- Home
- Karnataka Districts
- Belagavi: ಗಣೇಶ ಮೂರ್ತಿ ಹೊತ್ತು ನಡೆದ ಜಿಲ್ಲಾಧಿಕಾರಿ; ಮೊಹಮ್ಮದ್ ರೋಷನ್ರಿಂದ ಸೌಹಾರ್ದ ಸಂದೇಶ
Belagavi: ಗಣೇಶ ಮೂರ್ತಿ ಹೊತ್ತು ನಡೆದ ಜಿಲ್ಲಾಧಿಕಾರಿ; ಮೊಹಮ್ಮದ್ ರೋಷನ್ರಿಂದ ಸೌಹಾರ್ದ ಸಂದೇಶ
ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಮ್ಮ ಮನೆ ಮತ್ತು ಕಚೇರಿಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ಪರಿಸರ ಸ್ನೇಹಿ ಗಣೇಶನ ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ಅವರು ಭಾವೈಕ್ಯತೆ ಮತ್ತು ಸೌಹಾರ್ದತೆಯ ಸಂದೇಶವನ್ನು ಸಾರಿದರು.

ಬೆಳಗಾವಿ ಡಿಸಿ ಕಚೇರಿಯಲ್ಲಿ ವಿಘ್ನ ನಿವಾರಕನ ದರ್ಶನ!
ಬೆಳಗಾವಿ: ನಾಡಿನಾದ್ಯಂತ ಗೌರಿ-ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. ಬೆಳಗಾವಿಯಲ್ಲೂ ಅದ್ದೂರಿಯಾಗಿ ಹಬ್ಬದ ಆಚರಣೆ ಮಾಡಲಾಗಿದ್ದು, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಗಣೇಶ ಪ್ರತಿಷ್ಠಾಪಿಸಿ ಭಾವೈಕ್ಯತೆ ಸಂದೇಶ ಸಾರಿದ್ದಾರೆ.
ಸೌಹಾರ್ದ ಸಂದೇಶ ಸಾರಿದ ಜಿಲ್ಲಾಧಿಕಾರಿ
ಬೆಳಗಾವಿ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಅವರು ತಮ್ಮ ಮನೆ ಮತ್ತು ಕಚೇರಿಯಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಿ ಅದ್ದೂರಿಯಾಗಿ ಪೂಜೆ ಸಲ್ಲಿಸಿದರು. ಆ ಮೂಲಕ ಜನರಿಗೆ ಸೌಹಾರ್ದ ಸಂದೇಶ ಸಾರಿದರು.
ಪರಿಸರ ಸ್ನೇಹಿ ಗಣೇಶನಿಗೆ ಭಕ್ತಿ ನಮನ ಸಲ್ಲಿಕೆ
ಬೆಳಗಾವಿ ಚೆನ್ನಮ್ಮ ವೃತ್ತದ ಗಣೇಶ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಜಿಲ್ಲಾಧಿಕಾರಿಗಳು, ಬಳಿಕ ಗಣೇಶ ಮೂರ್ತಿ ಹೊತ್ತು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಅದರಲ್ಲಿಯೂ ಪರಿಸರ ಸ್ನೇಹಿ ಗಣೇಶನಿಗೆ ಭಕ್ತಿ ನಮನ ಸಲ್ಲಿಕೆ ಮಾಡಿದರು.
ಆರತಿ ಬೆಳಗಿ ವಿಶೇಷ ಪೂಜೆ
ಜಿಲ್ಲಾಡಳಿತ ಸಿಬ್ಬಂದಿಯೂ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಆರತಿ ಬೆಳಗಿ ವಿಘ್ನ ವಿನಾಶಕನನ್ನು ಬರಮಾಡಿಕೊಂಡ ಜಿಲ್ಲಾಧಿಕಾರಿ, ಚೆನ್ನಮ್ಮ ವೃತ್ತದಿಂದ ಡಿಸಿ ಕಚೇರಿವರೆಗೆ ಗಣೇಶನನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿದರು.
ವಿನ್ಯಾಸಗಳಲ್ಲಿ ಕಂಗೊಳಿಸುತ್ತಿರುವ ಗಣೇಶ ಮೂರ್ತಿಗಳು
ಬೆಳಗಾವಿಯ ಹಲವು ಕಡೆ ಗಣೇಶ ಹಬ್ಬದ ಸಂಭ್ರಮಾಚರಣೆ ಜೋರಾಗಿತ್ತು. ವಿಶೇಷ ಪೂಜೆ ಮಾಡೋ ಮೂಲಕ ಭಕ್ತರು ಗಣೇಶ ಬರಮಾಡಿಕೊಂಡರು. ನಗರ ಹಲವು ಗಲ್ಲಿ ಗಲ್ಲಿಯಲ್ಲಿ ವಿವಿಧ ಆಕಾರ, ವಿನ್ಯಾಸಗಳಲ್ಲಿ ಕಂಗೊಳಿಸುತ್ತಿರುವ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ವಿಶೇಷ ಪೂಜೆ ನೆರವೇರಿಸಿದ್ದರು.
ಜಿಲ್ಲೆಯಾದ್ಯಂತ ಸಂಭ್ರಮದ ವಾತಾವರಣ
ಮನೆ, ಬಡಾವಣೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಗಣೇಶ ಮೂರ್ತಿಗಳ ದರ್ಶನಕ್ಕೆ ಭಕ್ತರ ದಂಡು ಹರಿದು ಬಂದಿತ್ತು. ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಗಣೇಶೋತ್ಸವಕ್ಕಾಗಿ ವಿವಿಧ ಸಂಘಟನೆಗಳಿಂದ ವಿದ್ಯುತ್ ದೀಪಾಲಂಕಾರ, ಅಲಂಕಾರಗಳಿಂದ ಗಣೇಶ ಪೆಂಡಾಲ್ ಗಳು ಕಂಗೊಳಿಸುತ್ತಿದ್ದವು. ಭಕ್ತಿಯಿಂದ ವಿಘ್ನ ನಿವಾರಕ ಗಣೇಶನ ಆರಾಧನೆ ನಡೆಯಿತು.

