ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರ ದೃಷ್ಟಿಯಲ್ಲಿ ಪರ್ಮಾಕಲ್ಚರ್ ಕೇವಲ ಕೃಷಿ ಪದ್ಧತಿಯಲ್ಲ; ಮಣ್ಣು, ನೀರು ಮತ್ತು ಜೀವನೋಪಾಯವನ್ನು ಪುನರುಜ್ಜೀವನಗೊಳಿಸುವ ಮೂಲಕ ಜನರನ್ನು ಸ್ವಾವಲಂಬಿಗಳನ್ನಾಗಿಸುವ ‘ರೆಜೆನೆರೇಟಿವ್ ಹ್ಯೂಮನಿಟೇರಿಯನಿಸಂ’ ಮಾದರಿಯಾಗಿದೆ.

ಪ್ರವಾಹ ಬಂದಾಗ ಪರಿಹಾರ ಸಾಮಗ್ರಿಗಳು, ಬರ ಬಂದಾಗ ನೀರು ಮತ್ತು ಆಹಾರ, ಸಂಕಷ್ಟ ಎದುರಾದಾಗ ತಾತ್ಕಾಲಿಕ ನೆರವು—ಮಾನವೀಯ ಸೇವೆಯ ಸಾಂಪ್ರದಾಯಿಕ ಮಾದರಿ ಸಾಮಾನ್ಯವಾಗಿ ಹೀಗಿರುತ್ತದೆ. ಆದರೆ “ಸಂಕಷ್ಟ ಬಂದ ನಂತರ ಪರಿಹಾರ ನೀಡುವುದಷ್ಟೇ ಸಾಕೇ? ಮುಂದಿನ ಸಂಕಷ್ಟವನ್ನು ಎದುರಿಸುವ ಸಾಮರ್ಥ್ಯವನ್ನು ಜನರಿಗೆ ನೀಡಬಾರದೇ?” ಎಂಬ ಪ್ರಶ್ನೆಗೆ ವಿಭಿನ್ನ ಉತ್ತರ ನೀಡುತ್ತದೆ ಪರ್ಮಾಕಲ್ಚರ್. ಜಾಗತಿಕ ಮಾನವತಾವಾದಿ ಹಾಗೂ ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥಾಪಕ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರ ದೃಷ್ಟಿಯಲ್ಲಿ ಪರ್ಮಾಕಲ್ಚರ್ ಕೇವಲ ಕೃಷಿ ಪದ್ಧತಿಯಲ್ಲ. ಅದು ಮಣ್ಣಿನಿಂದ ಆರಂಭವಾಗುವ ಮಾನವೀಯ ಸೇವೆ. ಭೂಮಿ, ನೀರು, ಆಹಾರ ಮತ್ತು ಮನುಷ್ಯರ ಬದುಕನ್ನು ಪರಸ್ಪರ ಬೆಸೆದು, ಸಂಕಷ್ಟದ ನಂತರ ಬದುಕು ಕಟ್ಟಿಕೊಳ್ಳುವುದಕ್ಕಿಂತ ಸಂಕಷ್ಟವನ್ನು ಎದುರಿಸುವ ಸಾಮರ್ಥ್ಯವನ್ನು ಸಮುದಾಯಗಳಲ್ಲಿ ಬೆಳೆಸುವ ಮಾರ್ಗವಾಗಿದೆ.

