ಗೋಣಿಕೊಪ್ಪ ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕ ಎಚ್‌ಕೆ ಕುಮಾರ್, ದಾನಿಗಳ ನೆರವಿನಿಂದ ದುಸ್ಥಿತಿಯಲ್ಲಿದ್ದ ಸರ್ಕಾರಿ ಶಾಲೆ ಹೈಟೆಕ್ ಶಾಲೆಯಾಗಿ ಪರಿವರ್ತಿಸಿದ್ದಾರೆ. ಶಾಲೆ ಬಿಟ್ಟ ಮಕ್ಕಳು ಮರಳಿ ಶಿಕ್ಷಣದತ್ತ ಮುಖ ಮಾಡಿದ್ದು, ಶಾಲೆಯು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಅಭಿವೃದ್ಧಿಗೊಂಡಿದೆ.

ವಿಘ್ನೇಶ್ ಎಂ. ಭೂತನಕಾಡು

ಮಡಿಕೇರಿ (ಸೆ.5) : ಶಾಲೆ ಸರಿಯಿಲ್ಲ, ಮಕ್ಕಳಿಲ್ಲ, ಮೂಲಭೂತ ಸೌಕರ್ಯಗಳಿಲ್ಲ ಅಂತಾ ಬಹಳಷ್ಟು ಶಿಕ್ಷಕರ ದೂರು. ಅದ್ಯಾವುದೂ ಇಲ್ಲದೆ ಇದ್ದಾಗಲೂ ಯಾವುದೇ ದೂರು ಹೇಳದೆ ಸಮಚಿತ್ತದಿಂದ ಕಾರ್ಯನಿರ್ವಹಿಸಿದ ಏನೆಂದರೂ ಏನೂ ಇಲ್ಲದ ಒಂದು ಸರ್ಕಾರಿ ಶಾಲೆಯನ್ನ ದಾನಿಗಳ ಸಹಕಾರ ಪಡೆದು ಖಾಸಗಿ ಶಾಲೆಗೆ ಪೈಪೋಟಿ ಕೊಡುವಂತೆ ಹೈಟೆಕ್ ಸ್ಪರ್ಶ ನೀಡಿ ಅಭಿವೃದ್ಧಿ ಮಾಡಿ ತೋರಿಸಿದ್ದಾರೆ. ಆ ಮೂಲಕ ಸರ್ಕಾರಿ ಶಾಲೆಯನ್ನ ಹೀಗೂ ಅಭಿವೃದ್ಧಿಪಡಿಸಹುದು ಎಂಬುದನ್ನ ಶಿಕ್ಷಕ ಎಚ್‌ಕೆ ಕುಮಾರ್ ತೋರಿಸಿದ್ದಾರೆ.

ಶಾಲೆ ಬಿಟ್ಟ ಮಕ್ಕಳು ಮರಳಿ ಶಾಲೆಗೆ

ಗೋಣಿಕೊಪ್ಪ ಕರ್ನಾಟಕ ಪಬ್ಲಿಕ್ ಶಾಲೆ ಮುಖ್ಯ ಶಿಕ್ಷಕರಾಗಿರುವ ಹೆಚ್‌ಕೆ ಕುಮಾರ್ ಶಾಲೆಯ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ರೂಪಿಸಿ ಮಕ್ಕಳ ಶಿಕ್ಷಣದ ಉನ್ನತೀಕರಣಕ್ಕೆ ಶ್ರಮಿಸುತ್ತಿದ್ದಾರೆ. ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಕಾಯಕದಲ್ಲಿ ತೊಡಗಿದ್ದಾರೆ. ತಾನು ಕರ್ತವ್ಯ ನಿರ್ವಹಿಸುತ್ತಿರುವ ಶಾಲೆಯ ಭೌತಿಕ ಹಾಗೂ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, ತನ್ನದೇ ಆದ ಛಾಪು ಮೂಡಿಸಿ ತನ್ನನ್ನು ತಾನು ತೊಡಗಿಸಿಕೊಂಡು ಹಲವಾರು ವರ್ಷಗಳಿಂದ ತಾನು ಕರ್ತವ್ಯ ನಿರ್ವಹಿಸುತ್ತಿರುವ ಶಾಲೆಗಳಲ್ಲಿ ಹೊಸ ಬದಲಾವಣೆ ತಂದು ಅಭಿವೃದ್ಧಿಪಡಿಸಿದ್ದಾರೆ.

