ಮಹಿಳಾ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು ಹ್ಯಾಟ್ರಿಕ್ ಗೆಲುವು ಸಾಧಿಸಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ

ದಾಂಬುಲಾ: 9ನೇ ಆವೃತ್ತಿ ಮಹಿಳಾ ಏಷ್ಯಾಕಪ್‌ನಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದ ಭಾರತ ತಂಡ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಬುಧವಾರ ‘ಎ’ ಗುಂಪಿನ ಕೊನೆ ಪಂದ್ಯದಲ್ಲಿ ಭಾರತ ತಂಡ ನೇಪಾಳ ವಿರುದ್ಧ 82 ರನ್‌ ಜಯಭೇರಿ ಬಾರಿಸಿತು. ಇದರೊಂದಿಗೆ ನೇಪಾಳ ಗುಂಪು ಹಂತದಲ್ಲೇ ಹೊರಬಿತ್ತು.

Add Asianetnews Kannada as a Preferred SourcegooglePreferred

ಮೊದಲು ಬ್ಯಾಟ್‌ ಮಾಡಿದ ಭಾರತ 3 ವಿಕೆಟ್‌ಗೆ 178 ರನ್‌ ಗಳಿಸಿತು. ಶಫಾಲಿ ವರ್ಮಾ 48 ಎಸೆತಗಳಲ್ಲಿ 81 ರನ್‌ ಸಿಡಿಸಿದರೆ, ದಯಾಳನ್‌ ಹೇಮಲತಾ 47, ಜೆಮಿಮಾ ರೋಡ್ರಿಗ್ಸ್‌ 28 ರನ್‌ ಗಳಿಸಿದರು.

ದೊಡ್ಡ ಗುರಿಯನ್ನು ಬೆನ್ನತ್ತಿದ ನೇಪಾಳ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗೆ ಕೇವಲ 96 ರನ್ ಗಳಿಸಿ ಸೋಲೊಪ್ಪಿಕೊಂಡಿತು. 2ನೇ ಓವರ್‌ನಿಂದಲೇ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿದ ತಂಡ ಬಳಿಕ ಚೇತರಿಸಿಕೊಳ್ಳಲಿಲ್ಲ. ದೀಪ್ತಿ ಶರ್ಮಾ 3 ವಿಕೆಟ್ ಕಬಳಿಸಿದರು.

ಭಾರತದ ಮೇಲೆ ಕಿಡಿಕಾರುವ ಪಾಕ್ ಆಟಗಾರನ ಪ್ರೀತಿ ಬಲೆಗೆ ಬಿದ್ದ ನಮ್ಮ ದೇಶದ ಪ್ಲೈಟ್ ಇಂಜಿನಿಯರ್..!

ಪಾಕಿಸ್ತಾನ ಸೆಮಿಫೈನಲ್‌ಗೆ

ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಭಾರತ ವಿರುದ್ಧ ಸೋತ ಹೊರತಾಗಿಯೂ ಬಳಿಕ ಸತತ 2 ಪಂದ್ಯ ಗೆದ್ದ ಪಾಕಿಸ್ತಾನ ಸೆಮಿಫೈನಲ್‌ ಪ್ರವೇಶಿಸಿದೆ. ಬುಧವಾರ ನಿರ್ಣಾಯಕ ಪಂದ್ಯದಲ್ಲಿ ಪಾಕ್‌ ತಂಡ ಯುಎಇ ವಿರುದ್ಧ 10 ವಿಕೆಟ್‌ ಗೆಲುವು ಸಾಧಿಸಿತು. ಯುಎಇ ಸತತ 3 ಪಂದ್ಯಗಳ ಸೋಲಿನೊಂದಿಗೆ ‘ಎ’ ಗುಂಪಿನಲ್ಲಿ ಕೊನೆ ಸ್ಥಾನಿಯಾಗಿ ಟೂರ್ನಿಯಿಂದ ಹೊರಬಿತ್ತು.