ಪರಿಹಾರಕ್ಕಿಂತಲೂ ಮುಂದಿರುವ ಪರ್ಮಾಕಲ್ಚರ್

ಪ್ರವಾಹದಿಂದ ಒಂದು ಗ್ರಾಮ ಮುಳುಗಿದಾಗ ಪರಿಹಾರ ಕಾರ್ಯಕರ್ತರು ನೀರು, ಆಹಾರ ಮತ್ತು ಟೆಂಟ್‌ಗಳನ್ನು ಒದಗಿಸುತ್ತಾರೆ. ಬರ ಬಂದಾಗ ಕುಡಿಯುವ ನೀರು ಮತ್ತು ಅಗತ್ಯ ವಸ್ತುಗಳನ್ನು ತಲುಪಿಸುತ್ತಾರೆ. ಆದರೆ ಸಮಸ್ಯೆಯ ಮೂಲದಲ್ಲಿರುವ ಮಣ್ಣಿನ ಆರೋಗ್ಯ ಮತ್ತು ನೀರಿನ ಹರಿವಿನ ವ್ಯವಸ್ಥೆ ಬದಲಾಗದಿದ್ದರೆ ಅದೇ ಸಮಸ್ಯೆ ಮತ್ತೆ ಎದುರಾಗಬಹುದು. ಇಲ್ಲಿಯೇ ಪರ್ಮಾಕಲ್ಚರ್‌ನ ಮಹತ್ವ ಹೆಚ್ಚುತ್ತದೆ. ‘Permanent’ ಮತ್ತು ‘Agriculture’ ಪದಗಳಿಂದ ರೂಪುಗೊಂಡಿರುವ ಪರ್ಮಾಕಲ್ಚರ್‌ ಇಂದು ಕೇವಲ ಶಾಶ್ವತ ಕೃಷಿಯ ಅರ್ಥದಲ್ಲಿಲ್ಲ. ಪ್ರಕೃತಿಯ ವಿರುದ್ಧ ಹೋರಾಡುವ ಬದಲು ಪ್ರಕೃತಿಯೊಂದಿಗೆ ಹೊಂದಿಕೊಂಡು ಮನೆ, ಕೃಷಿ ಮತ್ತು ಸಮುದಾಯಗಳನ್ನು ವಿನ್ಯಾಸಗೊಳಿಸುವ ವಿಧಾನ ಎಂಬ ವಿಶಾಲ ಅರ್ಥ ಪಡೆದುಕೊಂಡಿದೆ. ಇದು ತುರ್ತು ಪರಿಹಾರದಿಂದ ಮುಂದೆ ಸಾಗಿಸಿ ಜನರಿಗೆ ಸ್ಥಿರತೆ, ಸ್ವಾಭಿಮಾನ ಮತ್ತು ಸ್ವಾವಲಂಬನೆ ನೀಡುವ ಪ್ರಯತ್ನವಾಗಿದೆ.

ಬಂಜರು ಭೂಮಿಯಿಂದ ಫಲವತ್ತಾದ ಕೃಷಿಭೂಮಿಗೆ

ಬೆಂಗಳೂರಿನ ಆರ್ಟ್‌ ಆಫ್‌ ಲಿವಿಂಗ್‌ ಕೇಂದ್ರದಲ್ಲಿದ್ದ ಸುಮಾರು 7 ಎಕರೆ ಬಂಜರು ಮತ್ತು ಕಲ್ಲಿನಿಂದ ಕೂಡಿದ ಭೂಮಿಯನ್ನು ಕೆಲವೇ ತಿಂಗಳಲ್ಲಿ ಉತ್ಪಾದಕ ಕೃಷಿಭೂಮಿಯಾಗಿ ಪರಿವರ್ತಿಸಲಾಗಿದೆ. ಎತ್ತರದ ಬೆಡ್‌ಗಳು, ಮಳೆನೀರು ಸಂಗ್ರಹಿಸುವ ಸ್ವೇಲ್‌ಗಳು ಮತ್ತು ಸೂಕ್ತ ರೀತಿಯ ನೆಡುವಿಕೆ ಸೇರಿದಂತೆ ಪರ್ಮಾಕಲ್ಚರ್‌ ತಂತ್ರಗಳನ್ನು ಬಳಸಿಕೊಂಡು ಈ ಪರಿವರ್ತನೆ ಮಾಡಲಾಗಿದೆ. ಭೂಮಿಯನ್ನು ತಾಳ್ಮೆಯಿಂದ ಪುನರುಜ್ಜೀವನಗೊಳಿಸಿದರೆ ಬಂಜರು ಪ್ರದೇಶವೂ ಉತ್ಪಾದಕವಾಗಬಹುದು ಎಂಬುದಕ್ಕೆ ಇದು ಉದಾಹರಣೆಯಾಗಿದೆ.

