದಂಥ ಸಮಸ್ಯೆಗಳು ಮಾತ್ರವಲ್ಲದೇ, ದೃಷ್ಟಿ ದೋಷವೂ ಉಂಟಾಗುತ್ತದೆ ಎನ್ನಲಾಗಿದೆ. ಅದರಲ್ಲಿಯೂ ಬಿ 12 ಸಮಸ್ಯೆ ಮಾಂಸಾಹಾರಿಗಳಿಗಿಂತಲೂ ಹೆಚ್ಚಾಗಿ ಸಸ್ಯಾಹಾರಿಗಳಲ್ಲಿ ಕಂಡು ಬರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಇದಕ್ಕೆ ಕಾರಣ, ಬಿ12 ಪ್ರಾಣಿ ಆಧರಿತ ಉತ್ಪನ್ನಗಳಲ್ಲಿ ಮಾತ್ರ ಲಭ್ಯವಿದೆ ಎನ್ನುವುದು. ಆದರೆ ಆಹಾರ ಪದ್ಧತಿ ಏನೇ ಇದ್ದರೂ, ಈ ಸಮಸ್ಯೆ ಇದೀಗ ಎಲ್ಲರನ್ನೂ ಕಾಡುತ್ತಿದೆ. ಇದಕ್ಕೆ ಮಾತ್ರೆಗಳು, ಇಂಜೆಕ್ಷನ್ಗಳು ಎಲ್ಲವೂ ಲಭ್ಯ ಇರುವುದು ನಿಜವಾದರೂ, ಅವುಗಳಿಂದ ಸೈಡ್ ಎಫೆಕ್ಟ್ ಮಾತ್ರ ಅಲ್ಲಗಳೆಯುವಂತಿಲ್ಲ.
ಮಾತ್ರೆ ತಿಂದರೆ ಅಪಾಯ
ಅಷ್ಟಕ್ಕೂ, ಇಷ್ಟೊಂದು ಭಾರಿ ಪ್ರಮಾಣದಲ್ಲಿ ಅನಾರೋಗ್ಯ ತರುವ ಸಮಸ್ಯೆ ಎಂದೊಡನೆ ಅದಕ್ಕೆ ಓಡಿ ಹೋಗಿ ಯಾವುದೋ ಮಾತ್ರೆ ನುಂಗಿದರೆ, ಅದರಿಂದ ಮತ್ತೊಂದು ಸಮಸ್ಯೆ ಉಂಟಾಗಬಹುದು. ಈಗ ಸಾಮಾನ್ಯವಾಗಿ ಯಾವುದೇ ರಕ್ತ ಪರೀಕ್ಷೆಗೆ ಹೋದರೂ ಹೆಚ್ಚಿನ ಜನರಲ್ಲಿ ಬಿ-12 ಸಮಸ್ಯೆ ಇದೆ ಎಂದೇ ವರದಿ ಬರುತ್ತದೆ. ಆದರೆ, ಇವುಗಳಿಗೆ ಮನೆಯಲ್ಲಿಯೇ ಸುಲಭದ ಪರಿಹಾರವೂ ಇದೆ ಎನ್ನುವುದೂ ಸುಳ್ಳಲ್ಲ. ಸೋಷಿಯಲ್ ಮೀಡಿಯಾದಲ್ಲಿ ಲೈಕ್ಸ್, ವ್ಯೂವ್ಸ್ಗಾಗಿ ಬಿ 12 ಬಗ್ಗೆ ಮಾಡುವ ವಿಡಿಯೋಗಳ ಸಂಖ್ಯೆ ಹೆಚ್ಚುತ್ತಿದೆ. ಅವುಗಳ ಸತ್ಯಾಸತ್ಯತೆಯನ್ನು ಪರೀಕ್ಷಿಸುವುದೂ ಅಷ್ಟೇ ಮುಖ್ಯವಾಗುತ್ತದೆ.
ಮನೆ ಮದ್ದು
ಆದ್ದರಿಂದ ಸ್ಟಾರ್ ಸುವರ್ಣದಲ್ಲಿ ಖ್ಯಾತ ಆಯುರ್ವೇದ ವೈದ್ಯೆಯಾಗಿರುವ ಡಾ. ಗೌರಿ ಅಮ್ಮ ಅವರು ಸುಲಭದ ಔಷಧವನ್ನು ಹೇಳಿಕೊಟ್ಟಿದ್ದಾರೆ. ಇದನ್ನು ಮನೆಯಲ್ಲಿಯೇ ಮಾಡಿಕೊಂಡರೆ ಯಾವುದೇ ಸೈಡ್ ಎಫೆಕ್ಟ್ ಇಲ್ಲದೇ ಬಿ 12 ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದಾಗಿದೆ. ಇದಕ್ಕೆ ಬೇಕಾಗಿರುವುದು ಕಲ್ಲಂಗಡಿ ಹಣ್ಣಿನ ಬೀಜ ಒಂದು ಬಟ್ಟಲು, ಸ್ವಲ್ಪ ಜೀರಿಗೆ, ಸ್ವಲ್ಪ ಪುದೀನಾ ಸೊಪ್ಪು, ಸ್ವಲ್ಪ ಕೊತ್ತಂಬರಿ ಸೊಪ್ಪು, ಚಿಟಿಕೆ ಉಪ್ಪು.
ಮಾಡುವ ವಿಧಾನ: ಕಲ್ಲಂಗಡಿ ಹಣ್ಣಿನ ಬೀಜವನ್ನು ರಾತ್ರಿಯೇ ನೆನೆಸಿಟ್ಟುಕೊಳ್ಳಬೇಕು. ಅದಕ್ಕೆ ಪುದೀನಾ, ಕೊತ್ತಂಬರಿ ಮತ್ತು ಜೀರಿಗೆ ಹಾಕಿ ರುಬ್ಬಿಕೊಂಡು ಅದನ್ನು ಶೋಧಿಸಿಕೊಳ್ಳಬೇಕು. ಚಿಟಿಕೆ ಉಪ್ಪು ಹಾಕಬೇಕು. ಇದನ್ನು ಕುಡಿದರೆ ಆಯ್ತು.


