Asianet Suvarna News Asianet Suvarna News

Chanakya Niti: ಇದೆಲ್ಲ ಹಣದಿಂದ ಸಿಗೋಲ್ಲ, ಆದರೂ ತುಂಬಾ ಇಂಪಾರ್ಟೆಂಟು ಅಂತಾನೆ ಚಾಣಕ್ಯ

ಚಾಣಕ್ಯ ನೀತಿ ಜಗತ್ತಿನ ಮೊದಮೊದಲ ಗ್ರಂಥಗಳಲ್ಲಿ ಒಂದು. ಇದು ಬದುಕಿನ ಅನೇಕ ರಹಸ್ಯಗಳನ್ನು ತಿಳಿಸುತ್ತದೆ. ಹಾಗೆಯೇ ನಾವು ಬದುಕಬೇಕಾದ ರೀತಿನೀತಿಗಳನ್ನು ಮುಂದಿಡುತ್ತದೆ. ದಾಂಪತ್ಯದಿಂದ ಹಣಕಾಸಿನವರೆಗೆ ಅನೇಕ ಸೂತ್ರಗಳಿವೆ ಅದರಲ್ಲಿ. ಅವುಗಳಲ್ಲಿ, ಹಣಕಾಸಿನಿಂದ ದೊರೆಯದ, ಆದರೆ ಬದುಕಿನಲ್ಲಿ ಮುಖ್ಯವಾದ ವಿಷಯಗಳು ಇಂತಿವೆ.

 

These are important in life but cant get by money says chanakya niti bni
Author
First Published Sep 3, 2024, 8:27 PM IST | Last Updated Sep 4, 2024, 8:55 AM IST

ಆಚಾರ್ಯ ಚಾಣಕ್ಯರ ಪ್ರಕಾರ ಅನೇಕ ವಿಷಯಗಳು ಬದುಕಿನಲ್ಲಿ ಹಣಕಾಸಿನಿಂದ ಸಿಗುವಂಥವಲ್ಲ. ಆದರೆ ಅವು ತುಂಬಾ ಮುಖ್ಯ. ಇವುಗಳನ್ನು ಪಡೆಯಲು ಹಣಕಾಸು ಸಹಾಯ ಮಾಡುವುದಿಲ್ಲ. ಮತ್ತು ಇವುಗಳಿಂದ ದೊರೆಯುವ ಆನಂದ ಹಣದಿಂದ ಸಿಗುವಂಥದೂ ಅಲ್ಲ! ಇದನ್ನು ಅರ್ಥ ಮಾಡಿಕೊಂಡರೆ ಹಣಕಾಸಿನ ಮಿತಿ ಅರ್ಥವಾಗುತ್ತದೆ. 
 
ಆರೋಗ್ಯ

ಆರೋಗ್ಯವನ್ನು ಯಾವ ರೀತಿಯಿಂದಲಾದರೂ ಕಾಪಾಡಿಕೊಳ್ಳಬೇಕು. ಉತ್ತಮ ಆಹಾರವನ್ನು ಹಣ ಕೊಟ್ಟು ಕೊಂಡುಕೊಳ್ಳಬಹುದು. ಆಹಾರದಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆದರೆ ಜನ್ಮತಃ ಉತ್ತಮ ಆರೋಗ್ಯ ಎಂಬುದು ಹುಟ್ಟಿನಿಂದಲೇ ಬರಬೇಕು. ವೈದ್ಯರಿಗೆ ಹಣ ನೀಡಿ ಔಷಧಗಳನ್ನೂ ಖರೀದಿಸಿ ಕಾಯಿಲೆಯನ್ನು ಗುಣಪಡಿಸಿಕೊಳ್ಳಬಹುದು.  ಆದರೆ ಅದು ದೈಹಿಕವಾಗಿ ಬಂದಿರುವ ಉತ್ತಮ ಆರೋಗ್ಯಕ್ಕೆ ಪರ್ಯಾಯ ಆಗಲಾರದು. 

ನಿದ್ರೆ

ಉತ್ತಮ ನಿದ್ರೆ ಬರುವುದು ನೀವು ಆಯಾ ದಿನ ಮಾಡಿದ ಉತ್ತಮ ಕೆಲಸಗಳಿಂದಾಗಿ. ನೀವು ಮಾಡಿದ ದಿನಚರಿ, ಕೆಲಸ, ಅನ್ಯರಿಗೆ ಸಹಾಯ ಇವುಗಳಿಂದಾಗಿ ನೆಮ್ಮದಿ ಉಂಟಾದರೆ ನಿದ್ರೆ ತಾನಾಗಿಯೇ ಬರುತ್ತದೆ. ಇದನ್ನು ಹಣದಿಂದ ಕೊಂಡುಕೊಳ್ಳಲು ಸಾಧ್ಯವಿಲ್ಲ. ನಿದ್ರೆಯು ಯಾವಾಗಲೂ ಮನಸ್ಸು ಹಾಗೂ ನಿಮ್ಮ ಕಾಯಕಗಳಿಗೆ ಸಂಬಂಧಿಸಿದ್ದು. ಅದಕ್ಕೂ ನಿಮ್ಮ ಶ್ರೀಮಂತಿಕೆಗೂ ಸಂಬಂಧವಿಲ್ಲ.

