ದಳಪತಿ ವಿಜಯ್ ಅವರ 'ತಿರುಪಾಚಿ' ಮರು-ಬಿಡುಗಡೆ ಮತ್ತು ಪುತ್ರ ಜೇಸನ್ ಸಂಜಯ್ ನಿರ್ದೇಶನದ 'ಸಿಗ್ಮಾ' ಚಿತ್ರಗಳ ನಡುವೆ ಬಾಕ್ಸ್ ಆಫೀಸ್ ಪೈಪೋಟಿ ನಡೆಯುವ ಸಾಧ್ಯತೆಯಿದೆ. ಆದರೆ, ಮುಖ್ಯಮಂತ್ರಿಯಾಗಿರುವ ತಮ್ಮ ತಂದೆಯ ಸಮಯವನ್ನು ಪ್ರಚಾರಕ್ಕಾಗಿ ವ್ಯರ್ಥ ಮಾಡಲು ಇಷ್ಟವಿಲ್ಲ ಎಂದು ಜೇಸನ್ ಸ್ಪಷ್ಟಪಡಿಸಿದ್ದಾರೆ.

ಸದ್ಯ ತಮಿಳುನಾಡಿನ ರಾಜಕೀಯಕ್ಕಿಂತಲೂ ಹೆಚ್ಚಾಗಿ ಮುಖ್ಯಮಂತ್ರಿ ದಳಪತಿ ವಿಜಯ್​ ಹಾಗೂ ಅವರ ಪುತ್ರ ಜೇಸನ್ ಸಂಜಯ್ ಸಿನಿಮಾ ಈಗ ಸಕತ್​ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ, ವಿಜಯ್ ಅವರ ಮಗ ಜೇಸನ್ ಸಂಜಯ್ ತಮ್ಮ ಮುಂಬರುವ ಚಿತ್ರ ಸಿಗ್ಮಾದ ಪ್ರಚಾರ ಕಾರ್ಯದಲ್ಲಿ ಇದ್ದರೆ, ಅತ್ತ ದಳಪತಿ ವಿಜಯ್​ ಮತ್ತು ತ್ರಿಶಾ ಕೃಷ್ಣನ್​ ಅವರ ಬ್ಲಾಕ್​ಬಸ್ಟರ್​ ಸಿನಿಮಾ ತಿರುಪಾಚಿ ರೀ-ರಿಲೀಸ್​ ಆಗಲಿದೆ. ಈ ಹಿನ್ನೆಲೆಯಲ್ಲಿ, ಬಾಕ್ಸ್​ ಆಫೀಸ್​ನಲ್ಲಿ ಅಪ್ಪ-ಮಗಳ ಫಿಲ್ಮ್​ ಕ್ಲ್ಯಾಶ್​ ಆಗತ್ತಾ ಎನ್ನುವ ಗುಮಾನಿ ಶುರುವಾಗಿದೆ. ಇತ್ತ ಪುತ್ರ ಜೇಸನ್​ ಸಂಜಯ್ ನಿರ್ದೇಶನದ ಚೊಚ್ಚಲ ಸಿಗ್ಮಾದ ಪ್ರಚಾರದಲ್ಲಿ ಬಿಜಿಯಾಗಿದ್ದರೂ, ಅಪ್ಪ ವಿಜಯ್ ಅವರು ಈ ಪ್ರಚಾರ ಕಾರ್ಯಕ್ಕೆ ಬಾರದೇ ಇದ್ದುದು ಮತ್ತಷ್ಟು ಊಹಾಪೋಹಗಳಿಗೆ ಕಾರಣವಾಗಿದೆ.

