ಶೂಟಿಂಗ್​ ಶುರುವಾಗೋ ಮೊದ್ಲೇ ಸಿನಿಮಾ ರಿಲೀಸ್​ ಆಗೋಗಿತ್ತು! ಬ್ಲಾಕ್​ಬಸ್ಟರ್​ ಅರಗಿಣಿ ಸಿನಿಮಾದ ರೋಚಕ ಸ್ಟೋರಿ ಹೇಳಿದ ರಮೇಶ್​ ಅರವಿಂದ್​. 

ಯಾವುದೇ ಭೀಕರ ಸನ್ನಿವೇಶಕ್ಕೆ ಹೆದರಿ ಓಡಿಹೋಗುತ್ತಿದ್ದ ನಾಯಕಿ ರಾಣಿ ಸತ್ಯಾ ಮನೆಯಲ್ಲಿ ಆಶ್ರಯ ಪಡೆಯುತ್ತಾಳೆ. ಕೊನೆಗೆ, ರಾಣಿ ಮತ್ತು ಸತ್ಯಾ ಲವ್​ನಲ್ಲಿ ಬೀಳುತ್ತದೆ. ಇದೇ ಸಂದರ್ಭದಲ್ಲಿ ರಾಣಿಯ ಭೂತಕಾಲವು ಅವಳನ್ನು ಕಾಡಲು ಶುರುಮಾಡುತ್ತದೆ. ಇದು 1995ರಲ್ಲಿ ಬಿಡುಗಡೆಯಾದ ರಮೇಶ್ ಅರವಿಂದ್​​, ಸುಧಾರಾಣಿ ಅಭಿನಯದ ಅರಗಿಣಿ ಸಿನಿಮಾದ ಚಿತ್ರ. ಬ್ಲಾಕ್​ಬಸ್ಟರ್​ ಚಿತ್ರವೆನಿಸಿ, ಗಲ್ಲಾಪೆಟ್ಟಿಗೆಯನ್ನು ಕೊಳ್ಳೆಹೊಡೆದ ಈ ಸಿನಿಮಾ ಹುಟ್ಟಿದ ರೋಚಕ ಸ್ಟೋರಿಯನ್ನು ಇದೀಗ ರಮೇಶ್​ ಅವರು ಮಹಾನಟಿ ಸೀಸನ್​-02ನಲ್ಲಿ ವಿವರಿಸಿದ್ದಾರೆ.

ಅಷ್ಟಕ್ಕೂ ರಮೇಶ್​ ಅವರಿಗೆ ಇದೀಗ 60 ವಯಸ್ಸಾಗಿದ್ದರೂ 30ರ ಯುವಕರಂತೆಯೇ ಆ್ಯಕ್ಟೀವ್​ ಆಗಿರೋದು ಗೊತ್ತೇ ಇದೆ. ಮಹಾನಟಿಯ ಯುವ ಸ್ಪರ್ಧಿ ಜೊತೆ ರೊಮಾಂಟಿಕ್​ ಸ್ಟೆಪ್​ ಹಾಕಿದ ಬಳಿಕ, ಅರಗಿಣಿಯ ರೋಚಕ ಸ್ಟೋರಿಯನ್ನು ಹಂಚಿಕೊಂಡಿದ್ದಾರೆ ರಮೇಶ್​. ನಿರ್ದೇಶಕ ಪಿ.ಎಚ್​.ವಿಶ್ವನಾಥ ಅವರು ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಅರಗಿಣಿ ಚಿತ್ರಕ್ಕಾಗಿ ಅವರು ಮೊದಲು ರಮೇಶ್​ ಅವರ ಡೇಟ್ಸ್​ ಪಡೆದಿದ್ದರು. ಸಿನಿಮಾ ಕಥೆಯನ್ನೂ ಹೇಳಿದ್ದರು. ಇಬ್ಬರು ಕಳ್ಳರ ಸ್ಟೋರಿ, ಅದರಲ್ಲಿ ಬೇಬಿ ಶಾಮಿಲಿಯ ಎಂಟ್ರಿ ಆಗುತ್ತದೆ ಎಂದು ಸಂಪೂರ್ಣ ಕಥೆ ಹೇಳಿದ್ದರಂತೆ. ಕಥೆ ಕೇಳಿ ರಮೇಶ್​ ಅವರಿಗೂ ಇಷ್ಟವಾಯ್ತಂತೆ. ಇನ್ನೇನು ಶೂಟಿಂಗ್​ ಶುರುವಾಗುವುದೊಂದೇ ಬಾಕಿ ಇತ್ತು.