‘ಭೂಮಿ ಒಂದು ಜೀವಂತ ವ್ಯವಸ್ಥೆ’

ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರ ಪ್ರಕಾರ, ಭೂಮಿ ಕೇವಲ ಮಣ್ಣು ಮತ್ತು ಸಂಪನ್ಮೂಲಗಳ ಸಮೂಹವಲ್ಲ. ಅದು ಜೀವಂತ ವ್ಯವಸ್ಥೆ. ಅದರ ಆರೋಗ್ಯಕ್ಕೂ ಮನುಷ್ಯರ ಆರೋಗ್ಯ ಮತ್ತು ಬದುಕಿಗೂ ನೇರ ಸಂಬಂಧವಿದೆ. ಅವರ ದೃಷ್ಟಿಯಲ್ಲಿ ಮಣ್ಣನ್ನು ರಕ್ಷಿಸುವುದು ಎಂದರೆ ಕೇವಲ ಕೃಷಿಯನ್ನು ರಕ್ಷಿಸುವುದಲ್ಲ; ಅದು ಮಾನವ ಜೀವನದ ಭವಿಷ್ಯವನ್ನು ರಕ್ಷಿಸುವುದು.

ಆಹಾರ ಭದ್ರತೆಗೆ ಹೊಸ ದಾರಿ

ಪರ್ಮಾಕಲ್ಚರ್‌ನ ಪ್ರಮುಖ ಉದ್ದೇಶಗಳಲ್ಲಿ ಆಹಾರ ಭದ್ರತೆಯೂ ಒಂದು. ಸ್ಥಳೀಯ ಹವಾಮಾನ ಮತ್ತು ಭೂಮಿಗೆ ಹೊಂದುವ ವಿವಿಧ ಬೆಳೆಗಳನ್ನು ಬೆಳೆಯುವ ಮೂಲಕ ರೈತರು ಒಂದೇ ಬೆಳೆಯ ಮೇಲೆ ಅವಲಂಬಿತರಾಗುವುದನ್ನು ಕಡಿಮೆ ಮಾಡಬಹುದು. ಒಂದೇ ಬೆಳೆ, ಒಂದೇ ಬೀಜ ಮತ್ತು ಹೊರಗಿನ ಸರಬರಾಜು ವ್ಯವಸ್ಥೆಯ ಮೇಲೆ ಹೆಚ್ಚು ಅವಲಂಬಿತರಾದಾಗ ಹವಾಮಾನ ವೈಪರೀತ್ಯ ಬಂದರೆ ರೈತರ ಮೇಲೆ ದೊಡ್ಡ ಹೊಡೆತ ಬೀಳಬಹುದು. ಆದರೆ ವೈವಿಧ್ಯಮಯ ಕೃಷಿ ವ್ಯವಸ್ಥೆ ರೈತರಿಗೆ ಹೆಚ್ಚು ಸ್ಥಿರತೆಯನ್ನು ನೀಡುತ್ತದೆ. ಆರ್ಟ್‌ ಆಫ್‌ ಲಿವಿಂಗ್‌ನ ಕೃಷಿ ಕಾರ್ಯಕ್ರಮಗಳ ಮೂಲಕ 30 ಲಕ್ಷಕ್ಕೂ ಹೆಚ್ಚು ಭಾರತೀಯ ರೈತರು ಮಣ್ಣಿನೊಂದಿಗೆ ಹೊಂದಿಕೊಂಡು ಕೃಷಿ ಮಾಡುವ ವಿಧಾನಗಳನ್ನು ಕಲಿತಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