ಹೊಸ ಕೋಚ್‌ ಗಂಭೀರ್‌ ಮಾರ್ಗದರ್ಶನದಲ್ಲಿ ಭಾರತ ಅಭ್ಯಾಸ ಶುರು

ಪಲ್ಲೆಕೆಲೆ: ಶ್ರೀಲಂಕಾ ವಿರುದ್ಧ ಸರಣಿಗೆ ಭಾರತ ತಂಡದ ಆಟಗಾರರು ಮಂಗಳವಾರ ನೂತನ ಕೋಚ್‌ ಗೌತಮ್‌ ಗಂಭೀರ್‌ ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಸೋಮವಾರ ಲಂಕಾಕ್ಕೆ ಬಂದಿಳಿದ ಆಟಗಾರರು ಮಂಗಳವಾರ ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ಕೆಲ ಕಾಲ ತಯಾರಿ ನಡೆಸಿದರು. ಆಟಗಾರರ ಜೊತೆ ಗಂಭೀರ್‌ ಮಾತುಕತೆ ನಡೆಸುತ್ತಿರುವ ವಿಡಿಯೋವನ್ನು ಬಿಸಿಸಿಐ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದೆ.

KKR ಅಲ್ಲವೇ ಅಲ್ಲ, ಈ ಐಪಿಎಲ್ ತಂಡಕ್ಕೆ ರಾಹುಲ್ ದ್ರಾವಿಡ್ ಕೋಚ್; ಪ್ರಕಟಣೆಯೊಂದೇ ಬಾಕಿ..?

ನಾಯಕ ಸೂರ್ಯಕುಮಾರ್‌, ಶುಭ್‌ಮನ್ ಗಿಲ್‌, ಸಿರಾಜ್‌, ಸಂಜು ಸ್ಯಾಮ್ಸನ್‌ ಅವರನ್ನೊಳಗೊಂಡ ಆಟಗಾರರ ತಂಡ ಕೆಲ ಕಾಲ ನೆಟ್ಸ್‌ ಅಭ್ಯಾಸ ನಡೆಸಿತು. ಸರಣಿಯ ಮೊದಲ ಪಂದ್ಯ ಜುಲೈ 27ರಂದು ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ನಡೆಯಲಿದೆ.

ಶ್ರೀಲಂಕಾ ತಂಡಕ್ಕೆ ಅಸಲಂಕ ನಾಯಕ

ಪಲ್ಲೆಕೆಲೆ: ಜು.27ರಿಂದ ಆರಂಭಗೊಳ್ಳಲಿರುವ ಭಾರತ ವಿರುದ್ಧ 3 ಪಂದ್ಯಗಳ ಟಿ20 ಸರಣಿಗೆ ಮಂಗಳವಾರ ಶ್ರೀಲಂಕಾ ತಂಡ ಪ್ರಕಟಿಸಲಾಗಿದ್ದು, ಚರಿತ್‌ ಅಸಲಂಕ ನಾಯಕನಾಗಿ ನೇಮಕಗೊಂಡಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಆಲ್ರೌಂಡರ್ ವಾನಿಂಡು ಹಸರಂಗ ಲಂಕಾಕ್ಕೆ ನಾಯಕತ್ವ ವಹಿಸಿದ್ದರು.

ಆದರೆ ತಂಡ ಗುಂಪು ಹಂತದಲ್ಲೇ ಹೊರಬಿದ್ದ ಕಾರಣ ಅವರು ನಾಯಕತ್ವ ತ್ಯಜಿಸಿದ್ದರು. ಇತ್ತೀಚೆಗಷ್ಟೇ ಲಂಕಾ ಪ್ರೀಮಿಯರ್‌ ಲೀಗ್‌ನಲ್ಲಿ ಅಸಲಂಕ ನಾಯಕತ್ವದಲ್ಲೇ ಜಾಫ್ನಾ ಕಿಂಗ್ಸ್‌ ಚಾಂಪಿಯನ್‌ ಆಗಿತ್ತು. ಇನ್ನು, 16 ಸದಸ್ಯರ ತಂಡದಿಂದ ಏಂಜೆಲೋ ಮ್ಯಾಥ್ಯೂಸ್‌ ಸ್ಥಾನ ಪಡೆದಿಲ್ಲ. ಹಸರಂಗ, ತೀಕ್ಷಣ, ಪತಿರನ, ಕುಸಾಲ್‌ ಮೆಂಡಿಸ್, ದಸುನ್‌ ಶಾನಕ, ಪಥುಂ ನಿಸ್ಸಾಂಕ ತಂಡದಲ್ಲಿದ್ದಾರೆ. 3 ಪಂದ್ಯಗಳು ಕ್ರಮವಾಗಿ ಜು.27, 28 ಹಾಗೂ 30ರಂದು ನಡೆಯಲಿವೆ.