ಅಪ್ಪನ ಬಗ್ಗೆ ಮಗನ ಸ್ಪಷ್ಟನೆ

ಅಷ್ಟಕ್ಕೂ, ಅಪ್ಪ ತಮ್ಮ ಸಿನಿಮಾದ ಪ್ರಚಾರಕ್ಕೆ ಬಾರದೇ ಇರುವ ಬಗ್ಗೆ ಸ್ಪಷ್ಟನೆ ನೀಡಿರುವ ಜೇಸನ್ ಸಂಜಯ್, ತಮ್ಮ ಅಪ್ಪ ಸಿನಿಮಾ ಬಿಡುಗಡೆಗೆ ಉತ್ಸುಕರಾಗಿದ್ದಾರೆ. ಆದರೆ ಸಿನಿಮಾ ಪ್ರಚಾರದ ಸಮಯದಲ್ಲಿ ಬೇರೆ ಯಾವುದೇ ರೀತಿಯ ಪ್ರಚಾರ ನಾನು ಇಷ್ಟಪಡುವುದಿಲ್ಲ. ಅದು ಕೇವಲ ಚಿತ್ರದ ಪ್ರಚಾರ ಮಾತ್ರ ಆಗಬೇಕು. ಇಂದು ನನ್ನ ಅಪ್ಪ ಮುಖ್ಯಮಂತ್ರಿಯಾಗಿದ್ದು, ಅವರಿಗೆ ತುಂಬಾ ಜವಾಬ್ದಾರಿಗಳು ಇವೆ. ಸಿನಿಮಾ ಪ್ರಚಾರಕ್ಕೆ ಬಂದು ಅವರ ಸಮಯವನ್ನು ವ್ಯರ್ಥ ಮಾಡಿಸುವುದು ನನಗೆ ಇಷ್ಟವಿಲ್ಲ ಎಂದಿದ್ದಾರೆ. ಅಂದಹಾಗೆ, ವಿಜಯ್ ಅವರ ಮಗ ಜೇಸನ್ ಸಂಜಯ್ ನಿರ್ದೇಶಕನಾಗಿ ಚಲನಚಿತ್ರೋದ್ಯಮವನ್ನು ಪ್ರವೇಶಿಸಲು ಆಯ್ಕೆ ಮಾಡಿಕೊಂಡಿದ್ದಾರೆ. ನಟನೆಗೆ ಪದಾರ್ಪಣೆ ಮಾಡುವ ಬದಲು, ಅವರು ಸಿಗ್ಮಾ ಜೊತೆ ನಿರ್ದೇಶಕರಾಗಿ ತಮ್ಮ ಮೊದಲ ಚಲನಚಿತ್ರ ಮಾಡುತ್ತಿದ್ದಾರೆ. ಚಿತ್ರದ ನಿರ್ಮಾಪಕರು ಅದರ ಹೆಚ್ಚಿನ ಕಥೆಯನ್ನು ರಹಸ್ಯವಾಗಿಟ್ಟಿದ್ದಾರೆ.

ಜೇಸನ್ ಸಂಜಯ್ ಸಿಗ್ಮಾ ಚಿತ್ರದ ಮೂಲಕ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ, ಇದರಲ್ಲಿ ಸುಂದೀಪ್ ಕಿಶನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಲೈಕಾ ಪ್ರೊಡಕ್ಷನ್ಸ್ ನಿರ್ಮಿಸಿದೆ. ಇದೇ ವೇಳೆ ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡಿದ ಅವರು, ಭವಿಷ್ಯದ ಯೋಜನೆಗಳಿಗೆ ಈಗಾಗಲೇ ಅವರ ಬಳಿ ಆಲೋಚನೆಗಳಿವೆ ಎಂದು ಅವರು ಬಹಿರಂಗಪಡಿಸಿದರು. "ನನ್ನ ಮನಸ್ಸಿನಲ್ಲಿ ಎರಡು ಅಥವಾ ಮೂರು ಒಳ್ಳೆಯ ಕಥೆಯ ಕಲ್ಪನೆಗಳಿವೆ. ಸಿಗ್ಮಾ ಬಿಡುಗಡೆಯಾದ ನಂತರ ನಾನು ಅವುಗಳನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸುತ್ತೇನೆ ಎಂದಿದ್ದಾರೆ.

ವಿಜಯ್​-ತ್ರಿಶಾ ಸಿನಿಮಾ ಕುರಿತು

ಇನ್ನು, ದಳಪತಿ ವಿಜಯ್​ ಅವರ ಸಿನಿಮಾ ಕುರಿತು ಹೇಳುವುದಾದರೆ, ವಿಜಯ್ ಅವರೊಂದಿಗೆ ತ್ರಿಶಾ ಜೋಡಿಯಾಗಿ ನಟಿಸಿದ 2005 ರ ಚಿತ್ರ ಇದಾಗಿದೆ. ತಿರುಪಾಚಿ ಚಿತ್ರವು ಅಕ್ಟೋಬರ್ 1-2, 2026 ರ ಸುಮಾರಿಗೆ ಮರು-ಬಿಡುಗಡೆಗೆ ಸಿದ್ಧವಾಗಿದೆ ಎಂದು ವರದಿಯಾಗಿದೆ. ಆದರೆ ದಿನಾಂಕ ಇನ್ನೂ ಫಿಕ್ಸ್​ ಮಾಡಲಿಲ್ಲ. ಇದು ಪೋಸ್ಟ್​ಪೋನ್​ ಆಗುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ. ಪೆರರಸು ನಿರ್ದೇಶನದ ಮೊದಲ ಚಿತ್ರ ತಿರುಪಾಚಿ ಆಗಿದೆ. ವಿಜಯ್‌ ಅವರು ಈ ಸಿನಿಮಾದಲ್ಲಿ ಶಿವಗಿರಿ ಎಂಬ ರಕ್ಷಣಾತ್ಮಕ ಅಣ್ಣನ ಪಾತ್ರ ನಿರ್ವಹಿಸಿದ್ದಾರೆ.