ಮುಂದಿನ ವಾರ ಶೂಟಿಂಗ್​ ಇಟ್ಟುಕೊಂಡಿದ್ದರು. ಅದೊಂದು ದಿನ ವಿಶ್ವನಾಥ್​ ಮತ್ತು ರಮೇಶ್​ ಅವರು ಹೋಗುತ್ತಿರುವಾಗ ಬೇಬಿ ಶಾಮಿಲಿಯ ಪೋಸ್ಟರ್​ ಒಂದು ಕಂಡು, ಏನೋ ಈಕೆಯದ್ದು ಒಂದು ಸಿನಿಮಾ ಬಂದಿದೆ. ನೋಡಿಕೊಂಡು ಬರೋಣ ಎಂದರಂತೆ. ಆಗ ಇಬ್ಬರೂ ಹೋಗಿ ನೋಡಿದರೆ, ತಾವು ಮಾಡಬೇಕು ಎಂದುಕೊಂಡಿದ್ದ ಸಿನಿಮಾ ಕಥೆನೇ ಅದಾಗಿತ್ತಂತೆ! ಇವರ ಚಿತ್ರದ ಶೂಟಿಂಗ್​ಗೂ ಮೊದಲೇ ಅಲ್ಲಿ ಅದೇ ಕಥೆಯ ಚಿತ್ರ ರಿಲೀಸ್​ ಆಗೋಗಿತ್ತು.

ಇದನ್ನು ನೋಡಿ ಶಾಕ್​ ಆದ ವಿಶ್ವನಾಥ್​ ಅವರು, ತಮ್ಮ ಬಳಿ ಹೆಚ್ಚಿಗೆ ಟೈಮ್​ ಇಲ್ಲ ಎಂದು ಎರಡೇ ದಿನದಲ್ಲಿ ಸಂಪೂರ್ಣ ಕಥೆ ಬದಲಿಸಿದರಂತೆ. ಕೊನೆಗೆ ಬೇಬಿ ಶಾಮಿಲಿ ಬದಲಾಗಿ ನಾಯಕಿಯನ್ನು ಹಾಕಿಕೊಳ್ಳೋಣ ಎಂದು ಮಾತುಕತೆಯಾಗಿದೆ. ಅಷ್ಟು ಬೇಗ ಡೇಟ್ಸ್​ ಕೊಡುವವರು ಯಾರು ಎಂಬ ಚರ್ಚೆ ನಡೆದಾಗ ಕೊನೆಗೆ ಸುಧಾರಾಣಿಯವರನ್ನು ಸಂಪರ್ಕಿಸಿದ್ದಾರೆ. ಸುಧಾರಾಣಿ ಅವರು ಅದಾಗಲೇ ಬೇರೆ ಚಿತ್ರಗಳಲ್ಲಿ ಬಿಜಿ ಇದ್ದರೂ, ಇವರ ಕಥೆ ಕೇಳಿದ ಮೇಲೆ ನಾನು ಹೇಗಾದರೂ ಅಡ್ಜಸ್ಟ್​ ಮಾಡಿಕೊಳ್ತೇನೆ. ಬರುತ್ತೇನೆ ಎಂದರಂತೆ. ಹೀಗೆ ಅರಗಿಣಿ ಕಥೆ ಹುಟ್ಟಿಕೊಂಡಿತು. ಚಿತ್ರ ಬ್ಲಾಕ್​ಬಸ್ಟರ್​ ಆಯಿತು ಎಂದಿದ್ದಾರೆ ರಮೇಶ್​.

ಇದೀಗ ಅವರು ಮಹಾನಟಿ ಸೀಸನ್​-2ನಲ್ಲಿ ತೀರ್ಪುಗಾರರಾಗಿದ್ದಾರೆ. ಅನುಶ್ರೀ ಅವರು ಆ್ಯಂಕರಿಂಗ್​ ಮಾಡುತ್ತಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳ ಯುವತಿಯರು ತಮ್ಮ ಪ್ರತಿಭೆಯ ಮೂಲಕ ಇಲ್ಲಿಯವರೆಗೆ ಬಂದಿದ್ದಾರೆ. ಇವರಲ್ಲಿ ಯಾರು ಮಹಾನಟಿ ಎನ್ನುವ ಬಿರುದು ಪಡೆಯುತ್ತಾರೆಯೋ ನೋಡಬೇಕಿದೆ.