ಮಳೆನೀರಿನ ಪ್ರತಿಯೊಂದು ಹನಿಯೂ ಮುಖ್ಯ

ಬರ ಮತ್ತು ಪ್ರವಾಹ ಎರಡರ ಹಿಂದೆಯೂ ನೀರಿನ ನಿರ್ವಹಣೆಯ ಸಮಸ್ಯೆ ಪ್ರಮುಖ ಪಾತ್ರ ವಹಿಸುತ್ತದೆ. ಪರ್ಮಾಕಲ್ಚರ್‌ನಲ್ಲಿ ಮಳೆನೀರು ಸಂಗ್ರಹಣೆ, ಮಣ್ಣಿನ ಪುನರುಜ್ಜೀವನ ಮತ್ತು ನೀರಿನ ಸಂರಕ್ಷಣೆಗೆ ಒತ್ತು ನೀಡಲಾಗುತ್ತದೆ. ಮಳೆ ಬಂದಾಗ ನೀರು ಹರಿದು ಹೋಗಿ ವ್ಯರ್ಥವಾಗುವ ಬದಲು ಸಾಧ್ಯವಾದಷ್ಟು ನೀರನ್ನು ಭೂಮಿಯಲ್ಲಿ ಹಿಡಿದಿಟ್ಟುಕೊಳ್ಳುವ ವ್ಯವಸ್ಥೆ ಮಾಡಲಾಗುತ್ತದೆ. ಇದರಿಂದ ಮುಂದಿನ ಬರಗಾಲದಲ್ಲೂ ನೀರಿನ ಲಭ್ಯತೆ ಸುಧಾರಿಸಬಹುದು. ಅಂದರೆ, ಸಂಕಷ್ಟ ಬಂದಾಗ ಕೇವಲ ಅದನ್ನು ಸಹಿಸುವ ಬದಲು ಮುಂದಿನ ಸಂಕಷ್ಟದ ಹೊಡೆತವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಸಮುದಾಯಗಳು ಬೆಳೆಸಿಕೊಳ್ಳುತ್ತವೆ.

2,000ಕ್ಕೂ ಹೆಚ್ಚು ಕುಟುಂಬಗಳಿಗೆ ಪ್ರಯೋಜನ

ಸಮರ್ಪಿತ ಪರ್ಮಾಕಲ್ಚರ್‌ ಕಾರ್ಯಕ್ರಮಗಳ ಮೂಲಕ 2,000ಕ್ಕೂ ಹೆಚ್ಚು ಕುಟುಂಬಗಳು ನೇರವಾಗಿ ಪ್ರಯೋಜನ ಪಡೆದಿವೆ ಎಂದು ಸಂಸ್ಥೆ ತಿಳಿಸಿದೆ. ಒಮ್ಮೆ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳಿಗೆ ಹೆಚ್ಚಿನ ಹಣ ಖರ್ಚು ಮಾಡಿ ಸಾಲದ ಸುಳಿಯಲ್ಲಿ ಸಿಲುಕುತ್ತಿದ್ದ ರೈತರು ಇದೀಗ ಆ ವೆಚ್ಚವನ್ನು ಕಡಿಮೆ ಮಾಡುವತ್ತ ಸಾಗುತ್ತಿದ್ದಾರೆ. ಅಷ್ಟೇ ಅಲ್ಲದೆ, ಅನೇಕ ರೈತರು ತಮ್ಮ ಉತ್ಪನ್ನಗಳನ್ನು ಆರ್ಟ್‌ ಆಫ್‌ ಲಿವಿಂಗ್‌ನ ‘ಕಿಸಾನ್ ಮಂಚ್’ ವೇದಿಕೆಯ ಮೂಲಕ ನೇರವಾಗಿ ಮಾರಾಟ ಮಾಡುತ್ತಿದ್ದು, ಉತ್ತಮ ಬೆಲೆ ಪಡೆಯಲು ಸಹಾಯವಾಗುತ್ತಿದೆ. ಇದು ಕೇವಲ ಆದಾಯ ಹೆಚ್ಚಳದ ಕಥೆಯಲ್ಲ. ಸಾಲದಿಂದ ಸ್ವಾಭಿಮಾನದತ್ತ ಸಾಗುವ ಪಯಣ ಕೂಡ ಹೌದು.