ಮಾನಸಿಕ ಶಾಂತಿ 

ಚಾಣಕ್ಯನ ಪ್ರಕಾರ ಸಂಪೂರ್ಣ ಮಾನಸಿಕ ಶಾಂತಿ ಪಡೆಯಲು ದೇವರನ್ನು ನೆನೆಯುವುದು, ಧಾರ್ಮಿಕತೆ ಮತ್ತು ಆಧ್ಯಾತ್ಮಿಕತೆಯ ಹಾದಿಯಲ್ಲಿ ನಡೆಯುವುದು ಬಹಳ ಮುಖ್ಯ. ಧರ್ಮ ಮತ್ತು ಆಧ್ಯಾತ್ಮಿಕತೆಯ ಹಾದಿಯಲ್ಲಿ ನಡೆಯಲು ಹಣದ ಅಗತ್ಯವಿಲ್ಲ. ಧರ್ಮವು ವ್ಯಕ್ತಿಯನ್ನು ಶಿಸ್ತುಬದ್ಧಗೊಳಿಸುತ್ತದೆ ಮತ್ತು ಆಧ್ಯಾತ್ಮಿಕತೆಯು ವ್ಯಕ್ತಿಯ ಮನಸ್ಸು ಮತ್ತು ಮೆದುಳನ್ನು ಅಭಿವೃದ್ಧಿಪಡಿಸುತ್ತದೆ. ಅದು ಹಣವನ್ನೂ ತಂದುಕೊಡಬಹುದು. ಆದರೆ ಹಣದಿಂದ ಆಧ್ಯಾತ್ಮಿಕ ಶಾಂತಿಯನ್ನು ಪಡೆಯಲು ಸಾಧ್ಯವಿಲ್ಲ. 

ಉತ್ತಮ ಸ್ನೇಹಿತರು

ಉತ್ತಮ ಸ್ನೇಹಿತರು ನಮ್ಮ ಜನ್ಮಜನ್ಮಾಂತರದ ಪುಣ್ಯವಿಶೇಷದಿಂದ ದೊರೆಯುತ್ತಾರೆ ಹೊರತು ಹಣದಿಂದ ಅಲ್ಲ. ಇವರಲ್ಲಿ ಹಣ ನೋಡಿ ಬರುವವರೂ ಇರಬಹುದು. ಆದರೆ ಅಂಥವರು ಬಹುಬೇಗ ಪತ್ತೆಯಾಗುತ್ತಾರೆ. ಅಂಥವರು ನಿಜವಾದ ಗೆಳೆಯರಾಗಿರಲು ಸಾಧ್ಯವಿಲ್ಲ. ಉತ್ತಮ ಸ್ನೇಹಿತರು ಕಷ್ಟಕಾಲದಲ್ಲಿ ನಮಗೆ ಜೊತೆಯಾಗಿ ನಿಲ್ಲುವವರು. 

ಚಂದದ ಕುಟುಂಬ

ಕುಟುಂಬವನ್ನು ಮತ್ತು ಸಂಬಂಧಗಳನ್ನು ನಮ್ಮಲ್ಲಿನ ಹಣದಿಂದ ಖರೀದಿಸಲು ಸಾಧ್ಯವಿಲ್ಲ. ಹಣವು ಇಂದಲ್ಲ ನಾಳೆ ನಮ್ಮಲ್ಲಿ ಖಾಲಿಯಾಗಬಹುದು. ಆದರೆ ಸಮಯಕ್ಕೆ ಆಗುವವರೇ ಕುಟುಂಬದವರು ಮತ್ತು ಸಂಬಂಧದವರು. ಇವು ಕೊನೆ ತನಕ ಇರುತ್ತವೆ. ಕಾಯಿಲೆ ಬಿದ್ದಾಗಲೂ ಜೊತೆಯಲ್ಲಿದ್ದು ಆರೈಕೆ ಮಾಡುತ್ತಾರೆ. 

ಪ್ರೀತಿ

ಜೀವನದಲ್ಲಿ ಪ್ರೀತಿ ಇರುವುದು ಬಹಳ ಮುಖ್ಯ. ಪ್ರೀತಿಯನ್ನು ಹಣದಿಂದ ಖರೀದಿಸಲು ಸಾಧ್ಯವಿಲ್ಲ. ಪ್ರೀತಿಯ ಭಾವನೆಯನ್ನು ಅನುಭವಿಸಬಹುದೇ ಹೊರತು ಪ್ರೀತಿಯನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ನಿಮ್ಮಲ್ಲಿನ ಹಣ ನೋಡಿ ಪ್ರೀತಿಯ ನಾಟಕವಾಡುವವರು ಇರಬಹುದು. ಆದರೆ ನಿಮ್ಮಲ್ಲಿ ಪ್ರೀತಿ ಉಂಟುಮಾಡುವ ಮಧುರಾನುಭೂತಿ ಮಾತ್ರ ಎಂದಿಗೂ ಹಣದಿಂದ ಬರುವಂಥದಲ್ಲ. 

ವಾಸ್ತು ನೆಮ್ಮದಿ

ನೀವು ಹಣ ಖರ್ಚು ಮಾಡಿ ದೊಡ್ಡದಾದ ಮನೆಯನ್ನು ಕಟ್ಟಿಸಬಹುದು. ಆದರೆ ಅದರಿಂದ ಉತ್ತಮ ವಾಸ್ತುವಿನಿಂದ ಬದುಕಿನಲ್ಲಿ ಬರಬಹುದಾದ ನೆಮ್ಮದಿಯನ್ನು ಪಡೆಯಲು ಸಾಧ್ಯವಾಗದು. ಶುಭವಾದ ವಾಸ್ತು ನಿಮ್ಮ ಮನೆಯ ಕೇಡುಗಳನ್ನು ದೂರ ಮಾಡಿ ಒಳಿತನ್ನು ತರುತ್ತದೆ. 

Latest Videos
Follow Us:
Download App:
  • android
  • ios