ಶಾಲಾ ಕೊಠಡಿಗಳಿಗೆ ಹೈಟೆಕ್ ಸ್ಪರ್ಶ

ಮಕ್ಕಳಿಗೆ ಖಾಸಗಿ ಶಾಲೆಯಂತೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸುರಕ್ಷಿತ, ಶಿಸ್ತಬದ್ಧ ಹಾಗೂ ಆರೋಗ್ಯಪೂರ್ಣ ವಾತಾವರಣ ಒದಗಿಸುತ್ತಿದ್ದಾರೆ. ಶಾಲಾ ವಾತಾವರಣ, ತರಗತಿ ಕೊಠಡಿಗಳು ಆಕರ್ಷಣೀಯವಾಗಿ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಮಾಡಿದ್ದಾರೆ. ಶಾಲೆಯಲ್ಲಿ ಸುಂದರ ಪಾರ್ಕ್, ಸ್ಮಾರ್ಟ್ ಕೊಠಡಿಗಳು, ಇಂಟರ್ ನೆಟ್, ಸಿಸಿ, ಕ್ಯಾಮೆರಾ, ಶುದ್ಧ ಕುಡಿಯವ ನೀರು, ಟೈಲ್ಸ್ ಅಳವಡಿಕೆ ಹೀಗೆ ಹಲವು ಕೆಲಸಗಳನ್ನು ಮಾಡಿ ಸರ್ಕಾರಿ ಶಾಲೆಯನ್ನು ಚೆಂದಗಾಣಿಸಿದ್ದಾರೆ.

ಮಕ್ಕಳ ಓದಿಗೆ ಪೂರಕ ವಾತಾವರಣ

ಕಳೆದ ಬಾರಿ ನಡೆದ ಶತಮಾನೋತ್ಸವ ಸಂಭ್ರಮವನ್ನು ಅತ್ಯುತ್ತಮವಾಗಿ ಆಯೋಜಿಸುವ ಮೂಲಕ ರಾಜ್ಯಮಟ್ಟದಲ್ಲಿ ಗಮನ ಸೆಳೆಯಲಾಗಿತ್ತು. ಶಾಲೆಯಲ್ಲಿ, ಸಮಸ್ಯೆಯಾಗಿ ಕಾಡುತ್ತಿದ್ದ ಕುಡಿಯುವ ನೀರು, ಶುಚಿತ್ವ, ಕೊಠಡಿಗಳ ನವೀಕರಣ ಸೇರಿದಂತೆ ಹಲವಾರು ಕಾರ್ಯ ಯೋಜನೆಗಳನ್ನ ರೂಪಿಸುವ ಮೂಲಕ ಸರ್ಕಾರಿ ಶಾಲೆಯ ಮಕ್ಕಳ ಓದಿಗೆ ಪೂರಕ ವಾತಾವರಣ ನಿರ್ಮಿಸುವಲ್ಲಿ ಕುಮಾರ್ ಬಹುಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾರೆ.

ಬೀದಿಯಲ್ಲಿ ಅಲೆಯುತ್ತಿದ್ದ ಮಕ್ಕಳು ಮತ್ತೆ ಶಾಲೆಗೆ

ಸೋಮವಾರಪೇಟೆ ತಾಲೂಕಿನ ಹರಗ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 1991ರಲ್ಲಿ ವೃತ್ತಿ ಜೀವನ ಆರಂಭಿಸಿದ ಕುಮಾರ್ ಅವರು ಕಾಡು ಬೆಳೆದು ಮುಚ್ಚಿ ಹೋಗಿದ್ದ ಶಾಲೆಯ ಮೈದಾನವನ್ನು ದಾನಿಗಳ ಸಹಕಾರ ಮತ್ತು ಇಲಾಖೆಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದರು. ಊರಿನ ದಾನಿಗಳ ನೆರವಿನೊಂದಿಗೆ ಶಾಲೆಯ ಗೇಟ್ ನಿರ್ಮಿಸಿ ಶಾಲಾ ಕಟ್ಟಡಕ್ಕೆ ಭದ್ರತೆ ಒದಗಿಸಿಕೊಟ್ಟರು.ಕಿರಂಗದೂರು, ಕೂಡುಮಂಗಳೂರು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕೆಲಸ ನಿರ್ವಹಿಸಿದರು. ಕೂಡಿಗೆ ಸರ್ಕಾರಿ ಶಾಲೆಗೆ ಬಂದ ಮೇಲೆ ಶಾಲೆಬಿಟ್ಟು ಬೀದಿಯಲ್ಲಿ ಅಲೆಯುತ್ತಿದ್ದ ಮಕ್ಕಳನ್ನು ಮನ ಒಲಿಸಿ ಮರಳಿ ಶಾಲೆಗೆ ಸೇರಿಸುವಲ್ಲಿ ಸಫಲರಾದರು.

ಗೋಣಿಕೊಪ್ಪಲು ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಗೆ 2022ರಲ್ಲಿ ವರ್ಗಾವಣೆಗೊಂಡಾಗ ಶಾಲೆ ತೀರ ದುಸ್ಥಿತಿಗೆ ತಲುಪಿತ್ತು. ಕೇವಲ 150 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಇಲಾಖೆ ಮತ್ತು ಸಾರ್ವಜನಿಕರ ಸಹಬಾಗಿತ್ವದಲ್ಲಿ ಈ ಕಟ್ಟಡಕ್ಕೆ ಹೊಸ ಕಾಯಕಲ್ಪ ಕಲ್ಪಿಸಿದರು. ಇದರ ಫಲವಾಗಿ ಶಾಲೆಯಲ್ಲಿ ಈಗ 350ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.