ಹವಾಮಾನ ಬದಲಾವಣೆಗೆ ಸಿದ್ಧವಾಗುವ ಗ್ರಾಮಗಳು

ಆರೋಗ್ಯಕರ ಮಣ್ಣು, ಜೀವವೈವಿಧ್ಯ ಮತ್ತು ಬಲಿಷ್ಠ ಸ್ಥಳೀಯ ಪರಿಸರ ವ್ಯವಸ್ಥೆಗಳು ಸಮುದಾಯಗಳಿಗೆ ಹವಾಮಾನ ವೈಪರೀತ್ಯಗಳನ್ನು ಎದುರಿಸುವ ಶಕ್ತಿ ನೀಡುತ್ತವೆ. ಮುಂಗಾರು ಕೈಕೊಟ್ಟರೂ, ತೀವ್ರ ಬಿಸಿಗಾಳಿ ಎದುರಾದರೂ ಅಥವಾ ಭಾರಿ ಮಳೆ ಬಂದರೂ, ಸ್ಥಳೀಯವಾಗಿ ನಿರ್ಮಿಸಿರುವ ಈ ವ್ಯವಸ್ಥೆಗಳು ಪರಿಣಾಮವನ್ನು ಕಡಿಮೆ ಮಾಡಲು ನೆರವಾಗಬಹುದು. ತುರ್ತು ಪರಿಹಾರ ತಂಡಗಳು ಹಿಂತಿರುಗಿದ ಬಳಿಕ ನೆರವು ಮುಗಿಯಬಹುದು. ಆದರೆ ಪರ್ಮಾಕಲ್ಚರ್‌ನ ಜ್ಞಾನ ಸಮುದಾಯದೊಂದಿಗೇ ಉಳಿಯುತ್ತದೆ.

‘ಜನರು ನೆರವು ಪಡೆಯುವವರಲ್ಲ, ಬದಲಾವಣೆಯ ನಿರ್ಮಾತೃಗಳು’

ಇದೇ ಪರ್ಮಾಕಲ್ಚರ್‌ನ ಅತ್ಯಂತ ಪ್ರಮುಖ ಅಂಶ. ಜನರು ಕೇವಲ ನೆರವು ಪಡೆಯುವವರಾಗಿ ಉಳಿಯುವುದಿಲ್ಲ. ತಮ್ಮ ಭೂಮಿಯನ್ನು ಪುನರುಜ್ಜೀವನಗೊಳಿಸಿ, ಜೀವನೋಪಾಯವನ್ನು ಬಲಪಡಿಸಿ, ತಮ್ಮ ಪರಿಸರವನ್ನು ತಾವೇ ಪುನರ್‌ನಿರ್ಮಿಸುವ ಸಾಮರ್ಥ್ಯವನ್ನು ಪಡೆಯುತ್ತಾರೆ. ಗುರುದೇವ್ ಅವರ ಮಾತಿನಲ್ಲಿ, “ಕೃಷಿ ಮಾನವ ಅಸ್ತಿತ್ವದ ಬೆನ್ನೆಲುಬು.” ಆದರೆ ಕೃಷಿಯೇ ಸುಸ್ಥಿರವಾಗಿರದಿದ್ದರೆ ಯಾವುದೇ ನಾಗರಿಕತೆ ದೀರ್ಘಕಾಲ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಹೀಗಾಗಿ ಪರ್ಮಾಕಲ್ಚರ್‌ ಅನ್ನು ಕೇವಲ ಕೃಷಿ ಪದ್ಧತಿಯಾಗಿ ನೋಡದೆ, ಭವಿಷ್ಯದ ಜೀವನ ಕೌಶಲ್ಯವಾಗಿ ಕಲಿಯಬೇಕು ಎಂಬುದು ಅವರ ಸಂದೇಶ.

ಆಗಸ್ಟ್ 22-23ರಂದು ರಾಷ್ಟ್ರೀಯ ಸಮ್ಮೇಳನ

ಈ ದೃಷ್ಟಿಕೋನವನ್ನು ಮತ್ತಷ್ಟು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಆಗಸ್ಟ್ 22 ಮತ್ತು 23ರಂದು ಆರ್ಟ್‌ ಆಫ್‌ ಲಿವಿಂಗ್‌ ಮೊದಲ ರಾಷ್ಟ್ರೀಯ ಪರ್ಮಾಕಲ್ಚರ್‌ ಮತ್ತು ಸುಸ್ಥಿರತೆ ಸಮ್ಮೇಳನವನ್ನು ಆಯೋಜಿಸುತ್ತಿದೆ. ಕೇವಲ ಉಪನ್ಯಾಸಗಳಿಗೆ ಸೀಮಿತವಾಗದೆ, ಪ್ರಾಯೋಗಿಕ ಮತ್ತು ಅನುಷ್ಠಾನಯೋಗ್ಯ ಕಲಿಕೆಗೆ ಒತ್ತು ನೀಡುವ ಹ್ಯಾಂಡ್ಸ್‌-ಆನ್‌ ಸೆಷನ್‌ಗಳು ಈ ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಲಿವೆ.

ಮಾನವೀಯ ಸೇವೆಯ ಹೊಸ ವ್ಯಾಖ್ಯಾನ

ಹ್ಯೂಮನಿಟೇರಿಯನ್‌ ಡೇ ಸಂದರ್ಭದಲ್ಲಿ ಪರ್ಮಾಕಲ್ಚರ್ ನೀಡುವ ಸಂದೇಶ ಸ್ಪಷ್ಟವಾಗಿದೆ. ಪ್ರವಾಹ ಅಥವಾ ಬರ ಬಂದ ನಂತರ ಪರಿಹಾರ ನೀಡುವುದಷ್ಟೇ ನಿಜವಾದ ಮಾನವೀಯ ಸೇವೆಯಲ್ಲ. ಮಣ್ಣನ್ನು ಆರೋಗ್ಯಕರವಾಗಿಸುವುದು, ನೀರನ್ನು ಉಳಿಸುವುದು, ಆಹಾರ ಭದ್ರತೆ ನಿರ್ಮಿಸುವುದು, ರೈತರ ಜೀವನೋಪಾಯ ಬಲಪಡಿಸುವುದು ಮತ್ತು ಸಮುದಾಯಗಳನ್ನು ಸ್ವಾವಲಂಬಿಗಳನ್ನಾಗಿಸುವುದೂ ಮಾನವೀಯ ಸೇವೆಯೇ. ಮಾನವೀಯತೆ ಮನುಷ್ಯರ ಕಾಳಜಿಯಿಂದ ಆರಂಭವಾದರೂ, ಮನುಷ್ಯನ ಬದುಕನ್ನು ಉಳಿಸುವ ಮಣ್ಣು, ನೀರು, ಸಸ್ಯಗಳು, ಪ್ರಾಣಿಗಳು ಮತ್ತು ಪರಿಸರ ವ್ಯವಸ್ಥೆಗಳ ಕಾಳಜಿಗೂ ಅದು ವಿಸ್ತರಿಸಬೇಕು. ಹೀಗಾಗಿ ಪರ್ಮಾಕಲ್ಚರ್‌ ಕೇವಲ ‘ಸಂಕಷ್ಟದಿಂದ ಬದುಕುಳಿಯುವ’ ಮಾದರಿಯಲ್ಲ; ಸಂಕಷ್ಟದ ನಂತರವೂ ಅಭಿವೃದ್ಧಿ ಹೊಂದುವ ಬದುಕನ್ನು ಕಟ್ಟುವ ಮಾರ್ಗವಾಗಿದೆ.